Superstition: ಅಂಗಾಂಗ ದಾನಕ್ಕೆ ಮೂಢನಂಬಿಕೆ ಅಡ್ಡಿ; ಬೆಂಗಳೂರಿನ ಜನ ಹೆದರುವುದು ಇದಕ್ಕೆ ನೋಡಿ

| Updated By: ಗಣಪತಿ ಶರ್ಮ

Updated on: Mar 14, 2023 | 7:40 PM

ಮುಂದುವರಿದಿರುವ ಉದ್ಯಾನ ನಗರಿಯಲ್ಲಿ ಜನ ಇನ್ನೂ ಮೂಢನಂಬಿಕೆಯಲ್ಲಿ ಮುಳುಗಿದ್ದಾರೆ. ಅಂಗಾಂಗ ದಾನ ಮಾಡಿದರೆ ಮುಂಬರುವ ಜನ್ಮದಲ್ಲಿ ಅಂಗವೈಕಲ್ಯ ಕಾಡಬಹುದು ಎಂಬ ಮೂಢನಂಬಿಕೆ ಆಧುನಿಕ ಪ್ರಪಂಚದಲ್ಲಿಯೂ ನಗರದ ಜನರಲ್ಲಿದೆ ಎಂಬುದು ತಜ್ಞ ವೈದ್ಯರ ಹೇಳಿಕೆಗಳಿಂದ ತಿಳಿದುಬಂದಿದೆ.

Superstition: ಅಂಗಾಂಗ ದಾನಕ್ಕೆ ಮೂಢನಂಬಿಕೆ ಅಡ್ಡಿ; ಬೆಂಗಳೂರಿನ ಜನ ಹೆದರುವುದು ಇದಕ್ಕೆ ನೋಡಿ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: ವೈದ್ಯಕೀಯ ಕ್ಷೇತ್ರದಲ್ಲಿ ಅವಿಷ್ಕಾರಗಳಿಗೆ ಕೊರತೆ ಇಲ್ಲ. ಅದರಲ್ಲೂ ಅತ್ಯಾಧುನಿಕ ತಂತ್ರಜ್ಞಾನದ ನೆರವಿನಿಂದ ಬೆಂಗಳೂರು ಹೆಲ್ತ್ ಹಬ್ ಎಂದೇ ಪ್ರಸಿದ್ಧಿ ಪಡೆದಿದೆ. ಬೆಂಗಳೂರಿನ (Bengaluru) ಗುಣಮಟ್ಟದ ಆರೋಗ್ಯ ಸೇವೆ ಪಡೆಯಲು ದೇಶದ ಅನೇಕ ಭಾಗಗಳಿಂದ, ವಿದೇಶಗಳಿಂದ ರೋಗಿಗಳು ಬರುತ್ತಿದ್ದಾರೆ. ಇಷ್ಟೊಂದು ಮುಂದುವರಿದಿರುವ ಉದ್ಯಾನ ನಗರಿಯಲ್ಲಿ ಜನ ಇನ್ನೂ ಮೂಢನಂಬಿಕೆಯಲ್ಲಿ (Superstition) ಮುಳುಗಿದ್ದಾರೆ. ಅಂಗಾಂಗ ದಾನ (Organ Donation) ಮಾಡಿದರೆ ಮುಂಬರುವ ಜನ್ಮದಲ್ಲಿ ಅಂಗವೈಕಲ್ಯ ಕಾಡಬಹುದು ಎಂಬ ಮೂಢನಂಬಿಕೆ ಆಧುನಿಕ ಪ್ರಪಂಚದಲ್ಲಿಯೂ ನಗರದ ಜನರಲ್ಲಿದೆ ಎಂಬುದು ತಜ್ಞ ವೈದ್ಯರ ಹೇಳಿಕೆಗಳಿಂದ ತಿಳಿದುಬಂದಿದೆ.

ತಂತ್ರಜ್ಞಾನ ನಗರಿ ಎಂಬ ಖ್ಯಾತಿ ಪಡೆದಿರುವ ಬೆಂಗಳೂರಿನ ಜನರೂ ಆಧುನಿಕ ದೃಷ್ಟಿಕೋನ ಹೊಂದಿದವರು ಎಂಬ ಭಾವನೆ ಇದೆ. ಆದರೆ ಅಂಗಾಂಗ ದಾನದ ವಿಚಾರಕ್ಕೆ ಬಂದಾಗ ಜನರು ಹೆಚ್ಚು ಒಲವು ವ್ಯಕ್ತಪಡಿಸದಿರುವುದು ಕಂಡುಬಂದಿದೆ. ಕೋವಿಡ್ ಸಾಂಕ್ರಾಮಿಕದ ನಂತರದಲ್ಲಿ ಅಂಗಾಂಗ ದಾನದ ಬಗ್ಗೆ ನಗರದ ಜನ ಹಿಂದೇಟು ಹಾಕುತ್ತಿದ್ದಾರೆ. ಅಚ್ಚರಿಯ ಅಂಶವೆಂದರೆ, ಇದಕ್ಕೆಲ್ಲ ಮೂಢನಂಬಿಕೆ ಕಾರಣ ಎಂಬುದು.

ವೈದ್ಯರು ಹೇಳುವುದೇನು?

ಅಂಗಾಂಗ ದಾನದ ಬಗ್ಗೆ ವೈದ್ಯರು ಸಾಕಷ್ಟು ಅರಿವು ಮೂಡಿಸಲಾಗುತ್ತಿದೆ. ಆದರೂ ವೈದ್ಯರ ಪ್ರಯತ್ನಕ್ಕೆ ಮೂಢನಂಬಿಕೆಗಳು ಅಡ್ಡಿ ಉಂಟು ಮಾಡುತ್ತಿವೆ. ಈ ಜನ್ಮದಲ್ಲಿ ಕಣ್ಣು, ಕಿಡ್ನಿ, ಚರ್ಮ, ಲಿವರ್, ಹೃದಯ, ಕರುಳು ಇತ್ಯಾದಿ ಅಂಗಾಂಗಳನ್ನು ನೀಡಿದರೆ ಮುಂದಿನ ಜನ್ಮದಲ್ಲಿ ಅಂಗವೈಕಲ್ಯತೆ ಕಾಡಬಹುದು ಎಂದು ನಗರದ ಜನ ಭಯ ಪಡುತ್ತಿದ್ದಾರೆ. ಹೀಗಾಗಿ ಕಳೆದ ಎರಡು ವರ್ಷಗಳಿಂದ ಅಂಗಾಂಗ ದಾನದಲ್ಲಿ ಶೇ 50 ರಷ್ಟು ಕುಸಿತ ಕಂಡುಬಂದಿದೆ. ಕೋವಿಡ್ ಮೊದಲ ಅಲೆಯ ಸಂದರ್ಭದಲ್ಲಿ ಕೇವಲ 32 ಅಂಗಾಂಗ ದಾನ ಮಾಡಲಾಗಿತ್ತು. ನಂತರದ 6 ತಿಂಗಳಲ್ಲಿ 23 ಅಂಗಾಂಗ ದಾನ ಮಾತ್ರ ನಡೆದಿದೆ ಎಂದು ತಜ್ಞ ವೈದ್ಯ, ಎಂಎಸ್ ರಾಮಯ್ಯ ಮೆಡಿಕಲ್ ಕಾಲೇಜಿನ ಅಧ್ಯಕ್ಷ ಮತ್ತು ಕನ್ಸಲ್ಟೆಂಟ್ ನೆಫ್ರಾಲಜಿಸ್ಟ್ ಡಾ.ಗುರುದೇವ್ ಕೆಎಸ್ ಹಾಗೂ ಹಾಗೂ ಡಾ ಅರವಿಂದ್ ತಿಳಿಸಿದ್ದಾರೆ.

ಇದನ್ನೂ ಓದಿ: ವೈದ್ಯರಾಗುವ ಕನಸು ಕಾಣುತ್ತಿರುವ ವಿದ್ಯಾರ್ಥಿಗಳಿಗೆ ಗುಡ್​ನ್ಯೂಸ್​: ಕರ್ನಾಟಕದಲ್ಲಿ ತಲೆ ಎತ್ತಲಿವೆ ಹೊಸ 11 ವೈದ್ಯಕೀಯ ಕಾಲೇಜುಗಳು

ಅಂಗಾಂಗ ದಾನಗಳ ಪೈಕಿ ಕಿಡ್ನಿ ದಾನದ ಸಂಖ್ಯೆ ತೀರಾ ಇಳಿಮುಖವಾಗಿದೆ. ಅಂಗಾಂಗ ಸಿಗದ ಕಾರಣ ಸರಿಸುಮಾರು 5 ವರ್ಷ ಕಿಡ್ನಿಗಾಗಿ ರೋಗಿಗಳು ಕಾಯಬೇಕಾದ ಪರಿಸ್ಥಿತಿ ಎದುರಾಗಿದೆ. ಯಕೃತ್ತು ಪಡೆಯಲು ನಾಲ್ಕೂವರೆ ವರ್ಷ ಕಾಯುವಿಕೆ ಅವಧಿ ಇದ್ದು, ಸರ್ಕಾರದ ಮಹತ್ವಾಕಾಂಕ್ಷೆಯ ‘ಜೀವನ ಸಾರ್ಥಕತೆ ಯೋಜನೆ’ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

ವಿನಯಕುಮಾರ್ ಕಾಶಪ್ಪನವರ್, ಟಿವಿ9, ಬೆಂಗಳೂರು

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:37 pm, Tue, 14 March 23