
ದೇಶದ 75ನೇ ಸ್ವಾತಂತ್ರ್ಯೋತ್ಸವದ ನಿಮಿತ್ತ ಇಂದು ದೆಹಲಿಯ ಐತಿಹಾಸಿಕ ಕೆಂಪುಕೋಟೆಯ ಮೇಲೆ ಪ್ರಧಾನಿ ನರೇಂದ್ರ ಮೋದಿ ತ್ರಿವರ್ಣಧ್ವಜಾರೋಹಣ ಮಾಡಿದರು. ದೇಶಕ್ಕೆ ಸ್ವಾತಂತ್ರ್ಯ ಬಂದು 75ವರ್ಷಗಳಾಗಿದ್ದು, ಅದನ್ನು ಆಜಾದಿ ಕಾ ಅಮೃತ ಮಹೋತ್ಸವ್ ಎಂದು ಆಚರಿಸಲಾಗುತ್ತಿದೆ.

ಪ್ರಧಾನಿ ನರೇಂದ್ರ ಮೋದಿಯವರು ಇಂದು ಕೆಂಪುಕೋಟೆ ಮೇಲೆ ರಾಷ್ಟ್ರಧ್ವಜಾರೋಹಣ ಮಾಡುತ್ತಿದ್ದಂತೆ ಎರಡು ಹೆಲಿಕಾಪ್ಟರ್ಗಳ ಮೂಲಕ ಹೂವಿನ ಎಸಳುಗಳ ಸುರಿಮಳೆ ಸುರಿಸಲಾಯಿತು. 75ನೇ ಸ್ವಾತಂತ್ರ್ಯೋತ್ಸವದ ನಿಮಿತ್ತ ಈ ವಿಶೇಷತೆ ಇಡಲಾಗಿತ್ತು. ವಾಯುಸೇನಾ ಪಡೆಯ MI-17ನ ಎರಡು ಚಾಪರ್ಗಳ ಮೂಲಕ ಹೂವಿನ ಎಸಳುಗಳು ರಾಷ್ಟ್ರಧ್ವಜಕ್ಕೆ ಸಿಂಪಡಿಸಲ್ಪಟ್ಟವು.

75ನೇ ಸ್ವಾತಂತ್ರ್ಯೋತ್ಸವದ ಆಚರಣೆ ವೇಳೆ ಪಾಲ್ಗೊಂಡ ಎಲ್ಲ ಸೇನಾಪಡೆಗಳನ್ನೂ ವೀಕ್ಷಿಸುತ್ತ ಪ್ರಧಾನಿ ನರೇಂದ್ರ ಮೋದಿ ಹೆಜ್ಜೆ ಹಾಕಿದರು. ಪ್ರತಿ ಸ್ವಾತಂತ್ರ್ಯ ದಿನಾಚರಣೆ ಮತ್ತು ಗಣರಾಜ್ಯೋತ್ಸವಗಳಂದು ಸೇನಾ ಪಡೆಗಳು ಕೆಂಪುಕೋಟೆ ಬಳಿ ಪಥಸಂಚಲನ ನಡೆಸಿ, ಪ್ರಧಾನಿಗೆ ಗೌರವ ವಂದನೆ ಸಲ್ಲಿಸುತ್ತವೆ. ಈ ಬಾರಿಯೂ ಶಿಷ್ಟಾಚಾರದಂತೆ, ಬಿಗಿ ಭದ್ರತೆ ನಡುವೆ ಎಲ್ಲ ಕಾರ್ಯಕ್ರಮಗಳೂ ನಡೆದಿವೆ.

ದೆಹಲಿ ಕೆಂಪುಕೋಟೆಯ ಸ್ವಾತಂತ್ರ್ಯೋತ್ಸವದಲ್ಲಿ ಪಾಲ್ಗೊಂಡಿದ್ದ ಸಶಸ್ತ್ರ ಮೀಸಲು ಪಡೆಗಳು, ರಕ್ಷಣಾದಳಗಳಿಂದ ಪ್ರಧಾನಿ ನರೇಂದ್ರ ಮೋದಿ ಗೌರವ ವಂದನೆ ಸ್ವೀಕಾರ ಮಾಡಿದರು. ಈ ವೇಳೆ ಮೂರು ಸೇನಾಪಡೆಗಳಿಂದ ಪ್ರಧಾನಿಯವರಿಗೆ ಗೌರವ ವಂದನೆ ಸಲ್ಲಿಕೆಯಾಗುತ್ತದೆ.

ದೆಹಲಿ ಐತಿಹಾಸಿಕ ಕೆಂಪುಕೋಟೆಯಲ್ಲಿ 75ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಗೃಹ ಸಚಿವ ಅಮಿತ್ ಶಾ, ಸ್ಮೃತಿ ಇರಾನಿ ಸೇರಿ ಇನ್ನೂ ಹಲವು ಮಂತ್ರಿಗಳು ಪಾಲ್ಗೊಂಡಿದ್ದರು. ರಾಷ್ಟ್ರಗೀತೆ ಹಾಡುವ ವೇಳೆ ಎದ್ದು ನಿಂತು ಗೌರವ ಸೂಚಿಸುತ್ತಿರುವ ಫೋಟೋ ಇದು.

ಇಂದು ಮುಂಜಾನೆ ಕೆಂಪುಕೋಟೆಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅಲ್ಲಿ ನೆರೆದಿದ್ದ ಜನರತ್ತ ಕೈ ಬೀಸಿದರು. ನಂತರ ರಾಷ್ಟ್ರಧ್ವಜಾರೋಹಣ ಮಾಡಿ, ದೇಶವನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಇಂದಿನ ಭಾಷಣದ ವೇಳೆ ಅವರು ಹಲವು ಅಭಿವೃದ್ಧಿ ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ.

ಟೋಕಿಯೋ ಒಲಿಂಪಿಕ್ಸ್ನಲ್ಲಿ ಈ ಬಾರಿ ಭಾರತ ಹಲವು ಪದಕಗಳ ಸಾಧನೆ ಮಾಡಿದೆ. ಅದರಲ್ಲೂ ಕೇಂದ್ರಬಿಂದು ಜಾವಲಿನ್ ಎಸೆತದಲ್ಲಿ ಚಿನ್ನದ ಪದಕ ಗಳಿಸಿದ ನೀರಜ್ ಚೋಪ್ರಾ. ಅವರು ಇಂದು ಕೆಂಪುಕೋಟೆಯಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಗೆ ಆಗಮಿಸಿದ್ದರು. ನೀರಜ್ ಚೋಪ್ರಾ ಸೇರಿ ಒಲಿಂಪಿಕ್ಸ್ ಆಟಗಾರರು ಪಾಲ್ಗೊಂಡಿದ್ದರು.

ದೆಹಲಿಯ ಐತಿಹಾಸಿಕ ಕೆಂಪುಕೋಟೆಯಲ್ಲಿ ನಡೆದ 75ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಪಾಲ್ಗೊಂಡಿದ್ದ ಒಲಿಂಪಿಕ್ಸ್ ಕ್ರೀಡಾಪಟುಗಳೊಂದಿಗೆ ಪ್ರಧಾನಿ ಮೋದಿ ಮಾತುಕತೆ ನಡೆಸಿ, ಅವರಿಗೆ ಅಭಿನಂದನೆ ಸಲ್ಲಿಸಿದರು. ಟೋಕಿಯೋ 2020ರ ಒಲಿಂಪಿಕ್ಸ್ನಲ್ಲಿ ಪಾಲ್ಗೊಂಡಿದ್ದ ಅಥ್ಲೀಟ್ಗಳು ಮತ್ತು ಕ್ರೀಡಾಪಟುಗಳನ್ನು ಈ ಬಾರಿಯ ಸ್ವಾತಂತ್ರ್ಯೋತ್ಸವಕ್ಕೆ ಆಹ್ವಾನಿಸಲಾಗಿತ್ತು

ಪ್ರಧಾನಿ ನರೇಂದ್ರ ಮೋದಿ ಮೊದಲು ರಾಷ್ಟ್ರಧ್ವಜಾರೋಹಣ ಮಾಡಿದರು. ಅದಾದ ಬಳಿಕ ದೇಶವನ್ನು ಉದ್ದೇಶಿಸಿ 90 ನಿಮಿಷಗಳ ಕಾಲ ಮಾತನಾಡಿದರು. ಭಾಷಣ ಮುಗಿದ ಬಳಿಕ ಅವರು ಎನ್ಸಿಸಿ ಕೆಡೆಟ್ಸ್ ಕುಳಿತಿದ್ದ ಸಾಲಿಗೆ ಬಂದು ಅವರನ್ನು ಮಾತನಾಡಿಸಿದರು.

ದೇಶವನ್ನುದ್ದೇಶಿಸಿ ಸ್ವಾತಂತ್ರ್ಯೋತ್ಸವದ ಭಾಷಣ ಮಾಡಿದ ಪ್ರಧಾನಿ ಮೋದಿ, ನಂತರ ಪ್ರೇಕ್ಷಕರು ಕುಳಿತ ಸಾಲಿಗೆ ಬಂದು ಅವರೊಡನೆ ಮಾತುಕತೆ ನಡೆಸಿದರು. ಈ ಬಾರಿ ಕೊರೊನಾ ನಿಮಿತ್ತ ಎಲ್ಲ ರೀತಿಯ ಮುಂಜಾಗ್ರತೆಗಳನ್ನೂ ತೆಗೆದುಕೊಳ್ಳಲಾಗಿತ್ತು. ಆಸನಗಳ ನಡುವೆ ಅಂತರ ಇರುವುದನ್ನು ಕಾಣಬಹುದು
Published On - 12:33 pm, Sun, 15 August 21