ಕೊಪ್ಪಳ: ಮಂಗನ ಕಾಯಿಲೆ ಬೆನ್ನಲ್ಲೇ ಎಂಟ್ರಿ ಕೊಟ್ಟ ಮಂಗನ ಬಾವು; ಮಕ್ಕಳು ಸೇರಿ ವಯಸ್ಕರು ಹೈರಾಣ

| Updated By: ಕಿರಣ್ ಹನುಮಂತ್​ ಮಾದಾರ್

Updated on: Feb 02, 2024 | 4:27 PM

ರಾಜ್ಯದ ಕೆಲವಡೆ ಮಂಗನ ಕಾಯಿಲೆ ಹೆಚ್ಚಾಗಿದ್ದರೆ, ಇನ್ನು ಕೆಲವಡೇ ಮಂಗನ ಬಾವು ಹೆಚ್ಚಾಗುತ್ತಿದೆ. ಅದರಲ್ಲೂ ಕೊಪ್ಪಳ ಜಿಲ್ಲೆಯಲ್ಲಿ ಮಂಗನ ಬಾವುವಿನಿಂದ ಮಕ್ಕಳು ಸೇರಿದಂತೆ ವಯಸ್ಕರು ಕೂಡ ಪರದಾಡುತ್ತಿದ್ದಾರೆ. ತೀರ್ವ ಜ್ವರ ಮತ್ತು ನೋವಿನಿಂದ ಮಕ್ಕಳು ಸಂಕಷ್ಟ ಪಡುತ್ತಿದ್ದರೆ, ಇದು ಪೋಷಕರ ಆತಂಕವನ್ನು ಹೆಚ್ಚಿಸಿದೆ. 

ಕೊಪ್ಪಳ: ಮಂಗನ ಕಾಯಿಲೆ ಬೆನ್ನಲ್ಲೇ ಎಂಟ್ರಿ ಕೊಟ್ಟ ಮಂಗನ ಬಾವು; ಮಕ್ಕಳು ಸೇರಿ ವಯಸ್ಕರು ಹೈರಾಣ
ಮಂಗನ ಬಾವು
Follow us on

ಕೊಪ್ಪಳ, ಫೆ.02: ಕೊಪ್ಪಳ ಜಿಲ್ಲಾಸ್ಪತ್ರೆ ಸೇರಿದಂತೆ ಜಿಲ್ಲೆಯ ಅನೇಕ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಮಕ್ಕಳನ್ನು ಪಾಲಕರು ಚಿಕಿತ್ಸೆಗೆ ಕರೆದುಕೊಂಡು ಬರುತ್ತಿರುವ ದೃಶ್ಯಗಳು ಸಾಮಾನ್ಯವಾಗಿವೆ. ರಾಜ್ಯದ ಅನೇಕ ಕಡೆ ಮಂಗನಬಾವು ಹೆಚ್ಚಾಗಿದ್ದು, ಕೊಪ್ಪಳ(Koppala) ಜಿಲ್ಲೆಯಲ್ಲಿ ಕೂಡ ತೀರ್ವವಾಗಿದೆ. ಜಿಲ್ಲೆಯ ನೂರಾರು ಮಕ್ಕಳು ಮಂಗನ ಬಾವುವಿನ ವೈರಸ್ ತಗುಲಿದ್ದರಿಂದ ಪರದಾಡುತ್ತಿದ್ದಾರೆ. ಯಾವುದೇ ಆಸ್ಪತ್ರೆಗೆ ಹೋದರೂ ಕೂಡ ಮಂಗನ ಬಾವುವಿನಿಂದ ಬಳಲುತ್ತಿರುವ ಮಕ್ಕಳು ಕಾಣಸಿಗುತ್ತಿದ್ದಾರೆ.

ಒಬ್ಬರಿಂದ ಒಬ್ಬರಿಗೆ ಹರಡುವ ಈ ಸಾಂಕ್ರಾಮಿಕ ರೋಗದ ಲಕ್ಷಣಗಳೇನು?

ಇನ್ನು ಮಂಗನ ಬಾವು, ಸಾಂಕ್ರಾಮಿಕ ರೋಗವಾಗಿದ್ದು, ಒಬ್ಬರಿಂದ ಇನ್ನೊಬ್ಬರಿಗೆ ಬೇಗನೆ ಹರಡುತ್ತದೆ. ಅದರಲ್ಲೂ ಮಕ್ಕಳಲ್ಲಿ ಬೇಗನೆ ಹರಡುವುದರಿಂದ ಜಿಲ್ಲೆಯ ಅನೇಕ ಮಕ್ಕಳು ಮಂಗನ ಬಾವುವಿಗೆ ಹೈರಾಣಾಗಿವೆ. ಮಂಗನ ಬಾವು ವೈರಾಣುವಿಗೆ ತುತ್ತಾಗಿರುವ ಮಕ್ಕಳು ತೀರ್ವ ಜ್ವರ ಮತ್ತು ಮುಖದ ಕೆಳಗಿನ ಬಾಗ ಊದಿಕೊಳ್ಳುತ್ತದೆ. ನೋವು ಕೂಡಾ ತೀರ್ವವಾಗಿ ಬಾಧಿಸುತ್ತದೆ. ಕೆಲವರಲ್ಲಿ ವೈರಾಣುವಿನ ಲಕ್ಷಣಗಳು ಸೂಕ್ಷ್ಮವಾಗಿದ್ದರೆ, ಇನ್ನು ಕೆಲವರಲ್ಲಿ ತೀರ್ವವಾಗಿವೆ. ಹೀಗಾಗಿ ಅನೇಕ ಮಕ್ಕಳು, ಹೊರ ರೋಗಿಗಳಾಗಿ ಚಿಕಿತ್ಸೆ ಪಡೆದು ಹೋಗುತ್ತಿದ್ದರೆ, ತೀರ್ವ ಜ್ವರವಿರುವ ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಇದನ್ನೂ ಓದಿ:ಮಂಗನಬಾವು ಸೋಂಕಿಗೆ ಕಾರಣವೇನು?; ಇದಕ್ಕೆ ಚಿಕಿತ್ಸೆ ಇದೆಯೇ?

ಇನ್ನು ಮಕ್ಕಳಲ್ಲಿ ಮಾತ್ರವಲ್ಲ, ದೊಡ್ಡವರಲ್ಲಿಯೂ ಕೂಡ ಮಂಗನಬಾವು ಉಂಟಾಗಿದ್ದು, ಜ್ವರ ಸೇರಿದಂತೆ ಅನೇಕ ರೀತಿಯ ತೊಂದೆರೆಯಿಂದ ಬಳಲುತ್ತಿದ್ದಾರೆ. ಈ ಕುರಿತು ಮಾತನಾಡಿದ ಕೊಪ್ಪಳ ಜಿಲ್ಲಾ ಆರೋಗ್ಯಾಧಿಕಾರಿ ಟಿ.ಲಿಂಗರಾಜು, ‘  ಮಂಗನಬಾವು, ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಸಾಮಾನ್ಯವಾಗಿ ಚಳಿಗಾಲದಲ್ಲಿ ಹೆಚ್ಚಾಗುವ ಈ ಸೋಂಕು, ಚಳಿಗಾಲ ಮುಗಿಯುವ ಹಂತದಲ್ಲಿದ್ದರೂ ಕೂಡ ಕಡಿಮೆಯಾಗದೇ, ತೀರ್ವವಾಗುತ್ತಿದೆ. ಮಕ್ಕಳು ಶಾಲೆಗೆ ಹೋಗುವುದು ಮತ್ತು ಕೂಡಿ ಆಟವಾಡುವುದರಿಂದ ಮಕ್ಕಳಲ್ಲಿ ಬಹುಬೇಗನೇ ಈ ಸೋಂಕು ಹರಡುತ್ತದೆ. ಹೀಗಾಗಿ ಸೋಂಕಿನ ಲಕ್ಷಣ ಇರುವ ಮಕ್ಕಳು ಶಾಲೆಗೆ ಹೋಗದೇ ಪ್ರತ್ಯೇಕವಾಗಿ ಇರುವುದರಿಂದ ಸೋಂಕು ಹಬ್ಬದಂತೆ ನೋಡಿಕೊಳ್ಳಬಹುದಾಗಿದೆ ಎಂದರು.

ಈ ಮಂಗನ ಬಾವುವಿಗೆ ಪ್ರತ್ಯೇಕವಾಗಿ ಯಾವುದೇ ಚಿಕಿತ್ಸೆ ಇಲ್ಲದೇ ಇರುವುದರಿಂದ ಜ್ವರ ಮತ್ತು ನೋವನ್ನು ಕಡಿಮೆ ಮಾಡಲು ಮಾತ್ರ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಸೋಕಿಂತ ರೋಗಿಯಲ್ಲಿ ಒಂದರಿಂದ ಎರಡು ವಾರಗಳ ಕಾಲ ಈ ಸೋಂಕು ಸಕ್ರೀಯವಾಗಿರಲಿದ್ದು, ಸ್ವಯಂ ನಿಯಂತ್ರಣ ಕ್ರಮಗಳಿಂದ ಈ ಸೋಂಕನ್ನು ನಿಯಂತ್ರಿಸಬಹುದಾಗಿದೆ ಎಂದು ವೈದ್ಯರು ಹೇಳುತ್ತಿದ್ದಾರೆ. ಜಿಲ್ಲೆಯಲ್ಲಿ ಮಂಗನ ಬಾವು ತೀರ್ವವಾಗಿ ಹೆಚ್ಚಾಗುತ್ತಿದೆ. ಅದರಲ್ಲೂ ಗ್ರಾಮೀಣ ಭಾಗದಲ್ಲಿ ಜಾಗೃತಿ ಕಡಿಮೆ ಇರುವುದರಿಂದ ಮಂಗನ ಬಾವು ಹೆಚ್ಚಾಗುತ್ತಿದೆ. ಹೀಗಾಗಿ ಆರೋಗ್ಯ ಇಲಾಖೆ, ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ