ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯನ್ನು ಸಮಬಲಗೊಳಿಸಿದ್ದ ಭಾರತ ತಂಡ ಇದೀಗ ಏಕದಿನ ಸರಣಿಯನ್ನು ಭರ್ಜರಿ ಆಗಿ ಆರಂಭಿಸಿದೆ. ಭಾನುವಾರ ಜೋಹಾನ್ಸ್ಬರ್ಗ್ನ ನ್ಯೂ ವಾಂಡರರ್ಸ್ ಸ್ಟೇಡಿಯಂನಲ್ಲಿ ನಡೆದ ಪ್ರಥಮ ಏಕದಿನ ಪಂದ್ಯದಲ್ಲಿ ಕೆಎಲ್ ರಾಹುಲ್ ಪಡೆ 8 ವಿಕೆಟ್ಗಳ ಅಮೋಘ ಗೆಲುವು ಕಂಡಿತು.
ಅರ್ಶ್ದೀಪ್ ಸಿಂಗ್-ಆವೇಶ್ ಖಾನ್ ಬೌಲಿಂಗ್ ಬಿರುಗಾಳಗೆ ತತ್ತರಿಸಿದ ಆಫ್ರಿಕಾ 116 ರನ್ಗಳಿಗೆ ಆಲೌಟ್ ಆದರೆ, ಭಾರತ 16.4 ಓವರ್ಗಳಲ್ಲಿ ಈ ಟಾರ್ಗೆಟ್ ಬೆನ್ನಟ್ಟಿತು. ಶ್ರೇಯಸ್ ಅಯ್ಯರ್ ಹಾಗೂ ಚೊಚ್ಚಲ ಅಂತರರಾಷ್ಟ್ರೀಯ ಪಂದ್ಯವನ್ನಾಡಿದ ಸಾಯಿ ಸುದರ್ಶನ್ ಅರ್ಧಶತಕ ಸಿಡಿಸಿದರು.
ಪಂದ್ಯ ಮುಗಿದ ಬಳಿಕ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ನಲ್ಲಿ ಮಾತನಾಡಿದ ಟೀಮ್ ಇಂಡಿಯಾ ನಾಯಕ ಕೆಎಲ್ ರಾಹುಲ್ ಕೆಲ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ಈ ಗೆಲುವು ತುಂಬಾ ಸಂತಸ ತಂದಿದೆ. ಇಲ್ಲಿ ನಾವು ನಿರೀಕ್ಷಿಸಿದ್ದಕ್ಕಿಂತ ಸಂಪೂರ್ಣವಾಗಿ ಭಿನ್ನವಾಗಿದೆ ಎಂದು ರಾಹುಲ್ ಹೇಳಿದ್ದಾರೆ.
ಸ್ಪಿನ್ನರ್ಗಳನ್ನು ಆಟದಲ್ಲಿ ತೊಡಗಿಸಿಕೊಳ್ಳುವುದು ನಮ್ಮ ಯೋಜನೆಯಾಗಿತ್ತು. ಆಟಗಾರರು ನಿಜವಾಗಿಯೂ ಉತ್ತಮ ಪ್ರದರ್ಶನ ತೋರಿದರು. ಶಿಸ್ತಿನಿಂದ ಚೆನ್ನಾಗಿ ತಮ್ಮ ಕೆಲಸ ನಿರ್ವಹಿಸಿದ್ದಾರೆ. ಚೆಂಡು ತುಂಬಾ ಸ್ವಿಂಗ್ ಆಗುತ್ತಿತ್ತು. ಪ್ರತಿಯೊಬ್ಬರೂ ದೇಶಕ್ಕಾಗಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ ಮತ್ತು ಪ್ರಯತ್ನಿಸುತ್ತಿದ್ದಾರೆ. ಅಂತರರಾಷ್ಟ್ರೀಯ ಕ್ರಿಕೆಟ್ನ ರುಚಿಯನ್ನು ಪಡೆಯಲು ಅವರಿಗೆ ಇದು ಉತ್ತಮ ಅವಕಾಶ ಎಂಬುದು ರಾಹುಲ್ ಮಾತು.
10 ಓವರ್ ಬೌಲಿಂಗ್ ಮಾಡಿ 37 ರನ್ ನೀಡಿ 5 ವಿಕೆಟ್ ಕಿತ್ತ ಅರ್ಶ್ದೀಪ್ ಸಿಂಗ್ ಪಂದ್ಯಶ್ರೇಷ್ಠ ಪ್ರಶಸ್ತಿ ಬಾಚಿಕೊಂಡರು. ಈ ಸಂದರ್ಭ ಮಾತನಾಡಿದ ಅವರು, ಈ ಕ್ಷಣವನ್ನು ತುಂಬಾ ಖುಷಿಯಾಗಿದೆ. ದೇವರಿಗೆ ಮತ್ತು ತಂಡಕ್ಕೆ ಧನ್ಯವಾದಗಳು. ಇದು ಸಾಮಾನ್ಯ ಮೈದಾನಕ್ಕಿಂತ ಸ್ವಲ್ಪ ಭಿನ್ನವಾಗಿದೆ. ಕೆಎಲ್ ರಾಹುಲ್ ಭಾಯ್ ಅವರಿಗೆ ಧನ್ಯವಾದ ಎಂದು ಹೇಳಿದ್ದಾರೆ.
ಸೋತ ತಂಡದ ನಾಯಕ ಐಡನ್ ಮಾರ್ಕ್ರಮ್ ಮಾತನಾಡಿ, ಟಾಸ್ ಗೆದ್ದು, ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿದ ನಾವು ಉತ್ತಮವಾಗಿ ಬ್ಯಾಟಿಂಗ್ ಮಾಡಲು ಬಯಸಿದ್ದೆವು. ಆದರೆ, ಭಾರತೀಯ ಬೌಲರ್ಗಳಿಗೆ ಶ್ರೇಯ ಸಲ್ಲಬೇಕು. ನಾವು ಮೊದಲ ಎಸೆತದಲ್ಲೇ ಹಿಂದೆ ಬಿದ್ದೆವು. ಚೇತರಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಅವರು ಉತ್ತಮವಾಗಿ ಬೌಲ್ ಮಾಡಿದರು ಎಂದು ಹೇಳಿದರು.