
ಭಾರತ ಪ್ರವಾಸ ಕೈಗೊಳ್ಳುತ್ತಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ಇಂದು ಟೀಮ್ ಇಂಡಿಯಾ ಪ್ರಕಟವಾಗಲಿದೆ. ಒಂದೆಡೆ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಬೇಕು ಎಂದು ಆಯ್ಕೆ ಸಮಿತಿ ಈಗ ಯುವಕರಿಗೆ ಮಣೆ ಹಾಕೋದಕ್ಕೆ ಚಿಂತನೆ ನಡೆಸಿದೆ. ಇದರಲ್ಲಿ ಪ್ರಮುಖವಾಗಿ ತಿಲಕ್ ವರ್ಮಾ.

ಇಂಡಿಯನ್ ಪ್ರೀಮಿಯರ್ ಲೀಗ್ 15ನೇ ಸೀಸನ್ ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಮುಂಬೈ ಇಂಡಿಯನ್ಸ್ ತಂಡದ ಮಿಡಲ್ ಆರ್ಡರ್ ಬ್ಯಾಟರ್ ತಿಲಕ್ ವರ್ಮಾ ಟೀಮ್ ಇಂಡಿಯಾಗೆ ಆಯ್ಕೆಯಾಗುವ ಸಾಧ್ಯತೆ ಹೆಚ್ಚಾಗಿದೆ.

ಮುಂಬೈ ಇಂಡಿಯನ್ಸ್ನ ಯುವ ಆಟಗಾರ ತಿಲಕ್ ವರ್ಮಾ ಮುಂಬೈ ಪರ ಸ್ಥಿರ ಪ್ರದರ್ಶನ ನೀಡುತ್ತಾ ಗಮನ ಸೆಳೆದಿದ್ದಾರೆ. 14 ಪಂದ್ಯಗಳನ್ನು ಆಡಿದ್ದು ಎರಡು ಅರ್ಧಶತಕ ಸಿಡಿಸಿ 350ಕ್ಕೂ ಅಧಿಕ ರನ್ ಕಲೆಹಾಕಿದ್ದಾರೆ.

ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ತಿಲಕ್ ವರ್ಮಾ ಸದ್ಯದಲ್ಲೇ ಟೀಮ್ ಇಂಡಿಯಾ ಪರ ಮೂರು ಫಾರ್ಮೆಟ್ನಲ್ಲಿ ಆಡಬಲ್ಲರು ಎಂದು ಭವಿಷ್ಯ ನುಡಿದಿದ್ದರು. ಇದರ ಬೆನ್ನಲ್ಲೇ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ರೋಹಿತ್ , ಕೊಹ್ಲಿ, ಬುಮ್ರಾ ಸೇರಿದಂತೆ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡುತ್ತಿರುವುದು ತಿಲಕ್ ವರ್ಮಾ ಗೆ ವರದಾನವಾಗಲಿದೆ.

ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಈ ಸರಣಿ ಜೂನ್ 9ರಿಂದ ಆರಂಭವಾಗಲಿದೆ. ಐದು ಪಂದ್ಯಗಳ ಟಿ20 ಸರಣಿ ಇದಾಗಿದ್ದು ಐದು ಭಿನ್ನ ತಾಣಗಳಲ್ಲಿ ಈ ಸರಣೀ ಆಯೋಜನೆಯಾಗಲಿದೆ. ಮೊದಲ ಪಂದ್ಯ ಜೂನ್ 9ರಂದು ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಲಿದೆ.

ಇನ್ನು ಆರ್ ಸಿಬಿಯ ದಿನೇಶ್ ಕಾರ್ತಿಕ್ ಕೂಡ ಟೀಮ್ ಇಂಡಿಯಾಕ್ಕೆ ಕಮ್ ಬ್ಯಾಕ್ ಮಾಡಲಿದ್ದಾರೆ. ಆರ್ ಸಿಬಿ ಪರ ಇಡೀ ಸೀಸನ್ನಲ್ಲಿ ಉತ್ತಮ ಫಿನಿಷರ್ ಆಗಿ ಮಿಂಚುತ್ತಿರುವ ಹಿರಿಯ ವಿಕೆಟ್ ಕೀಪರ್ ಬ್ಯಾಟರ್ ದಿನೇಶ್ ಕಾರ್ತಿಕ್ ಆಯ್ಕೆ ಬಹುತೇಕ ಖಚಿತ ಎಂದು ಹೇಳಲಾಗಿದೆ. ಇವರ ಜೊತೆಗೆ ಹಾರ್ದಿಕ್ ಪಾಂಡ್ಯ, ಶಿಖರ್ ಧವನ್ ಕೂಡ ತಂಡ ಸೇರಿಕೊಳ್ಳಲಿದ್ದಾರೆ.