
ಬೆಂಗಳೂರು: ನಾನು ಸಿಎಂ ಆಗಿದ್ದಾಗ ನಿಖಿಲ್ ವಿಧಾನಸೌಧಕ್ಕೆ ಬಂದಿದ್ನಾ? ವರ್ಗಾವಣೆ ಹೆಸರಲ್ಲಿ ನಿಖಿಲ್ ಹಣ ಲೂಟಿ ಹೊಡೆದಿದ್ದಾನಾ? ಆದರೆ ಇವತ್ತು ರಾಜ್ಯದಲ್ಲಿ ಏನು ನಡೆಯುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸಿಎಂ BSY ಪುತ್ರ ವಿಜಯೇಂದ್ರ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.
ರಾಜ್ಯದಲ್ಲಿ ವರ್ಗಾವಣೆ ಹೆಸರಲ್ಲಿ ಹಣ ಲೂಟಿ ನಡೆಯುತ್ತಿದೆ. ಯಾವ ಪಕ್ಷವೂ ಕೌಟುಂಬಿಕ ರಾಜಕಾರಣದಿಂದ ಹೊರತಾಗಿಲ್ಲ. ಹಾಗಾಗಿ, ಪ್ರಜ್ವಲ್, ನಿಖಿಲ್ ಟೀಕೆ ಟಿಪ್ಪಣಿಗಳಿಗೆ ಕಿವಿಗೊಡಬೇಡಿ. ರಾಜ್ಯಾದ್ಯಂತ ಪಕ್ಷ ಸಂಘಟನೆ ಮಾಡಿ ಎಂದು ಜೆಡಿಎಸ್ ಪಕ್ಷ ಸಂಘಟನೆ ಸಭೆಯಲ್ಲಿ ಹೆಚ್ಡಿಕೆ ಸಲಹೆ ಕೊಟ್ಟರು.
‘ಸ್ತ್ರೀಶಕ್ತಿ ಸಂಘಗಳ ಸಾಲಮನ್ನಾ ಮಾಡಿದ್ದರೆ ಚೆನ್ನಾಗಿರುತ್ತಿತ್ತು’
ಕಾಂಗ್ರೆಸ್ ಜೊತೆ ಮೈತ್ರಿಯಿಂದ ಏನೂ ಅನುಕೂಲವಾಗಲಿಲ್ಲ. ಸಾಲಮನ್ನಾ ಮಾಡಿದೆ, ಆದರೆ ರೈತರು ನನ್ನ ಜೊತೆ ನಿಲ್ಲಲಿಲ್ಲ. ಸ್ತ್ರೀಶಕ್ತಿ ಸಂಘಗಳ ಸಾಲಮನ್ನಾ ಮಾಡಿದ್ದರೆ ಚೆನ್ನಾಗಿರುತ್ತಿತ್ತು. ಅವರಾದ್ರೂ ನಮ್ಮ ಕೈ ಹಿಡೀತಿದ್ರು ಎಂದು ಕುಮಾರಸ್ವಾಮಿ ತಮ್ಮ ನೋವು ತೋಡಿಕೊಂಡರು.
ರೈತರು ನಿಮ್ಮಿಂದ ಸಾಲಮನ್ನಾ ಆಯ್ತು ಅಂತಾರೆ. ಆದರೆ ಚುನಾವಣೆ ಬಂದಾಗ ಜೆಡಿಎಸ್ ಪಕ್ಷ ಮರೀತಾರೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದರು.