ಭಾರತ ಹಾಗೂ ಆಸ್ಟ್ರೇಲಿಯಾ (India vs Australia) ನಡುವಣ ದ್ವಿತೀಯ ಏಕದಿನ ಪಂದ್ಯವನ್ನು ಇಂದು ಆಯೋಜಿಸಲಾಗಿದೆ. ಇಂದೋರ್ನ ಹೋಲ್ಕರ್ ಕ್ರಿಕೆಟ್ ಸ್ಟೇಡಿಯಂ ಈ ಹೈವೋಲ್ಟೇಜ್ ಪಂದ್ಯಕ್ಕೆ ಸಾಕ್ಷಿಯಾಗಲಿದೆ.
ಈಗಾಗಲೇ ಮೊದಲ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ ಪ್ರದರ್ಶನ ತೋರಿ 5 ವಿಕೆಟ್ಗಳ ಜಯ ಸಾಧಿಸಿದೆ. ಹೀಗಾಗಿ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಮುನ್ನಡೆ ಪಡೆದುಕೊಂಡಿದೆ. ಇಂದಿನ ಪಂದ್ಯವನ್ನು ರಾಹುಲ್ ಪಡೆ ಗೆದ್ದರೆ ಸರಣಿ ವಶಪಡಿಸಿಕೊಳ್ಳಲಿದೆ.
ಭಾರತ ಪರ ಶ್ರೇಯಸ್ ಅಯ್ಯರ್ ಹಾಗೂ ರವಿಚಂದ್ರನ್ ಅಶ್ವಿನ್ಗೆ ಈ ಪಂದ್ಯ ಮಹತ್ವದ್ದಾಗಿದೆ. ಇಂಜುರಿಯಿಂದ ಕಮ್ಬ್ಯಾಕ್ ಮಾಡಿದ ಬಳಿಕ ಫಾರ್ಮ್ ಕಂಡುಕೊಳ್ಳಲು ಅಯ್ಯರ್ ಪರದಾಡುತ್ತಿದ್ದಾರೆ. ವಿಶ್ವಕಪ್ ದೃಷ್ಟಿಯಿಂದ ಶ್ರೇಯಸ್ ಮೇಲೆ ಸಾಕಷ್ಟು ಒತ್ತಡವಿದೆ.
ಇತ್ತ ಆಕಸ್ಮಿಕವಾಗಿ ಆಯ್ಕೆ ಆಗಿರುವ ಅಶ್ವಿನ್ ಮೊದಲ ಪಂದ್ಯದಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ತೋರಲಿಲ್ಲ. ವಿಶ್ವಕಪ್ಗೆ ಆಯ್ಕೆ ಆಗಬೇಕು ಎಂದರೆ ಅಶ್ವಿನ್ ಸ್ಪಿನ್ ಕೆಲಸ ಮಾಡಬೇಕಿದೆ. ರವೀಂದ್ರ ಜಡೇಜಾ ಕೂಡ ಬ್ಯಾಟಿಂಗ್ನಲ್ಲಿ ಕೊಡುಗೆ ಸಲ್ಲಿಸಬೇಕಿದೆ.
ಇಂದಿನ ಪಂದ್ಯಕ್ಕೆ ಕೆಎಲ್ ರಾಹುಲ್ ಅವರು ಮೊಹಮ್ಮದ್ ಶಮಿಗೆ ವಿಶ್ರಾಂತಿ ನೀಡಿ ಮೊಹಮ್ಮದ್ ಸಿರಾಜ್ ಅವರನ್ನು ಕರೆತರುವ ಮಾಸ್ಟರ್ ಪ್ಲಾನ್ ರೂಪಿಸಬಹುದು. ಏಷ್ಯಾಕಪ್ನಲ್ಲಿ ಮಾರಕ ದಾಳಿ ಸಂಘಟಿಸಿ ಸಿರಾಜ್ ವಿಶ್ವದ ನಂಬರ್ ಒನ್ ಬೌಲರ್ ಆಗಿದ್ದರು. ಇದೀಗ ತವರಿನಲ್ಲಿ ಯಾವರೀತಿ ಪ್ರದರ್ಶನ ನೀಡುತ್ತಾರೆ ನೋಡಬೇಕಿದೆ.
ಕಾಂಗರೂ ಪಡೆ ಸರಣಿ ವಶಪಡಿಸಿಕೊಳ್ಳಬೇಕಾದರೆ ಉಳಿದಿರುವ ಎರಡೂ ಪಂದ್ಯವನ್ನು ಗೆಲ್ಲಲೇ ಬೇಕಿದೆ. ತಂಡ ಉತ್ತಮ ಆರಂಭ ಪಡೆದುಕೊಳ್ಳುವಲ್ಲಿ ಎಡವುತ್ತಿದೆ. ಮಿಚೆಲ್ ಮಾರ್ಶ್ ಕಡೆಯಿಂದ ಉತ್ತಮ ಆಟ ಬರುತ್ತಿಲ್ಲ. ಮಧ್ಯಮ ಕ್ರಮಾಂಕದ ಬ್ಯಾಟರ್ಗಳು ತಂಡಕ್ಕೆ ಇನ್ನಷ್ಟು ಆಸರೆಯಾಗಬೇಕಿದೆ.
ಆಸ್ಟ್ರೇಲಿಯಾ ತಂಡದಲ್ಲಿ ಮಾರಕ ಬೌಲರ್ಗಳಿದ್ದರೂ ಪರಿಣಾಮಕಾರಿ ಆಗಿ ಗೋಚರಿಸುತ್ತಿಲ್ಲ. ಪ್ಯಾಟ್ ಕಮಿನ್ಸ್, ಸ್ಟೊಯಿನಿಸ್, ಝಂಪಾ, ಅಬಾಟ್ ಮೇಲೆ ಹೆಚ್ಚಿನ ಒತ್ತಡವಿದೆ. ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಆಸೀಸ್ ಬೌಲರ್ಗಳು ಎಡವಿದ್ದರು. ಮಿಚೆಲ್ ಸ್ಟಾರ್ಕ್ ಇಂದುಕೂಡ ಆಡದಿರುವುದು ತಂಡಕ್ಕೆ ದೊಡ್ಡ ಹಿನ್ನಡೆಯಾಗಿದೆ.