Chitradurga News: ಸಮಸ್ಯೆಗಳ ಆಗರವಾದ ಚಿತ್ರದುರ್ಗ ಜಿಲ್ಲಾಸ್ಪತ್ರೆ; ಗರ್ಭಿಣಿಯರಿಗಿಲ್ಲ ಬೆಡ್​

ಕೋಟೆನಾಡು ಚಿತ್ರದುರ್ಗದ ಜಿಲ್ಲಾಸ್ಪತ್ರೆ ಇದೀಗ ಸಮಸ್ಯೆಗಳ ಆಗರವಾಗಿದೆ. ಹೌದು, ಜಿಲ್ಲಾಸ್ಪತ್ರೆಯಲ್ಲಿ ಹೆರಿಗೆ ವಾರ್ಡ್ ಇದ್ದೂ ಇಲ್ಲದಂತಾಗಿದೆ. ಅನೇಕ ಬಾಣಂತಿಯರು ನೆಲದ ಮೇಲೆ ಅಥವಾ ಬೆಂಚ್ ಮೇಲೆ ಮಲಗುವ ದುಸ್ಥಿತಿ ನಿರ್ಮಾಣ ಆಗಿದೆ. ಇಷ್ಟೇಲ್ಲಾ ತೊಂದರೆಗಳಿದ್ದರೂ ಜಿಲ್ಲಸ್ಪತ್ರೆಯವರು ಮಾತ್ರ ತಲೆ ಕೆಡಿಸಿಕೊಂಡಿಲ್ಲ.

Chitradurga News: ಸಮಸ್ಯೆಗಳ ಆಗರವಾದ ಚಿತ್ರದುರ್ಗ ಜಿಲ್ಲಾಸ್ಪತ್ರೆ; ಗರ್ಭಿಣಿಯರಿಗಿಲ್ಲ ಬೆಡ್​
ಚಿತ್ರದುರ್ಗ ಜಿಲ್ಲಾಸ್ಪತ್ರೆ
Edited By: ಕಿರಣ್ ಹನುಮಂತ್​ ಮಾದಾರ್

Updated on: Aug 01, 2023 | 2:14 PM

ಚಿತ್ರದುರ್ಗ, ಆ.1: ನಗರದಲ್ಲಿರುವ ಸರ್ಕಾರಿ ಜಿಲ್ಲಾಸ್ಪತ್ರೆ(Government District Hospital)ಗೆ ನಿತ್ಯ ಅನೇಕ ಗರ್ಭಿಣಿಯರು ಬಂದು ಚಿಕಿತ್ಸೆ ಪಡೆಯುತ್ತಾರೆ. ಆದ್ರೆ, ಹೆರಿಗೆ ಬಳಿಕ ಅನೇಕರಿಗೆ ಬೆಡ್ ವ್ಯವಸ್ಥೆ ಇಲ್ಲದೆ ಪರದಾಡುವಂತಾಗಿದೆ. ಪುಟ್ಟ ಕಂದಮ್ಮಗಳು ಇನ್ನೂ ಐಸಿಯುನಲ್ಲಿರುವಾಗಲೇ ತಾಯಿ ಈ ವಾರ್ಡ್​ನಿಂದ ಹೊರಗಡೆ ಕಳುಹಿಸಲಾಗುತ್ತದೆ. ಪರಿಣಾಮ ಮಗುವಿಗೆ ಹಾಲು ಕೊಟ್ಟು ಹಾರೈಕೆ ಮಾಡಬೇಕಾದ ತಾಯಿ, ಹೆರಿಗೆ ವಾರ್ಡ್​ನ ಹೊರಗೆ ನೆಲದ ಹಾಸಿಗೆ ಮೇಲೆ ವಿಶ್ರಾಂತಿ ಪಡೆಯಬೇಕು. ಅಥವಾ ಬೆಂಚ್​ಗಳನ್ನೇ ಆಶ್ರಯಿಸಿಕೊಳ್ಳಬೇಕಾದ ದುಸ್ಥಿತಿ ನಿರ್ಮಾಣ ಆಗಿದೆ. ಇನ್ನು ಚಳಿ, ಗಾಳಿಯ ಸಂದರ್ಭದಲ್ಲಿ ಬಾಣಂತಿಯರ ಸಂಕಷ್ಟ ಹೇಳತೀರದಾಗಿದೆ. ಇಷ್ಟೆಲ್ಲಾ ಸಮಸ್ಯೆ ಇದ್ದರೂ ಜಿಲ್ಲಾಸ್ಪತ್ರೆಯವರು ಮಾತ್ರ ಈ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ.

ನೂತನ ಕಟ್ಟಡವಾದರೂ, ಇನ್ನೂ ಸಿಕ್ಕಿಲ್ಲ ಉದ್ಘಾಟನೆ ಭಾಗ್ಯ

ಇನ್ನು ಈಗಾಗಲೇ ತಾಯಿ ಮಕ್ಕಳ ವಾರ್ಡ್​ಗಾಗಿಯೇ ಜಿಲ್ಲಾಸ್ಪತ್ರೆಯ ಆವರಣದಲ್ಲಿ ನೂತನ ಬಿಲ್ಡಿಂಗ್ ನಿರ್ಮಾಣ ಆಗಿದ್ದು, ಈಗಾಗಲೇ ಮೂರು ವರ್ಷಗಳೇ ಕಳೆಯುತ್ತಿದೆ. ಆದ್ರೆ, ಇನ್ನೂ ಉದ್ಘಾಟನೆ ಮಾಡುವಲ್ಲಿ ಆರೋಗ್ಯ ಇಲಾಖೆ, ಜಿಲ್ಲಾಸ್ಪತ್ರೆಯ ಅಧಿಕಾರಿಗಳು ವಿಫಲರಾಗಿದ್ದಾರೆ. ಈ ಬಗ್ಗೆ ಜಿಲ್ಲಾಸ್ಪತ್ರೆಯ ಸರ್ಜನ್ ಡಾ.ಬಸವರಾಜ್ ಅವರನ್ನು ಕೇಳಿದರೆ. ‘ಬೆಡ್​ಗಳ ಕೊರತೆಯಿಂದ ಬಾಣಂತಿಯರು ವಾರ್ಡ್ ಹೊರಭಾಗದಲ್ಲಿ ನೆಲ, ಬೆಂಚ್ ಮೇಲೆ ವಿಶ್ರಾಂತಿ ಪಡೆಯುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಮಗು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಾರಣ ಹೆರಿಗೆಯಾದ ಬಳಿಕ ವಾರ್ಡ್​ನಿಂದ ಡಿಸ್ಚಾರ್ಜ್ ಆಗಿದ್ದವರು ಹೆರಿಗೆ ವಾರ್ಡ್ ಬಳಿ ನೆಲದ ಮೇಲೆ ವಿಶ್ರಾಂತಿ ಪಡೆಯುವಂತಾಗಿದೆ. ಇನ್ನು ಎರಡ್ಮೂರು ತಿಂಗಳಲ್ಲಿ ಪ್ರತ್ಯೇಕ ಸುಸಜ್ಜಿತ ಕಟ್ಟಡ ಉದ್ಘಾಟನೆ ಆಗಲಿದೆ. ಬಾಣಂತಿಯರಿಗೂ ಪ್ರತ್ಯೇಕ 50ಬೆಡ್​ನ ವಾರ್ಡ್ ನಿರ್ಮಾಣಕ್ಕೆ ಪ್ರಪೋಸಲ್ ನೀಡಲಾಗಿದ್ದು, ಶೀಘ್ರ ಪರಿಹಾರ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ಇದನ್ನೂ ಓದಿ: Haveri News: ಜಿಲ್ಲಾಸ್ಪತ್ರೆ ಚೀಫ್ ಇಂಜಿನಿಯರ್ ಕರ್ತವ್ಯಲೋಪ, ಸಸ್ಪೆಂಡ್ ಮಾಡುವಂತೆ ಸ್ಥಳದಲ್ಲೇ ಆದೇಶಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ!

ಒಟ್ಟಾರೆಯಾಗಿ ಕೋಟೆನಾಡು ಚಿತ್ರದುರ್ಗ ನಗರದಲ್ಲಿನ ಸರ್ಕಾರಿ ಜಿಲ್ಲಾಸ್ಪತ್ರೆಯಲ್ಲಿ ಹೆರಿಗೆ ವಾರ್ಡ್​ನ ಸ್ಥಿತಿ ಹದಗೆಟ್ಟಿದೆ. ಬಾಣಂತಿಯರು ನೆಲದ ಹಾಸಿಗೆ, ಬೆಂಚ್​ಗಳಲ್ಲಿ ಆಶ್ರಯ ಪಡೆಯುವ ದುಸ್ಥಿತಿ ನಿರ್ಮಾಣ ಆಗಿದೆ. ಹೀಗಾಗಿ, ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ಶೀಘ್ರವಾಗಿ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:05 pm, Tue, 1 August 23

Basavaraj Mudnur

ಆದ್ಯ ವಚನಕಾರ ದೇವರ ದಾಸಿಮಯ್ಯನ 'ಮುದನೂರು' ನಮ್ಮ ಮೂಲ ಊರು. ಸಂತಗುಣದ ತಾತ ಕಿರಿ ವಯಸ್ಸಿನಲ್ಲೇ ಊರು-ಮನೆ ತೊರೆದು ಬರಿಗೈಲಿ ಬಂದು ಯಾದಗಿರಿ ಜಿಲ್ಲೆಯ ಶಹಾಪುರದಲ್ಲಿ ಸ್ವಾಭಿಮಾನದ ಬದುಕು ಕಟ್ಟಿಕೊಂಡರು. ಅಪ್ಪ ಶಿಕ್ಷಕರಾಗಿ ಬದುಕು ರೂಪಿಸಿಕೊಂಡರು. ನನಗೂ ಜೀವನ ಪಾಠ ಕಲಿಸಿದ 'ಗುರು' & 'ಗಾಡ್ ಫಾದರ್' ನನ್ನಪ್ಪ. ಓದು ಮತ್ತು ಬರವಣಿಗೆ ನನ್ನ ಹವ್ಯಾಸ. ಕೋಟೆ-ಕೊತ್ತಲು‌, ಕಾಡು-ಮೇಡು‌‌‌ ಸುತ್ತಾಟ, ಚಾರಣವೆಂದರೆ ಪ್ರಾಣಪ್ರೀತಿ. ಹಳೇ ಹಿಂದಿ ಹಾಡು, ಗಝಲ್, ಜನಪದ, ಭಾವಗೀತೆಗಳು ಮತ್ತು ಭಜನೆ ನನಗಿಷ್ಟ. ಕಾಲೇಜು ದಿನಗಳಲ್ಲಿದ್ದ ಕ್ರಿಕೆಟ್ ಹುಚ್ಚು ಕಡಿಮೆ ಆಗಿದೆ. ಕೋಟೆನಾಡು‌ ಚಿತ್ರದುರ್ಗ ಜಿಲ್ಲೆಯ ಟಿವಿ9 ಪ್ರತಿನಿಧಿಯಾಗಿ ಒಂದೂವರೆ ದಶಕದಿಂದ ಕಾರ್ಯ ನಿರ್ವಹಿಸುತ್ತಿದ್ದೇನೆ. 'ಹೆಣ್ಣಾಗಿದ್ದೇ ತಪ್ಪಾ?' ಅಭಿಯಾನದ ಮೂಲಕ ಮೌಢ್ಯದ ವಿರುದ್ಧ ಜಾಗೃತಿ, 'ವಿಷಾಮೃತ' ಅಭಿಯಾನದ ಮೂಲಕ ನೀರಿನ ಕುರಿತು ಸರ್ಕಾರದ ಕಣ್ತೆರೆಸುವ ಕಾರ್ಯ, 'ಕೆರೆ ಉಳಿಸಿ' ಅಭಿಯಾನದ ಮೂಲಕ ಜಲಮೂಲಗಳ ಸಂರಕ್ಷಣೆ, 'ಆಪರೇಷನ್ ಚಿನ್ನ' ಸರಣಿ ವರದಿ ಮೂಲಕ ವಂಚಕರ ಜಾಲ ಬೇಧಿಸುವ ಕರ್ತವ್ಯ, ಬುಡಕಟ್ಟು ಸಮುದಾಯಗಳ ಜೀವನ, ಸಂಸ್ಕೃತಿ, ಆಚರಣೆಗಳ ಅನಾವರಣ, ಬಯಲುಸೀಮೆಯ ರೈತರ ಸಂಕಷ್ಟ, ಭದ್ರಾ ಮೇಲ್ದಂಡೆ ಯೋಜನೆ ಅಗತ್ಯತೆ ಕುರಿತು ವರದಿ, ಭ್ರಷ್ಟರ ಮುಖವಾಡ ಬಯಲು, ಕಾವಿಧಾರಿಗಳ ಕಪಟತನ ತೆರೆದಿಡುವುದು ಸೇರಿ ಅನೇಕ ಜೀವಪರ, ಜನಪರ ವರದಿಗಾರಿಕೆಗೆ ಟಿವಿ9 ವಾಹಿನಿಯಲ್ಲಿ ಅವಕಾಶ ಸಿಕ್ಕಿದ್ದು ಹೆಮ್ಮೆಯ ಸಂಗತಿ.

Read More
Follow Us