ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಅಂತಿಮ ಮೂರನೇ ಏಕದಿನ ಪಂದ್ಯ ಸೆಪ್ಟೆಂಬರ್ 27 ರಂದು ರಾಜ್ಕೋಟ್ನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆಯಲಿದೆ. ಇದಕ್ಕಾಗಿ ಟೀಮ್ ಇಂಡಿಯಾ ಆಟಗಾರರು ಸೋಮವಾರ ಸಂಜೆ ರಾಜ್ಕೋಟ್ಗೆ ತಲುಪಿದ್ದಾರೆ.
ವಿಶ್ರಾಂತಿಯಲ್ಲಿದ್ದ ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ, ಕುಲ್ದೀಪ್ ಯಾದವ್ ಹಾಗೂ ಇನ್ನೂ ಕೆಲ ಆಟಗಾರರು ಮೂರನೇ ಪಂದ್ಯದಲ್ಲಿ ಆಡಲಿದ್ದು, ತಂಡ ಸೇರಿಕೊಂಡಿದ್ದಾರೆ. ನಾಯಕ ರೋಹಿತ್ ಶರ್ಮಾ ಇಂದು ತಂಡ ಸೇರಿಕೊಳ್ಳುವ ಸಾಧ್ಯತೆ ಇದೆ. ಭಾರತದ ಇಬ್ಬರು ಆಟಗಾರರನ್ನು ಹೊರತು ಪಡಿಸಿ ಉಳಿದೆಲ್ಲ ಪ್ಲೇಯರ್ಸ್ ರಾಜ್ಕೋಟ್ಗೆ ಬಂದಿದ್ದಾರೆ. ಶುಭ್ಮನ್ ಗಿಲ್ ಹಾಗೂ ಶಾರ್ದೂಲ್ ಠಾಕೂರ್ಗೆ ರೆಸ್ಟ್ ನೀಡಲಾಗಿದೆ.
ಇಂದೋರ್ನಲ್ಲಿ ನಡೆದ ಎರಡನೇ ಏಕದಿನ ಪಂದ್ಯಕ್ಕೆ ಮಳೆ ಅಡ್ಡಿ ಪಡಿಸಿತ್ತು. ಆಸ್ಟ್ರೇಲಿಯಾ ಟಾರ್ಗೆಟ್ ಬೆನ್ನಟ್ಟುವ ನಡುವೆ ಮಳೆ ಬಂದ ಕಾರಣ ಡಕ್ವರ್ತ್ ಲೂಯಿಸ್ ನಿಯಮವನ್ನು ಅಳವಡಿಸಲಾಯಿತು. ಹಾಗಾದರೆ, ಇಂಡೋ-ಆಸೀಸ್ ತೃತೀಯ ಏಕದಿನಕ್ಕೆ ವರುಣನ ಕಾಟ ಇದೆಯೇ?, ರಾಜ್ಕೋಟ್ ಹವಾಮಾನ ಹೇಗಿದೆ ನೋಡೋಣ.
ಬುಧವಾರ (ಸೆಪ್ಟೆಂಬರ್ 27) ಹೆಚ್ಚಾಗಿ ಮೋಡ ಕವಿದ ವಾತಾವರಣ ಇರಲಿದೆ. ಇಂದು ಮಳೆ ಬೀಳುವ ನಿರೀಕ್ಷೆ ಇದ್ದು, ಪಂದ್ಯದ ದಿನ ಮಳೆಯ ಸಾಧ್ಯತೆ ಕಮ್ಮಿ. ಗರಿಷ್ಠ ತಾಪಮಾನವು 34 C ಆಗಿರಬಹುದು ಎಂದು ನಿರೀಕ್ಷಿಸಲಾಗಿದೆ, ಆದರೆ ದಿನದ ಆಟದ ಕೊನೆಯಲ್ಲಿ 25 C ಗೆ ಕಡಿಮೆಯಾಗುತ್ತದೆ.
ರಾಜ್ಕೋಟ್ನಲ್ಲಿ ಭಾನುವಾರ (ಸೆಪ್ಟೆಂಬರ್ 24) ದಿಂದ ಮಂಗಳವಾರ (ಸೆಪ್ಟೆಂಬರ್ 26) ವರೆಗೆ ಮಳೆಯಾಗುವ ಮುನ್ಸೂಚನೆ ನೀಡಲಾಗಿತ್ತು. ಆದರೆ ಪಂದ್ಯದ ದಿನ - ಬುಧವಾರ (ಸೆಪ್ಟೆಂಬರ್ 27) ಮಳೆ ಬೀಳುವ ಸಾಧ್ಯತೆ ಕೇವಲ 6 ಪ್ರತಿಶತದಷ್ಟು ಮಾತ್ರ. ಆದ್ದರಿಂದ, ಭಾರತ-ಆಸ್ಟ್ರೇಲಿಯಾ 3ನೇ ಏಕದಿನಕ್ಕೆ ಮಳೆಯ ಕಾಟ ಇರುವುದಿಲ್ಲ.
ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನ ಪಿಚ್ ಬಗ್ಗೆ ನೋಡುವುದಾದರೆ, ಭಾರತದಲ್ಲಿನ ಹೆಚ್ಚಿನ ಮೇಲ್ಮೈಗಳಂತೆ, SCA ಸ್ಟೇಡಿಯಂನಲ್ಲಿನ ವಿಕೆಟ್ಗಳು ಸಹ ಬ್ಯಾಟಿಂಗ್ ಸ್ನೇಹಿ ಆಗಿದೆ. ದೇಶೀಯ ಮತ್ತು ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಇಲ್ಲಿ ದೊಡ್ಡ ಸ್ಕೋರ್ ಆಗುತ್ತದೆ. ಇಲ್ಲಿಯವರೆಗೆ ನಡೆದ ಮೂರು ಏಕದಿನ ಪಂದ್ಯಗಳಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಂಡ ಎಲ್ಲ ಪಂದ್ಯಗಳನ್ನು ಗೆದ್ದಿದೆ.