Sanchar Saathi App: ತೀವ್ರ ವಿರೋಧ ಬೆನ್ನಲ್ಲೇ ಸಂಚಾರ್ ಸಾಥಿ ಆ್ಯಪ್ ಕಡ್ಡಾಯ ನಿರ್ಧಾರ ವಾಪಾಸ್ ಪಡೆದ ಕೇಂದ್ರ

ಕೇಂದ್ರ ಸರ್ಕಾರವು ಸಂಚಾರ್ ಸಾಥಿ ಅಪ್ಲಿಕೇಶನ್ ಅನ್ನು ಮೊಬೈಲ್‌ಗಳಲ್ಲಿ ಪೂರ್ವ-ಸ್ಥಾಪನೆ ಮಾಡುವುದನ್ನು ಕಡ್ಡಾಯಗೊಳಿಸುವ ಆದೇಶವನ್ನು ಹಿಂತೆಗೆದುಕೊಂಡಿದೆ. ಸಾರ್ವಜನಿಕರ ಸಲಹೆ ಮತ್ತು ಪ್ರತಿಕ್ರಿಯೆಗಳನ್ನು ಪರಿಗಣಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ತಿಳಿಸಿದ್ದಾರೆ. ಕಳೆದುಹೋದ ಫೋನ್‌ಗಳನ್ನು ಟ್ರ್ಯಾಕ್ ಮಾಡಲು ಮತ್ತು ನೈಜತೆಯನ್ನು ಪರಿಶೀಲಿಸಲು ಈ ಅಪ್ಲಿಕೇಶನ್ ಸಹಾಯಕವಾಗಿತ್ತು. ಇನ್ನು ಮುಂದೆ, ಇದು ಕಡ್ಡಾಯವಲ್ಲ ಮತ್ತು ಬೇಡವಾದರೆ ಡಿಲೀಟ್ ಮಾಡಬಹುದು.

Sanchar Saathi App: ತೀವ್ರ ವಿರೋಧ ಬೆನ್ನಲ್ಲೇ ಸಂಚಾರ್ ಸಾಥಿ ಆ್ಯಪ್ ಕಡ್ಡಾಯ ನಿರ್ಧಾರ ವಾಪಾಸ್ ಪಡೆದ ಕೇಂದ್ರ
ಸಾಂದರ್ಭಿಕ ಚಿತ್ರ

Updated on: Dec 03, 2025 | 4:29 PM

ದೆಹಲಿ, ಡಿ.3: ಸಂಚಾರ್ ಸಾಥಿ ಅಪ್ಲಿಕೇಷನ್ (Sanchar Saathi App) ಕಡ್ಡಾಯವಲ್ಲ ಬೇಡವಾದರೆ ಮೊಬೈಲ್​ನಿಂದ ಡಿಲೀಟ್ ಮಾಡಬಹುದು ಎಂದು ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಹೇಳಿದರು. ಇದೀಗ ಸಾರ್ವಜನಿಕ ಸಲಹೆಗಳು ಮತ್ತು ಪ್ರತಿಕ್ರಿಯೆಗಳ ಆಧಾರದ ಮೇಲೆ ಈ ನಿಯಮವನ್ನು ತೆಗೆದು ಹಾಕಲಾಗಿದೆ ಎಂದು ಹೇಳಿದ್ದಾರೆ. ಮಾರಾಟವಾಗುತ್ತಿರುವ ಫೋನ್​ಗಳ ನೈಜತೆ ಹಾಗೂ ಕಳೆದುಹೋಗಿರುವ ಫೋನ್ ಅನ್ನು ಟ್ರ್ಯಾಕ್ ಮಾಡಲು ಸಾಧ್ಯವಾಗುವಂತೆ ಸರ್ಕಾರ ಈ ಅಪ್ಲಿಕೇಷನ್ ಅನ್ನು ಸಿದ್ಧಪಡಿಸಿತ್ತು. ಆದರೆ ಇದೀಗ ಸಂಚಾರ್ ಸಾಥಿ ಸೈಬರ್ ಸೆಕ್ಯುರಿಟಿ ಅಪ್ಲಿಕೇಶನ್‌ನ ಪೂರ್ವ-ಸ್ಥಾಪನೆಯನ್ನು ಕಡ್ಡಾಯಗೊಳಿಸುವ ಆದೇಶವನ್ನು ಸರ್ಕಾರ ಬುಧವಾರ ಹಿಂತೆಗೆದುಕೊಂಡಿದೆ .

ನೆನ್ನೆ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು, ನಿಮಗೆ ಆ ಅಪ್ಲಿಕೇಷನ್ ಬೇಡವಾದರೆ ಮೊಬೈಲ್​ನಿಂದ ಅನ್​​​​ಇನ್ಸ್ಟಾಲ್ ಮಾಡಬಹುದು. ಈ ಆ್ಯಪ್​ ಅನ್ನು ಎಲ್ಲರಿಗೂ ಪರಿಚಯಿಸುವುದು ನಮ್ಮ ಕರ್ತವ್ಯ. ಅದನ್ನು ಇಟ್ಟುಕೊಳ್ಳಬೇಕೋ ಬೇಡವೋ ಎಂಬುದು ಬಳಕೆದಾರರಿಗೆ ಬಿಟ್ಟದ್ದು ಎಂದು ಹೇಳಿದ್ದರು. ಆದರೆ ಇಂದು ನಡೆದ ಚಳಿಗಾಲ ಅಧಿವೇಶನದಲ್ಲಿ ಈ ಬಗ್ಗೆ ಭಾರೀ ವಿರೋಧಗಳು ವ್ಯಕ್ತವಾಗಿತ್ತು. ಜತೆಗೆ ಸಾರ್ವಜನಿಕ ವಲಯದಲ್ಲೂ ಕೂಡ ಇದರ ಬಗ್ಗೆ ಒಮ್ಮತದ ಅಭಿಪ್ರಾಯ ಇರಲಿಲ್ಲ ಎಂದು ಇದೀಗ ಸಂಚಾರ್ ಸಾಥಿ ಆ್ಯಪ್ ಇನ್ಸ್ಟಾಲ್ ಕಡ್ಡಾಯವಲ್ಲ ಎಂದು ಹೇಳಿದ್ದಾರೆ. ಆ್ಯಪ್ ಡೌನ್‌ಲೋಡ್ ಮಾಡಿದ ಬಳಕೆದಾರರ ಸಂಖ್ಯೆ (24 ಗಂಟೆಗಳಲ್ಲಿ ಆರು ಲಕ್ಷಕ್ಕೂ ಹೆಚ್ಚು ಮತ್ತು ಒಟ್ಟಾರೆ 1.4 ಕೋಟಿ ಬಳಕೆದಾರರು) ವೇಗವಾಗಿ ಹೆಚ್ಚುತ್ತಿರುವ ಕಾರಣ ಆಪಲ್ ಸೇರಿದಂತೆ ದೈತ್ಯ ಮೊಬೈಲ್​​​​​​​​ ತಯಾರಕರಿಗೆ ಆದೇಶವನ್ನು ಹಿಂಪಡೆಯಲಾಗಿದೆ ಎಂದು ಸರ್ಕಾರ ತಿಳಿಸಿದೆ.

ಪೋಸ್ಟ್​​ ಇಲ್ಲಿದೆ ನೋಡಿ:

ಸಂಸತ್ತಿನ ಮಾತನಾಡಿದ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ “ಈ ಬಗ್ಗೆ ನಾನು ನೆನ್ನೆಯೇ ಹೇಳಿದ್ದೇನೆ. ಇದೀಗ ಮತ್ತೆ ಸಂಸತ್ತಿನಲ್ಲಿ ಮತ್ತೆ ಹೇಳುತ್ತಿದ್ದೇನೆ. ಮೊಬೈಲ್​​ ಬಳಕೆದಾರರು ತಮಗೆ ಇಷ್ಟವಿಲ್ಲದ್ದಿದ್ದರೆ, ಈ ಅಪ್ಲಿಕೇಷನ್​​ನ್ನು ಡೌನೋಡ್​​ ಮಾಡಿಕೊಳ್ಳುವ ಅಗತ್ಯ ಇಲ್ಲ. ಎಲ್ಲಾ ನಾಗರಿಕರಿಗೆ ಸೈಬರ್ ಭದ್ರತೆಯನ್ನು ಒದಗಿಸುವ ಉದ್ದೇಶದಿಂದ ಸರ್ಕಾರ ಈ ಕ್ರಮವನ್ನು ತಂದಿದೆ. ಇದರ ಜತೆಗೆ ಇನ್ನು ಮುಂದೆ ಬಿಡುಗಡೆ ಆಗುವ ಎಲ್ಲಾ ಸ್ಮಾರ್ಟ್‌ಫೋನ್‌ಗಳಲ್ಲಿ ಸಂಚಾರ್ ಸಾಥಿ ಅಪ್ಲಿಕೇಶನ್ ಅನ್ನು ಮೊದಲೇ ಅಳವಡಿಸಬೇಕು ಎಂಬ ಆದೇಶವನ್ನು ನೀಡಲಾಗಿತ್ತು. ಅದನ್ನು ಕೂಡ ವಾಪಸ್​​ ಪಡೆದಿದ್ದೇವೆ. ಈ ಅಪ್ಲಿಕೇಷನ್ ಸೈಬರ್ ಜಗತ್ತಿನ ದುಷ್ಟ ಶಕ್ತಿಗಳಿಂದ ನಾಗರಿಕರನ್ನು ಕಾಪಾಡುವುದು ನಮ್ಮ ಉದ್ದೇಶವಾಗಿತ್ತು. ಇದರ ಹೊರತು ಬೇರೆ ಯಾವುದೇ ಉದ್ದೇಶವಾಗಿರಲಿಲ್ಲ. ಈ ಅಪ್ಲಿಕೇಷನ್ ಬೇಡವೆಂದರೆ ತೆಗೆದು ಹಾಕಿ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಸಂಚಾರ್ ಸಾಥಿ ಆ್ಯಪ್‌ನಿಂದ ಎಂದಿಗೂ ಬೇಹುಗಾರಿಕೆ ನಡೆಯುವುದಿಲ್ಲ; ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಭರವಸೆ

ಸಂಚಾರ್ ಸಾಥಿ ಅಪ್ಲಿಕೇಶನ್‌ನಿಂದ ಬೇಹುಗಾರಿಕೆ ಸಾಧ್ಯವಿಲ್ಲ ಮತ್ತು ಅದನ್ನು ಮಾಡಲು ಸಾಧ್ಯವಿಲ್ಲ. ಬೇಡವೆಂದರೆ ತೆಗೆದುಹಾಕಿ, ಏಕೆಂದರೆ ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬ ನಾಗರಿಕನಿಗೂ ಈ ಹಕ್ಕಿದೆ. ಎಲ್ಲರೂ ಇದನ್ನು ಬಳಸಿಕೊಳ್ಳಬೇಕು ಎಂಬ ಉದ್ದೇಶ ಸರ್ಕಾರದಾಗಿತ್ತು ಆದರೆ ಈಗ, ಸಾರ್ವಜನಿಕರಿಂದ ಬಂದ ಪ್ರತಿಕ್ರಿಯೆಯ ಆಧಾರದ ಮೇಲೆ ಈ ಕ್ರಮವನ್ನು ಬದಲಾವಣೆ ಮಾಡಿದ್ದೇವೆ. ಈ ಹಿಂದೆ ನಡೆದ ಘಟನೆಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಸರ್ಕಾರ ಕ್ರಮವನ್ನು ತಂದಿತ್ತು ಎಂದು ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಹೇಳಿದ್ದಾರೆ.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:02 pm, Wed, 3 December 25