ಕರ್ನಾಟಕದಿಂದ ಮಹಾರಾಷ್ಟ್ರ, ತೆಲಂಗಾಣಕ್ಕೆ ಆಕ್ಸಿಜನ್​ ಕಳ್ಳ ಸಾಗಣೆ; ಕಲಬುರಗಿ ಜಿಲ್ಲಾಡಳಿತದಿಂದ ತಡರಾತ್ರಿ ಕಾರ್ಯಾಚರಣೆ

|

Updated on: May 05, 2021 | 7:28 AM

ಕಲಬುರಗಿಯ ನಂದೂರು ಕೈಗಾರಿಕಾ ಪ್ರದೇಶದಲ್ಲಿರುವ ವಿಜಯ ಆಕ್ಸಿಜನ್ ಇಂಡಸ್ಟ್ರಿ ಘಟಕದಿಂದ ನೆರೆಯ ಮಹಾರಾಷ್ಟ್ರ, ತೆಲಂಗಾಣಕ್ಕೆ ಅಕ್ರಮವಾಗಿ ವೈದ್ಯಕೀಯ ಆಮ್ಲಜನಕ ಪೂರೈಕೆಯಾಗುತ್ತಿದೆ ಎಂಬ ದೂರು ಜಿಲ್ಲಾಡಳಿತಕ್ಕೆ ಬಂದಿತ್ತು. ಆ ಮಾಹಿತಿಯನ್ನು ಆಧರಿಸಿ ಅಖಾಡಕ್ಕೆ ಇಳಿದ ಜಿಲ್ಲಾಡಳಿತ ನಿನ್ನೆ ರಾತ್ರಿ ವಿಜಯ ಆಕ್ಸಿಜನ್ ಇಂಡಸ್ಟ್ರಿ ಮೇಲೆ ದಾಳಿ ನಡೆಸಿದೆ.

ಕರ್ನಾಟಕದಿಂದ ಮಹಾರಾಷ್ಟ್ರ, ತೆಲಂಗಾಣಕ್ಕೆ ಆಕ್ಸಿಜನ್​ ಕಳ್ಳ ಸಾಗಣೆ; ಕಲಬುರಗಿ ಜಿಲ್ಲಾಡಳಿತದಿಂದ ತಡರಾತ್ರಿ ಕಾರ್ಯಾಚರಣೆ
ವಶಕ್ಕೆ ಪಡೆಯಲಾದ ಆಕ್ಸಿಜನ್​ ಸಿಲಿಂಡರ್​ಗಳು
Follow us on

ಕಲಬುರಗಿ: ಕರ್ನಾಟಕದಲ್ಲಿ ಕೊರೊನಾ ಎರಡನೇ ಅಲೆಯಿಂದಾಗಿ ಸೋಂಕಿತರ ಸಂಖ್ಯೆ ಹಾಗೂ ಮರಣ ಪ್ರಮಾಣ ಎರಡೂ ಹೆಚ್ಚುತ್ತಿದ್ದು ಪರಿಸ್ಥಿತಿ ನಿಭಾಯಿಸಲು ಆರೋಗ್ಯ ವ್ಯವಸ್ಥೆ ಹೆಣಗಾಡುತ್ತಿದೆ. ರಾಜ್ಯದಲ್ಲಿ ಸಮರ್ಪಕ ಆಕ್ಸಿಜನ್​ ಪೂರೈಕೆ ಇಲ್ಲದೆ ಅನೇಕ ಸೋಂಕಿತರು ಕೊನೆಯುಸಿರೆಳೆದಿದ್ದಾರೆ. ಆದರೆ, ಈ ಸಂದರ್ಭವನ್ನೇ ಬಂಡವಾಳ ಮಾಡಿಕೊಂಡ ಕೆಲವರು ಲಾಭ ಮಾಡುವ ಸಲುವಾಗಿ ಅಕ್ರಮ ಕೆಲಸಗಳಿಗೆ ಕೈ ಹಾಕುತ್ತಿದ್ದಾರೆ. ಈ ಸಂಬಂಧ ಬೆಂಗಳೂರಿನ ಬಿಬಿಎಂಪಿ ವ್ಯಾಪ್ತಿಯಲ್ಲಿ ಬೆಡ್ ಬ್ಲಾಕಿಂಗ್ ದಂಧೆ ಆಗುತ್ತಿದೆ ಎನ್ನುವುದು ನಿನ್ನೆಯಷ್ಟೇ (ಮೇ.4) ಬೆಳಕಿಗೆ ಬಂದಿದೆ. ಇಂದು (ಮೇ.5) ಇದೇ ತೆರನಾದ ಇನ್ನೊಂದು ಅಕ್ರಮ ಕಲಬುರಗಿಯಲ್ಲಿ ಬಯಲಾಗಿದ್ದು, ರಾಜ್ಯಕ್ಕೆ ಪೂರೈಸಬೇಕಾದ ಆಕ್ಸಿಜನ್​ ಸಿಲಿಂಡರ್​ಗಳನ್ನು ಮಹಾರಾಷ್ಟ್ರ, ತೆಲಂಗಾಣಕ್ಕೆ ಕದ್ದು ಮಾರುತ್ತಿದ್ದ ಆಕ್ಸಿಜನ್​ ಇಂಡಸ್ಟ್ರಿ ಮೇಲೆ ಕಲಬುರಗಿ ಜಿಲ್ಲಾಡಳಿತ ನಿನ್ನೆ ತಡರಾತ್ರಿ ದಾಳಿ ನಡೆಸಿದೆ.

ಕಲಬುರಗಿಯ ನಂದೂರು ಕೈಗಾರಿಕಾ ಪ್ರದೇಶದಲ್ಲಿರುವ ವಿಜಯ ಆಕ್ಸಿಜನ್ ಇಂಡಸ್ಟ್ರಿ ಘಟಕದಿಂದ ನೆರೆಯ ಮಹಾರಾಷ್ಟ್ರ, ತೆಲಂಗಾಣಕ್ಕೆ ಅಕ್ರಮವಾಗಿ ವೈದ್ಯಕೀಯ ಆಮ್ಲಜನಕ ಪೂರೈಕೆಯಾಗುತ್ತಿದೆ ಎಂಬ ದೂರು ಜಿಲ್ಲಾಡಳಿತಕ್ಕೆ ಬಂದಿತ್ತು. ಆ ಮಾಹಿತಿಯನ್ನು ಆಧರಿಸಿ ಅಖಾಡಕ್ಕೆ ಇಳಿದ ಜಿಲ್ಲಾಡಳಿತ ನಿನ್ನೆ ರಾತ್ರಿ ವಿಜಯ ಆಕ್ಸಿಜನ್ ಇಂಡಸ್ಟ್ರಿ ಮೇಲೆ ದಾಳಿ ನಡೆಸಿದೆ. ಕದ್ದು ಮುಚ್ಚಿ ಕಾಳ ಸಂತೆಯಲ್ಲಿ ಆಕ್ಸಿಜನ್​ ಸಿಲಿಂಡರ್ ಮಾರಾಟ ಮಾಡುತ್ತಿದ್ದ ಕಾರಣಕ್ಕೆ ಇಂಡಸ್ಟ್ರಿಯನ್ನು ವಶಕ್ಕೆ ಪಡೆದಿದೆ. ಎಸಿ ರಾಮಚಂದ್ರ ಗಡದೆ ಅವರ ಸಮ್ಮುಖದಲ್ಲಿ ನಡೆದ ಈ ದಾಳಿಯಿಂದಾಗಿ ಅಕ್ರಮ ಬಯಲಿಗೆ ಬಂದಿದೆ.

ಆಕ್ಸಿಜನ್​ ಇಂಡಸ್ಟ್ರಿಯನ್ನು ವಶಕ್ಕೆ ಪಡೆದ ಜಿಲ್ಲಾಡಳಿತ

ಚಾಮರಾಜನಗರದಲ್ಲಿ ಆಕ್ಸಿಜನ್​ ಕೊರತೆಯಿಂದಾದ ಸಾವು ಕಣ್ಣ ಮುಂದಿದೆ
ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಮೇ.3 ಭಾನುವಾರ ಮಧ್ಯರಾತ್ರಿ ನಡೆದ ದುರ್ಘಟನೆ ನಮ್ಮ ಕಣ್ಣ ಮುಂದಿದೆ. ಆಕ್ಸಿಜನ್ ಖಾಲಿ ಆದ ಕಾರಣ 24 ಗಂಟೆಯಲ್ಲಿ 22 ಕೊವಿಡ್, ನಾನ್ ಕೊವಿಡ್ ರೋಗಿಗಳು ಆಕ್ಸಿಜನ್ ಸಿಗದೇ ಮೃತಪಟ್ಟಿದ್ದಾರೆ. ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಒಟ್ಟು 350 ಆಕ್ಸಿಜನ್ ಸಿಲಿಂಡರ್​ಗಳಿದ್ದು, 6KL ಸಾಮರ್ಥ್ಯದ ಆಕ್ಸಿಜನ್ ಪ್ಲಾಂಟ್ ಕೂಡ ಇದೆ. ಸುಮಾರು 120 ರೋಗಿಗಳಿಗೆ ಇದರಿಂದ ಆಕ್ಸಿಜನ್ ಪೂರೈಕೆ ಮಾಡುತ್ತಿದ್ದರು. ಮೈಸೂರಿನ ಸದರನ್ ಮತ್ತು ಪರ್ಕಿ ಏಜೆನ್ಸಿಗಳಿಂದ ಪ್ರತಿನಿತ್ಯ 350 ಆಕ್ಸಿಜನ್ ಸಿಲಿಂಡರ್ ಪೂರೈಕೆಯೂ ಆಗುತ್ತಿತ್ತು. ಜತೆಗೆ, ಆಕ್ಸಿಜನ್ ಪ್ಲಾಂಟ್​ಗೆ ಬಳ್ಳಾರಿಯಿಂದ ಟ್ಯಾಂಕರ್ ಮೂಲಕ ಆಕ್ಸಿಜನ್ ಪೂರೈಕೆಯಾಗುತ್ತಿತ್ತು. ಆದರೆ, ದುರಂತಕ್ಕೆ ಎರಡು ದಿನ ಮೊದಲಿನಿಂದ ಕೇವಲ 30 ಆಕ್ಸಿಜನ್ ಸಿಲಿಂಡರ್ ಪೂರೈಕೆಯಾಗಿತ್ತು. ಅಲ್ಲದೇ ದುರಂತಕ್ಕೆ ಮುನ್ನ ಒಂದು ವಾರದಿಂದ ಬಳ್ಳಾರಿಯಿಂದ ಬರುತ್ತಿದ್ದ ಆಕ್ಸಿಜನ್ ಟ್ಯಾಂಕರ್ ಕೂಡ ಬಂದಿಲ್ಲ ಎಂಬ ಆರೋಪಗಳೂ ಕೇಳಿಬಂದಿದ್ದವು. ಈ ಘಟನೆಗೆ ಹಲವು ಆಯಾಮಗಳಿವೆಯಾದರೂ ಆಮ್ಲಜನಕ ಪೂರೈಕೆ ಆಗದೇ ಜನರು ಸಾಯುವಂತಾಗಿರುವುದನ್ನು ತಡೆಗಟ್ಟಲು ಸ್ವತಃ ಆಕ್ಸಿಜನ್​ ಉತ್ಪಾದಕರೇ ಅರ್ಥ ಮಾಡಿಕೊಳ್ಳಬೇಕು. ಇಂತಹ ಸಂದರ್ಭದಲ್ಲಿ ಅಕ್ರಮ ಸಾಗಾಣೆ, ಧನದಾಹ ಬಿಟ್ಟು ಜನರ ಜೀವ ಉಳಿಸುವತ್ತ ಗಮನ ಹರಿಸಬೇಕು.

ಇದನ್ನೂ ಓದಿ:
ಹುಬ್ಬಳ್ಳಿ ಆಸ್ಪತ್ರೆಯಲ್ಲೂ ಆಕ್ಸಿಜನ್ ದುರಂತ ಆರೋಪ | ಐಸಿಯುನಲ್ಲಿದ್ದ ಐವರ ಸಾವು, ಮಗಳ ಕಣ್ಣೀರ ರೋದನೆ 

12 ಆಸ್ಪತ್ರೆಗಳಲ್ಲಿ ರಾತ್ರೋರಾತ್ರಿ ಬಿಬಿಎಂಪಿಯಿಂದ ಬೆಡ್ ಬುಕ್ಕಿಂಗ್ ದಂದೆ: ಇದು ಭ್ರಷ್ಟಾಚಾರ ಅಲ್ಲ, ಸೋಂಕಿತರ ಹತ್ಯೆ – ಸಂಸದ ತೇಜಸ್ವಿ ಸೂರ್ಯ