ಯಾದಗಿರಿಯಲ್ಲಿ ಬೃಹತ್​ ಔಷಧಿ ಪಾರ್ಕ್​ ನಿರ್ಮಾಣಕ್ಕೆ ಕೇಂದ್ರದ ನೆರವು ಕೋರಿದ ಮುರುಗೇಶ್​ ನಿರಾಣಿ; ದೆಹಲಿಯಲ್ಲಿ ಭಗವಂತಾ ಖೂಬಾ ಭೇಟಿ

| Updated By: Lakshmi Hegde

Updated on: Aug 12, 2021 | 6:01 PM

ಮುರುಗೇಶ್​ ನಿರಾಣಿಯವರ ಮನವಿಗೆ ಸಚಿವ ಭಗವಂತ ಖೂಬಾ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಅಧಿಕಾರಿಗಳಿಂದ ಅಗತ್ಯ ಮಾಹಿತಿ ಪಡೆದು, ಯೋಜನೆಯನ್ನು ಅನುಷ್ಠಾನಗೊಳಿಸುವ ಭರವಸೆಯನ್ನೂ ನೀಡಿದ್ದಾರೆ.

ಯಾದಗಿರಿಯಲ್ಲಿ ಬೃಹತ್​ ಔಷಧಿ ಪಾರ್ಕ್​ ನಿರ್ಮಾಣಕ್ಕೆ ಕೇಂದ್ರದ ನೆರವು ಕೋರಿದ ಮುರುಗೇಶ್​ ನಿರಾಣಿ; ದೆಹಲಿಯಲ್ಲಿ ಭಗವಂತಾ ಖೂಬಾ ಭೇಟಿ
ಭಗವಂತ್ ಖೂಬಾರನ್ನು ಭೇಟಿಯಾದ ಮುರುಗೇಶ್ ನಿರಾಣಿ
Follow us on

ಹಿಂದುಳಿದ ಜಿಲ್ಲೆ ಯಾದಗಿರಿಯ ಕಡೆಚೂರಿನಲ್ಲಿರುವ ಕೈಗಾರಿಕಾ ಪ್ರದೇಶದಲ್ಲಿ, ವಿಶ್ವ ದರ್ಜೆಯ ಬೃಹತ್​ ಔಷಧಿ ಪಾರ್ಕ್ (Drug Park​) ಅಭಿವೃದ್ಧಿ ಪಡಿಸಲು ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದು ಬೃಹತ್​ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರಗೇಶ್​ ನಿರಾಣಿ (Murugesh Nrani) , ಕೇಂದ್ರ ರಾಸಾಯನ ಮತ್ತು ರಸಗೊಬ್ಬರ ಹಾಗೂ ನವೀಕರಿಸಬಹುದಾದ ಇಂಧನ ಇಲಾಖೆ ರಾಜ್ಯ ಸಚಿವ ಭಗವಂತ್​ ಖೂಬಾ (Bhagavant Khuba) ಅವರಿಗೆ ಮನವಿ ಮಾಡಿದ್ದಾರೆ. ಇಂದು ದೆಹಲಿಯಲ್ಲಿ ಭಗಂವತ್​ ಖೂಬಾ ಅವರನ್ನು ಭೇಟಿಯಾದ ಮುರುಗೇಶ್​ ನಿರಾಣಿ, ಮನವಿಯುಳ್ಳ ಪತ್ರವನ್ನು ಅವರಿಗೆ ಹಸ್ತಾಂತರ ಮಾಡಿದ್ದಾರೆ.

ಯಾದಗಿರಿ ಜಿಲ್ಲೆ, ಕರ್ನಾಟಕದ ಹಿಂದುಳಿದ ಜಿಲ್ಲೆಗಳ ವ್ಯಾಪ್ತಿಗೆ ಸೇರಲಿದೆ. ಎರಡು ಮತ್ತು ಮೂರನೇ ಹಂತದ ನಗರಗಳನ್ನು ಅಭಿವೃದ್ಧಿ ಪಡಿಸಿ ಇಲ್ಲಿ ಮೂಲಸೌಕರ್ಯಗಳನ್ನು ಕಲ್ಪಿಸಿ ಕೊಡುವ ಮೂಲಕ ಹೂಡಿಕೆದಾರರನ್ನು ಆಕರ್ಷಿಸಬೇಕು ಎಂಬುದು ಸರ್ಕಾರದ ಉದ್ದೇಶ ಎಂಬುದನ್ನು ಭಗವಂತ ಖೂಬಾರಿಗೆ ಮುರುಗೇಶ್​ ನಿರಾಣಿ ವಿವರಿಸಿದ್ದಾರೆ.

ಅಂದಾಜು 10 ಸಾವಿರ ಉದ್ಯೋಗಗಳ ಸೃಷ್ಟಿ
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಆತ್ಮ ನಿರ್ಭರ ಭಾರತ ಆಂದೋಲನದಡಿ, ಯಾದಗಿರಿಯಲ್ಲಿ ವಿಶ್ವ ದರ್ಜೆಯ ಬೃಹತ್​ ಔಷಧಿ ಪಾರ್ಕ್ ಅಭಿವೃದ್ಧಿ ಯೋಜನೆ ಅನುಷ್ಠಾನಗೊಂಡರೆ ಅಂದಾಜು 10 ಸಾವಿರ ಉದ್ಯೋಗಗಳು ಸೃಷ್ಟಿಯಾಗಲಿವೆ. ಹಾಗೇ, 6 ಸಾವಿರ ಕೋಟಿ ರೂಪಾಯಿ ಬಂಡವಾಳವನ್ನು ಆಕರ್ಷಿಸಬಹುದು ಎಂದು ಮುರುಗೇಶ್​ ನಿರಾಣಿ ಹೇಳಿದ್ದಾರೆ.

ಮೂಲಸೌಕರ್ಯಕ್ಕಿಲ್ಲ ಕೊರತೆ
ಯಾದಗಿರಿ ಜಿಲ್ಲೆ..ಕಲಬುರ್ಗಿಗೆ ಸಮೀಪದಲ್ಲಿದೆ. ಇಲ್ಲಿ ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣ, ರಾಷ್ಟ್ರೀಯ ಹೆದ್ದಾರಿ ಸೌಕರ್ಯಗಳಿವೆ. ಹಾಗೇ, ರಾಜ್ಯ ಸರ್ಕಾರದ ವತಿಯಿಂದ ಅಗತ್ಯ ಇರುವ ಎಲ್ಲ ರೀತಿಯ ನೆರವುಗಳನ್ನೂ ನೀಡಲಾಗುವುದು. ಕಡೆಚೂರಿನಲ್ಲಿ ವಿಶ್ವದರ್ಜೆಯ ಔಷಧಾಲಯ ಪಾರ್ಕ್ ನಿರ್ಮಾಣಕ್ಕೆ ಒಂದು ಸಾವಿರ ಕೋಟಿ ಆರ್ಥಿಕ ನೆರವು ನೀಡಲು ನಮ್ಮ ಸರ್ಕಾರ ಸಿದ್ಧವಿದೆ. ಈ ಅಂಶಗಳನ್ನೆಲ್ಲ ಪರಿಗಣಿಸಿ, ನೀವು ಸಕಾರಾತ್ಮಕವಾಗಿ ಸ್ಪಂದಿಸಬೇಕು ಎಂದು ನಿರಾಣಿಯವರು, ಭಗವಂತ ಖೂಬಾ ಬಳಿ ಕೇಳಿದ್ದಾರೆ. ಈ ವೇಳೆ ಕಲಬುರ್ಗಿ ಸಂಸದ ಉಮೇಶ್ ಜಾಧವ್​ ಕೂಡ ಇದ್ದರು.

ಸ್ಪಂದಿಸಿದ ಭಗವಂತ ಖೂಬಾ
ಮುರುಗೇಶ್​ ನಿರಾಣಿಯವರ ಮನವಿಗೆ ಸಚಿವ ಭಗವಂತ ಖೂಬಾ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಅಧಿಕಾರಿಗಳಿಂದ ಅಗತ್ಯ ಮಾಹಿತಿ ಪಡೆದು, ಯೋಜನೆಯನ್ನು ಅನುಷ್ಠಾನಗೊಳಿಸುವ ಭರವಸೆಯನ್ನೂ ನೀಡಿದ್ದಾರೆ. ಹಾಗೇ, ನಂತರ ಟ್ವೀಟ್ ಮಾಡಿ ಮುರುಗೇಶ್​ ನಿರಾಣಿಯವರು ತಮ್ಮನ್ನು ಭೇಟಿ ಮಾಡಿದ ಫೋಟೋವನ್ನು ಶೇರ್​ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ಹೆಚ್ಚುತ್ತಿರುವ ತಾಪಮಾನದಿಂದ ಕರಗುತ್ತಿರುವ ಹಿಮ ಪ್ರದೇಶಗಳು ಭಾರತದ ಕಂಡಲಂಚಿನ ನಗರಗಳಿಗೆ ಅಪಾಯಕಾರಿಯಾಗಲಿವೆ: ವರದಿ

ಚಾಮುಂಡಿ ಬೆಟ್ಟಕ್ಕೆ ನಾಳೆಯೂ ಸೇರಿ 2 ಶುಕ್ರವಾರ ಭಕ್ತರಿಗೆ ಪ್ರವೇಶ ನಿರ್ಬಂಧ

ಮನವಿ ಪತ್ರ ಸಲ್ಲಿಸಿದ ಮುರುಗೇಶ್ ನಿರಾಣಿ

Published On - 6:00 pm, Thu, 12 August 21