
ಟೀಂ ಇಂಡಿಯಾದಲ್ಲಿ ಟೆಸ್ಟ್ ಸ್ಪೆಷಲಿಸ್ಟ್ ಎಂದೇ ಖ್ಯಾತರಾಗಿದ್ದ ಚೇತೇಶ್ವರ ಪೂಜಾರ ಕ್ರಿಕೆಟ್ನಿಂದ ನಿವೃತ್ತಿ ಘೋಷಿಸಿದ್ದಾರೆ. ಸುಮಾರು ಎರಡು ವರ್ಷಗಳ ಕಾಲ ಟೀಂ ಇಂಡಿಯಾದಿಂದ ಹೊರಗಿದ್ದ ಪೂಜಾರ ಎಲ್ಲಾ ಸ್ವರೂಪಗಳಿಂದ ನಿವೃತ್ತರಾಗಿದ್ದಾರೆ.

ಟೀಂ ಇಂಡಿಯಾದಲ್ಲಿ ಅವಕಾಶ ಸಿಗದ ಹೊರತಾಗಿಯೂ ದೇಶೀಯ ಕ್ರಿಕೆಟ್ ಆಡುತ್ತಿದ್ದ ಪೂಜಾರಗೆ ಇದೀಗ ದೇಶೀ ತಂಡದಲ್ಲೂ ಸ್ಥಾನ ಸಿಕ್ಕಿಲ್ಲ. ವಾಸ್ತವವಾಗಿ ಆಗಸ್ಟ್ 28 ರಿಂದ ಪ್ರಾರಂಭವಾಗುವ ದೇಶೀ ಟೂರ್ನಮೆಂಟ್ ದುಲೀಪ್ ಟ್ರೋಫಿಗೆ ಪೂಜಾರರನ್ನು ಆಯ್ಕೆ ಮಾಡಿಲ್ಲ. ಬಹುಶಃ ಅದಕ್ಕಾಗಿಯೇ ಪೂಜಾರ ನಿವೃತ್ತಿ ಘೋಷಿಸಿರಬಹುದು ಎಂಬುದು ಅನುಭವಿಗಳ ಅಭಿಪ್ರಾಯವಾಗಿದೆ.

ದುಲೀಪ್ ಟ್ರೋಫಿ ಆಗಸ್ಟ್ 28 ರಿಂದ ಆರಂಭವಾಗಲಿದೆ. ಈ ಟೂರ್ನಿಯಲ್ಲಿ ಚೇತೇಶ್ವರ ಪೂಜಾರ ಪಶ್ಚಿಮ ವಲಯದ ಪರ ಆಡುತ್ತಿದ್ದರು, ಆದರೆ ಈ ಬಾರಿ ಅವರಿಗೆ ತಂಡದಲ್ಲಿ ಸ್ಥಾನ ನೀಡಲಾಗಿಲ್ಲ. ಈ ತಂಡದ ನಾಯಕತ್ವವನ್ನು ಆಲ್ರೌಂಡರ್ ಶಾರ್ದೂಲ್ ಠಾಕೂರ್ ಅವರಿಗೆ ವಹಿಸಲಾಗಿದೆ.

ವಾಸ್ತವವಾಗಿ ಚೇತೇಶ್ವರ ಪೂಜಾರ ಈ ವರ್ಷದ ಫೆಬ್ರವರಿಯಲ್ಲಿ ಗುಜರಾತ್ ವಿರುದ್ಧ ತಮ್ಮ ಕೊನೆಯ ದೇಶೀಯ ಪಂದ್ಯವನ್ನು ಆಡಿದ್ದರು. ಇದಲ್ಲದೆ, ಅವರು ಸುಮಾರು ಎರಡು ವರ್ಷಗಳ ಕಾಲ ಟೀಂ ಇಂಡಿಯಾದಿಂದ ಹೊರಗಿದ್ದರು. ಪೂಜಾರ ಕೊನೆಯ ಬಾರಿಗೆ ಟೀಂ ಇಂಡಿಯಾ ಪರ ಆಸ್ಟ್ರೇಲಿಯಾ ವಿರುದ್ಧ 2021-23ರ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ (WTC) ಫೈನಲ್ನಲ್ಲಿ ಆಡಿದ್ದರು.

ಜೂನ್ 7, 2023 ರಂದು ಲಂಡನ್ನ ಓವಲ್ನಲ್ಲಿ ನಡೆದಿದ್ದ ಈ ಪಂದ್ಯವನ್ನು ಆಸ್ಟ್ರೇಲಿಯಾ 209 ರನ್ಗಳಿಂದ ಗೆದ್ದುಕೊಂಡು ಚಾಂಪಿಯನ್ ಪಟ್ಟವನ್ನು ಅಲಂಕರಿಸಿತ್ತು. ಈ ಪಂದ್ಯದಲ್ಲಿ ಪೂಜಾರ ವಿಶೇಷವಾದದ್ದೇನೂ ಮಾಡಲು ಸಾಧ್ಯವಾಗಲಿಲ್ಲ. ಮೊದಲ ಇನ್ನಿಂಗ್ಸ್ನಲ್ಲಿ 14 ರನ್ ಮತ್ತು ಎರಡನೇ ಇನ್ನಿಂಗ್ಸ್ನಲ್ಲಿ 27 ರನ್ ಬಾರಿಸಲಷ್ಟೇ ಶಕ್ತರಾಗಿದ್ದರು. ಅಂದಿನಿಂದ, ಅವರಿಗೆ ಮತ್ತೆ ಟೀಂ ಇಂಡಿಯಾದಲ್ಲಿ ಸ್ಥಾನ ಸಿಗಲಿಲ್ಲ.

2013 ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದೊಂದಿಗೆ ತಮ್ಮ ಟೆಸ್ಟ್ ವೃತ್ತಿಜೀವನವನ್ನು ಪ್ರಾರಂಭಿಸಿದ ಚೇತೇಶ್ವರ ಪೂಜಾರ, ಟೀಂ ಇಂಡಿಯಾ ಪರ 103 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಪೂಜಾರ 43.60 ಸರಾಸರಿಯಲ್ಲಿ 7195 ರನ್ ಗಳಿಸಿದ್ದಾರೆ. ಇದರಲ್ಲಿ 19 ಶತಕಗಳು ಮತ್ತು 35 ಅರ್ಧಶತಕಗಳು ಸೇರಿವೆ.

ಜಿಂಬಾಬ್ವೆ ವಿರುದ್ಧ ಏಕದಿನ ಕ್ರಿಕೆಟ್ ವೃತ್ತಿಜೀವನ ಆರಂಭಿಸಿದ ಪೂಜಾರ, ಟೀಂ ಇಂಡಿಯಾ ಪರ 5 ಏಕದಿನ ಪಂದ್ಯಗಳನ್ನು ಆಡಿದ್ದಾರೆ, ಇದರಲ್ಲಿ ಅವರು ಕೇವಲ 10.20 ರ ಸರಾಸರಿಯಲ್ಲಿ 51 ರನ್ ಗಳಿಸಿದ್ದಾರೆ. ಉಳಿದಂತೆ ಪ್ರಥಮ ದರ್ಜೆ ಪಂದ್ಯಗಳಲ್ಲಿ 21 ಸಾವಿರಕ್ಕೂ ಹೆಚ್ಚು ರನ್ ಗಳಿಸಿರುವ ಪೂಜಾರ 66 ಶತಕಗಳನ್ನು ಗಳಿಸಿದ್ದಾರೆ.