ಭಾರತ-ಆಸ್ಟ್ರೇಲಿಯಾ ನಡುವಣ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯು ಏಕಮುಖದತ್ತ ಸಾಗುತ್ತಿದೆ. ಮೊದಲೆರಡು ಪಂದ್ಯಗಳಲ್ಲಿ ಭರ್ಜರಿ ಪ್ರದರ್ಶನ ನೀಡಿರುವ ಟೀಮ್ ಇಂಡಿಯಾ 2-0 ಅಂತರದಿಂದ ಮುನ್ನಡೆ ಸಾಧಿಸಿದೆ. ಮತ್ತೊಂದೆಡೆ ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಆಸ್ಟ್ರೇಲಿಯಾ ತಂಡಕ್ಕೆ ಇದೀಗ ಪ್ರಮುಖ ಆಲ್ರೌಂಡರ್ ಆಟಗಾರ ಕೈಕೊಟ್ಟಿದ್ದಾರೆ.
ಹೌದು, ಮೊದಲ ಎರಡು ಪಂದ್ಯಗಳ ವೇಳೆ ತಂಡದಲ್ಲಿ ಪ್ರಮುಖ ಸ್ಪಿನ್ ಆಲ್ರೌಂಡರ್ ಅಷ್ಟನ್ ಅಗರ್ ಆಸ್ಟ್ರೇಲಿಯಾಗೆ ಮರಳಿದ್ದಾರೆ. ಇದಕ್ಕೆ ಮುಖ್ಯ ಕಾರಣ ಪ್ಲೇಯಿಂಗ್ ಇಲೆವೆನ್ನಲ್ಲಿ ಅವಕಾಶ ಸಿಗದಿರುವುದು ಎಂಬ ವಿಷಯ ಇದೀಗ ಬಹಿರಂಗವಾಗಿದೆ.
ಭಾರತ ಪ್ರವಾಸಕ್ಕೂ ಮುನ್ನ ಸಿಡ್ನಿಯಲ್ಲಿ ನಡೆದ ಸೌತ್ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ನಾಥನ್ ಲಿಯಾನ್ ಜೊತೆ 2ನೇ ಸ್ಪಿನ್ನರ್ ಆಗಿ ಅಷ್ಟನ್ ಅಗರ್ ಕಣಕ್ಕಿಳಿದಿದ್ದರು. ಅಲ್ಲದೆ ಉತ್ತಮ ಪ್ರದರ್ಶನವನ್ನೂ ಸಹ ನೀಡಿದ್ದರು. ಆದರೆ ನಾಗ್ಪುರ ಟೆಸ್ಟ್ನಲ್ಲಿ ಅಗರ್ ಅವರನ್ನು ಹೊರಗಿಟ್ಟು, ಟಾಡ್ ಮರ್ಫಿಗೆ ಚಾನ್ಸ್ ನೀಡಲಾಯಿತು.
ಇನ್ನು ದೆಹಲಿ ಟೆಸ್ಟ್ ಪಂದ್ಯದಿಂದಲೂ ಅಗರ್ ಅವರನ್ನು ಕೈ ಬಿಡಲಾಯಿತು. ಬದಲಾಗಿ ಮ್ಯಾಥ್ಯೂ ಕುಹ್ನೆಮನ್ಗೆ ಅವಕಾಶ ನೀಡಲಾಗಿತ್ತು. ಇದರಿಂದ ಟೀಮ್ ಮ್ಯಾನೇಜ್ಮೆಂಟ್ ವಿರುದ್ಧ ಅಷ್ಟನ್ ಅಗರ್ ಅಸಮಾಧಾನ ಹೊರಹಾಕಿದ್ದಾರೆ.
ಈ ಬಗ್ಗೆ ಆಸ್ಟ್ರೇಲಿಯಾದ ಆಯ್ಕೆಗಾರ ಟೋನಿ ಡೊಡೆಮೈಡ್ ಅವರೊಂದಿಗೆ ಚರ್ಚಿಸಿರುವ ಅಷ್ಟನ್ ಅಗರ್ ತಮ್ಮ ತಂಡದಿಂದ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದಾರೆ. ಅವರ ಕೋರಿಕೆಯಂತೆ ಇದೀಗ ಆಸ್ಟ್ರೇಲಿಯಾ ತಂಡದಿಂದ ಅನುಭವಿ ಆಲ್ರೌಂಡರ್ ಅನ್ನು ಕೈ ಬಿಡಲಾಗಿದೆ.
ಭಾರತದಲ್ಲಿ ಬೆಂಚ್ ಕಾಯುವ ಬದಲು ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಶೆಫೀಲ್ಡ್ ಶೀಲ್ಡ್ ಮತ್ತು ಮಾರ್ಷ್ ಕಪ್ನಲ್ಲಿ ಭಾಗವಹಿಸಲು ಅಷ್ಟನ್ ಅಗರ್ ನಿರ್ಧರಿಸಿದ್ದಾರೆ. ಅದರಂತೆ ಇಂದೋರ್ ಟೆಸ್ಟ್ಗೂ ಮುನ್ನ ಆಸೀಸ್ ತಂಡದ ಪ್ರಮುಖ ಸ್ಪಿನ್ನರ್ ತಂಡದಿಂದ ಹೊರನಡೆದಿರುವುದು ಖಚಿತವಾಗಿದೆ.
ಭಾರತದ ವಿರುದ್ಧದ ಟೆಸ್ಟ್ ಸರಣಿಯಿಂದ ಈಗಾಗಲೇ ಆಸ್ಟ್ರೇಲಿಯಾ ತಂಡದ ಪ್ರಮುಖ ಆಟಗಾರರಾದ ಡೇವಿಡ್ ವಾರ್ನರ್ ಹಾಗೂ ಜೋಶ್ ಹ್ಯಾಝಲ್ವುಡ್ ಹೊರಗುಳಿದಿದ್ದಾರೆ. ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಈ ಇಬ್ಬರು ಆಟಗಾರರು ತವರಿಗೆ ಮರಳಿದ್ದು, ಹೀಗಾಗಿ ಮುಂದಿನ 2 ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ. ಇದೀಗ ಅಗರ್ ಕೂಡ ಹೊರನಡೆದಿರುವುದು ಆಸ್ಟ್ರೇಲಿಯಾ ತಂಡಕ್ಕೆ ಹಿನ್ನಡೆಯನ್ನುಂಟು ಮಾಡಲಿದೆ.