IPL 2023: ಭಾನುವಾರ ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಗುಜರಾತ್ ಟೈಟಾನ್ಸ್ ವಿರುದ್ದದ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು ಐತಿಹಾಸಿಕ ಗೆಲುವು ದಾಖಲಿಸಿತ್ತು. ಈ ಗೆಲುವಿನ ರುವಾರಿ ಸತತ ಐದು ಸಿಕ್ಸ್ಗಳ ಸರದಾರ ರಿಂಕು ಸಿಂಗ್.
ಕೊನೆಯ ಓವರ್ನಲ್ಲಿ 29 ರನ್ಗಳ ಕಠಿಣ ಗುರಿ ಪಡೆದಿದ್ದ ಕೆಕೆಆರ್ ತಂಡಕ್ಕೆ 5 ಭರ್ಜರಿ ಸಿಕ್ಸ್ ಸಿಡಿಸಿ ರಿಂಕು ಸಿಂಗ್ ಸ್ಮರಣೀಯ ಗೆಲುವು ತಂದುಕೊಟ್ಟಿದ್ದರು. ಈ ಅಮೋಘ ಗೆಲುವಿನೊಂದಿಗೆ 25 ವರ್ಷದ ರಿಂಕು ಸಿಂಗ್ ಮನೆಮಾತಾಗಿದ್ದಾರೆ.
ಉತ್ತರ ಪ್ರದೇಶದ ಅಲಿಗಢ ಮೂಲದ ರಿಂಕು ಸಿಂಗ್ ಕೆಳ ಮಧ್ಯಮ ವರ್ಗದ ಕುಟುಂಬದಿಂದ ಬೆಳೆದು ಬಂದ ಆಟಗಾರ. ಅದರಲ್ಲೂ ಬಾಲ್ಯದಲ್ಲೇ ಕಷ್ಟಕಾರ್ಪಣ್ಯಗಳನ್ನು ಮೆಟ್ಟಿ ನಿಂತು ಗುರಿ ಮುಟ್ಟಿದ ಯುವ ಆಟಗಾರ. ಏಕೆಂದರೆ ರಿಂಕು ಸಿಂಗ್ ಉತ್ತರ ಪ್ರದೇಶದ ಪರ ಅಂಡರ್ 19 ಆಡುವಾಗ ದೈನಂದಿನ ಭತ್ಯೆಗಾಗಿ ಗುಡಿಸುವ ಕೆಲಸನ್ನು ಮಾಡುತ್ತಿದ್ದರು. ಆದರೆ ಐಪಿಎಲ್ನಲ್ಲಿ ಅವಕಾಶ ಪಡೆದ ಬಳಿಕ ಎಲ್ಲವೂ ಬದಲಾಗಿದೆ. ಆದರೆ...
ಆದರೆ ತಾನು ಬೆಳೆದ ಬಂದ ಹಾದಿಯನ್ನೂ ಮಾತ್ರ ಮರೆತಿಲ್ಲ ಎಂಬುದಕ್ಕೆ ರಿಂಕು ಸಿಂಗ್ ಆಡಿರುವ ಮಾತುಗಳೇ ಸಾಕ್ಷಿ. ಭರ್ಜರಿ ಗೆಲುವಿನ ಬಳಿಕ ಮಾತನಾಡಿದ ರಿಂಕು ಸಿಂಗ್, ನನ್ನ ತಂದೆ ಸಾಕಷ್ಟು ಕಷ್ಟಪಟ್ಟಿದ್ದಾರೆ, ನನ್ನದು ರೈತ ಕುಟುಂಬ. ನಾನು ಈ ಪಿಚ್ನಿಂದ ಬಾರಿಸಿದ ಪ್ರತಿ ಹೊಡೆತಗಳು ನನ್ನ ಬೆಳವಣಿಗೆಗೆ ತ್ಯಾಗ ಮಾಡಿದ ಪ್ರತಿಯೊಬ್ಬರಿಗೂ ಅರ್ಪಿಸುತ್ತಿದ್ದೇನೆ ಎಂದು ರಿಂಕು ಸಿಂಗ್ ಹೇಳಿದ್ದಾರೆ.
ಅಂದಹಾಗೆ ರಿಂಕು ಸಿಂಗ್ ಅವರ ತಂದೆ ಸಿಲಿಂಡರ್ ವಿತರಕ. ಮನೆಮನೆಗೆ ತೆರಳಿ ಗ್ಯಾಸ್ ಸಿಲಿಂಡರ್ಗಳನ್ನು ಹಂಚುತ್ತಿದ್ದರು. ಹಾಗೆಯೇ ಅವರ ಅಣ್ಣ ಆಟೋ ಡ್ರೈವರ್. ಇತ್ತ ಕ್ರಿಕೆಟಿಗನಾಗಬೇಕೆಂಬ ಕನಸು ಹೊತ್ತಿದ್ದ ರಿಂಕು ಸಿಂಗ್ಗೆ ಆರ್ಥಿಕ ಸಮಸ್ಯೆಯೇ ದೊಡ್ಡ ಸವಾಲಾಗಿತ್ತು.
ಇದಾಗ್ಯೂ ಕನಸು ನನಸು ಮಾಡಬೇಕೆಂಬ ಛಲದೊಂದಿಗೆ ಮೈದಾನಕ್ಕಿಳಿಯುತ್ತಿದ್ದ ರಿಂಕು ಸಿಂಗ್, ಕೋಚಿಂಗ್ ಸೆಂಟರ್ ಒಂದರಲ್ಲಿ ಕಸ ಗುಡಿಸಿ ಒರೆಸುವ ಕೆಲಸ ಮಾಡುತ್ತಾ ಹಣ ಹೊಂದಿಸಿಕೊಳ್ಳುತ್ತಿದ್ದರು. ಇದೀಗ ಅಂದಿನ ಪರಿಶ್ರಮಕ್ಕೆ ತಕ್ಕದಾದ ಫಲ ಸಿಕ್ಕಿದೆ. ಒಂದೇ ಒಂದು ಪಂದ್ಯದ ಮೂಲಕ ರಿಂಕು ಸಿಂಗ್ ಹೊಸ ಹೀರೋ ಆಗಿದ್ದಾರೆ.
ಯುವ ಆಟಗಾರನ ಪ್ರದರ್ಶನಕ್ಕೆ ವಿಶ್ವದಾದ್ಯಂತದಿಂದ ಭರಪೂರ ಅಭಿನಂದನೆಗಳ ಸುರಿಮಳೆಯಾಗುತ್ತಿದೆ. ಇದರ ನಡುವೆ ರಿಂಕು ಸಿಂಗ್ ತನ್ನ ಕಷ್ಟಕಾಲದಲ್ಲಿ ಸಹಾಯಕ್ಕೆ ನಿಂತ ಪ್ರತಿಯೊಬ್ಬರಿಗೂ ತಾನು ಬಾರಿಸಿದ ಪ್ರತಿಯೊಂದು ಹೊಡೆತಗಳನ್ನು ಸರ್ಮಪಿಸುವ ಮೂಲಕ ಎಲ್ಲರ ಮನಗೆದ್ದಿರುವುದು ವಿಶೇಷ.