ಗೋ ಹತ್ಯೆ ನಿಷೇಧ ವಿಧೇಯಕ ವಿಧಾನಸಭೆಯಲ್ಲಿ ಅಂಗೀಕಾರ; ಪ್ರತಿಭಟನೆ ಬಿಡದ ಕಾಂಗ್ರೆಸ್​

ಈ ಮಸೂದೆಯ ರಾಜ್ಯಪಾಲರ ಅಂಕಿತದೊಂದಿಗೆ ಕಾಯ್ದೆಯಾಗಿ ಜಾರಿಯಾದ ನಂತರ ಗೋ ಹತ್ಯೆ ಮಾಡಿದರೆ 7 ವರ್ಷ ಜೈಲು ಶಿಕ್ಷೆ ಮತ್ತು ₹ 5ರಿಂದ 10 ಲಕ್ಷ ದಂಡ ವಿಧಿಸಲು ಅವಕಾಶವಿದೆ.

ಗೋ ಹತ್ಯೆ ನಿಷೇಧ ವಿಧೇಯಕ ವಿಧಾನಸಭೆಯಲ್ಲಿ ಅಂಗೀಕಾರ; ಪ್ರತಿಭಟನೆ ಬಿಡದ ಕಾಂಗ್ರೆಸ್​
ಸಾಂದರ್ಭಿಕ ಚಿತ್ರ
Edited By: sandhya thejappa

Updated on: Dec 10, 2020 | 12:36 PM

ಬೆಂಗಳೂರು: ಬಹುಚರ್ಚಿತ ಗೋ ಹತ್ಯೆ ನಿಷೇಧ ವಿಧೇಯಕ ಇಂದು ವಿಧಾನಸಭೆಯಲ್ಲಿ ಅಂಗೀಕಾರವಾಯಿತು. ಈ ಮಸೂದೆಯ ರಾಜ್ಯಪಾಲರ ಅಂಕಿತದೊಂದಿಗೆ ಕಾಯ್ದೆಯಾಗಿ ಜಾರಿಯಾದ ನಂತರ ಗೋ ಹತ್ಯೆ ಮಾಡಿದರೆ 7 ವರ್ಷ ಜೈಲು ಶಿಕ್ಷೆ ಮತ್ತು ₹ 5ರಿಂದ 10 ಲಕ್ಷ ದಂಡ ವಿಧಿಸಲು ಅವಕಾಶವಿದೆ.

ವಿಧೇಯಕಕ್ಕೆ ಪ್ರತಿಪಕ್ಷ ಕಾಂಗ್ರೆಸ್ ತೀವ್ರ ವಿರೋಧ ವ್ಯಕ್ತಪಡಿಸಿತು. ಸಿದ್ದರಾಮಯ್ಯನವರ ನೇತೃತ್ವದಲ್ಲಿ ಸದನದ ಬಾವಿಗೆ ಇಳಿದು ಪ್ರತಿಭಟನೆಯನ್ನೂ ನಡೆಸಿತು. ಗೋವಾದಲ್ಲೂ ಬಿಜೆಪಿ ಸರ್ಕಾರವಿದೆ. ಆದರೆ ಅಲ್ಲಿ ಇಲ್ಲದ ಗೋ ಹತ್ಯೆ ನಿಷೇಧ ಇಲ್ಲೇಕೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಎಲ್ಲ ಗದ್ದಲ, ಗಲಾಟೆ, ವಿರೋಧದ ನಡುವೆಯೂ ಮಸೂದೆ ಅಂಗೀಕಾರ ಆಗಿ, ಸ್ಪೀಕರ್​ ಉಳಿದ ಕಾರ್ಯಕಲಾಪ ಕೈಗೆತ್ತಿಕೊಂಡರೂ ಕಾಂಗ್ರೆಸ್​ ಪ್ರತಿಭಟನೆ ನಿಲ್ಲಿಸಲಿಲ್ಲ. ವಿಧೇಯಕದ ಪ್ರಸ್ತಾವದಲ್ಲಿ ಗೋ ಹತ್ಯೆಯ ಅಪರಾಧಕ್ಕೆ 3 ವರ್ಷ ಜೈಲು ಶಿಕ್ಷೆಯ ಪ್ರಸ್ತಾವವಿತ್ತು. ಆದರೆ ಇಂದು ಮಂಡನೆಯಾದ ದಾಖಲೆಯಲ್ಲಿ ಇದು 7 ವರ್ಷಕ್ಕೆ ಏರಿಕೆಯಾಗಿದೆ. ಅದೇ ರೀತಿ ಕನಿಷ್ಠ ದಂಡವನ್ನು ₹ 50 ಸಾವಿರದಿಂದ ₹ 5 ಲಕ್ಷಕ್ಕೆ ಹೆಚ್ಚಿಸಲಾಗಿದೆ.

ಕಳೆದ ಕೆಲವು ದಿನಗಳಿಂದ ಗೋ ಹತ್ಯೆ ನಿಷೇಧ ಕಾಯ್ದೆ ರಾಜ್ಯದಲ್ಲಿ ಭರ್ಜರಿ ಸದ್ದು ಮಾಡಿತ್ತು. ವಿಪಕ್ಷಗಳಂತೂ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದೇ ಬಂತು. ಆದರೆ ಎಲ್ಲ ವಿರೋಧದ ನಡುವೆಯೂ ಇಂದು ವಿಧೇಯಕಕ್ಕೆ ವಿಧಾನಸಭೆಯ ಅನುಮೋದನೆ ದೊರೆತಿದೆ.

ಸದ್ಯ ವಿಧಾನಸಭೆಯಲ್ಲಿ ಅಂಗೀಕಾರ ಆಗಿರುವ ಗೋಹತ್ಯೆ ನಿಷೇಧ ವಿಧೇಯಕ ವಿಧಾನ ಪರಿಷತ್​ನಲ್ಲೂ ಅಂಗೀಕಾರವಾಗಿ, ರಾಜ್ಯಪಾಲರ ಅನುಮೋದನೆ ಪಡೆದ ಬಳಿಕ ಕಾಯ್ದೆಯಾಗಲಿದೆ.

ಕೊವಿಡ್ ತಡೆಗೆ ಬಿಗಿ ಕ್ರಮ: ರಾಜ್ಯ ಸರ್ಕಾರ ಜಾರಿಗೊಳಿಸಿತು ಹೊಸ ನೀತಿ, ಏನದು?

Published On - 6:54 pm, Wed, 9 December 20

Lakshmi Hegde
Follow Us