ನಾಳೆ GHMC ಫಲಿತಾಂಶ: ಯಾರಿಗೊಲಿಯುವಳು ‘ಭಾಗ್ಯ’ದೇವತೆ?

ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆಯ ಮತ ಎಣಿಕೆ ನಾಳೆ ನಡೆಯಲಿದೆ. ಹೈದರಾಬಾದ್, ಹೈದರಾಬಾದ್ ಆಗೇ ಉಳಿಯುತ್ತಾ ಅಥವಾ ಭಾಗ್ಯನಗರವಾಗುತ್ತಾ ಎಂಬ ಕುತೂಹಲದ ಪ್ರಶ್ನೆಗೆ ನಾಳೆ ಉತ್ತರ ದೊರಕಲಿದೆ.

ನಾಳೆ GHMC ಫಲಿತಾಂಶ: ಯಾರಿಗೊಲಿಯುವಳು ‘ಭಾಗ್ಯ’ದೇವತೆ?
GHMC ಚುನಾವಣೆ: ಬಿಜೆಪಿಯ ಭಾಗ್ಯ ನಗರ vs ಟಿಎರ್​ಎಸ್​-ಎಐಎಂ​ಐಎಂ ನ ಹೈದರಾಬಾದ್ ನಡುವೆ ಯುದ್ಧ
Updated By: ಸಾಧು ಶ್ರೀನಾಥ್​

Updated on: Dec 03, 2020 | 4:35 PM


ಹೈದರಾಬಾದ್:
ನಾಳೆ ಬಹು ನಿರೀಕ್ಷಿತ ಹೈದರಾಬಾದ್ ಮಹಾನಗರ ಪಾಲಿಕೆಯ ಚುನಾವಣೆಯ ಮತ ಎಣಿಕೆ ನಡೆಯಲಿದೆ . ನಾಳೆ ಸಂಜೆಯ ವೇಳೆಗೆ ಭಾಗ್ಯ ನಗರದ ಭಾಗ್ಯ ದೇವತೆ ಯಾರಿಗೆ ಒಲಿಯುತ್ತಾಳೆ ಎಂಬುದು ಸ್ಪಷ್ಟವಾಗಲಿದೆ.

ಬಿಜೆಪಿ, ಟಿಆರ್​ಎಸ್ ಮತ್ತು ಎಐಎಂಐಎಂಗಳ ಅದ್ದೂರಿ ಪ್ರಚಾರದ ನಂತರವೂ ಹೈದರಾಬಾದ್ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಕೇವಲ ಶೇ. 45.7 ಮತಗಳಷ್ಟೇ ಚಲಾವಣೆಯಾಗಿದೆ. ಅರ್ಧಕ್ಕಿಂತ ಕಡಿಮೆ ಮತದಾನ ಆಗಿರುವುದು ತಮ್ಮ ಪಾಲಿಗೆ ವರದಾಯಕವೆಂದೇ ಪ್ರಾದೇಶಿಕ ಪಕ್ಷಗಳು ಬಿಂಬಿಸಿಕೊಂಡಿವೆ. ಸಾಂಪ್ರದಾಯಿಕ ಮತಗಳಷ್ಟೇ ಚಲಾವಣೆಯಾಗಿರುವ ಸಂದೇಹವಿರುವುದರಿಂದ ಪ್ರಾದೇಶಿಕ ಪಕ್ಷಗಳಿಗೆ ಲಾಭವಾಗಲಿದೆ. ಕಡಿಮೆ ಮತದಾನದ ಲಾಭವನ್ನು ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ನೇತೃತ್ವದ ಟಿಆರ್​ಎಸ್ ಗಳಿಸಿರುವ ಸಾಧ್ಯತೆ ಹೆಚ್ಚಿದೆ ಎಂದೇ ರಾಜಕೀಯ ವಲಯದಲ್ಲಿ ವಿಶ್ಲೇಷಣೆಗಳು ಹರಿದಾಡುತ್ತಿವೆ.

ಡಿಮೆ ಮತದಾನಕ್ಕೆ ಕಾರಣವೇನು?
ಇತ್ತೀಚಿಗಷ್ಟೇ ಹೈದರಾಬಾದ್​ನಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿತ್ತು. ಈ ಭಾಗದ ನಾಗರಿಕರು ಮತದಾನಕ್ಕೆ ಹಿಂದೇಟು ಹಾಕಿದ್ದಾರೆ. ಅಲ್ಲದೇ, ವೋಟಿಂಗ್ ಸ್ಲಿಪ್​ಗಳ ವಿತರಣೆಯಲ್ಲೂ ಅಡಚಣೆ ಕಂಡುಬಂದಿದೆ. ಕೊರೊನಾ ಸೋಂಕಿನ ಭಯವೂ ಮತದಾನ ಕಡಿಮೆಯಾಗಲು ಕಾರಣವಾಗಿದೆ ಎಂಬ ಅಭಿಪ್ರಾಯ ತೆಲಂಗಾಣದ ರಾಜಕೀಯ ಪಡಸಾಲೆಯಲ್ಲಿ ಕೇಳಿಬಂದಿದೆ.

ಪ್ರಾದೇಶಿಕ ಪಕ್ಷಗಳಿಗೆ ವರದಾನವೇ
ಚುನಾವಣೆಯ ನಂತರ ಪಕ್ಷದ ಆಂತರಿಕ ಸಭೆ ಕರೆದಿದ್ದ ಕೆ. ಸಿ ರಾವ್ 75 ಸ್ಥಾನಗಳಲ್ಲಿ ಗೆಲ್ಲುವ ಖಚಿತ ವಿಶ್ವಾಸ ವ್ಯಕ್ತಪಡಿಸಿದ್ದರು. ಇದುವರೆಗೆ ಕಡಿಮೆ ಮತದಾನವಾದಾಗೆಲ್ಲ ಟಿಆರ್​ಎಸ್​ ಗೆದ್ದಿರುವುದರಿಂದ ಕೆ ಸಿ ರಾವ್ ಈ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅಸಾದುದ್ದೀನ್ ಓವೈಸಿ ನೇತೃತ್ವದ ಎಐಎಂಐಎಂ ಸಹ ಹಿಂದಿನ ಚುನಾವಣೆಗಿಂತ ಹೆಚ್ಚು ಸ್ಥಾನ ಗೆಲ್ಲುವ ಉಮೇದಿನಲ್ಲಿದೆ. ಬಿಜೆಪಿ ತನ್ನ ಬಳಿಯಿದ್ದ 4 ಸ್ಥಾನಗಳಿಂದ ಮಾಡುವ ಉದ್ದೇಶದಿಂದ ಭಾರೀ ಪ್ರಚಾರ ಮಾಡಿದ್ದರೂ, ಕಡಿಮೆ ಮತದಾನ ಪ್ರಮಾಣ ಈ ಗುರಿಗೆ ಮಾರಕವಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಮತ ಎಣಿಕೆಯೂ ವಿಳಂಬವಾಗಲಿದೆಯೇ..?
GHMC ಚುನಾವಣೆಯ ಎಲ್ಲ ಕ್ಷೇತ್ರಗಳಲ್ಲೂ ಬ್ಯಾಲೆಟ್ ಪೇಪರ್​ನಲ್ಲಿ ಮತದಾನ ನಡೆಸಲಾಗಿದೆ. ಹೀಗಾಗಿ ಮತ ಎಣಿಕೆ ನಿಧಾನವಾಗುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.