ಹಿಜಾಬ್ ತಂಟೆಗೆ ಬಂದರೆ ತುಂಡು ತುಂಡು ಮಾಡುವುದಾಗಿ ಹೇಳಿದ್ದ ಮುಕ್ರಂ ಖಾನ್‌ಗೆ ಷರತ್ತುಬದ್ಧ ಜಾಮೀನು

| Updated By: ganapathi bhat

Updated on: Mar 15, 2022 | 3:24 PM

ಪ್ರಕರಣ ದಾಖಲಾದ ನಂತರ ತಲೆಮರೆಸಿಕೊಂಡಿದ್ದ ಮುಕ್ರಂ ಖಾನ್​ರನ್ನು ಹೈದರಾಬಾದ್​ನಲ್ಲಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ಬಳಿಕ ಮುಕ್ರಂ ಖಾನ್​​ಗೆ ಅನಾರೋಗ್ಯ ಹಿನ್ನೆಲೆ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಹೈದರಾಬಾದ್​ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಹಿಜಾಬ್ ತಂಟೆಗೆ ಬಂದರೆ ತುಂಡು ತುಂಡು ಮಾಡುವುದಾಗಿ ಹೇಳಿದ್ದ ಮುಕ್ರಂ ಖಾನ್‌ಗೆ ಷರತ್ತುಬದ್ಧ ಜಾಮೀನು
ಮುಕ್ರಂ ಖಾನ್
Follow us on

ಕಲಬುರಗಿ: ಫೆಬ್ರವರಿ 8ರಂದು ಹಿಜಾಬ್ ಪರ ಪ್ರತಿಭಟನೆಯಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದ ಕಾಂಗ್ರೆಸ್ ಮುಖಂಡ ಮುಕ್ರಂ ಖಾನ್‌ಗೆ ಷರತ್ತುಬದ್ಧ ಜಾಮೀನು ನೀಡಲಾಗಿದೆ. ಸೇಡಂ ಪಟ್ಟಣದ 2ನೇ‌ ಸತ್ರ ನ್ಯಾಯಾಲಯದಿಂದ ಷರತ್ತುಬದ್ಧ ಜಾಮೀನು ಮಂಜೂರು ಮಾಡಲಾಗಿದೆ. ಹಿಜಾಬ್ ತಂಟೆಗೆ ಬಂದರೆ ತುಂಡು ತುಂಡು ಮಾಡುವುದಾಗಿ ಹೇಳಿಕೆ ನೀಡಿದ್ದ ಕಾಂಗ್ರೆಸ್ ಮುಖಂಡ ಮುಕ್ರಂ ಖಾನ್​ರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ಮುಕ್ರಂಖಾನ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್​ ಮುಖಂಡ ಸಹ ಆಗಿದ್ದಾರೆ. ಮುಕ್ರಂ ಹಿಜಾಬ್ ವಿವಾದ ಹಿನ್ನೆಲೆ ವಿವಾದಾತ್ಮಕ ಮತ್ತು ಬೆದರಿಕೆಯ ಹೇಳಿಕೆ ನೀಡಿದ್ದರು. ಈ ವಿರುದ್ಧ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣ ದಾಖಲಾದ ನಂತರ ತಲೆಮರೆಸಿಕೊಂಡಿದ್ದ ಮುಕ್ರಂ ಖಾನ್​ರನ್ನು ಹೈದರಾಬಾದ್​ನಲ್ಲಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ಬಳಿಕ ಮುಕ್ರಂ ಖಾನ್​​ಗೆ ಅನಾರೋಗ್ಯ ಹಿನ್ನೆಲೆ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಹೈದರಾಬಾದ್​ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ನಕಲಿ ಛಾಪಾ ಕಾಗದಗಳು ಹಾಗು ಸಬ್ ರಿಜಿಸ್ಟರ್ ಕಛೇರಿಯ ನಕಲಿ ಸೀಲು ಬಳಸಿ ದಂಧೆ; ಕೋಟ್ಯಾಂತರ ರೂ. ಅವ್ಯವಹಾರ

ನಕಲಿ ಛಾಪಾ ಕಾಗದಗಳು ಹಾಗು ಸಬ್ ರಿಜಿಸ್ಟರ್ ಕಛೇರಿಯ ನಕಲಿ ಸೀಲು ಬಳಸಿ ದಂಧೆ ನಡೆಸುತಿದ್ದ ಅರೋಪಿಗಳನ್ನು ಬಂಧಿಸಲಾಗಿದೆ. ನಕಲಿ ಸೀಲುಗಳ ತಯಾರು ಮಾಡಿ ನಕಲಿ ದಾಖಲಾತಿ ಸೃಷ್ಟಿಸಿ ಸೈಟು ಮಾರಾಟ ಮಾಡ್ತಿದ್ದ ಅರೋಪಿಗಳು, ಒಟ್ಟು ಏಂಟು ಮಂದಿ ಬಂಧಿಸಲಾಗಿದೆ. ಬಂಧಿತ ಅರೋಪಿಗಳಿಂದ ಒಟ್ಟು ಎಂಟು ಪ್ರಕರಣಗಳು ಬಯಲಿಗೆ ಬಂದಿವೆ. ಪ್ರದೀಪ್, ಧರ್ಮಲಿಂಗಂ, ಮಂಜುನಾಥ್, ಯಾರಬ್, ವೈ.ಆರ್ ಮಂಜುನಾಥ್, ಅಬ್ದುಲ್, ಶಭಾನ ಬಂಧಿತ ಅರೋಪಿಗಳು. ಇಷ್ಟು ಅರೋಪಿಗಳ ಬೆನ್ನ ಹಿಂದೆ ನಿಂತಿದ್ದವನು ನಟೋರಿಯಸ್ ರೌಡಿ ಶೀಟರ್ ರಾಮಯ್ಯ ಅಲಿಯಾಸ್ ಆಟೋ ರಾಮ ಎಂಬುದು ತಿಳಿದುಬಂದಿದೆ.

ಅರೋಪಿಗಳಿಂದ ಸುಮಾರು ಎರಡು ಕೋಟಿ ಹಣದ ವ್ಯವಹಾರ ಬಯಲಿಗೆ ಬಂದಿದೆ. ಆಟೋ ರಾಮನಿಗೆ ಅರೋಪಿಗಳು ಗಳಿಸಿದ ಹಣ ನೀಡ್ತಿದ್ರು. ಮೊದಲಿಗೆ ಮಾಲಿಕರು ಸ್ಥಳದಲ್ಲಿ ಇಲ್ಲದೆ ಇರುವ ಸೈಟ್ ಗುರುತು ಮಾಡ್ತಿದ್ರು. ಬಳಿಕ ಐವತ್ತು ವರ್ಷ ಹಾಗು ಹಿಂದಿನ ಇಸವಿಯ ಹಳೆ ಛಾಪಾ ಕಾಗದಗಳನ್ನು ತಯಾರಿಸುತಿದ್ರು. ಸೈಟ್ ಯಾರ ಹೆಸರಿನಲ್ಲಿ ಇದೆ ಅವರಿಗೆ ಯಾರ ಹೆಸರಿನಿಂದ ಸೈಟ್ ಬಂದಿದೆ ಎಂದು ಗುರುತಿಸುತಿದ್ರು. ಬಳಿಕ ಈ ಸೈಟ್ ಅನ್ನು ಈ ಹಿಂದೆ ಅಂದ್ರೆ ಮೂಲ ಮಾಲಿಕರು ನಮಗೆ ವಿಲ್ ಮಾಡಿದ್ದಾರೆ. ಸೈಟ್ ಈ ಹಿಂದೆ ನಲವತ್ತು ಐವತ್ತು ವರ್ಷಗಳ ಹಿಂದೆ ಮಾರಾಟ ಮಾಡಿದ್ರು ಎಂದು ದಾಖಲೆ ಸೃಷ್ಟಿ ಮಾಡ್ತಿದ್ರು. ಬಳಿಕ ನಕಲಿ ದಾಖಲೆಗಳನ್ನು ಇಟ್ಟುಕೊಂಡು ಸೈಟ್ ಮಾರಾಟ ಮಾಡ್ತಿದ್ರು ಎಂದು ತಿಳಿದುಬಂದಿದೆ.

ನಕಲಿ ದಾಖಲೆಗಳ ಮೂಲಕವೇ ಸಬ್ ರಿಜಿಸ್ಟರ್ ಕಛೇರಿಯಲ್ಲಿ ಅಸಲಿ ಎಂದು ಬಿಂಬಿಸುತಿದ್ರು. ಬಳಿಕ ಸಬ್ ರಿಜಿಸ್ಟರ್ ಮೂಲಕ ಅಧಿಕೃತವಾಗಿ ರಿಜಿಸ್ಟರ್ ಮಾಡಿಸಿ ಕೊಡ್ತಿದ್ರು. ಹೊಸದಾಗಿ ಕೊಂಡುಕೊಂಡವರು ಸೈಟ್​ನಲ್ಲಿ ಮನೆ ಕಟ್ಟಲು ಮುಂದಾದಾಗ ಪ್ರಕರಣ ಬೆಳಕಿಗೆ ಬಂದಿತ್ತು. ಸದ್ಯ ಅರೋಪಿಗಳ ಅರೆಸ್ಟ್ ಮಾಡಿ ಯಲಹಂಕ ಉಪನಗರ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಇತರ ಅಪರಾಧ ಸುದ್ದಿಗಳು

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲೊಬ್ಬ ಹೈ ಎಂಡ್ ಬೈಕ್ ಕದಿಯುತ್ತಿದ್ದ ಖದೀಮನನ್ನು ಬಂಧಿಸಲಾಗಿದೆ. ಟಾಪ್ ಎಂಡ್ ಬುಲೆಟ್ ಬೈಕ್​ಗಳ ಟಾರ್ಗೆಟ್ ಮಾಡುತಿದ್ದ ಆರೋಪಿ, ಯಾರೂ ಎಲ್ಲದ ವೇಳೆ ಹ್ಯಾಂಡಲ್ ಲಾಕ್ ಮುರಿದು ಬೈಕ್ ಕದ್ದೊಯ್ಯುತಿದ್ದ. ಕಳ್ಳನ ಅಸಲಿ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸೆರೆಯಾದ ಸಿಸಿಟಿವಿ ದೃಶ್ಯ ಆಧರಿಸಿ ಆರೋಪಿ ಬಂಧನ ಮಾಡಲಾಗಿದೆ. ಯಶವಂತಪುರ ಪೊಲೀಸರಿಂದ ಆರೋಪಿ ಬಂಧಿಸಲಾಗಿದೆ. ಅಬ್ರಹಾರ್ ಬಂಧಿತ ಆರೋಪಿ ಆಗಿದ್ದಾನೆ.

ಆನೇಕಲ್: ಪೆಟ್ರೋಲ್ ಬಂಕ್ ಬಳಿ ಕಸದ ರಾಶಿ ಹೊತ್ತಿ ಉರಿದ ಘಟನೆ ಚಂದಾಪುರದ‌ ಟೋಟಲ್ ಪೆಟ್ರೋಲ್ ಪಂಪ್ ಬಳಿ ನಡೆದಿದೆ. ಕಸದ ಜತೆ ಗಿಡಮರಗಳು ಸುಟ್ಟು ಹೋಗಿವೆ. ಪಕ್ಕದಲ್ಲೇ ಇದ್ದ ಪೆಟ್ರೋಲ್‌ ಪಂಪ್​ವರೆಗೂ ಬೆಂಕಿ ಆವರಿಸಿದೆ. ಬೆಂಕಿ‌ ಕಂಡು ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ್ದಾರೆ. ಅಗ್ನಿ ‌ಶಾಮಕ ಸಿಬ್ಬಂದಿಯಿಂದ ಬೆಂಕಿ ನಂದಿಸುವ ಕಾರ್ಯ ನಡೆಯುತ್ತಿದ್ದು ಹೈವೆ ತುಂಬಾ ದಟ್ಟ ಹೊಗೆ ಆವರಿಸಿದೆ. ಕಸ ವಿಲೇವಾರಿ ಆಗದ್ದೇ ಬೆಂಕಿಗೆ ಕಾರಣ ಎಂದು ಹೇಳಲಾಗಿದೆ.

ತುಮಕೂರು: ಪಾವಗಡ ತಾಲೂಕಿನ ತಿರುಮಲ ಗ್ರಾಮದಲ್ಲಿ ಕಳೆದುಕೊಂಡಿದ್ದ ಚಿನ್ನಾಭರಣವನ್ನು ವಾರಸುದಾರರಿಗೆ ವಾಪಸ್ ನೀಡಿ ಕ್ಷೌರಿಕ ಮಂಜುನಾಥ್ ಪ್ರಾಮಾಣಿಕತೆ ಮೆರೆದಿದ್ದಾರೆ. ಮಂಜುನಾಥ್ ಪ್ರಮಾಣಿಕತೆ ಮೆಚ್ಚಿ ಬಾಬು, ಶ್ರಾವಣಿ ದಂಪತಿ 5,000 ರೂಪಾಯಿ ಹಣ ನೀಡಿದ್ದಾರೆ. ಪುತ್ರನ ಹುಟ್ಟು ಕೂದಲು ತೆಗೆಸಲು ಹೋಗಿದ್ದ ವೇಳೆ ದಂಪತಿ ಚಿನ್ನಾಭರಣ ಕಳೆದುಕೊಂಡಿದ್ದರು.

ರಾಮನಗರ: ಚನ್ನಪಟ್ಟಣದ ಸಾತನೂರು‌ ಸರ್ಕಲ್ ಬಳಿ ನಿಂತಿದ್ದ ಲಾರಿಗೆ ಆಂಬುಲೆನ್ಸ್ ಡಿಕ್ಕಿ ಆದ ಘಟನೆ ಸಂಭವಿಸಿದೆ. ಮಂಡ್ಯ ಮೂಲದ ಮುಜಾಫಿರ್ (40) ಘಟನೆಯಲ್ಲಿ ಸಾವನ್ನಪ್ಪಿದ್ದಾರೆ. ಚಾಲಕ, ರೋಗಿ ಸೇರಿದಂತೆ ಮೂವರಿಗೆ ಗಂಭೀರ ಗಾಯವಾಗಿದೆ.

ಚಿಕ್ಕೋಡಿ: ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಕರ್ತವ್ಯಕ್ಕೆ ಅಡ್ಡಿ ಆರೋಪ ಕೇಳಿಬಂದಿದೆ. ಕುಡಿದ ಅಮಲಿನಲ್ಲಿ ಪತ್ರಕರ್ತ ಹೆಸರಿನಲ್ಲಿ ಕರ್ತವ್ಯನಿರತ ಆರೋಗ್ಯ ಸಿಬ್ಬಂದಿಗಳೊಂದಿಗೆ ವ್ಯಕ್ತಿಯೊಬ್ಬ ಹೈಡ್ರಾಮಾ ನಡೆಸಿದ್ದಾನೆ. ಅಸಭ್ಯ ವರ್ತನೆ ಅವಾಚ್ಯ ಶಬ್ದಗಳಿಂದ ನಿಂದನೆ ಆರೋಪ ಕೇಳಿಬಂದಿದೆ. ರಾಜು ಮುಂಡೆ ಎಂಬಾತ ಚಿಕ್ಕೋಡಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಕರ್ತವ್ಯಕ್ಕೆ ಅಡ್ಡಿ ಮಾಡಿದ ಆರೋಪಕ್ಕೆ ಗುರಿಯಾಗಿದ್ದಾನೆ. ಆರೋಗ್ಯ ಸಿಬ್ಬಂದಿಯಿಂದ ರಾಜು ಮುಂಡೆ ಮೇಲೆ ಕರ್ತವ್ಯಕ್ಕೆ ಅಡ್ಡಿ ಆರೋಪದಡಿ ಚಿಕ್ಕೋಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಇದನ್ನೂ ಓದಿ: Crime News: ಡೀಸೆಲ್ ಕಳ್ಳನ ಮೇಲೆ ಗುಂಡು ಹಾರಿಸಿದ ಪೊಲೀಸರು, ತೆಂಗಿನ ಮರಗಳ ಬುಡಕ್ಕೆ ವಿಷ ಇಟ್ಟ ದುಷ್ಕರ್ಮಿಗಳು

ಇದನ್ನೂ ಓದಿ: Bengaluru Crime: ಈಶಾನ್ಯ ರಾಜ್ಯದ ಮಹಿಳೆಯರನ್ನು ತಂದು ವೇಶ್ಯಾವಾಟಿಕೆ; ಮೂವರ ಬಂಧನ