ನಾಲ್ಕು ದಶಕಗಳ ಕಾಲ ಸಿಪಾಯಿಯಾಗಿ ಸೇವೆ: ಧಾರವಾಡದ ಕವಿವಿಯ ಜಯಣ್ಣ ಕಮ್ಮಾರ್ ಅವರಿಗೆ ಹೃದಯಸ್ಪರ್ಶಿ ಬೀಳ್ಕೊಡುಗೆ

ಕರ್ನಾಟಕ ವಿವಿ ಪತ್ರಿಕೋದ್ಯಮ ವಿಭಾಗದಲ್ಲಿ ಸುಮಾರು ನಾಲ್ಕು ದಶಕಗಳ ಕಾಲ ಸಿಪಾಯಿಯಾಗಿ ಸೇವೆ ಸಲ್ಲಿಸಿದ ಜಯಣ್ಣ ಕಮ್ಮಾರ ಅವರನ್ನು ವಿಭಾಗದ ಹಳೆಯ ವಿದ್ಯಾರ್ಥಿಗಳು ಇಂದು ಅರ್ಥಪೂರ್ಣವಾಗಿ ಬೀಳ್ಕೊಟ್ಟರು.

ನಾಲ್ಕು ದಶಕಗಳ ಕಾಲ ಸಿಪಾಯಿಯಾಗಿ ಸೇವೆ: ಧಾರವಾಡದ ಕವಿವಿಯ ಜಯಣ್ಣ ಕಮ್ಮಾರ್ ಅವರಿಗೆ ಹೃದಯಸ್ಪರ್ಶಿ ಬೀಳ್ಕೊಡುಗೆ
ಸಿಪಾಯಿಯಾಗಿ ಸೇವೆ ಸಲ್ಲಿಸಿದ ಜಯಣ್ಣ ಕಮ್ಮಾರ ಅವರಿಗೆ ಬೀಳ್ಕೊಡುಗೆ
Edited By:

Updated on: Jul 26, 2023 | 8:05 PM

ಧಾರವಾಡ, ಜುಲೈ 26: ಯಾವುದೇ ಒಂದು ವಿಶ್ವವಿದ್ಯಾಲಯದ ಮುಖ್ಯಸ್ಥರಾಗಲಿ ಅಥವಾ ಪ್ರಾಧ್ಯಾಪಕರಾಗಲಿ ನಿವೃತ್ತಿಯಾದಾಗ ಅವರವರ ಸೇವೆಯ ಆಧಾರದ ಮೇಲೆ ಅವರನ್ನು ವಿವಿ ಪರವಾಗಿ ಬೀಳ್ಕೊಡುವುದು ಸಾಮಾನ್ಯ. ಆದರೆ, ಕರ್ನಾಟಕ ವಿವಿ (Karnataka University) ಪತ್ರಿಕೋದ್ಯಮ ವಿಭಾಗದಲ್ಲಿ ಸುಮಾರು ನಾಲ್ಕು ದಶಕಗಳ ಕಾಲ ಸಿಪಾಯಿಯಾಗಿ ಸೇವೆ ಸಲ್ಲಿಸಿದ ಜಯಣ್ಣ ಕಮ್ಮಾರ ಅವರನ್ನು ವಿಭಾಗದ ಹಳೆಯ ವಿದ್ಯಾರ್ಥಿಗಳು ಅರ್ಥಪೂರ್ಣವಾಗಿ ಬೀಳ್ಕೊಟ್ಟರು.

ವಿಶ್ವವಿದ್ಯಾಲಯದ ವಿದ್ಯುನ್ಮಾನ ವಿಭಾಗದಲ್ಲಿ ನಡೆದ ಈ ವಿಶೇಷ ಸಮಾರಂಭದಲ್ಲಿ ಜಯಣ್ಣ ಕಮ್ಮಾರ ದಂಪತಿಗೆ ಹೂ ಅರ್ಪಿಸಿ, ಆತ್ಮೀಯವಾಗಿ ಗೌರವಿಸಿ ವಿಭಾಗದ ಮುಖ್ಯಸ್ಥರು, ಪ್ರಾಧ್ಯಾಪಕರು, ನಿವೃತ್ತ ಪ್ರಾಧ್ಯಾಪಕರು ಹಾಗೂ ಹಳೆಯ ವಿದ್ಯಾರ್ಥಿಗಳು ಬೀಳ್ಕೊಟ್ಟರು. ಜಯಣ್ಣ ಕಮ್ಮಾರ ಪತ್ರಿಕೋದ್ಯಮ ಕಟ್ಟಿ ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾನೆ. ಸಣ್ಣ ವ್ಯಕ್ತಿಗಳಿಂದ ಅಗಾಧ ಸಾಧನೆ ಮಾಡಲು ಸಾಧ್ಯ ಎಂದು ಕವಿವಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ನಿವೃತ್ತ ಪ್ರಾಧ್ಯಾಪಕ ಡಾ. ಎಂ. ಗಂಗಾಧರಪ್ಪ ಅಭಿಪ್ರಾಯಪಟ್ಟರು.

ಇದನ್ನೂ ಓದಿ: ಧಾರವಾಡ: ಯುವತಿಯರನ್ನು ಛೇಡಿಸುತ್ತಿದ್ದ ಮೂವರನ್ನು ಬಂಧಿಸಿ ಬಿಫೋರ್-ಆಫ್ಟರ್ ವಿಡಿಯೋ ಟ್ವೀಟ್ ಮಾಡಿದ ಪೊಲೀಸರು

ಇದೊಂದು ಹೃದಯ ಸ್ಪರ್ಶಿ ಕಾರ್ಯಕ್ರಮ. ಪತ್ರಿಕೋದ್ಯಮ ವಿಭಾಗ ಮತ್ತು ಜಯಣ್ಣ ಕಮ್ಮಾರ ಅನ್ಯೋನ್ಯ ಸಂಬಂಧವನ್ನು ಹೊಂದಿದ್ದಾರೆ. ಡಾ. ಬಾಲಸುಬ್ರಹ್ಮಣ್ಯ, ಡಾ. ಗಂಗಾಧರಪ್ಪ ಮತ್ತು ಪ್ರೊ. ಮರಿಸ್ವಾಮಿ ಅವರ ಜೊತೆಗೆ ಕೊಂಡಿಯಾಗಿ ಜಯಣ್ಣ ಕಮ್ಮಾರ ಕಾರ್ಯನಿರ್ವಹಿಸಿದ್ದು ಅವರ ಹೆಗ್ಗಳಿಕೆ ಆಗಿದೆ ಎಂದು ಅಧ್ಯಕ್ಷತೆ ವಹಿಸಿದ್ದ ವಿಜಯಪೂರ ಮಹಿಳಾ ವಿವಿ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಓಂಕಾರ ಕಾಕಡೆ ಹೇಳಿದರು.

ಜಯಣ್ಣ ಕಮ್ಮಾರ ದಂಪತಿಗೆ ಗಣ್ಯರಿಂದ ಸನ್ಮಾನ

ಕವಿಪವಿ ಬೆಂಗಳೂರು ಘಟಕದ ಅಧ್ಯಕ್ಷರಾದ ಡಾ. ಕೆ. ಜಿ. ಹಾಲಸ್ವಾಮಿ ಮಾತನಾಡಿ, ಜಯಣ್ಣ ಕಮ್ಮಾರ ಪ್ರತಿಯೊಬ್ಬ ವಿದ್ಯಾರ್ಥಿಗೂ ಆಪ್ತರಾಗಿದ್ದಾರೆ. ವಿದ್ಯಾರ್ಥಿಗಳಿಗೆ ಅಣ್ಣನಾಗಿ, ಚಿಕ್ಕಪ್ಪನಾಗಿ ಹಲವಾರು ರೀತಿಯಲ್ಲಿ ವಿದ್ಯಾರ್ಥಿಗಳಿಗೆ ಸಹಾಯ ಮಾಡಿದ್ದು ಶ್ಲಾಘನೀಯ ಎಂದರು. ಕವಿಪವಿ ಪ್ರದಾನ ಕಾರ್ಯದರ್ಶಿ ಡಾ.ವೆಂಕನಗೌಡ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು.

ಇದನ್ನೂ ಓದಿ: ವಿದ್ಯಾಕಾಶಿ ಧಾರವಾಡದಲ್ಲೊಂದು ಸೋರುವ ಸರಕಾರಿ ಕಾಲೇಜು: ಕೊಡೆ ಹಿಡಿದುಕೊಂಡೇ ಕೂತ ವಿದ್ಯಾರ್ಥಿಗಳು

ಟಿವಿ9 ಮುಖ್ಯ ಕಾರ್ಯನಿರ್ವಾಹಕ ನಿರ್ಮಾಪಕ ಡಾ. ವಿಲಾಸ ನಾಂದೋಡ್ಕರ್, ಬೆಂಗಳೂರು ಪ್ರೆಸ್ ಕ್ಲಬ್ ಉಪಾಧ್ಯಕ್ಷರಾದ ಆನಂದ ಬೈದಲಮನೆ, ಬೆಂಗಳೂರು ಕವಿಪವಿ ಘಟಕದ ಕಾರ್ಯದರ್ಶಿ ಹನುಮೇಶ ಯಾವಗಲ್, ಡಾ. ಬಂಡು ಕುಲಕರ್ಣಿ, ಡಾ. ನಯನಾ ಗಂಗಾಧರಪ್ಪ, ಡಾ. ಈಶ್ವರಗೌಡ ಪಾಟೀಲ, ಬಸವರಾಜ ಕಟ್ಟಿಮನಿ, ವಿಜಯ ಹೂಗಾರ, ಡಾ.ಮಹೇಶ್ ಪಾಟೀಲ, ಡಾ.ಪ್ರಭಾಕರ ಕಾಂಬಳೆ , ಚನ್ನು ಮೂಲಿಮನಿ, ಶಿವಾನಂದ ಗೊಂಬಿ, ಕವಿವಿ ನೌಕರರ ಸಂಘದ ಅಧ್ಯಕ್ಷರಾದ ಕೆ.ಡಿ. ಪೂಜಾರ ಕಮ್ಮಾರ ಅವರೊಂದಿನ ಒಡನಾಟ ಕುರಿತು ನೆನಪುಗಳನ್ನು ಹಂಚಿಕೊಂಡರು.

ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಜೆ.ಎಂ.ಚಂದೂನವರ ಹಾಗೂ ವಿದ್ಯುನ್ಮಾನ ವಿಭಾಗದ ಮುಖ್ಯಸ್ಥ ಡಾ. ಸಂಜಯ ಮಾಲಗತ್ತಿ ಜಯಣ್ಣ ಅವರ ಸೇವೆಯನ್ನು ಸ್ಮರಿಸಿದರು. ಕವಿಪವಿ ಬಳಗದಿಂದ ಜಯಣ್ಣ ಕಮ್ಮಾರ ದಂಪತಿಗಳಿಗೆ ಸ್ಮರಣಿಕೆ ಮತ್ತು ಅಭಿನಂದನಾ ಪತ್ರ ನೀಡಿ ಸನ್ಮಾನಿಸಲಾಯಿತು. ಬೆಂಗಳೂರು, ಹುಬ್ಬಳ್ಳಿ, ಗದಗ, ವಿಜಯಪುರದ ಹಳೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Narasimha Murti Pyati

ಕೊಪ್ಪಳದವರಾದ ನರಸಿಂಹಮೂರ್ತಿ ಪ್ಯಾಟಿ ಸದ್ಯ ಟಿವಿ9 ವಾಹಿನಿಯ ಧಾರವಾಡ ಜಿಲ್ಲಾ ಹಿರಿಯ ವರದಿಗಾರರು. ಮೆಕ್ಯಾನಿಕಲ್ ಇಂಜನಿಯರಿಂಗ್ ಮುಗಿಸಿರುವ ಇವರು, ಕೆಲವರ್ಷ ಕೊಪ್ಪಳ ಜಿಲ್ಲೆಯಲ್ಲಿ ಐಟಿಐ ಕಾಲೇಜಿನ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಿದ್ದಾರೆ. 23 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯರಾಗಿದ್ದು, ಮೊದಲು ಕೊಪ್ಪಳ ಜಿಲ್ಲೆ, ನಂತರ ಧಾರವಾಡ ಜಿಲ್ಲಾ ಹಿರಿಯ ವರದಿಗಾರರಾಗಿ ಕಳೆದ 17 ವರ್ಷಗಳಿಂದ ಟಿವಿ9 ವಾಹಿನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವರದಿಗಾರಿಕೆಯ ಜೊತೆಗೆ ಪ್ರಬಂಧ ರಚನೆ ಇವರ ಆಸಕ್ತಿಯಾಗಿದ್ದು ಈಗಾಗಲೇ 'ಬ್ರಾಹ್ಮಣ ಕುರುಬ' ಮತ್ತು 'ಕೃಷ್ಣಾಚಾರ್ @ ಕಿಷ್ಕಿಂಧಾ ಬಾರ್' ಪ್ರಬಂಧ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಅವರ ಪ್ರಬಂಧಗಳು ಕಥನದ ಚೆಲುವು, ಸೊಬಗು ಮತ್ತು ಅರ್ಥವ್ಯಾಪ್ತಿಯಿಂದಾಗಿ ಓದುಗನ ಮನ ತಣಿಸುತ್ತವೆ ಎಂದು ವಿಮರ್ಶಕರು ಗುರುತಿಸಿದ್ದಾರೆ. ಸಾವಯವ ಹಾಗೂ ಅರಣ್ಯ ಕೃಷಿಕರೂ ಆಗಿರುವ ನರಸಿಂಹಮೂರ್ತಿ ಪ್ಯಾಟಿ ಸಂಗೀತ, ಟ್ರೆಕ್ಕಿಂಗ್, ಪ್ರವಾಸಗಳಲ್ಲೂ ಆಸಕ್ತಿ ಹೊಂದಿದ್ದಾರೆ.

Read More
Follow Us