Special Story : ಪೊಳಲಿ ಜಾತ್ರೆಗೂ ಕಲ್ಲಂಗಡಿಗೂ ಐತಿಹಾಸಿಕ ಸಂಬಂಧ!

Special Story : ದೇವಸ್ಥಾನಕ್ಕೆ ಬಂದ ಭಕ್ತರು ಕಲ್ಲಂಗಡಿ ಹಣ್ಣನ್ನು ದೇವರ ಪ್ರಸಾದವೆಂದು ಸ್ವೀಕಾರ ಮಾಡುತ್ತಾರೆ. ಇದಕ್ಕೊಂದು ಪೌರಾಣಿಕ ಇತಿಹಾಸವಿದೆ. ಶ್ರೀದೇವಿ ಚಂಡಮುಂಡ ದೈತ್ಯರ ಶಿರಸ್ಸನ್ನು ಕಡಿದ ದ್ಯೋತಕವಾಗಿ ಆಚರಿಸುವ ಸಂಪ್ರದಾಯ ಇದಾಗಿದೆ.

Special Story : ಪೊಳಲಿ ಜಾತ್ರೆಗೂ ಕಲ್ಲಂಗಡಿಗೂ ಐತಿಹಾಸಿಕ  ಸಂಬಂಧ!
ಪೊಳಲಿಗೂ ಕಲ್ಲಂಡಿಗೂ ಐತಿಹಾಸಿಕ ಸಂಬಂಧ
Edited By:

Updated on: Apr 13, 2022 | 9:00 AM

ಭಾರತವು ಕೃಷಿ ಪ್ರಧಾನವಾದ ರಾಷ್ಟ್ರವಾಗಿದ್ದು, ಇಲ್ಲಿ ಹೆಚ್ಚಿನ ಜನರು ಕೃಷಿಯನ್ನೇ ಅವಲಂಬಿಸಿದ್ದಾರೆ.  ರೈತರು ತಮ್ಮ ಭೂಮಿಯ ಫಲವತ್ತತೆಗೆ ಅನುಗುಣವಾಗಿ ಭಿನ್ನ ವಿಭಿನ್ನ ರೀತಿಯ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ಈ ವಿಭಿನ್ನ ಕೃಷಿಯಲ್ಲಿ ಕಲ್ಲಂಗಡಿಯು ಒಂದು. ಇದನ್ನು ಬೇಸಿಗೆ ಕಾಲದಲ್ಲಿ ಹೆಚ್ಚಾಗಿ ಬೆಳೆಯುತ್ತಾರೆ. ಬೇಸಿಗೆಯಲ್ಲಿ ದಣಿವನ್ನು ತಣಿಸಲೆಂದು ಹೆಚ್ಚಿನ ಜನರು ಕಲ್ಲಂಗಡಿ ಹಣ್ಣನ್ನು ಹೆಚ್ಚಾಗಿ ಸೇವಿಸುತ್ತಾರೆ. ದಕ್ಷಿಣ ಕನ್ನಡವು ಕೃಷಿ ಪ್ರಧಾನವಾದ ಜಿಲ್ಲೆಯಾಗಿದ್ದು, ಇಲ್ಲಿ ಹೆಚ್ಚು ಭತ್ತವನ್ನು ಬೆಳೆಯಲಾಗುತ್ತದೆ. ಆದರೆ ಬೇರೆ ಕೃಷಿಯನ್ನು ಬೆಳೆಯುವುದು ತುಂಬಾ ಅಪರೂಪ. ಆದರೆ ಈ ಜಿಲ್ಲೆಯಲ್ಲಿರುವ ಬಂಟ್ವಾಳ ತಾಲೂಕಿನ ಸಮೀಪದ ಪೊಳಲಿಯಲ್ಲಿ ರೈತರು ಸಂಪ್ರದಾಯಿಕವಾಗಿ ಕಲ್ಲಂಗಡಿ ಕೃಷಿಯನ್ನು ಮಾಡುತ್ತಾ ಬಂದಿದ್ದಾರೆ. ಈ ಕಲ್ಲಂಗಡಿ ಕೃಷಿಯನ್ನು ಬೆಳೆಯುವುದು ಇಲ್ಲಿ ವಿಶೇಷವಾಗಿದೆ. ಕೇವಲ ಈ ಪ್ರದೇಶದಲ್ಲಿ ಮಾತ್ರ ಇದನ್ನು ಬೆಳೆಯುವುದು ಇಲ್ಲಿನ ಮತ್ತೊಂದು ವಿಶೇಷವಾಗಿದೆ.

ಇತಿಹಾಸ ಪ್ರಸಿದ್ಧ ಪೊಳಲಿಯ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಏಪ್ರಿಲ್ ತಿಂಗಳಲ್ಲಿ ನಡೆಯುವಂತಹ ಜಾತ್ರ ಮಹೋತ್ಸವದ ಸಂದರ್ಭದಲ್ಲಿ ಮಾರಾಟ ಮಾಡುವುದಕ್ಕಾಗಿಯೇ ಪೊಳಲಿಯ ಸಮೀಪದ ಸ್ಥಳೀಯರು ಈ ಕಲ್ಲಂಗಡಿ ಕೃಷಿಯನ್ನು ಬೆಳೆಯುತ್ತಾರೆ. ಇದೊಂದು ಸಂಪ್ರದಾಯಿಕ ಕಟ್ಟುಪಾಡಗಿದ್ದು, ಹಲವು ದಶಕಗಳಿಂದ ಈ ಸಂಪ್ರದಾಯವು ನಡೆಯುತ್ತಾ ಬಂದಿದೆ. ದೇವಸ್ಥಾನಕ್ಕೆ ಬಂದ ಭಕ್ತರು ಕಲ್ಲಂಗಡಿ ಹಣ್ಣನ್ನು ದೇವರ ಪ್ರಸಾದವೆಂದು ಸ್ವೀಕಾರ ಮಾಡುತ್ತಾರೆ.
ಇದಕ್ಕೊಂದು ಪೌರಾಣಿಕ ಇತಿಹಾಸವಿದೆ. ಶ್ರೀದೇವಿ ಚಂಡಮುಂಡ ದೈತ್ಯರ ಶಿರಸ್ಸನ್ನು ಕಡಿದ ದ್ಯೋತಕವಾಗಿ ಆಚರಿಸುವ ಸಂಪ್ರದಾಯ ಇದಾಗಿದೆ. ಕಲ್ಲಂಗಡಿಯನ್ನು ಚಂಡಮುಂಡರ ಶಿರಗಳಿಗೆ ಹೋಲಿಸಿರುವುದು ಹಿಂದಿನ ಕಾಲದಿಂದಲೂ ನಡೆದು ಬಂದ ನಂಬುಗೆ. ಹಾಗಾಗಿ ಪೊಳಲಿಗೂ ಕಲ್ಲಂಗಡಿಗೂ ಅವಿನಾಭಾವ ಸಂಬಂಧ. ಸುಮಾರು ವರ್ಷಗಳ ಹಿಂದೆ ವಾಹನ ಸೌಲಭ್ಯ ಕಡಿಮೆ ಇದ್ದಂತಹ ದಿನಗಳಲ್ಲಿ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾಲ್ನಡಿಗೆಯ ಮೂಲಕವೇ ದೇವರ ಜಾತ್ರ ಮಹೋತ್ಸವಕ್ಕೆ ಆಗಮಿಸುತ್ತಿದ್ದರು. ಆ ಕಾಲದಲ್ಲಿ ಐಸ್‌ಕ್ರೀಂ, ಹೋಟೆಲ್ ಸೌಲಭ್ಯ ಇಲ್ಲದ ಕಾರಣ ಕಲ್ಲಂಗಡಿ ಹಣ್ಣನ್ನೇ ಖರೀದಿ ಮಾಡುತ್ತಿದ್ದರು. ಆಗ ಸುಮಾರು ಐವತ್ತಕ್ಕೂ ಹೆಚ್ಚಿನ ಕಲ್ಲಂಗಡಿ ಹಣ್ಣಿನ ಅಂಗಡಿಗಳಿದ್ದವು.

ಇಲ್ಲಿನ ಇನ್ನೊಂದು ವಿಶೇಷವೆಂದರೆ ಕಲ್ಲಂಗಡಿಯನ್ನು ಇಲ್ಲಿನ ಸ್ಥಳೀಯ ಕೃಷಿಕರೇ ಬೆಳೆದು ಮಾರಾಟ ಮಾಡುತ್ತಾರೆ. ಇದು ಇವರ ವೃತ್ತಿಯಲ್ಲ, ಹವ್ಯಾಸವಾಗಿದೆ. ಇಲ್ಲಿ ಕೇವಲ ಜಾತ್ರಾ ಸಮಯದಲ್ಲಿ ಮಾತ್ರ ಕಲ್ಲಂಗಡಿಯನ್ನು ಬೆಳೆದು ಮಾರಟ ಮಾಡುತ್ತಾರೆ. ಇಲ್ಲಿ ಹೊರಗಿನ ಕೃಷಿಕರು ಕಲ್ಲಂಗಡಿ ವ್ಯಾಪರಕ್ಕೆ ಬಂದರೆ ಆತನ ಕಲ್ಲಂಗಡಿಯು ಮಾರಾಟವಾಗುವುದಿಲ್ಲ. ಏಕೆಂದರೆ ಸ್ಥಳೀಯ ತಳಿಯ ಆಕಾರ, ಬಣ್ಣಕ್ಕಿಂತ ಇತರ ತಳಿಯ ಕಲ್ಲಂಗಡಿ ಭಿನ್ನವಾಗಿರುತ್ತದೆ. ಪೊಳಲಿಯ ಜೀವನದಿ ಪಲ್ಗುಣಿ ನದಿಯು ಅದರ ಸುತ್ತಮುತ್ತಲಿನ ಮರಳು ಮಣ್ಣಿನ ಕಾರಣದಿಂದಾಗಿ ಕಲ್ಲಂಗಡಿ ಬೆಳೆಯಲು ಉತ್ತಮ ಪ್ರದೇಶವಾಗಿದೆ. ಹಿಂದೆ ರಾಸಾಯನಿಕಗಳ ಬಳಕೆಯಿಲ್ಲದೆ ಬೆಳೆ ತೆಗೆಯಲಾಗುತ್ತಿತ್ತು. ಇದೀಗ ಹೈಬ್ರಿಡ್‌ಗಳ ಕಾರಣದಿಂದ ರಾಸಾಯನಿಕ ಅನಿವಾರ್ಯವಾಗಿದೆ. ಇನ್ನೂ ಈಗಲೂ ಕೆಲವರು ಸಾವಯವ ಕೃಷಿಯನ್ನು ಬೆಳೆಯುವವರು ಇದ್ದಾರೆ. ಮಣ್ಣು ಹಾಳಾಗಿ ಅದರ ಫಲವತ್ತತೆ ನಶಿಸಿ ಹೊಗುತ್ತಿರುವ ಕಾರಣ ಈಗ ಕಲ್ಲಂಗಡಿಯು ಮೊದಲಿನಂತೆ ಆಗುವುದಿಲ್ಲ ಎಂಬುದು ಅಲ್ಲಿನ ರೈತರ ನೋವು. ಇದನ್ನು ಮೊದಲಿನ ರೀತಿಯಲ್ಲಿ ಸರಿಯಾಗಿ ಆರೈಕೆ ಮಾಡಿದ್ದರೆ ಒಳ್ಳೆಯ ಫಲವನ್ನು ಪಡೆಯಬಹುದು ಎಂಬುದು ಅಲ್ಲಿಯ ಕೃಷಿಕರ ಅಭಿಪ್ರಾಯ.

ವಿಭಿನ್ನ ರೀತಿಯ ಕಲ್ಲಂಗಡಿಗಳು ಮತ್ತು ಅವುಗಳನ್ನು ಬೆಳೆಯುವ ಅವಧಿಯನ್ನು ಲೆಕ್ಕ ಹಾಕಿ, ಪೊಳಲಿ ಜಾತ್ರೆ ಯಾವ ದಿನ ಬರುತ್ತದೆ, ಅದಕ್ಕೆ ಅನುಸಾರವಾಗಿ ಬೀಜವನ್ನು ಹಾಕುತ್ತಾರೆ. ಶುಗರ್ ಬೇಬಿ ತಳಿಗೆ 70 ದಿನ, ಮಧು ತಳಿಗೆ 80 ದಿನ, ಅರ್ಕ ತಳಿ 90 ದಿನಗಳಲ್ಲಿ ಹಣ್ಣು ಕೊಯ್ಯಲು ಸಿದ್ಧ. ಆಗಿನ ಕಾಲದಲ್ಲಿ ಕಲ್ಲಂಗಡಿ ಇಡೀ ಪೊಳಲಿಗೆ ಕಲ್ಪವೃಕ್ಷವಾಗಿತ್ತು. ಆದರೆ ಇಂದು ಆ ಕಲ್ಲಂಗಡಿ ಎಣಿಕೆಯಷ್ಟೆ. ಹೈಬ್ರಿಡ್‌ಗಳ ಹಾವಳಿಯಿಂದ ಪುರಾಣಿತ ಕಲ್ಲಂಗಡಿ ಕಡಿಮೆಯಾಗುತ್ತಿವೆ. ಒಟ್ಟಿನಲ್ಲಿ ಧಾರ್ಮಿಯತೆಯ ನಂಬಿಕೆಯ ಜೊತೆಗೆ ಕೃಷಿತು ಬೆಳೆಯುತ್ತಿರುವುದು ಮತ್ತು ಒಂದು ಉತ್ತಮ ಬೆಳೆಯೊಂದಿಗೆ ಗ್ರಾಹಕರಿಗೆ ಪ್ರಸಾದವಾಗಿ ಕಲ್ಲಂಗಡಿಯನ್ನು ಒದಗಿಸುತ್ತಿರುವುದು ಇಲ್ಲಿನ ವಿಶೇಷವಾಗಿದೆ.

ಮಧುಶ್ರೀ ಅಂಚನ್
ಸಜೀಪನಡು