ವಿಷದ ಬಟ್ಟಲಾಗುತ್ತಿದೆಯಾ ಕರ್ನಾಟಕ ಭತ್ತದ ಕಣಜ? ಅಧಿಕ ಇಳುವರಿಗಾಗಿ ಹೆಚ್ಚಿದ ರಾಸಾನಿಯಕ, ಕ್ರಿಮಿನಾಶಕ ಬಳಕೆ

| Updated By: ಗಣಪತಿ ಶರ್ಮ

Updated on: Oct 10, 2024 | 12:54 PM

ಕರ್ನಾಟಕದ ಭತ್ತದ ಕಣಜ ಎಂದು ಕೊಪ್ಪಳ, ರಾಯಚೂರು ಜಿಲ್ಲೆಗಳನ್ನು ಕರೆಯುತ್ತಾರೆ. ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿರುವ ಈ ಜಿಲ್ಲೆಯಲ್ಲಿ ಬೆಳೆಯುವ ಸೋನಾಮಸೂರಿ ಅಕ್ಕಿಗೆ ದೇಶ, ವಿದೇಶದಲ್ಲಿ ಕೂಡಾ ಬೇಡಿಕೆಯಿದೆ. ಹೀಗಾಗಿ ಈ ಭಾಗವನ್ನು ರಾಜ್ಯದ ಅನ್ನದ ಬಟ್ಟಲು ಅಂತ ಕೂಡಾ ಕರೆಯುತ್ತಾರೆ. ಆದರೆ ಇದೇ ಅನ್ನದ ಬಟ್ಟಲು ಇದೀಗ ವಿಷದ ಬಟ್ಟಲಾಗುತ್ತಿದೆಯಾ?

ವಿಷದ ಬಟ್ಟಲಾಗುತ್ತಿದೆಯಾ ಕರ್ನಾಟಕ ಭತ್ತದ ಕಣಜ? ಅಧಿಕ ಇಳುವರಿಗಾಗಿ ಹೆಚ್ಚಿದ ರಾಸಾನಿಯಕ, ಕ್ರಿಮಿನಾಶಕ ಬಳಕೆ
ವಿಷದ ಬಟ್ಟಲಾಗುತ್ತಿದೆಯಾ ಕರ್ನಾಟಕ ಭತ್ತದ ಕಣಜ? (ಸಾಂದರ್ಭಿಕ ಚಿತ್ರ)
Follow us on

ಕೊಪ್ಪಳ, ಅಕ್ಟೋಬರ್ 10: ಕರ್ನಾಟಕದ ಭತ್ತದ ಕಣಜ ಇದೀಗ ವಿಷದ ಬಟ್ಟಲಾಗುತ್ತಿದೆಯಾ? ಕ್ಯಾನ್ಸರ್ ಸೇರಿದಂತೆ ಅನೇಕ ರೋಗಗಳಿಗೆ ಇದೇ ಭತ್ತದ ಕಣಜ ಕಾರಣವಾಗುತ್ತಿದೆಯಾ ಎಂಬ ಆತಂಕ, ಅನುಮಾನ ಈಗ ಆರಂಭವಾಗಿದೆ. ಇದಕ್ಕೆ ಕಾರಣ, ಅತಿಯಾದ ರಾಸಾಯನಿಕ, ಕ್ರಿಮಿನಾಶಕ ಬಳಕೆ.

ಕೊಪ್ಪಳ ಜಿಲ್ಲೆಯ ಗಂಗಾವತಿ, ಕಾರಟಗಿ, ರಾಯಚೂರು ಜಿಲ್ಲೆಯ ಸಿಂದನೂರು, ಸಿರಗುಪ್ಪ ತಾಲೂಕುಗಳಲ್ಲಿ ಅತಿ ಹೆಚ್ಚು ಭತ್ತವನ್ನು ಬೆಳೆಯಲಾಗುತ್ತದೆ. ಕೊಪ್ಪಳ ಜಿಲ್ಲೆಯೊಂದರಲ್ಲಿಯೇ ಸರಿಸುಮಾರು 65 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತವನ್ನು ಬೆಳೆಯಲಾಗುತ್ತದೆ. ಇನ್ನು ತುಂಗಭದ್ರಾ ನದಿ ಈ ಭಾಗದಲ್ಲಿ ಹರಿದಿದ್ದರಿಂದ, ಜಲಾಶಯ ಕೆಳಬಾಗದ ಬಹುತೇಕ ರೈತರು ವರ್ಷದಲ್ಲಿ ಎರಡು ಬೆಳೆಗಳಾಗಿ ಭತ್ತವನ್ನೇ ಬೆಳೆಯುತ್ತಾರೆ. ಹೀಗಾಗಿ ಈ ಬಾಗದಲ್ಲಿ ರೈಸ್ ಮಿಲ್​​ಗಳು ಕೂಡಾ ಹೆಚ್ಚಿನ ಪ್ರಮಾಣದಲ್ಲಿವೆ. ಇದೇ ಕಾರಣಕ್ಕೆ ಈ ಭಾಗವನ್ನು ರಾಜ್ಯದ ಭತ್ತದ ಕಣಜ ಅಂತ ಕೂಡಾ ಕರೆಯುತ್ತಾರೆ.

ಇನ್ನು ಈ ಬಾಗದಲ್ಲಿ ಬೆಳೆಯುವ ಸೋನಾಮಸೂರಿ ಅಕ್ಕಿಗೆ ದೇಶ, ವಿದೇಶದಲ್ಲಿ ಕೂಡಾ ಡಿಮ್ಯಾಂಡ್ ಇದ್ದು, ಅತಿ ಹೆಚ್ಚು ಅಕ್ಕಿ ಇಲ್ಲಿಂದ ಬೇರಡೆ ರವಾನೆಯಾಗುತ್ತದೆ.

ಕ್ಯಾನ್ಸರ್ ಸೇರಿ ಅನೇಕ ಖಾಯಿಲೆಗಳಿಗೆ ಕಾರಣವಾಗುತ್ತಿದೆಯಾ ಅನ್ನದ ಬಟ್ಟಲು?

ನಾಡಿಗೆ ಅನ್ನ ನೀಡುವ ಇದೇ ಭತ್ತದ ಕಣಜ ವಿಷದ ಕಣಜವಾಗುತ್ತಿದ್ದು, ಕ್ಯಾನ್ಸರ್ ಸೇರಿದಂತೆ ಅನೇಕ ರೋಗಗಳಿಗೆ ಇಲ್ಲಿ ಬೆಳೆಯುವ ಭತ್ತವೇ ಕಾರಣವಾಗುತ್ತಿದೆಯಾ ಅನ್ನೋ ಆತಂಕ ಆರಂಭವಾಗಿದೆ. ಇದೇ ಆತಂಕವನ್ನು ಕೃಷಿ ಇಲಾಖೆ, ಕೃಷಿ ವಿಶ್ವವಿದ್ಯಾಲಯದ ಅನೇಕ ಅಧಿಕಾರಿಗಳು ಮತ್ತು ತಜ್ಞರು ವ್ಯಕ್ತಪಡಿಸುತ್ತಿದ್ದಾರೆ. ಕ್ಯಾನ್ಸರ್ ಸೇರಿದಂತೆ ಅನೇಕ ಕಾಯಿಲೆಗಳು ಈ ಬಾಗದ ಜನರಲ್ಲಿ ಹೆಚ್ಚಾಗುತ್ತಿವೆ. ಹೆಚ್ಚಿನ ಜನರು ಈಗಾಗಲೇ ಕ್ಯಾನ್ಸರ್​​ಗೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಕ್ಯಾನ್ಸರ್ ಸೇರಿದಂತೆ ಖಾಯಿಲೆಗಳು ಹೆಚ್ಚಾಗಲು ಕಾರಣ, ಹೆಚ್ಚಿನ ಭತ್ತದ ಇಳುವರಿಯನ್ನು ಪಡೆಯಲು ಬಹುತೇಕ ರೈತರು ಬಳಸುತ್ತಿರುವ ಅತಿಯಾದ ರಾಸಾಯನಿಕ ಮತ್ತು ಕ್ರಿಮಿನಾಶಕಗಳೇ ಕಾರಣ ಅಂತ ಹೇಳಲಾಗುತ್ತಿದೆ.

ಕೃಷಿ ವಿಜ್ಞಾನಿಗಳು ಹೇಳುವುದೇನು?

ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಭತ್ತ ಬೆಳೆಯುತ್ತಿರುವ ರೈತರಿಗೆ ಒಂದು ಹೆಕ್ಟೇರ್ ಪ್ರದೇಶದಲ್ಲಿ ಭತ್ತವನ್ನು ಬೆಳೆಯಲು, ಕೃಷಿ ವಿಜ್ಞಾನಿಗಳು ಸರಿಸುಮಾರು ನಾಲ್ಕು ಬ್ಯಾಗ್ ಯುರಿಯಾ, ಎರಡು ಬ್ಯಾಗ್ ಡಿಎಪಿ, ಎರಡು ಬ್ಯಾಗ್ ಪೋಟ್ಯಾಷ್ ಬಳಕೆ ಮಾಡಬಹುದು ಅಂತ ಹೇಳುತ್ತಾರೆ. ಆದರೆ, ಈ ಭಾಗದಲ್ಲಿ ಕೃಷಿ ವಿಜ್ಞಾನಿಗಳು ಶಿಫಾರಸು ಮಾಡಿದ ಪ್ರಮಾಣಕ್ಕಿಂತ ಎರಡು ಪಟ್ಟು ಹೆಚ್ಚು ಗೊಬ್ಬರವನ್ನು ರೈತರು ಬಳಸುತ್ತಿದ್ದಾರಂತೆ. ಇನ್ನು ಒಂದು ಎಕರೆಗೆ ಹತ್ತು ಮಿಲಿ ಲೀಟರ್ ಕ್ರಿಮಿನಾಶಕ ಸಿಂಪಡಣೆ ಮಾಡಿ ಅಂತ ಹೇಳಿದ್ದರೆ, ಒಂದು ಎಕರೆಗೆ ಇಪ್ಪತ್ತರಿಂದ ಮೂವತ್ತು ಮಿಲಿ ಲೀಟರ್ ಕ್ರಿಮಿನಾಶಕವನ್ನು ಬಳಕೆ ಮಾಡುತ್ತಿದ್ದಾರೆ. ಇದರಿಂದ ನಾವು ತಿನ್ನುವ ಆಹಾರ ವಿಷವಾಗುತ್ತಿದೆ ಎಂದು ರಾಯಚೂರು ವಿಶ್ವವಿದ್ಯಾಲಯದ ಕೊಪ್ಪಳ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಎಂವಿ ರವಿ ಆತಂಕ ವ್ಯಕ್ತಪಡಿಸಿದ್ದಾರೆ.

ಭತ್ತದ ಕಟಾವಿಗೆ ಮೊದಲು ಒಂದು ತಿಂಗಳ ಸಮಯದಲ್ಲಿ ಯಾವುದೇ ಕಾರಣಕ್ಕೂ ಕೂಡಾ ರಾಸಾನಿಯಕ ಗೊಬ್ಬರ, ಕ್ರಿಮಿನಾಶಕ ಸಿಂಪಡಣೆ ಮಾಡದಂತೆ ಕೃಷಿ ಇಲಾಖೆ ಅಧಿಕಾರಿಗಳು ರೈತರಿಗೆ ಹೇಳುತ್ತಾರೆ. ಆದರೆ ಕಟಾವಿಗೆ ಒಂದು ವಾರವಿದ್ದಾಗಲು ಕೂಡಾ ರೈತರು ರಾಸಾನಿಯಕ, ಕ್ರಿಮಿನಾಶಕ ಬಳಸುತ್ತಿದ್ದಾರಂತೆ. ಕಡಿಮೆ ಭೂಮಿಯಲ್ಲಿ ಹೆಚ್ಚಿನ ಇಳುವರಿಯನ್ನು ಪಡೆಯುವ ಉದ್ದೇಶದಿಂದ ರೈತರು ಭೂಮಿಯ ಫಲವತ್ತತೆಯನ್ನು ಹೆಚ್ಚಿಸಲು ನೈಸರ್ಗಿಕ ಗೊಬ್ಬರಗಳ ಬಳಕೆಗಿಂತ ರಾಸಾಯನಿಕ ಗೊಬ್ಬರಗಳನ್ನು ಹೆಚ್ಚಾಗಿ ಬಳಸುತ್ತಿದ್ದಾರಂತೆ. ಕೀಟ ಮತ್ತು ಕಳೆ ನಿರ್ಮೂಲನೆಗಾಗಿ ಹೆಚ್ಚಿನ ಕ್ರಿಮಿನಾಶಕಗಳನ್ನು ಬಳಕೆ ಮಾಡುತ್ತಿದ್ದಾರೆ.

ವಿಜ್ಞಾನಿಗಳ ಶಿಫಾರಸಿಗಿಂತ ಹೆಚ್ಚು ರಾಸಾಯನಿಕ, ಕ್ರಿಮಿನಾಶಕಗಳ ಬಳಕೆ

ಮುಂಗಾರು ಹಂಗಾಮಿನಲ್ಲಿ ಕೇವಲ ಗಂಗಾವತಿ ತಾಲೂಕೊಂದರಲ್ಲಿಯೇ ಆರವತ್ತು ಸಾವಿರ ಮೆಟ್ರಿಕ್ ಟನ್ ಗೊಬ್ಬರ ಈ ವರ್ಷ ಮಾರಾಟವಾಗಿದೆ ಎಂದಿದ್ದಾರೆ ಕೃಷಿ ಇಲಾಖೆ ಅಧಿಕಾರಿಗಳು. ಇದು ಎಷ್ಟರ ಮಟ್ಟಿಗೆ ರಾಸಾಯನಿಕ ಗೊಬ್ಬರವನ್ನು ರೈತರು ಭತ್ತ ಬೆಳೆಯಲು ಬಳಸುತ್ತಿದ್ದಾರೆ ಅನ್ನೋದಕ್ಕೆ ಪುಷ್ಟಿ ನೀಡುತ್ತಿದೆ. ಇನ್ನು ಹೆಚ್ಚಿನ ರಾಸಾನಿಯಕ ಬಳಕೆಯಿಂದ ಕ್ಯಾನ್ಸರ್ ಸೇರಿದಂತೆ ಅನೇಕ ರೋಗಗಳು ಈ ಬಾಗದಲ್ಲಿನ ಜನರಲ್ಲಿ ಹೆಚ್ಚಾಗುತ್ತಿವೆ. ಕ್ಯಾನ್ಸರ್ ಇದೇ ಕಾರಣದಿಂದ ಬಂದಿದೆ ಅಂತ ಹೇಳಲಿಕ್ಕಾಗದೇ ಇ್ದರೂ ಕೂಡಾ, ಈ ಒಂದು ಕಾರಣದಿಂದ ಕೂಡಾ ಕ್ಯಾನ್ಸರ್ ಬರುವ ಸಾಧ್ಯತೆಯನ್ನು ಅಲ್ಲಗಳೆಯಲಾಗುವುದಿಲ್ಲ. ಈ ಬಗ್ಗೆ ದೊಡ್ಡ ಮಟ್ಟದಲ್ಲಿ ಈಗಾಗಲೇ ಚರ್ಚೆಯಾಗಿದೆ ಎಂದಿದ್ದಾರೆ ಕೃಷಿ ಇಲಾಖೆ ಉಪನಿರ್ದೇಶಕ ರುದ್ರೇಶಪ್ಪ.

ಕೃಷಿ ಇಲಾಖೆ ಅಧಿಕಾರಿಗಳು ಏನೆನ್ನುತ್ತಾರೆ?

ಕೃಷಿ ಇಲಾಖೆಯಿಂದ, ಕೃಷಿ ವಿಶ್ವವಿದ್ಯಾಲಯದಿಂದ ರೈತರಿಗೆ ಈ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಸಹಜ ಕೃಷಿ, ನೈಸರ್ಗಿಕ ಕೃಷಿಯನ್ನು ಮಾಡುವಂತೆ ರೈತರಿಗೆ ತರಬೇತಿ ನೀಡುವ ಕೆಲಸ ಕೂಡಾ ಮಾಡಲಾಗುತ್ತಿದೆ. ಆದರೆ ಬಹುತೇಕ ರೈತರು, ಕೃಷಿ ಅಧಿಕಾರಿಗಳು, ಕೃಷಿ ತಜ್ಞರು ಹೇಳುವ ಮಾತುಗಳನ್ನು ಕೇಳುವ ಸ್ಥಿತಿಯಲ್ಲಿ ಇಲ್ಲವಂತೆ. ಹೀಗಾಗಿ ಸರ್ಕಾರವೇ ಈ ಬಗ್ಗೆ ನಿಯಮಗಳನ್ನು ಜಾರಿಗೊಳಿಸಿದರೆ ಮಾತ್ರ, ಇದಕ್ಕೆ ಕಡಿವಾಣ ಹಾಕಲು ಸಾಧ್ಯ ಎನ್ನುತ್ತಿದ್ದಾರೆ ಕೃಷಿ ಇಲಾಖೆಯ ಅಧಿಕಾರಿಗಳು.

ಇದನ್ನೂ ಓದಿ: ಕೊಪ್ಪಳದಲ್ಲಿ ಬೈಕ್ ವ್ಹೀಲಿಂಗ್ ತಡೆದಿದ್ದಕ್ಕೆ ಕಾನ್ಸ್​ಟೇಬಲ್ ಮೇಲೆ ಪುಂಡರಿಂದ ಹಲ್ಲೆ: ರೌಡಿಶೀಟರ್ ಸೇರಿ ಮೂವರು ವಶಕ್ಕೆ

ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಅತಿ ಹೆಚ್ಚು ರಾಸಾಯಾನಿಕ, ಕ್ರಿಮಿನಾಶಕಗಳ ಬಳಕೆಯಿಂದ ತಿನ್ನುನ ಅನ್ನ ಇದೀಗ ವಿಷವಾಗುತ್ತಿರುವುದು ಆತಂಕಕಾರಿಯಾಗಿದೆ. ಈ ನಿಟ್ಟಿನಲ್ಲಿ ರೈತರು ಚಿಂತನೆ ಮಾಡಬೇಕಾಗಿದೆ. ನೈಸರ್ಗಿಕ ಗೊಬ್ಬರಗಳ ಬಳಕೆ ಹೆಚ್ಚು ಮಾಡಿ, ರಾಸಾಯನಿಕ ಗೊಬ್ಬರಗಳ ಬಳಕೆ ಕಡಿಮೆ ಮಾಡಬೇಕಾಗಿದೆ. ಜೊತೆಗೆ ಸರ್ಕಾರ ಕೂಡಾ ಈ ಬಗ್ಗೆ ಹೆಚ್ಚಿನ ಗಮನಹರಿಸಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ