
ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟಿ20 ಸರಣಿ ನಡುವೆ ಟೀಮ್ ಇಂಡಿಯಾಗೆ ಗಾಯದ ಸಮಸ್ಯೆ ಎದುರಾಗಿದೆ. ತಂಡದ ಪ್ರಮುಖ ಆಲ್ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಗಾಯಗೊಂಡು ಇಡೀ ಸರಣಿಯಿಂದ ಹೊರಬಿದ್ದಿದ್ದಾರೆ. ಚೆನ್ನೈನಲ್ಲಿ ನಡೆದ ಅಭ್ಯಾಸದ ವೇಳೆ ನಿತೀಶ್ ಕುಮಾರ್ ಪಾರ್ಶ್ವದ ಒತ್ತಡಕ್ಕೆ ಒಳಗಾಗಿದ್ದರು.

ಈ ಗಾಯದ ಸಮಸ್ಯೆಯ ಕಾರಣ ನಿತೀಶ್ ಕುಮಾರ್ ರೆಡ್ಡಿ ಇಂಗ್ಲೆಂಡ್ ವಿರುದ್ಧದ ಸರಣಿಯಿಂದ ಹೊರಗುಳಿದಿದ್ದಾರೆ. ಅಲ್ಲದೆ ಶೀಘ್ರದಲ್ಲೇ ಬೆಂಗಳೂರಿನ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ಚಿಕಿತ್ಸೆ ಪಡೆಯಲಿದ್ದಾರೆ ಎಂದು ಬಿಸಿಸಿಐ ತನ್ನ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.

ಇನ್ನು ಕೊಲ್ಕತ್ತಾದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಅದ್ಭುತ ಕ್ಯಾಚ್ ಹಿಡಿದು ಮಿಂಚಿದ್ದ ರಿಂಕು ಸಿಂಗ್ ಕೂಡ ಗಾಯದ ಸಮಸ್ಯೆಗೆ ಒಳಗಾಗಿದ್ದಾರೆ. ಫೀಲ್ಡಿಂಗ್ ವೇಳೆ ರಿಂಕು ಸಿಂಗ್ ಬೆನ್ನಿನ ಸೆಳೆತಕ್ಕೆ ಒಳಗಾಗಿದ್ದು, ಹೀಗಾಗಿ ಅವರು 2ನೇ ಮತ್ತು 3ನೇ ಟಿ20 ಪಂದ್ಯಗಳಲ್ಲಿ ಕಣಕ್ಕಿಳಿಯುವುದಿಲ್ಲ ಎಂದು ಬಿಸಿಸಿಐ ತಿಳಿಸಿದೆ. ಅಲ್ಲದೆ ಅವರ ಫಿಟ್ನೆಸ್ ಪರಿಶೀಲಿಸಿ ಮುಂದಿನ ಪಂದ್ಯದಲ್ಲಿ ಕಣಕ್ಕಿಳಿಸಲು ನಿರ್ಧರಿಸಲಾಗಿದೆ.

ಇತ್ತ ಇಬ್ಬರು ಆಟಗಾರರು ಹೊರಬೀಳುತ್ತಿದ್ದಂತೆ ಭಾರತ ತಂಡಕ್ಕೆ ಮತ್ತಿಬ್ಬರು ಆಲ್ರೌಂಡರ್ಗಳ ಎಂಟ್ರಿಯಾಗಿದೆ. ಅದರಂತೆ ನಿತೀಶ್ ಕುಮಾರ್ ರೆಡ್ಡಿ ಸ್ಥಾನಕ್ಕೆ ಅನುಭವಿ ಆಟಗಾರ ಶಿವಂ ದುಬೆ ಆಯ್ಕೆಯಾಗಿದ್ದಾರೆ. 2024 ರಲ್ಲಿ ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಕೊನೆಯ ಬಾರಿ ಕಾಣಿಸಿಕೊಂಡಿದ್ದ ಶಿವಂ ದುಬೆ ರಾಜ್ಕೋಟ್ನಲ್ಲಿ ನಡೆಯಲಿರುವ ಮೂರನೇ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾವನ್ನು ಕೂಡಿಕೊಳ್ಳಲಿದ್ದಾರೆ.

ಹಾಗೆಯೇ ರಿಂಕು ಸಿಂಗ್ ಬದಲಿಗೆ ಆಲ್ರೌಂಡರ್ ರಮಣ್ದೀಪ್ ಸಿಂಗ್ ಅವರನ್ನು ಆಯ್ಕೆ ಮಾಡಲಾಗಿದೆ. 2024 ರಲ್ಲಿ ಸೌತ್ ಆಫ್ರಿಕಾ ವಿರುದ್ಧದ ಸರಣಿಯಲ್ಲಿ 2 ಪಂದ್ಯಗಳನ್ನಾಡಿದ್ದ ರಮಣ್ದೀಪ್ಗೆ ಬುಲಾವ್ ನೀಡಲಾಗಿದ್ದು, ಈಗಾಗಲೇ ಅವರು ಟೀಮ್ ಇಂಡಿಯಾವನ್ನು ಸೇರಿಸಿಕೊಂಡಿದ್ದಾರೆ.

ಭಾರತ ಟಿ20 ತಂಡ: ಸೂರ್ಯಕುಮಾರ್ ಯಾದವ್ (ನಾಯಕ), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್ (ಉಪಾನಾಯಕ), ಹರ್ಷಿತ್ ರಾಣಾ, ಅರ್ಷದೀಪ್ ಸಿಂಗ್, ಮೊಹಮ್ಮದ್ ಶಮಿ, ವರುಣ್ ಚಕ್ರವರ್ತಿ, ರವಿ ಬಿಷ್ಣೋಯ್, ವಾಷಿಂಗ್ಟನ್ ಸುಂದರ್, ಧ್ರುವ್ ಜುರೇಲ್ (ವಿಕೆಟ್ ಕೀಪರ್), ರಮಣ್ದೀಪ್ ಸಿಂಗ್, ರಿಂಕು ಸಿಂಗ್ (3ನೇ ಪಂದ್ಯಕ್ಕೆ ಅಲಭ್ಯ).