
ವೆಸ್ಟ್ ಇಂಡೀಸ್ ವಿರುದ್ಧದ ಭಾರತ ಏಕದಿನ ತಂಡಕ್ಕೆ ಜಯದೇವ್ ಉನದ್ಕಟ್ ಆಯ್ಕೆಯಾಗಿದ್ದಾರೆ. ಅವರಿಗೆ ಮತ್ತೊಮ್ಮೆ ಏಕದಿನ ತಂಡದಲ್ಲಿ ಅವಕಾಶ ಸಿಕ್ಕಿದ್ದು, 10 ವರ್ಷಗಳ ಕಾಯುವಿಕೆ ಕೊನೆಗೊಳ್ಳುತ್ತದೋ ಇಲ್ಲವೋ ಎಂಬುದು ಈಗ ಕುತೂಹಲ ಮೂಡಿಸಿದೆ.

ಶುಕ್ರವಾರ ಬಿಸಿಸಿಐ, ವೆಸ್ಟ್ ಇಂಡೀಸ್ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಗೆ ಭಾರತ ತಂಡವನ್ನು ಪ್ರಕಟಿಸಿದೆ. ಸಂಜು ಸ್ಯಾಮ್ಸನ್, ರುತುರಾಜ್ ಗಾಯಕ್ವಾಡ್ ಅವರೊಂದಿಗೆ ಉನದ್ಕಟ್ ಅವರನ್ನೂ ಸಹ ಏಕದಿನ ತಂಡಕ್ಕೆ ಆಯ್ಕೆ ಮಾಡಲಾಗಿದೆ. ಇವರೊಂದಿಗೆ ಮುಖೇಶ್ ಕುಮಾರ್ ಅವರಿಗೂ ಅವಕಾಶ ನೀಡಲಾಗಿದೆ.

ಕಳೆದ 10 ವರ್ಷಗಳಲ್ಲಿ ಮತ್ತೆ ನೀಲಿ ಜೆರ್ಸಿ ಧರಿಸಿ ಮೈದಾನಕ್ಕಿಳಿಯುವ ಕನಸು ಕಾಣುತ್ತಿರುವ ಉನದ್ಕಟ್ಗೆ ಈ ರಿಟರ್ನ್ ತುಂಬಾ ವಿಶೇಷವಾಗಿದೆ. ವಾಸ್ತವವಾಗಿ, ಉನದ್ಕಟ್ 10 ವರ್ಷಗಳ ಹಿಂದೆ ಭಾರತದ ಪರ ಕೊನೆಯ ಏಕದಿನ ಪಂದ್ಯವನ್ನ ಆಡಿದ್ದರು.

ಅಂದರೆ 2013 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಉನದ್ಕಟ್ ಟೀಂ ಇಂಡಿಯಾ ಪರ ಕಣಕ್ಕಿಳಿದಿದ್ದರು. ಅಂದಿನಿಂದ ಅವರಿಗೆ ಮತ್ತೆ ಏಕದಿನ ತಂಡದಲ್ಲಿ ಅವಕಾಶ ಸಿಕ್ಕಿರಲಿಲ್ಲ. ಈ ವರ್ಷದ ಫೆಬ್ರವರಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಗೆ ಉನದ್ಕಟ್ ಏಕದಿನ ತಂಡದಲ್ಲಿ ಸ್ಥಾನ ಪಡೆದಿದ್ದರು. ಆದರೆ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ಸಿಕ್ಕಿರಲಿಲ್ಲ.

ದೇಶೀಯ ಕ್ರಿಕೆಟ್ನಲ್ಲಿ ಅದ್ಭುತ ಪ್ರದರ್ಶನ ನೀಡಿರುವ ಉನದ್ಕಟ್ ಅವರ 10 ವರ್ಷಗಳ ಕಾಯುವಿಕೆ ಕೊನೆಗೊಂಡಿದೆ. ಇದೀಗ ವೆಸ್ಟ್ ಇಂಡೀಸ್ನಲ್ಲಿ ಅವರ ಕಾಯುವಿಕೆ ಕೊನೆಗೊಳ್ಳುತ್ತದೆಯೇ ಅಥವಾ ಇಲ್ಲವೇ ಎಂಬುದು ಈಗ ಕುತೂಹಲಕಾರಿಯಾಗಿದೆ.

ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯು ಭಾರತಕ್ಕೆ ಬಹಳ ಮುಖ್ಯವಾಗಿದೆ ಏಕೆಂದರೆ ಏಕದಿನ ವಿಶ್ವಕಪ್ ಈ ವರ್ಷ ಭಾರತದಲ್ಲಿ ನಡೆಯಲಿದೆ. ಇಂತಹ ಪರಿಸ್ಥಿತಿಯಲ್ಲಿ ಈ ಸರಣಿಯನ್ನು ವಿಶ್ವಕಪ್ನ ಕೊನೆಯ ಹಂತದ ತಯಾರಿಯ ಆರಂಭ ಎಂದೇ ಪರಿಗಣಿಸಲಾಗುತ್ತಿದೆ.

ಅಲ್ಲದೆ ವಿಶ್ವಕಪ್ ತಂಡದಲ್ಲಿ ತಮ್ಮ ಸ್ಥಾನವನ್ನು ಭದ್ರ ಪಡಿಸಿಕೊಳ್ಳಲು ಉನದ್ಕಟ್ ಅವರಿಗೆ ಉತ್ತಮ ಅವಕಾಶ. ಉನದ್ಕಟ್ ಇದುವರೆಗೆ ಭಾರತ ಪರ 7 ಏಕದಿನ ಪಂದ್ಯಗಳನ್ನು ಆಡಿದ್ದು, ಇದರಲ್ಲಿ 8 ವಿಕೆಟ್ ಪಡೆದಿದ್ದಾರೆ.