Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಾರಂಪರಿಕ ಕಟ್ಟಡದ ಪಕ್ಕದಲ್ಲೇ ಮೊಬೈಲ್​ ಟವರ್ ನಿರ್ಮಾಣಕ್ಕೆ ಸಿದ್ಧತೆ! ಸ್ಥಳೀಯರ ವಿರೋಧ.. ವಿವಿ ಕುಲಪತಿ ಸ್ಪಷ್ಟನೆ

ಕರ್ನಾಟಕ ಕಾಲೇಜು ಕಟ್ಟಡ ನಗರದ ಹೃದಯಭಾಗದಲ್ಲಿ ಇರುವುದರಿಂದ ಟವರ್​ ನಿರ್ಮಾಣಕ್ಕೆ ಹೇಳಿಮಾಡಿಸಿದ ಜಾಗವೇನೋ ಹೌದು. ಹಾಗಾಗಿಯೇ ಕಂಪನಿಯ ಕಣ್ಣು ಸಹಜವಾಗಿಯೇ ಇಲ್ಲಿ ಬಿದ್ದಿದೆ. ಆದರೆ ಪಾರಂಪರಿಕ ಕಟ್ಟಡ ಹಾಗೂ ವಿವಿಧ ಸುಂದರ ಸ್ಥಳಗಳ ಸೌಂದರ್ಯಕ್ಕೆ ಧಕ್ಕೆಯಾಗುವಂತಿದ್ದರೆ ಅದನ್ನು ಆಡಳಿತ ಮಂಡಳಿ ಗಂಭೀರವಾಗಿ ಪರಿಗಣಿಸಿ, ಅವಕಾಶವನ್ನು ನಿರಾಕರಿಸಬೇಕಿತ್ತು ಅನ್ನುವುದು ಸ್ಥಳೀಯರ ವಾದ.

ಪಾರಂಪರಿಕ ಕಟ್ಟಡದ ಪಕ್ಕದಲ್ಲೇ ಮೊಬೈಲ್​ ಟವರ್ ನಿರ್ಮಾಣಕ್ಕೆ ಸಿದ್ಧತೆ! ಸ್ಥಳೀಯರ ವಿರೋಧ.. ವಿವಿ ಕುಲಪತಿ ಸ್ಪಷ್ಟನೆ
ಕಾಲೇಜು ದ್ವಾರ
Follow us
Lakshmi Hegde
|

Updated on:Jan 06, 2021 | 12:08 PM

ಧಾರವಾಡ: ಈಗಂತೂ ಎಲ್ಲೆಲ್ಲೂ ಮೊಬೈಲ್​ ಬಳಕೆಯೇ ಹೆಚ್ಚಾಗಿದೆ. ಇದರಿಂದಾಗಿ ಟವರ್​ಗಳೂ ಹೆಚ್ಚೆಚ್ಚು ನಿರ್ಮಾಣವಾಗುತ್ತಿವೆ. ಕಟ್ಟಡಗಳು, ಅಪಾರ್ಟ್​ಮೆಂಟ್​ಗಳ ಮೇಲೆ, ಖಾಲಿ ಜಾಗ.. ಅದೆಲ್ಲ ಬಿಡಿ ಹಳ್ಳಿಗಳಲ್ಲೂ ಮೊಬೈಲ್​ ಟವರ್​ಗಳನ್ನು ನಿರ್ಮಿಸಲಾಗುತ್ತಿದೆ. ಕೆಲವು ಕಡೆ ಸ್ಥಳೀಯ ನಿವಾಸಿಗಳು ವಿರೋಧ ವ್ಯಕ್ತಪಡಿಸಿದರೂ, ಕಂಪನಿಗಳು ಲೆಕ್ಕಕ್ಕೆ ತೆಗೆದುಕೊಳ್ಳುತ್ತಿಲ್ಲ.

ಇದೀಗ ಧಾರವಾಡದಲ್ಲಿಯೂ ಅಂಥದ್ದೇ ಒಂದು ಘಟನೆ ನಡೆಯುತ್ತಿದ್ದು, ಕರ್ನಾಟಕ ಕಾಲೇಜಿನ ಪಾರಂಪರಿಕ ಕಟ್ಟಡದ ಬಳಿ ಟವರ್ ನಿರ್ಮಾಣ ಮಾಡಲು ಸಿದ್ಧತೆ ಮಾಡಲಾಗುತ್ತಿದೆ. ಸ್ಥಳೀಯರಂತೂ ಸಿಕ್ಕಾಪಟೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಸೌಂದರ್ಯಕ್ಕೆ ಧಕ್ಕೆ ವಿದ್ಯಾಕಾಶಿ ಧಾರವಾಡ ಎಂದರೆ ಸಾಕು, ಕರ್ನಾಟಕ ಕಾಲೇಜು ನೆನಪಾಗುವುದು ಸಹಜ. ಇಂದಿನ ಅದೆಷ್ಟೋ ಖ್ಯಾತನಾಮರು ಅಲ್ಲಿಯೇ ವಿದ್ಯಾಭ್ಯಾಸ ಮಾಡಿದ್ದಾರೆ. ಕರ್ನಾಟಕ ಕಾಲೇಜಿನ ಪ್ರಮುಖ ಕಟ್ಟಡ ಐತಿಹಾಸಿಕ ಕಟ್ಟಡಗಳ ಪೈಕಿ ಪ್ರಮುಖ ಸ್ಥಾನ ಪಡೆದಿದೆ. ಕೆಂಪು ಬಣ್ಣದ ಈ ಕಟ್ಟಡ ಧಾರವಾಡದ ಆಕರ್ಷಣೀಯ ಕೇಂದ್ರಗಳಲ್ಲಿ ಒಂದು. 1917 ರಲ್ಲಿ ಬ್ರಿಟಿಷ್ ಸರ್ಕಾರ ನಿರ್ಮಿಸಿದ್ದ ಈ ಕಟ್ಟಡ ರೈಲ್ವೆ ಇಲಾಖೆಗೆ ಸೇರಿದ್ದಾಗಿತ್ತು.

ಸ್ವಾತಂತ್ರ್ಯ ನಂತರ 1958ರಲ್ಲಿ ಕಟ್ಟಡವನ್ನು ಕರ್ನಾಟಕ ವಿಶ್ವವಿದ್ಯಾಲಯ ವ್ಯಾಪ್ತಿಗೆ ಸೇರಿಸಲಾಯಿತು. ಕಟ್ಟಡದ ಎದುರಿಗೆ ವಿಶಾಲವಾದ ಮೈದಾನವಿದೆ. ಇಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳೂ ನಡೆಯುತ್ತವೆ. ರಾತ್ರಿಯ ಲೈಟ್​ ಬೆಳಕಲ್ಲಿ ನಡೆಯುವ ಸಮಾರಂಭ ಕಳೆಗಟ್ಟುವುದೇ ಈ ಕಟ್ಟಡದ ಕೆಂಪು ಬಣ್ಣದಿಂದ.

ತುಂಬ ಸುಂದರವಾಗಿರುವ ಕಟ್ಟಡದ ಪಕ್ಕದಲ್ಲಿ, 40 ಅಡಿ ಅಂತರದಲ್ಲಿ ಇದೀಗ ಬೃಹತ್​ ಟವರ್ ನಿರ್ಮಾಣ ಮಾಡಲು ಖಾಸಗ ಕಂಪನಿಯೊಂದು ಎಲ್ಲ ಸಿದ್ಧತೆಗಳನ್ನೂ ಮಾಡಿಕೊಂಡಿದೆ. ಈ ಜಾಗವನ್ನು ಆಯ್ಕೆ ಮಾಡಿಕೊಂಡ ಕಂಪನಿಗೆ ವಿಶ್ವವಿದ್ಯಾಲಯ ಅನುಮತಿ ನೀಡಿದ್ದೇ ಅಚ್ಚರಿ ಎನ್ನುತ್ತಾರೆ ಸ್ಥಳೀಯರು.

ಟವರ್​ ನಿರ್ಮಾಣಕ್ಕೆ ಸಿದ್ಧತೆ

ಬಸವಣ್ಣನ ಮೂರ್ತಿ ಇದೆ ಟವರ್​ ನಿರ್ಮಾಣಕ್ಕೆ ಗುರುತಿಸಲಾದ ಸ್ಥಳದ ಪಕ್ಕದಲ್ಲಿಯೇ ಬಸವಣ್ಣನ ಮೂರ್ತಿಯೂ ಇದೆ. ಇದು ಬಸವವನ ಎಂದೇ ಪ್ರಸಿದ್ಧವಾದ ಸ್ಥಳ. ಇದೀಗ ಇಲ್ಲಿ ಟವರ್ ನಿರ್ಮಿಸಿದರೆ, ವನದ ಸೌಂದರ್ಯಕ್ಕೆ ಧಕ್ಕೆ ಬರುವುದು ಖಚಿತ. ಆದರೆ ಈ ಬಗ್ಗೆ ಕಾಲೇಜಿನ ಆಡಳಿತ ಮಂಡಳಿಯಾಗಲಿ, ವಿಶ್ವವಿದ್ಯಾಲಯದ ಆಡಳಿತ ಮಂಡಳಿಯಾಗಲೀ ತಲೆ ಕೆಡಿಸಿಕೊಂಡಿಲ್ಲ.

ಟವರ್ ನಿರ್ಮಾಣಕ್ಕೆ ಒಳ್ಳೆ ಜಾಗ ಕರ್ನಾಟಕ ಕಾಲೇಜು ಕಟ್ಟಡ ನಗರದ ಹೃದಯಭಾಗದಲ್ಲಿ ಇರುವುದರಿಂದ ಟವರ್​ ನಿರ್ಮಾಣಕ್ಕೆ ಹೇಳಿಮಾಡಿಸಿದ ಜಾಗವೇನೋ ಹೌದು. ಹಾಗಾಗಿಯೇ ಕಂಪನಿಯ ಕಣ್ಣು ಸಹಜವಾಗಿಯೇ ಇಲ್ಲಿ ಬಿದ್ದಿದೆ. ಆದರೆ ಪಾರಂಪರಿಕ ಕಟ್ಟಡ ಹಾಗೂ ವಿವಿಧ ಸುಂದರ ಸ್ಥಳಗಳ ಸೌಂದರ್ಯಕ್ಕೆ ಧಕ್ಕೆಯಾಗುವಂತಿದ್ದರೆ ಅದನ್ನು ಆಡಳಿತ ಮಂಡಳಿ ಗಂಭೀರವಾಗಿ ಪರಿಗಣಿಸಿ, ಅವಕಾಶವನ್ನು ನಿರಾಕರಿಸಬೇಕಿತ್ತು ಅನ್ನುವುದು ಸ್ಥಳೀಯರ ವಾದ.

ಇದರ ವಿರುದ್ಧ ಕರ್ನಾಟಕ ವಿಶ್ವವಿದ್ಯಾಲಯದ ಸರ್ವಾಂಗೀಣ ಸಂರಕ್ಷಣಾ ಟ್ರಸ್ಟ್ ಅಧ್ಯಕ್ಷ ರಾಬರ್ಟ್ ದದ್ದಾಪುರಿ ದನಿ ಎತ್ತಿದ್ದಾರೆ. ಇಂಥ ಪಾರಂಪರಿಕ ಕಟ್ಟಡದ ಪಕ್ಕದಲ್ಲಿ ಟವರ್ ನಿರ್ಮಾಣ ಮಾಡುತ್ತಿರುವುದು ತಪ್ಪು. ಕೂಡಲೇ ವಿಶ್ವವಿದ್ಯಾಲಯ ಈ ಕಾರ್ಯವನ್ನು ಸ್ಥಗಿತಗೊಳಿಸಲು ಸೂಚಿಸಬೇಕು ಎಂದು ಆಗ್ರಹಿಸಿದ್ದಾರೆ.

ಕೆಂಪು ಬಣ್ಣದ ಕಾಲೇಜು ಕಟ್ಟಡ

ಕುಲಪತಿಗಳು ಹೇಳುವುದೇನು? ಇನ್ನು ಈ ಬಗ್ಗೆ ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಡಾ. ಕೆ.ಬಿ.ಗುಡಸಿಯವರನ್ನು ಕೇಳಿದರೆ, ಈಗಾಗಲೇ ಈ ವಿಷಯ ನನ್ನ ಗಮನಕ್ಕೆ ಬಂದಿದೆ. ಹೀಗಾಗಿ ಕೂಡಲೇ ಈ ಕೆಲಸವನ್ನು ನಿಲ್ಲಿಸಿದ್ದೇನೆ. ಅಲ್ಲಿನ ವಿದ್ಯಾರ್ಥಿಗಳಿಗೆ ಮೊಬೈಲ್ ಸಿಗ್ನಲ್ ಸಮಸ್ಯೆ ಹೆಚ್ಚಾಗಿತ್ತು, ನೆಟ್​ವರ್ಕ್​ ಇಲ್ಲ ಎಂಬ ದೂರು ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಅಲ್ಲಿ ಟವರ್ ಅಳವಡಿಸುವ ಯೋಜನೆ ಇತ್ತು. ಆದರೆ ಇದೀಗ ಅದು ಸರಿಯಾದ ಸ್ಥಳವಲ್ಲ ಅನ್ನುವುದು ತಿಳಿದು ಬಂದಿದೆ. ಹಾಗಾಗಿ ಬೇರೆ ಸ್ಥಳದಲ್ಲಿ ಟವರ್ ನಿರ್ಮಿಸುವಂತೆ ಸೂಚನೆ ನೀಡಲಾಗಿದೆ ಎಂದಿದ್ದಾರೆ.

ಧಾರವಾಡ: ಗ್ರಾಮ ಪಂಚಾಯತಿ ಚುನಾವಣೆ ಮುಗಿಯಿತು.. ಇನ್ನು ಅಧ್ಯಕ್ಷ ಗಾದಿಗೆ ಸರ್ಕಸ್!

Published On - 12:05 pm, Wed, 6 January 21