ಪಂಜಾಬಿ ಗಾಯಕ ಸಿಧು ಮೂಸೆವಾಲಾ ಹತ್ಯೆಯ ಆರೋಪಿ ಪೊಲೀಸ್​​ ಕಸ್ಟಡಿಯಿಂದ ಪರಾರಿ

ಟಿನು, ಗ್ಯಾಂಗ್​​ಸ್ಟರ್ ಲಾರೆನ್ಸ್ ಬಿಷ್ಣೋಯಿ ಅವರ ಆಪ್ತನಾಗಿದ್ದು, ಈತ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಹತ್ಯೆ ಪ್ರಕರಣದ ಆರೋಪಿಯಾಗಿದ್ದಾನೆ.

ಪಂಜಾಬಿ ಗಾಯಕ ಸಿಧು ಮೂಸೆವಾಲಾ ಹತ್ಯೆಯ ಆರೋಪಿ ಪೊಲೀಸ್​​ ಕಸ್ಟಡಿಯಿಂದ ಪರಾರಿ
ಗ್ಯಾಂಗ್‌ಸ್ಟರ್ ದೀಪಕ್ ಟಿನು
Edited By: ರಶ್ಮಿ ಕಲ್ಲಕಟ್ಟ

Updated on: Oct 02, 2022 | 6:22 PM

ಚಂಡೀಗಢ:  ಪಂಜಾಬಿ ಗಾಯಕ  ಸಿಧು ಮೂಸೆವಾಲಾ ((Sidhu Moosewala) ಹತ್ಯೆ ಪ್ರಕರಣದ ಆರೋಪಿಗಳಲ್ಲಿ ಒಬ್ಬನಾದ ಗ್ಯಾಂಗ್‌ಸ್ಟರ್ ದೀಪಕ್ ಟಿನು (Gangster Deepak Tinu) ಪೊಲೀಸ್ ಕಸ್ಟಡಿಯಿಂದ ಪರಾರಿಯಾಗಿದ್ದಾನೆ ಎಂದು ಅಧಿಕೃತ ಮೂಲಗಳು ಭಾನುವಾರ ತಿಳಿಸಿವೆ. ಮಾನ್ಸಾ ಪೊಲೀಸರು ಮತ್ತೊಂದು ಪ್ರಕರಣದಲ್ಲಿ ಗೋಯಿಂದ್ವಾಲ್ ಸಾಹಿಬ್ ಜೈಲಿನಿಂದ ಪ್ರೊಡಕ್ಷನ್ ವಾರಂಟ್ ಮೇಲೆ ಕರೆತಂದಾಗ ಶನಿವಾರ ರಾತ್ರಿ ಟಿನು ಪರಾರಿಯಾಗಿದ್ದು ಆತನಿಗಾಗಿ ಹುಡುಕಾಟ ಪ್ರಾರಂಭಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಟಿನು, ಗ್ಯಾಂಗ್​​ಸ್ಟರ್ ಲಾರೆನ್ಸ್ ಬಿಷ್ಣೋಯಿ (Lawrence Bishnoi) ಅವರ ಆಪ್ತನಾಗಿದ್ದು, ಈತ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಹತ್ಯೆ ಪ್ರಕರಣದ ಆರೋಪಿಯಾಗಿದ್ದಾನೆ. ಈ ಬಗ್ಗೆ ಕೇಳಿದಾಗ ಪ್ರತಿಕ್ರಿಯಿಸಿದ ಬಂಟಿಂಡಾ ರೇಂಜ್​​ನ ಐಜಿ, ಮುಖ್ವಿಂದರ್ ಸಿಂಗ್ ಚಿನ್ನ, ನಾವು ಈ ಬಗ್ಗೆ ಕಾರ್ಯ ಪ್ರವೃತ್ತರಾಗಿದ್ದು,ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಆತನನ್ನು ಶೀಘ್ರದಲ್ಲೇ ಸೆರೆ ಹಿಡಿಯುತ್ತೇವೆ ಎಂದಿರುವುದಾಗಿ ಪಿಟಿಐ ವರದಿ ಮಾಡಿದೆ. ಸಿಧು ಮೂಸೆವಾಲಾ ಎಂದೇ ಜನಪ್ರಿಯರಾಗಿರುವ ಶುಭದೀಪ್ ಸಿಂಗ್ ಸಿಧು ಅವರನ್ನು ಮೇ 29ರಂದು ಪಂಜಾಬ್ ನ ಮಾನ್ಸಾ ಜಿಲ್ಲೆಯಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು.

ಮೂಸೆವಾಲಾ ತಮ್ಮ ಸ್ನೇಹಿತ ಮತ್ತು ಸೋದರಸಂಬಂಧಿಯೊಂದಿಗೆ ಜೀಪ್‌ನಲ್ಲಿ ಮಾನ್ಸಾದ ಜವಾಹರ್ ಕೆ ಗ್ರಾಮಕ್ಕೆ ತೆರಳುತ್ತಿದ್ದಾಗ ಗುಂಡಿನ ದಾಳಿ ನಡೆದಿದೆ. ಅವನ ವಾಹನವನ್ನು ಅಡ್ಡಗಟ್ಟಿ ಶೂಟರ್‌ಗಳು ಮೂಸೆವಾಲಾ ಮೇಲೆ ಗುಂಡುಗಳ ಸುರಿಮಳೆಗೈದಿದ್ದಾರೆ. ಹತ್ಯೆಯ ನಂತರ, ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಸದಸ್ಯ ಗೋಲ್ಡಿ ಬ್ರಾರ್ ಕೊಲೆಯ ಹೊಣೆಯನ್ನು ಹೊತ್ತುಕೊಂಡಿದ್ದಾನೆ.

ಕೊಲೆ ಪ್ರಕರಣದಲ್ಲಿ ಚಾರ್ಜ್ ಶೀಟ್ ಆಗಿರುವ 24 ಆರೋಪಿಗಳಲ್ಲಿ ಟಿನು ಕೂಡಾ ಇದ್ದಾನೆ.

Published On - 5:40 pm, Sun, 2 October 22

Web contact

TV9 Kannada

Read More
Follow Us