ಕಲಬುರಗಿ: ಅಪಯಾದ ಮಟ್ಟ ಮೀರಿ ಹರಿಯುತ್ತಿರುವ ಹಳ್ಳ, ಹಗ್ಗದ ಸಹಾಯದಿಂದ ಜಮೀನಿಗೆ ತೆರಳುತ್ತಿರುವ ಜನ

ಮಾಜಿ ಮುಖ್ಯಮಂತ್ರಿ ದಿವಂಗತ ಎನ್. ಧರ್ಮಸಿಂಗ್‌ ಅವರಿಗೆ ರಾಜಕೀಯ ಜನ್ಮ ನೀಡಿರುವ ಜೇವರ್ಗಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಯಡ್ರಾಮಿ ತಾಲೂಕಿನ ವರವಿ ಮತ್ತು ಕುಕನೂರು ಗ್ರಾಮದ ಜನರು ಸರಿಯಾದ ರಸ್ತೆ ಸಂಪರ್ಕ ಇಲ್ಲದೆ ಪರದಾಡುತ್ತಿದ್ದಾರೆ. ಅಪಯಾದ ಮಟ್ಟ ಮೀರಿ ಹರಿಯುತ್ತಿರುವ ಹಳ್ಳದಲ್ಲಿ ಹಗ್ಗದ ಸಾಹಾಯದಿಂದ ಓಡಾಡುತ್ತಿದ್ದಾರೆ. ಈ ಕುರಿತು ವರದಿ ಇಲ್ಲಿದೆ ಓದಿ.

ಕಲಬುರಗಿ, ಜೂನ್​ 12: ಜೇವರ್ಗಿ ವಿಧಾನಸಭಾ ಕ್ಷೇತ್ರ (Jewargi Assembly Constituency) ವ್ಯಾಪ್ತಿಯ ಯಡ್ರಾಮಿ (Yadrami) ತಾಲೂಕಿನ ವರವಿ ಮತ್ತು ಕುಕನೂರು ಗ್ರಾಮದ ಜನರು ಹಲವು ದಶಕಗಳಿಂದ ವರವಿ ಹಳ್ಳವನ್ನು ದಾಟಿಕೊಂಡು ತಮ್ಮ ತಮ್ಮ ಜಮೀನುಗಳಿಗೆ ಹೋಗುತ್ತಿದ್ದರು. ಆದರೆ ಈ ಬಾರಿ ಸುರಿದ ಭಾರಿ ಮಳೆಯಿಂದ ಹಳ್ಳ (Brook) ಅಪಯಾದ ಮಟ್ಟ ಮೀರಿ ಹರಿಯುತ್ತಿದ್ದು, ಜನರು ಅನಿವಾರ್ಯವಾಗಿ ಹಗ್ಗದ ಸಹಾಯದಿಂದ ಹಳ್ಳ ದಾಟಿ ಜಮೀನುಗಳಿಗೆ ತೆರಳುತ್ತಿದ್ದಾರೆ. ಕೊಂಚ ಆಯ ತಪ್ಪಿದರೆ ಸಾವಿನ ಮನೆ ಸೇರಬೇಕಾಗುತ್ತದೆ.

ಯಡ್ರಾಮಿ ತಾಲೂಕಿನ ವರವಿ ಮತ್ತು ಕುಕನೂರು ಗ್ರಾಮಗಳ ಮಧ್ಯೆ ಹರಿಯುವ ಹಳ್ಳವೇ ಇಲ್ಲಿನ ಜನರಿಗೆ ರಸ್ತೆ ಸಂಪರ್ಕ. ಹಳ್ಳದಲ್ಲಿ ನೀರಿಲ್ಲದಿದ್ದಾಗ ಆರಮಾವಾಗಿ ಹಳ್ಳದಲ್ಲಿ ನಡೆದುಕೊಂಡು ಮತ್ತೊಂದು ಬದಿಯಲ್ಲಿರುವ ತಮ್ಮ ಜಮೀನುಗಳಿಗೆ ತೆರಳುತ್ತಾರೆ. ಆದರೆ, ಈ ಬಾರಿ ಮಳೆಗಾಲದಲ್ಲಿ ಭಾರಿ ಪ್ರಮಾಣದ ಮಳೆಯಾದ ಪರಿಣಾಮ ವರವಿ ಗ್ರಾಮದ ಹಳ್ಳ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಹಳ್ಳದ ಆ ಬದಿಯಲ್ಲಿರುವ ಜಮೀನಿಗಳಿಗೆ ತೆರಳುವ ರೈತರು, ಎರಡು ಬದಿಗೆ ಹಗ್ಗ ಕಟ್ಟಿ ಹಗ್ಗದ ಸಹಾಯದಿಂದಲೇ ಹಳ್ಳ ದಾಟುತ್ತಿದ್ದಾರೆ. ಕೊಂಚ ಆಯ ತಪ್ಪಿದರೂ ರಭಸವಾಗಿ ಹರಿಯುತ್ತಿರುವ ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತಾರೆ.

ಹಗ್ಗದ ಸಹಾಯದಿಂದ ಹಳ್ಳ ದಾಟುತ್ತಿರುವ ರೈತರು

ಪ್ರತಿವರ್ಷ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾದಾಗ ವರವಿ ಗ್ರಾಮಸ್ಥರ ಪರದಾಟ ಅಷ್ಟಿಷ್ಟಲ್ಲ. ಸದ್ಯ ಮಳೆಯಾಗುತ್ತಿರುವುದರಿಂದ ರೈತರು ಬಿತ್ತನೆ ಕಾರ್ಯದಲ್ಲಿ ತೊಡಗಿದ್ದಾರೆ. ಆದರೆ 3-4 ದಿನಗಳಿಂದ ಹಳ್ಳ ತುಂಬಿ ಹರಿಯುತ್ತಿರುವುದರಿಂದ‌ ಬಿತ್ತನೆ ಕಾರ್ಯಕ್ಕೆ ಅಡ್ಡಿಯಾಗುತ್ತಿದೆ. ಆದರೆ ಅನಿವಾರ್ಯವಾಗಿ ರೈತರು ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಹಳ್ಳದಲ್ಲೆ ಹಗ್ಗದ ಸಹಾಯದಿಂದ ಜೀವ ಪಣಕಿಟ್ಟು ಹಳ್ಳ ದಾಟುತ್ತಿದ್ದಾರೆ. ಇನ್ನು ವರವಿ ಮತ್ತು ಕುಕನೂರು ಗ್ರಾಮಸ್ಥರು ಹಳ್ಳದಲ್ಲಿ ಸೇತುವೆ ನಿರ್ಮಿಸುವಂತೆ ಶಾಸಕ ಡಾ. ಅಜಯ್‌ಸಿಂಗ್ ಮತ್ತು ಸಂಬಂಧಿಸಿದ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಹೀಗಾಗಿ ಹಲವಾರು ವರ್ಷಗಳಿಂದ ಜನ ಇದೇ ಅಪಾಯಕಾರಿ ಹಳ್ಳ ದಾಟಿಕೊಂಡು ಜಮೀನುಗಳಿಗೆ ತೆರಳುತ್ತಿದ್ದಾರೆ.

ಇದನ್ನೂ ಓದಿ: ರೈತರಿಗೆ ಬರೆ ಎಳೆದ ಬ್ಯಾಂಕ್‌ಗಳು, ಬರ ಪರಿಹಾರ ಹಣ ಸಾಲಕ್ಕೆ ಜಮಾ: ಜಿಲ್ಲಾಧಿಕಾರಿ ಆದೇಶಕ್ಕೂ ಡೋಂಟ್​​ ಕೇರ್​​

ಈ ಬಗ್ಗೆ ಜಿಲ್ಲಾ ಪಂಚಾಯತಿ ಸಿಇಓ ಭಂವರ್‌ಸಿಂಗ್ ಮೀನಾ ಮಾತನಾಡಿ, ಅಲ್ಲಿ ಸಣ್ಣ ಸೇತುವೆ ನಿರ್ಮಿಸಿಕೊಡುವ ಬೇಡಿಕೆ ಸಾಕಷ್ಟು ದಿನಗಳಿಂದ ಇದೆ. ಇದರ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆಯಲಾಗುತ್ತದೆ. ಮತ್ತು ಜನ ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಪ್ರದೇಶದಲ್ಲಿ ಓಡಾಡಬಾರದು ಎಂದು ಮನವಿ ಮಾಡಿದರು.
ಜೇವರ್ಗಿ ಶಾಸಕ ಡಾ. ಅಜಯ್‌ಸಿಂಗ್ ಮಾತನಾಡಿ, ಕೆಕೆಆರ್‌ಡಿಬಿ ಅನುದಾನದಲ್ಲಿ ಸೇತುವೆ ನಿರ್ಮಿಸಲಾಗುವುದೆಂದು ಹೇಳಿದರು.

ಅಭಿವೃದ್ಧಿ ಕಾರ್ಯಗಳಿಗೆ ಸರ್ಕಾರದಿಂದ ಕೋಟ್ಯಾಂತರ ರೂಪಾಯಿ ಹಣ ಬಿಡುಗಡೆ ಮಾಡುತ್ತೆ. ಆದರೆ ಈ ಗ್ರಾಮಸ್ಥರ ಸಣ್ಣ ಬೇಡಿಕೆ ಮಾತ್ರ ಈಡೇರಿಸದೆ ಇರುವುದು ನಿಜಕ್ಕೂ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ. ಒಟ್ಟಿನಲ್ಲಿ ಜನ ಜೀವ ಕಳೆದುಕೊಳ್ಳುವ ಮುನ್ನ ಸೇತುವೆ ನಿರ್ಮಿಸಿ‌ಕೊಡುವ ಜವಾಬ್ದಾರಿ ಶಾಸಕರು ಮತ್ತು ಅಧಿಕಾರಿಗಳ ಹೆಗಲ ಮೇಲಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Dattatraya Patil

ಮೂಲತಃ ಕಲಬುರಗಿ ಜಿಲ್ಲೆಯವರಾದ ದತ್ತಾತ್ರೇಯ ಪಾಟೀಲ್ ಸಧ್ಯ ಟಿರ್ವಿ ಕನ್ನಡ ವಾಹಿನಿಯ ಕಲಬುರಗಿ ಜಿಲ್ಲಾ ವರದಿಗಾರರಾಗಿ ಕೆಲಸ ಮಾಡುತ್ತಿದ್ದಾರೆ. ಕಳೆದ 9 ವರ್ಷಗಳಿಂದ ಟಿರ್ವಿ ಸಂಸ್ಥೆಯಲ್ಲಿ ಕೆಲಸ‌ ಮಾಡುತ್ತಿದ್ದು ಜ,2015 ರಿಂದ 22 ರವೆಗೆ ಹುಬ್ಬಳ್ಳಿಯ ವರದಿಗಾರಾಗಿ, ಕಳೆದೊಂದು ವರ್ಷ ಕೊಪ್ಪಳ ಸಧ್ಯ ಮೂರು ತಿಂಗಳಿಮದ ಕಲಬುರಗಿ ಜಿಲ್ಲಾ ವರದಿಗಾರರಾಗಿ ಕೆಲಸ ಮಾಡುತ್ತಿದ್ದು, ಕೊರೊನಾ ಸಮಯದಲ್ಲಿ ವೈದ್ಯರ ಕಳ್ಳಾಟದ ಮಾಡಿದ ರಹಸ್ಯ ಕಾರ್ಯಚರಣೆ.ಆಪರೇಷನ್ ಕಮಲದ ಕುರಿತು ಸ್ಪೋಟಕ ಬಿಎಸ್ ವೈ ವಿಡಿಯೋ ದ ಎಕ್ಸಕ್ಲೂಸಿವ್ ವರದಿಯ ಜೊತೆಗೆ ರಾಜಕೀಯ ವರದಿಗಾರಿಕೆಯಲ್ಲಿಯೂ ಆಸಕ್ತಿ ಹೊಂದಿದ್ದು, ಬಿಡುವಿನ ಸಮಯದಲ್ಲಿ ಪುಸ್ತಕ ಓದುವುದು,ಪ್ರೇಕ್ಷಣೀಯ ಹಾಗೂ ಐತಿಹಾಸಿಕ ಸ್ಥಳಗಳ ಪ್ರವಾಸ,ಮತ್ತು ಟ್ರೆಕ್ಕಿಂಗ್ ಹವ್ಯಾಸ ರೂಢಿಸಿಕೊಂಡಿದ್ದಾರೆ.

Read More
Follow Us