ಕನ್ನಡ ಸೇವೆಗೈದವರ ಹೆಸರೇ ತಪ್ಪು: ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ಸಿಬ್ಬಂದಿ ನಿರ್ಲಕ್ಷಕ್ಕೆ ಆಕ್ರೋಶ

|

Updated on: Apr 22, 2021 | 11:50 AM

ಧಾರವಾಡ ನಗರದ ಜರ್ಮನ್ ವೃತ್ತದ ಬಳಿಯ ಡಾ.ದ.ರಾ.ಬೇಂದ್ರೆ ಮಾರ್ಗದಲ್ಲಿ ಅಳವಡಿಸಲಾಗಿರುವ ಫಲಕದಲ್ಲಿ ‘ವರಕವಿ ಡಾ|| ದ.ರಾ.ಬೇಂದ್ರ ಮಾರ್ಗ' ಅಂತಾ ಬರೆಯಲಾಗಿದೆ. ಕನ್ನಡ ನುಡಿಗಾಗಿ ಸೇವೆಗೈದ ಬೇಂದ್ರೆಯವರ ಹೆಸರನ್ನೇ ಹೀಗೆ ತಪ್ಪಾಗಿ ಬರೆದರೆ ಹೇಗೆ ಎನ್ನುವುದು ಇದೀಗ ಕೇಳಿ ಬರುತ್ತಿರುವ ಪ್ರಶ್ನೆ.

ಕನ್ನಡ ಸೇವೆಗೈದವರ ಹೆಸರೇ ತಪ್ಪು: ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ಸಿಬ್ಬಂದಿ ನಿರ್ಲಕ್ಷಕ್ಕೆ ಆಕ್ರೋಶ
ಹೆಸರನ್ನು ಸರಿಪಡಿಸುತ್ತಿರುವ ಮಂಜುನಾಥ ಹಿರೇಮಠ
Follow us on

ಧಾರವಾಡ: ನಾಡು-ನುಡಿಗೆ ಸೇವೆಗೈದ ಮಹನೀಯರ ಸ್ಮರಣೆಗೆ ಅವರ ಹೆಸರನ್ನು ರಸ್ತೆ ಮತ್ತು ವೃತ್ತಗಳಿಗೆ ಇಡುವುದು ಎಲ್ಲೆಡೆ ಕಂಡುಬರುತ್ತದೆ. ಹೀಗೆ ಮಹನೀಯರ ಹೆಸರು ಇಟ್ಟ ಬಳಿಕ ಅದನ್ನು ನಾಮಫಲಕಗಳಲ್ಲಿ ಬರೆಯುವುದು ಕೂಡ ಸಹಜ. ಆದರೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸಿಬ್ಬಂದಿ ಕನ್ನಡ ನುಡಿಗಾಗಿ ಸೇವೆಗೈದ ಇಬ್ಬರು ಮಹನೀಯರ ನೆನಪಿಗಾಗಿ ರಸ್ತೆ ಹಾಗೂ ವೃತ್ತಕ್ಕೆ ಇಟ್ಟಿರುವ ಹೆಸರನ್ನೇ ತಪ್ಪಾಗಿ ಬರೆದು ಕನ್ನಡ ಭಾಷೆ ಹಾಗೂ ಮಹನೀಯರಿಗೆ ಅವಮಾನ ಮಾಡಿದ್ದಾರೆ.

ಪಾಲಿಕೆ ಸಿಬ್ಬಂದಿ ಮಾಡಿದ ತಪ್ಪೇನು?
ಧಾರವಾಡ ನಗರದ ಜರ್ಮನ್ ವೃತ್ತದ ಬಳಿಯ ಡಾ.ದ.ರಾ.ಬೇಂದ್ರೆ ಮಾರ್ಗದಲ್ಲಿ ಅಳವಡಿಸಲಾಗಿರುವ ಫಲಕದಲ್ಲಿ ‘ವರಕವಿ ಡಾ|| ದ.ರಾ.ಬೇಂದ್ರ ಮಾರ್ಗ’ ಅಂತಾ ಬರೆಯಲಾಗಿದೆ. ಕನ್ನಡ ನುಡಿಗಾಗಿ ಸೇವೆಗೈದ ಬೇಂದ್ರೆಯವರ ಹೆಸರನ್ನೇ ಹೀಗೆ ತಪ್ಪಾಗಿ ಬರೆದರೆ ಹೇಗೆ ಎನ್ನುವುದು ಇದೀಗ ಕೇಳಿ ಬರುತ್ತಿರುವ ಪ್ರಶ್ನೆ. ಇನ್ನು ಗೌರವ ಡಾಕ್ಟರೇಟ್ ಅನ್ನು ಸಂಕ್ಷಿಪ್ತವಾಗಿ ಬರೆಯುವಾಗ “ಡಾ.” ಅಂತಾ ಬರೆಯಬೇಕು. ಆದರೆ ಇಲ್ಲಿ ಬೇಂದ್ರೆಯವರ ಹೆಸರಿನ ಮುಂದೆ ” ಡಾll ” ಅಂತಾ ಬರೆಯಲಾಗಿದೆ. ಈ ರೀತಿ ವೈದ್ಯರ ಹೆಸರಿನ ಮುಂದೆ ಬರೆಯಲಾಗುತ್ತದೆ.

‘ಹಿರೇಮಠ’ ಅವರು ‘ಹೀರೆಮಠ’ ಆದಾಗ
ಕನ್ನಡಕ್ಕಾಗಿ ತಮ್ಮ ಬದುಕನ್ನು ಮೀಸಲಾಗಿಟ್ಟವರು ಡಾ.ಆರ್.ಸಿ.ಹಿರೇಮಠ. ಇವರ ಹೆಸರಿನಲ್ಲಿಯೇ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಡಾ.ಆರ್.ಸಿ. ಹಿರೇಮಠ ಕನ್ನಡ ಅಧ್ಯಯನ ಪೀಠವನ್ನು ಸ್ಥಾಪಿಸಲಾಗಿದೆ. ಹಿರೇಮಠ ಅವರು ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಆಗಿದ್ದರು. ಅವರು ಸಂಶೋಧನಾ ಕ್ಷೇತ್ರಕ್ಕೆ ವಿಶೇಷವಾದ ಕೊಡುಗೆ ನೀಡಿದವರು. ಇದೇ ಕಾರಣಕ್ಕೆ ಅವರ ಹೆಸರನ್ನು ಕನ್ನಡ ಅಧ್ಯಯನ ಪೀಠಕ್ಕೆ ಇಡಲಾಗಿದೆ. ಆದರೆ ಅಂಥ ಹಿರಿಯ ವ್ಯಕ್ತಿಯ ಹೆಸರನ್ನೇ ತಪ್ಪಾಗಿ ಬರೆಯಲಾಗಿದೆ. ‘ಹಿರೇಮಠ’ ಅವರ ಹೆಸರನ್ನು ‘ಹೀರೆಮಠ’ ಅಂತಾ ಬರೆಯಲಾಗಿದೆ. ಇದು ಕನ್ನಡ ಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಡಾ.ಆರ್.ಸಿ.ಹಿರೇಮಠ ಹೆಸರನ್ನು ಸರಿಯಾಗಿ ಬರೆದ ಮಂಜುನಾಥ ಹಿರೇಮಠ

ಪಾಲಿಕೆ ಆಯುಕ್ತರಿಗೆ ವಿದ್ಯಾವರ್ಧಕ ಸಂಘದ ಪತ್ರ
ಪಾಲಿಕೆಯ ಈ ತಪ್ಪನ್ನು ಖಂಡಿಸಿರುವ ಧಾರವಾಡ ವಿದ್ಯಾವರ್ಧಕ ಸಂಘದ ಪದಾಧಿಕಾರಿಗಳು, ಪಾಲಿಕೆಗೆ ಈ ಬಗ್ಗೆ ಪತ್ರವನ್ನು ಕೂಡ ಬರೆದಿದ್ದಾರೆ. ಪಾಲಿಕೆ ಆಯುಕ್ತರಿಗೆ ಪತ್ರ ಬರೆದಿರುವ ಸಂಘದ ಪ್ರಧಾನ ಕಾರ್ಯದರ್ಶಿ ಪ್ರಕಾಶ ಉಡಿಕೇರಿ, ಮಾತೃ ಭಾಷೆ ಕನ್ನಡವನ್ನು ತಪ್ಪಾಗಿ ಬರೆದಿರುವುದು ಪಾಲಿಕೆ ಸಿಬ್ಬಂದಿ ಕನ್ನಡದ ಕಾಳಜಿ ಮತ್ತು ಬದ್ಧತೆ ಎಂಥದ್ದು ಎನ್ನುವುದನ್ನು ತೋರಿಸುತ್ತದೆ. ಇಲ್ಲಿ ಕನ್ನಡದ ಕಗ್ಗೊಲೆ ಮಾಡಿರುವುದಲ್ಲದೇ ನಾಡಿನ ಮಹನೀಯರ ವ್ಯಕ್ತಿತ್ವಕ್ಕೆ ಅವಮಾನ ಮಾಡಲಾಗಿದೆ ಅಂತಾ ಬೇಸರ ವ್ಯಕ್ತಪಡಿಸಿದ್ದಾರೆ. ಈ ಕೃತ್ಯ ಎಸಗಿದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕೂಡ ಅವರು ಆಗ್ರಹಿಸಿದ್ದಾರೆ.

ಡಾ.ಆರ್.ಸಿ.ಹಿರೇಮಠ ಹೆಸರನ್ನು ಡಾ.ಆರ್.ಸಿ.ಹೀರೆಮಠ ಎಂದು ಬರೆಯಲಾಗಿತ್ತು

ತಪ್ಪನ್ನು ಸರಿಪಡಿಸಿ ಕನ್ನಡಾಭಿಮಾನ ಮೆರೆದ ಕಲಾವಿದ ಮಂಜುನಾಥ ಹಿರೇಮಠ
ಧಾರವಾಡದ ಪರಿಸರ ಸ್ನೇಹಿ ಗಣಪತಿ ತಯಾರಕ ಮಂಜುನಾಥ ಹಿರೇಮಠ ಅವರ ಗಮನಕ್ಕೆ ಈ ವಿಷಯ ಬರುತ್ತಿದ್ದಂತೆಯೇ ಅವರೇ ಈ ತಪ್ಪನ್ನು ಸರಿಪಡಿಸಲು ನಿರ್ಧರಿಸಿದ್ದಾರೆ. ಅಲ್ಲದೇ ಹೀಗೆ ತಪ್ಪನ್ನು ಬೇರೆಯವರು ಕೂಡ ಸರಿಪಡಿಸುವಾಗ ಅದಾಗಲೇ ಬರೆದಿರುವ ಅಕ್ಷರಗಳನ್ನು ಅಳಿಸದೇ ಹೇಗೆ ಸ್ಥಾನಪಲ್ಲಟ ಮಾಡಬಹುದೆಂದು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ. ಇದೀಗ ‘ಬೇಂದ್ರ’ ಅಜ್ಜ ‘ಬೇಂದ್ರೆ’ ಅಜ್ಜನಾಗಿ ಬದಲಾಗಿದ್ದರೆ, ‘ಹೀರೆಮಠ’ರು ‘ಹಿರೇಮಠ’ ಆಗಿ ಬದಲಾಗಿದ್ದಾರೆ. ಇದು ಕನ್ನಡ ಪ್ರೇಮಿಗಳಿಗೆ ಖುಷಿ ತಂದಿದೆ.

ಇದನ್ನೂ ಓದಿ

ಕೊರೊನಾ ಸೋಂಕಿಗೆ ತುತ್ತಾಗಿದ್ದ ಬಿ.ಎಸ್​.ಯಡಿಯೂರಪ್ಪ ಮತ್ತು ಮೊಮ್ಮಗಳು ಸೌಂದರ್ಯ ಇಬ್ಬರೂ ಆಸ್ಪತ್ರೆಯಿಂದ ಡಿಸ್ಚಾರ್ಜ್​

ಪ್ರಶಾಂತ್ ನೀಲ್ ಸಿನಿಮಾದಲ್ಲಿ ಇರಲ್ವಾ ನಾಯಕಿಗೆ ಪ್ರಾಮುಖ್ಯತೆ.. ನೋಡಿ ಈ ಸ್ಟೋರಿ

Dharwad Mahanagara Palike staff misspelled names of Bendre and Hiremath