ರೈತರ ಗೋಳು ಕೇಳುವರಾರು! ಕೈ ಕೊಟ್ಟ ಮಳೆರಾಯ; ನೀರಿಲ್ಲದೇ ಒಣಗಿದ ಬೆಳೆಗಳು

| Updated By: ಕಿರಣ್ ಹನುಮಂತ್​ ಮಾದಾರ್

Updated on: Oct 20, 2023 | 3:47 PM

 ಈ ಬಾರಿ ರಾಜ್ಯದಲ್ಲಿ ರೈತರ ಬಾಳು ಚಿಂತಾಜನಕವಾದಂತಾಗಿದೆ. ಇದಕ್ಕೆ ಕಾರಣ ವರುಣ ದೇವ ತೋರಿಸಿದ ಮುನಿಸು. ಮುಂಗಾರು, ಹಿಂಗಾರು ಎರಡೂ ಮಳೆ ಈ ಬಾರಿ ಕೈಕೊಟ್ಟಿವೆ. ಇದರಿಂದಾಗಿ ರಾಜ್ಯದ ರೈತರ ಪಾಡು ಹೇಳತೀರದಾಗಿದೆ. ಇದಕ್ಕೆ ಧಾರವಾಡ ಜಿಲ್ಲೆ ಹೊರತಾಗಿಲ್ಲ. ಮಳೆ ಬರುತ್ತೆ ಎಂದು ಕಾಯುತ್ತಾ ಕೂತಿದ್ದ ರೈತರಿಗೆ ಇದೀಗ ನಿರಾಸೆಯಾಗಿ, ಒಣಗಿ ಹೋಗುತ್ತಿರುವ ಬೆಳೆಗಳನ್ನು ಕತ್ತರಿಸಿ ಹಾಕುತ್ತಿದ್ದಾರೆ.

ರೈತರ ಗೋಳು ಕೇಳುವರಾರು! ಕೈ ಕೊಟ್ಟ ಮಳೆರಾಯ; ನೀರಿಲ್ಲದೇ ಒಣಗಿದ ಬೆಳೆಗಳು
ನವಲಗುಂದ ಶಾಸಕ ಎನ್​ಎಚ್ ಕೋನರೆಡ್ಡಿ
Follow us on

ಧಾರವಾಡ, ಅ.20: ಜಿಲ್ಲೆಯ ನವಲಗುಂದ ತಾಲೂಕಿನ ವಿವಿಧ ಭಾಗದಲ್ಲಿನ ರೈತರು ಹೆಚ್ಚಿನ ಪ್ರಮಾಣದಲ್ಲಿ ಮೆಕ್ಕೆಜೋಳ ಬೆಳೆಯುತ್ತಾರೆ. ಈ ಪ್ರದೇಶದಲ್ಲಿ ಮಳೆಯಾಶ್ರಿತ ಹಾಗೂ ನೀರಾವರಿ ಭೂಮಿ(Irrigated land) ಇದೆ. ಮಳೆಯಾಶ್ರಿತ ಭೂಮಿಗೆ ಮಳೆ ಬಾರದೇ ಇದ್ದಾಗ ಮಲಪ್ರಭಾ(Malaprabha) ಬಲದಂಡೆ ಕಾಲುವೆಯ ನೀರನ್ನು ಬಳಸಿ ರೈತರು ಕೃಷಿ ಮಾಡುತ್ತಾರೆ. ಆದರೆ, ಈ ಬಾರಿ ಮುಂಗಾರು ವಿಫಲವಾಗಿ, ಇದೀಗ ಹಿಂಗಾರು ಕೂಡ ಕೈಕೊಟ್ಟಿದೆ. ಇದರಿಂದಾಗಿ ಮೆಕ್ಕೆಜೋಳದ ಬೆಳೆ ತೆನೆ ಬಿಡುವ ಹೊತ್ತಿನಲ್ಲಿ ಒಣಗಿ ಹೋಗುತ್ತಿದೆ. ಇದೇ ಕಾರಣಕ್ಕೆ ರೈತರು ಇದೀಗ ಬೆಳೆಯನ್ನು ಕತ್ತರಿಸಿ ಹಾಕುತ್ತಿದ್ದಾರೆ.

ಇದುವರೆಗೂ ರೈತರು ಮಳೆ ಬರಬಹುದು ಎನ್ನುವ ನಿರೀಕ್ಷೆಯಲ್ಲಿದ್ದರು. ಆದರೆ, ಅವರ ನಿರೀಕ್ಷೆ ಸುಳ್ಳಾಗಿದೆ. ಇನ್ನೇನು ಮೆಕ್ಕೆಜೋಳದ ತೆನೆ ಒಡೆಯಲು ಶುರುವಾಗುತ್ತೆ ಎನ್ನುವ ಹೊತ್ತಿಗೆ ನೀರಿನ ಕೊರತೆ ಹೆಚ್ಚಾಗಿ, ಬೆಳೆ ಒಣಗುತ್ತಿದೆ. ಮಲಪ್ರಭಾ ಕಾಲುವೆಯ ನೀರು ಕೂಡ ಬರುತ್ತಿಲ್ಲ. ಏಕೆಂದರೆ ನವಿಲು ತೀರ್ಥ ಡ್ಯಾಂನಲ್ಲಿ ನೀರಿನ ಕೊರತೆ ಇರುವುದರಿಂದ ಕಾಲುವೆಗೆ ನೀರು ಹರಿಸಲಾಗುತ್ತಿಲ್ಲ. ಇದರಿಂದಾಗಿ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದೀಗ ಬೆಳೆಯನ್ನು ಹಾಗೆಯೇ ಬಿಟ್ಟರೆ ಅದೆಲ್ಲ ಒಣಗಿ ಹೋಗಿ, ಜಾನುವಾರುಗಳು ಇದನ್ನು ತಿನ್ನುವುದು ಇಲ್ಲ. ಇದೇ ಕಾರಣಕ್ಕೆ ಈ ಬೆಳೆಯನ್ನು ಈಗಲೇ ಕಟಾವು ಮಾಡಿ, ಜಾನುವಾರುಗಳಿಗೆ ಹಾಕಿದರೆ ಅವುಗಳಾದರೂ ತಿನ್ನುತ್ತವೆ ಅನ್ನೋದು ರೈತರ ಲೆಕ್ಕಾಚಾರ.

ಇದನ್ನೂ ಓದಿ:ಬೆಳಗಾವಿ: ಭೀಕರ ಬರ ಇದ್ದರೂ ಶಾಸಕರ ನಿರ್ಲಕ್ಷ್ಯ: ರೈತರು ಆಕ್ರೋಶ

ಹೀಗಾಗಿ ಇದೀಗ ಒಣಗಿ ಹೋಗುತ್ತಿರುವ ಬೆಳೆಯನ್ನು ಕತ್ತರಿಸಿ, ಮನೆಗೆ ಟ್ರ್ಯಾಕ್ಟರ್, ಚಕ್ಕಡಿಗಳ ಮೂಲಕ ತೆಗೆದುಕೊಂಡು ಹೋಗುತ್ತಿದ್ದಾರೆ. ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ನವಲಗುಂದ ಶಾಸಕ ಎನ್​ಎಚ್ ಕೋನರೆಡ್ಡಿ, ‘ಇನ್ನೂ ಕೂಡ ಮಳೆ ಬರಬಹುದು ಎನ್ನುವ ನಿರೀಕ್ಷೆಯಲ್ಲಿ ಇದೆ. ಅವರು ಕೂಡ ದೇವರ ಮೇಲೆ ಭಾರ ಹಾಕಿರೋದಾಗಿ ಹೇಳುತ್ತಾರೆ. ಇದೀಗ ರೈತರಿಗೆ ಮತ್ತೊಂದು ಸಮಸ್ಯೆ ಏನೆಂದರೆ, ಈಗಲೇ ಈ ಬೆಳೆಯನ್ನು ಮೇವಾಗಿ ಜಾನುವಾರುಗಳಿಗೆ ಹಾಕಿಬಿಟ್ಟರೆ, ಮುಂಬರುವ ಭೀಕರ ಬೇಸಿಗೆಗೆ ಪ್ರಾಣಿಗಳ ಗತಿ ಏನು ಎನ್ನುವುದು ಚಿಂತೆಯಾಗಿದೆ. ಏಕೆಂದರೆ ಈ ಬೆಳೆ ಬಂದು, ಬಳಿಕ ಇದನ್ನೇ ಬೇಸಿಗೆ ಸಮಯದಲ್ಲಿ ಜಾನುವಾರುಗಳಿಗೆ ಮೇವಾಗಿ ಬಳಸಲಾಗುತ್ತಿತ್ತು. ಆದರೆ, ಈಗಲೇ ಎಲ್ಲ ಬಳಕೆಯಾದರೆ ಮುಂಬರುವ ದಿನಗಳಲ್ಲಿ ಜಾನುವಾರುಗಳ ಹೊಟ್ಟೆಯ ಗತಿ ಏನು? ಎಂಬ ಪ್ರಶ್ನೆ ಮೂಡಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನುಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:47 pm, Fri, 20 October 23