World Suicide Prevention Day 2024 : ಆತ್ಮಹತ್ಯೆಯಂತಹ ಕೆಟ್ಟ ಆಲೋಚನೆಯಿಂದ ಮಕ್ಕಳನ್ನು ರಕ್ಷಿಸುವುದು ಹೇಗೆ?

| Updated By: ಅಕ್ಷಯ್​ ಪಲ್ಲಮಜಲು​​

Updated on: Sep 09, 2024 | 3:36 PM

ಇತ್ತೀಚೆಗಿನ ದಿನಗಳಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿದೆ. ಸಣ್ಣ ಸಣ್ಣ ಸಮಸ್ಯೆಗಳಿಗೆ ಆತ್ಮಹತ್ಯೆಯೇ ಕೊನೆಯ ಪರಿಹಾರ ಎನ್ನುವ ತೀರ್ಮಾನಕ್ಕೆ ಬರುತ್ತಿದ್ದಾರೆ. ಪ್ರಕರಣಗಳನ್ನು ತಡೆಯಲು ಮತ್ತು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸುವವರ ಮನಃ ಪರಿವರ್ತನೆ ಮಾಡಲು ಹಾಗೂ ಮಾನಸಿಕ ಆರೋಗ್ಯದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಪ್ರತಿವರ್ಷ ಸೆಪ್ಟೆಂಬರ್ 10 ರಂದು ವಿಶ್ವ ಆತ್ಮಹತ್ಯೆ ತಡೆ ದಿನವನ್ನು ಆಚರಿಸಲಾಗುತ್ತದೆ. ಹಾಗಾದ್ರೆ ಈ ದಿನದ ಇತಿಹಾಸ, ಮಹತ್ವ ಹಾಗೂ ಮಕ್ಕಳಲ್ಲಿ ಬರುವ ಆತ್ಮಹತ್ಯೆಯಂತಹ ಆಲೋಚನೆಯನ್ನು ತಡೆಗಟ್ಟುವುದು ಹೇಗೆ? ಎನ್ನುವುದರ ಸಂಪೂರ್ಣ ಮಾಹಿತಿ ಇಲ್ಲಿದೆ.

World Suicide Prevention Day 2024 : ಆತ್ಮಹತ್ಯೆಯಂತಹ ಕೆಟ್ಟ ಆಲೋಚನೆಯಿಂದ ಮಕ್ಕಳನ್ನು ರಕ್ಷಿಸುವುದು ಹೇಗೆ?
ಸಾಂದರ್ಭಿಕ ಚಿತ್ರ
Follow us on

ಸಾಯುವುದಕ್ಕೆ ಹಲವು ಕಾರಣಗಳಿರಬಹುದು, ಆದರೆ ಬದುಕುವುದಕ್ಕೆ ಒಂದೇ ಕಾರಣವಿದೆ. ಇತ್ತೀಚೆಗಿನ ದಿನಗಳಲ್ಲಿ ಪ್ರೀತಿ ಪ್ರೇಮ, ಆರ್ಥಿಕ ಸಮಸ್ಯೆ, ಕೌಟಂಬಿಕ ಸಮಸ್ಯೆ, ಉದ್ಯಮದಲ್ಲಿ ನಷ್ಟ, ಮಾನಸಿಕ ಒತ್ತಡ, ಮಾದಕ ವಸ್ತುಗಳ ಚಟ, ಅನಾರೋಗ್ಯದ ಸಮಸ್ಯೆಗಳು, ಪೋಷಕರ ಒತ್ತಡದಿಂದಾಗಿ ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚುತ್ತಿದೆ. ಅದರಲ್ಲಿ ಇತ್ತೀಚಿನ ದಿನಗಳಲ್ಲಿ ಓದುವ ಮಕ್ಕಳಲ್ಲಿ ಆತ್ಮಹತ್ಯೆಯಂತಹ ಆಲೋಚನೆಗಳು ಹೆಚ್ಚಾಗುತ್ತಿದೆ. ಈ ಆಲೋಚನೆಗಳನ್ನು ತಡೆಯುವ ಸಲುವಾಗಿ ಸೆಪ್ಟೆಂಬರ್ 10 ರಂದು ವಿಶ್ವ ಆತ್ಮಹತ್ಯೆ ತಡೆ ದಿನವನ್ನು ಆಚರಿಸಲಾಗುತ್ತಿದೆ.

ವಿಶ್ವ ಆತ್ಮಹತ್ಯೆ ತಡೆ ದಿನದ ಇತಿಹಾಸ ಹಾಗೂ ಮಹತ್ವ

ಇಂಟರ್ ನ್ಯಾಷನಲ್ ಅಸೋಸಿಯೇಷನ್ ಫಾರ್ ಸುಸೈಡ್ ಪ್ರಿವೆನ್ಷನ್ ಎಂಬ ಸಂಸ್ಥೆಯು 2003 ರಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಸಹಯೋಗದೊಂದಿಗೆ ವಿಶ್ವ ಆತ್ಮಹತ್ಯೆ ತಡೆ ದಿನವನ್ನು ಪ್ರಾರಂಭಿಸಿತು. ಆತ್ಮಹತ್ಯೆ ಪ್ರಕರಣಗಳನ್ನು ತಡೆಗಟ್ಟುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಉದ್ದೇಶವಾಗಿದೆ. ಆತ್ಮಹತ್ಯೆಯು ಗಂಭೀರವಾದ ಸಮಸ್ಯೆಯಾಗಿದ್ದು, ಜನರು ಆತ್ಮಹತ್ಯೆ ಮಾಡಿಕೊಳ್ಳುವುದನ್ನು ತಡೆಯುವುದು ಹಾಗೂ ಮಾನಸಿಕ ಆರೋಗ್ಯದ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಸಲುವಾಗಿ ಈ ದಿನವು ಮಹತ್ವದ್ದಾಗಿದೆ. ಈ ದಿನದಂದು ವಿವಿಧ ಸಂಸ್ಥೆಗಳು ಆತ್ಮಹತ್ಯೆಯನ್ನು ತಡೆಯುವುದು ಹೇಗೆ ಎನ್ನುವ ಬಗ್ಗೆ ಅಭಿಯಾನ ಸೇರಿದಂತೆ ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತವೆ.

ಮಕ್ಕಳಲ್ಲಿ ಆತ್ಮಹತ್ಯೆಯಂತಹ ಆಲೋಚನೆಯನ್ನು ತಡೆಗಟ್ಟುವಲ್ಲಿ ಪೋಷಕರ ಪಾತ್ರ

  • ಮಕ್ಕಳು ಸೂಕ್ಷ್ಮ ಮನಸ್ಸನ್ನು ಹೊಂದಿರುತ್ತಾರೆ. ಹೀಗಾಗಿ ಶಾಲೆಯಲ್ಲಿ ಶೈಕ್ಷಣಿಕವಾಗಿ ಹಿಂದೆ ಬಿದ್ದರೆ, ಅಥವಾ ಯಾವುದರಲ್ಲಾದರೂ ಸೋಲು ಕಂಡರೆ ಅವರನ್ನು ಅತಿಯಾಗಿ ನಿಂದಿಸುವುದು ಸರಿಯಲ್ಲ. ಮಾನಸಿಕ ಬೆಂಬಲ ನೀಡುವುದರೊಂದಿಗೆ ಅವರಲ್ಲಿ ಆತ್ಮವಿಶ್ವಾಸ ಹೆಚ್ಚಿಸಬೇಕು. ಮಕ್ಕಳನ್ನು ಅತಿಯಾಗಿ ಶಿಕ್ಷಿಸುವುದನ್ನು ನಿಲ್ಲಿಸಿ, ಪ್ರೀತಿಯಿಂದ ತಿಳಿ ಹೇಳುವುದು ಒಳ್ಳೆಯದು.
  • ಮಕ್ಕಳಿಗೆ ಯಾವುದೇ ಸಮಸ್ಯೆಯಿದ್ದರೂ ತಮ್ಮ ಪೋಷಕರ ಬಳಿ ಆ ಸಮಸ್ಯೆಯ ಕುರಿತು ಮುಕ್ತವಾಗಿ ಮಾತನಾಡಲು ಸಾಧ್ಯವಾಗುವ ವಾತಾವರಣವನ್ನು ಪೋಷಕರು ಸೃಷ್ಟಿಸಿಕೊಡಬೇಕು.
  • ಈಗಿನ ಫೋಷಕರು ಮಕ್ಕಳ ಮೇಲೆ ಹೆಚ್ಚು ಒತ್ತಡ ಹಾಕುತ್ತಿದ್ದಾರೆ. ಮಕ್ಕಳಿಗೆ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದರೆ, ಶೈಕ್ಷಣಿಕ ಬೆಳವಣಿಗೆ ಸ್ವಲ್ಪ ಇಳಿಕೆ ಕಂಡರೆ ಒತ್ತಡ ಹಾಕುತ್ತಾರೆ. ಇಂತಹ ಸಮಯದಲ್ಲಿ ಮಕ್ಕಳಿಗೆ ಧೈರ್ಯ ತುಂಬಿ ಮುಂಬರುವ ಪರೀಕ್ಷೆಗೆ ಒಳ್ಳೆಯ ತಯಾರಿ ನಡೆಸು ಎಂದು ಪ್ರೋತ್ಸಾಹ ನೀಡುವುದು ಮುಖ್ಯ.
  • ಮಕ್ಕಳಿಗೂ ಕೂಡ ಭಾವನೆಗಳಿವೆ, ಹೀಗಾಗಿ ಫೋಷಕರಾದ ನೀವುಗಳು ಮಕ್ಕಳಿಗೆ ಭಾವನೆಯನ್ನು ವ್ಯಕ್ತಪಡಿಸಲು ಹಾಗೂ ಅವರಿಗೆ ಏನು ಅನಿಸುತ್ತದೆ ಅದನ್ನು ಹೇಳಲು ಅವಕಾಶ ಕೊಡಬೇಕು. ಇಲ್ಲದಿದ್ದರೆ ಮಾನಸಿಕವಾಗಿ ಕುಗ್ಗಿ ಆತ್ಮಹತ್ಯೆಯಂತಹ ಆಲೋಚನೆಗಳು ಬರಬಹುದು.
  • ಪ್ರತಿಯೊಬ್ಬ ಪೋಷಕರು ಮಕ್ಕಳ ದಿನಚರಿಯ ಬಗ್ಗೆ ಗಮನವಹಿಸಬೇಕು. ಊಟ, ಪಾಠ, ನಿದ್ರೆ ಮತ್ತು ಇತರೆ ಚಟುವಟೆಕೆಗಳ ಬಗ್ಗೆ ಗಮನ ಹರಿಸದೇ ಹೋದರೆ ಮಕ್ಕಳ ಭವಿಷ್ಯವು ಹಾಳಾಗುತ್ತದೆ. ಅದಲ್ಲದೇ ಕೆಟ್ಟ ಆಲೋಚನೆಗಳಿಗೂ ಕೈ ಹಾಕುವ ಸಾಧ್ಯತೆ ಹೆಚ್ಚಿರುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ