AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿಗರಿಗೆ ಸಿಹಿಸುದ್ದಿ: ಗ್ಯಾಸ್ ಬಗ್ಗೆ ಜಿಲ್ಲಾಧಿಕಾರಿ ಮಹತ್ವದ ಸ್ಪಷ್ಟನೆ, ಹೋಟೆಲ್​ಗಳು ಬಂದ್ ಆಗಲ್ಲ

ದೇಶಾದ್ಯಂತ ಜನ ಕಮರ್ಷಿಯಲ್ LPG ಸಿಲಿಂಡರ್​ಗಾಗಿ ಪರದಾಟ ಶುರುವಾಗಿದೆ. ಗ್ಯಾಸ್ ಪೂರೈಕೆ ಆಗದೆ ಹೋಟೆಲ್​ಗಳು ಬಂದ್ ಆಗುತ್ತಿವೆ. ಆದರೆ ಇತ್ತ ಬೆಂಗಳೂರಿನಲ್ಲಿ ಯಾವುದೇ ಹೋಟೆಲ್​ಗಳು ಬಂದ್ ಆಗಲ್ಲ ಎಂದು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷರು ಹೇಳಿದ್ದಾರೆ. ಜೊತೆಗೆ ಎಲ್​​ಪಿಜಿ ದಾಸ್ತಾನು ಕೊರತೆಯಿಲ್ಲ. ಸುಳ್ಳು ವದಂತಿಗೆ ಕಿವಿಕೊಡದಂತೆ ಡಿಸಿ ಜಗದೀಶ.ಜಿ ಮನವಿ ಮಾಡಿದ್ದಾರೆ.

ಬೆಂಗಳೂರಿಗರಿಗೆ ಸಿಹಿಸುದ್ದಿ: ಗ್ಯಾಸ್ ಬಗ್ಗೆ ಜಿಲ್ಲಾಧಿಕಾರಿ ಮಹತ್ವದ ಸ್ಪಷ್ಟನೆ, ಹೋಟೆಲ್​ಗಳು ಬಂದ್ ಆಗಲ್ಲ
ಗ್ಯಾಸ್​ ಸಿಲಿಂಡರ್​​Image Credit source: ndtv.com
Kiran Surya
| Edited By: |

Updated on: Mar 12, 2026 | 7:37 PM

Share

ಬೆಂಗಳೂರು, ಮಾರ್ಚ್​​ 12: ಗಲ್ಫ್​ ರಾಷ್ಟ್ರಗಳ ಯುದ್ಧದಿಂದಾಗಿ ದೇಶದ ಜನಸಾಮಾನ್ಯರಿಗೆ ಬಿಸಿ ತಟ್ಟಿದೆ. ಅದರಲ್ಲೂ ಗ್ಯಾಸ್​​​​​​ ಪೂರೈಕೆಯಲ್ಲಿನ ವ್ಯತ್ಯಯವೂ ರಾಜ್ಯದ ಜನ ಜೀವನದ ದಿಕ್ಕೇ ಬದಲಾಗುತ್ತಿದೆ. ಹೋಟೆಲ್​​​ಗಳು ಬಂದ್ ಆಗುತ್ತಿವೆ. ಇನ್ನು ಈ ಮಧ್ಯೆ ಬೆಂಗಳೂರಿನಲ್ಲಿ LPG​ ಸಿಲಿಂಡರ್ ಕೊರತೆ ಎನ್ನುವ ಸುದ್ದಿ ಕೂಡ ಹರಿದಾಡುತ್ತಿದ್ದು, ಎಲ್​ಪಿಜಿ ದಾಸ್ತಾನು ಕೊರತೆ ಇಲ್ಲ. ಸುಳ್ಳು ವದಂತಿಗೆ ಕಿವಿಕೊಡಬೇಡಿ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ.ಜಿ ಹೇಳಿದ್ದಾರೆ. ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷರು ಕೂಡ ಯಾವುದೇ ಹೋಟೆಲ್​ಗಳು ಬಂದ್ ಆಗಲ್ಲ ಎಂದಿದ್ದಾರೆ.

ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರೋ ಯುದ್ಧದಿಂದಾಗಿ ಜಗತ್ತಿನಾದ್ಯಂತ ಅಸ್ಥಿರತೆ ಉಂಟಾಗಿದೆ. ಯುದ್ಧದ ಮೋಹದಿಂದ ಜಗತ್ತಿಗೆ ತೈಲದ ಹೊರೆಬಿದ್ದಿದೆ. ಅದರಲ್ಲೂ, ಭಾರತದಲ್ಲಂತೂ ಗ್ಯಾಸ್ ಗಂಡಾಂತರವನ್ನೇ ಸೃಷ್ಟಿಸಿದೆ. ಮರ್ಷಿಯಲ್ ಗ್ಯಾಸ್ ಪೂರೈಕೆ ಆಗದೆ ಹೋಟೆಲ್​ಗಳು ಬಂದ್ ಆಗುತ್ತಿವೆ.

ಎಲ್​ಪಿಜಿ ದಾಸ್ತಾನು ಕೊರತೆ ಇಲ್ಲ: ಸುಳ್ಳು ವದಂತಿಗೆ ಕಿವಿಕೊಡಬೇಡಿ: ಜಿಲ್ಲಾಧಿಕಾರಿ

ಬೆಂಗಳೂರು ನಗರ ಜಿಲ್ಲೆಯ ಎಲ್ಲಾ ಗೃಹಬಳಕೆ ಅಡುಗೆ ಅನಿಲ ಸಿಲಿಂಡರ್​ಗಳ ದಾಸ್ತಾನು ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುಳ್ಳು ವದಂತಿಗಳಿಗೆ ಸಾರ್ವಜನಿಕರು ಕಿವಿಗೊಡಬಾರದೆಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ.ಜಿ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಎಲ್‌ಪಿಜಿ ಸಿಲಿಂಡರ್​ ಸಿಗದೆ ಪರದಾಟ: ಪೆಟ್ರೋಲಿಯಂ ಸಚಿವಾಲಯದಿಂದ ಮಹತ್ವದ ಹೇಳಿಕೆ

ಜಿಲ್ಲೆಯಲ್ಲಿ ಗೃಹಬಳಕೆ ಅಡುಗೆ ಅನಿಲವು ದಾಸ್ತಾನು ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿದ್ದು, ಅನಿಲದ ಕೊರತೆ ಇರುವುದಿಲ್ಲವಾದ್ದರಿಂದ ಸಾರ್ವಜನಿಕರು ಭಯಪಡುವ ಅಗತ್ಯವಿಲ್ಲ ಹಾಗೂ ಗೃಹಬಳಕೆ ಅಡುಗೆ ಅನಿಲಕ್ಕೆ ಸಂಬಂಧಿಸಿದಂತೆ ಯಾವುದೇ ಕುಂದುಕೊರತೆಗಳು ಇದಲ್ಲಿ ಸಹಾಯವಾಣಿ 9611404384 ಮೂಲಕ ಸಂಪರ್ಕಿಸಬಹುದು ಎಂದು ಜಿಲ್ಲಾಧಿಕಾರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಯಾವುದೇ ಹೋಟೆಲ್​ಗಳು ಬಂದ್ ಆಗಲ್ಲ: ಪಿಸಿ ರಾವ್​​ 

ಇನ್ನು ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಗೌರವಾಧ್ಯಕ್ಷ ಪಿಸಿ ರಾವ್​​ ಪ್ರತಿಕ್ರಿಯಿಸಿದ್ದು, ನಮ್ಮ ಉದ್ಯಮ ಉಳಿಯಬೇಕು. ಕಾರ್ಮಿಕರಿಗೂ, ಗ್ರಾಹಕರಿಗೂ ತೊಂದರೆ ಆಗಬಾರದು. ಗ್ರಾಹಕರ ನಂಬಿಕೆ ಉಳಿಸಿಕೊಳ್ಳಬೇಕು. ಯಾರೂ ಕೂಡ ಹೋಟೆಲ್ ಬಾಗಿಲು ಹಾಕಬಾರದು. ಬೆಂಗಳೂರಿನಲ್ಲಿ ಯಾವುದೇ ಹೋಟೆಲ್​ಗಳು ಬಂದ್ ಆಗಲ್ಲ. ಬಂದ್ ಆಗಿರುವ ಹೋಟೆಲ್​​ಗಳನ್ನ ಮತ್ತೆ ತೆರೆಯುವ ನಿರ್ಧಾರ ಮಾಡುತ್ತೇವೆ ಎಂದಿದ್ದಾರೆ.

ಹೋಟೆಲ್​ ಬಾಗಿಲು ಹಾಕಿದರೆ ಎಲ್ಲರಿಗೂ ತೊಂದರೆ

ಪಿಜಿಯಲ್ಲಿರುವ ಬ್ಯಾಚುಲರ್ಸ್, ಐಟಿ ಕಂಪನಿ, ಆಸ್ಪತ್ರೆಗಳಿಗೆ ಹೋಟೆಲ್​ಗಳು ಹೆಚ್ಚು ನೆರವು ಆಗುತ್ತಿವೆ. ಬಾಗಿಲು ಹಾಕಿದರೆ ಮಾಲೀಕರು, ಕಾರ್ಮಿಕರು, ಜನರಿಗೂ ತೊಂದರೆ ಆಗುತ್ತೆ. ಕೇವಲ 20% ಕಡಿಮೆ ಬಳಕೆ ಮಾಡುತ್ತಿದ್ದೇವೆ. ನಮಗೆ ಒದಗಿಸುವ ಗ್ಯಾಸ್​ನಲ್ಲಿ 50% ಕೊಡಿ ಸಾಕು. ಪೆಟ್ರೋಲಿಯಂ ಕಂಪನಿಗಳ‌ ಮುಖ್ಯಸ್ಥರ ಜೊತೆ, ಸರ್ಕಾರದ ಕಾರ್ಯದರ್ಶಿಗಳ‌ ಜೊತೆ ಪರ್ಯಾಯ ಮಾರ್ಗಗಳ ಕುರಿತು ಚರ್ಚೆ ಮಾಡಿದ್ದೇವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಇಲ್ಲಿಲ್ಲ ಗ್ಯಾಸ್ ಸಿಲಿಂಡರ್ ಟೆನ್ಶನ್! ಪ್ರತಿನಿತ್ಯ 70 ಸಾವಿರ ಮಕ್ಕಳಿಗೆ ಸಿಗುತ್ತೆ ಬಿಸಿ ಬಿಸಿ ಊಟ

ಸದ್ಯಕ್ಕೆ ಬಂದ ಮಾಹಿತಿ ಪ್ರಕಾರ ಎರಡು ಹಡಗು ಭಾರತ ತಲುಪಿದೆ. ಇನ್ನೂ ನಮಗೆ ಕೈಗೆ ಬರಬೇಕಿದೆ. ಯುಗಾದಿ, ರಂಜಾನ್ ಸಮಯದಲ್ಲಿ ತೊಂದರೆ ಆಗದಂತೆ ನೋಡಿಕೊಳ್ಳುತ್ತೇವೆ. 50% ಅಗತ್ಯವಿರುವ ಗ್ಯಾಸ್ ಸಿಗಬಹುದು ಎಂಬ ವಿಶ್ವಾಸ ಇದೆ. ನಾಳೆಯಿಂದ ಹೋಟೆಲ್ ಎಲ್ಲವೂ ತೆರೆದಿರುತ್ತೆ. ಮೆಜೆಸ್ಟಿಕ್​ನಲ್ಲಿ ಬಂದ್ ಆಗಿರುವ ಹೋಟೆಲ್ ಓಪನ್ ಆಗುತ್ತೆ. 13% ಗ್ಯಾಸ್ ಬೆಂಗಳೂರಿಗೆ ಅಗತ್ಯ ಇದೆ. ಆದರೆ 7% ಗ್ಯಾಸ್ ಸಿಕ್ಕಿದ್ರೂ ನಿರ್ವಹಣೆ ಮಾಡಬಹುದು ಎಂದರು.

ಇನ್ನು ಗ್ಯಾಸ್ ಸಿಲಿಂಡರ್ ಕೊರತೆಯಿಂದ ಹೋಟೆಲ್​​ನಲ್ಲಿ ಬೆಲೆ ಏರಿಕೆ ಮಾಡುತ್ತಿಲ್ಲ. ವೈಯಕ್ತಿಕವಾಗಿ ಅವರು ಬೆಲೆ ಏರಿಸಿದರೆ ಸಂಘ ಜವಾಬ್ದಾರವಲ್ಲ. 98% ಹೋಟೆಲ್​​ಗಳು ಈ ಸಂದರ್ಭದಲ್ಲಿ ಬೆಲೆ ಏರಿಕೆ ಮಾಡಲ್ಲ ಎಂದು ಪಿಸಿ ರಾವ್ ಮಾಹಿತಿ ನೀಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Follow Us