ಭೋಪಾಲ್​ ಮಕ್ಕಳ ಆಸ್ಪತ್ರೆ ಬೆಂಕಿ ದುರಂತ; 4 ಮಕ್ಕಳು ದುರ್ಮರಣ, 36 ಮಂದಿಯ ರಕ್ಷಣೆ

ಆಸ್ಪತ್ರೆಯಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ರಕ್ಷಣೆಗೆ ಎಲ್ಲ ರೀತಿಯ ಕ್ರಮವನ್ನೂ ಕೈಗೊಳ್ಳಲಾಯಿತು. ಆದರೆ ಅದಾಗಲೇ ಆರೋಗ್ಯ ಸ್ಥಿತಿ ಗಂಭೀರವಾಗಿರುವ ಕೆಲವು ಮಕ್ಕಳನ್ನು ಇನ್ನೊಂದು ಆಸ್ಪತ್ರೆಗೆ ಕರೆದೊಯ್ಯಲು ಆಗಲಿಲ್ಲ.

ಭೋಪಾಲ್​ ಮಕ್ಕಳ ಆಸ್ಪತ್ರೆ ಬೆಂಕಿ ದುರಂತ; 4 ಮಕ್ಕಳು ದುರ್ಮರಣ, 36 ಮಂದಿಯ ರಕ್ಷಣೆ
ಸಾಂಕೇತಿಕ ಚಿತ್ರ
Updated By: Lakshmi Hegde

Updated on: Nov 09, 2021 | 9:52 AM

ಮಧ್ಯಪ್ರದೇಶದ ಕಮಲಾ ನೆಹರು ಆಸ್ಪತ್ರೆಯ ಮಕ್ಕಳ ವಾರ್ಡ್​​ನಲ್ಲಿ ನಡೆದ ಬೆಂಕಿ ದುರಂತದಲ್ಲಿ ನಾಲ್ಕು ಮಕ್ಕಳು ಮೃತಪಟ್ಟಿದ್ದಾರೆ. ಆಸ್ಪತ್ರೆಯ ಮೂರನೇ ಫ್ಲೋರ್​​ನಲ್ಲಿರುವ ಮಕ್ಕಳ ವಾರ್ಡ್​​ನಲ್ಲಿ, ನವಜಾತ ಶಿಶುಗಳೂ ಸೇರಿ ಒಟ್ಟು 40 ಮಕ್ಕಳು ದಾಖಲಾಗಿದ್ದರು. ಅದರಲ್ಲಿ ನಾಲ್ಕು ಮಕ್ಕಳು ಮೃತಪಟ್ಟಿದ್ದು, ಉಳಿದ 36 ಮಂದಿಯನ್ನು ಸುರಕ್ಷಿತ ಮಾಡಲಾಗಿದೆ.  ಸುಮಾರು 12ಕ್ಕೂ ಹೆಚ್ಚು ಅಗ್ನಿಶಾಮಕದಳದ ಸಿಬ್ಬಂದಿ ಸೇರಿ ಇಲ್ಲಿ ಬೆಂಕಿ ನಂದಿಸಿದ್ದಾರೆ. ಬೆಂಕಿ ಪ್ರಕರಣವನ್ನು ತನಿಖೆ ನಡೆಸುವಂತೆ ಮುಖ್ಯಮಂತ್ರಿ ಶಿವರಾಜ್​ ಸಿಂಗ್​ ಚೌಹಾಣ್​ ಆದೇಶಿಸಿದ್ದಾರೆ ಅಷ್ಟೇ ಅಲ್ಲ ಮೃತಮಕ್ಕಳ ಕುಟುಂಬಕ್ಕೆ ತಲಾ 4 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿದ್ದಾರೆ.

ಆಸ್ಪತ್ರೆಯಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ರಕ್ಷಣೆಗೆ ಎಲ್ಲ ರೀತಿಯ ಕ್ರಮವನ್ನೂ ಕೈಗೊಳ್ಳಲಾಯಿತು. ಆದರೆ ಅದಾಗಲೇ ಆರೋಗ್ಯ ಸ್ಥಿತಿ ಗಂಭೀರವಾಗಿರುವ ಕೆಲವು ಮಕ್ಕಳನ್ನು ಇನ್ನೊಂದು ಆಸ್ಪತ್ರೆಗೆ ಕರೆದೊಯ್ಯಲು ಆಗಲಿಲ್ಲ. ಅಂಥ ನಾಲ್ಕು ಮಕ್ಕಳು ಮೃತಪಟ್ಟಿದ್ದು ನಿಜಕ್ಕೂ ಭರಿಸಲಾಗದ ನೋವು ತಂದಿದೆ ಎಂದು ಸಿಎಂ ಶಿವರಾಜ್​ಸಿಂಗ್​ ಚೌಹಾಣ್​ ಹೇಳಿದ್ದಾರೆ. ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ ಕಮಲನಾಥ್​ ಟ್ವೀಟ್​ ಮಾಡಿದ್ದಾರೆ. ಕಮಲಾ ನೆಹರೂ ಆಸ್ಪತ್ರೆಯಲ್ಲಿ ನಡೆದ ಬೆಂಕಿ ದುರಂತ ನಿಜಕ್ಕೂ ನೋವು ತಂದಿದೆ. ಈ ಬಗ್ಗೆ ಉನ್ನತ ಮಟ್ಟದ ತನಿಖೆ ಆಗಲೇಬೇಕು ಎಂದು ಹೇಳಿದ್ದಾರೆ.

ನಿನ್ನೆ ಸಂಜೆ ಈ ದುರ್ಘಟನೆ ನಡೆದಿತ್ತು. ಮಕ್ಕಳನ್ನು ಪಾರು ಮಾಡಲು ಕೂಡಲೇ ರಕ್ಷಣಾ ಕಾರ್ಯಾಚರಣೆಯೂ ನಡೆದಿತ್ತು. ಹಲವು ರೋಗಿಗಳನ್ನುಸ್ಟ್ರೆಚರ್​​ನಲ್ಲಿ ಹಾಕಿ ಇನ್ನೊಂದು ಆಸ್ಪತ್ರೆಗೆ ಸಾಗಿಸಲಾಯಿತು. ಅಷ್ಟಾದರೂ ನಾಲ್ಕು ಮಂದಿ ಮಕ್ಕಳು ಮೃತಪಟ್ಟಿದ್ದಾರೆ. ಆಸ್ಪತ್ರೆಗೆ ಬೆಂಕಿ ಬೀಳುತ್ತಿದ್ದಂತೆ ಅಲ್ಲಿ ಅಡ್ಮಿಟ್​ ಆದ ಮಕ್ಕಳ ಕುಟುಂಬದವರು ಆತಂಕದಿಂದ ಅಲ್ಲಿಗೆ ಧಾವಿಸಿದ್ದರು.  ಇತ್ತೀಚೆಗಷ್ಟೇ ಮಹಾರಾಷ್ಟ್ರದ ಸಿವಿಲ್​ ಆಸ್ಪತ್ರೆಯ ಕೊವಿಡ್ 19 ವಾರ್ಡ್​ಗೆ ಬೆಂಕಿ ಹೊತ್ತುಕೊಂಡು 10 ರೋಗಿಗಳು ದುರ್ಮರಣ ಹೊಂದಿದ್ದರು. ಅದರ ಬೆನ್ನಲ್ಲೇ ಇಂಥದ್ದೊಂದು ದುರ್ಘಟನೆ ನಡೆದಿದೆ.

ಇದನ್ನೂ ಓದಿ: ತಾಲಿಬಾನ್​ಗೆ ಸಂದೇಶ ರವಾನಿಸಲು ಆಫ್ಘನ್​ ಕುರಿತು ಸಭೆ ಆಯೋಜನೆ: ಸಭೆಯಿಂದ ಹೊರಗಾದ ಪಾಕ್​-ಚೀನಾ ಜೋಡಿ!