ಐಸಿಸಿ ಏಕದಿನ ವಿಶ್ವಕಪ್ನಲ್ಲಿ ಗುರುವಾರ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಭಾರತ 302 ರನ್ಗಳ ಅಮೋಘ ಗೆಲುವು ಕಂಡಿತು. ಕೊಹ್ಲಿ, ಗಿಲ್, ಅಯ್ಯರ್ ಅರ್ಧಶತಕ ಒಂದುಕಡೆಯಾದರೆ ಬೌಲಿಂಗ್ನಲ್ಲಿ ಸಿರಾಜ್, ಶಮಿ ಮಾರಕ ದಾಳಿ ಸಂಘಟಿಸಿ ಲಂಕಾವನ್ನು 55 ರನ್ಗಳಿಗೆ ಆಲೌಟ್ ಮಾಡಿದರು.
ದಾಖಲೆಯ ಜಯದೊಂದಿಗೆ ಭಾರತ ತಂಡ ಇದೀಗ ಐಸಿಸಿ ಏಕದಿನ ವಿಶ್ವಕಪ್ 2023ರಲ್ಲಿ ಸೆಮಿ ಫೈನಲ್ ಪ್ರವೇಶಿಸಿದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಪಂದ್ಯ ಮುಗಿದ ಬಳಿಕ ಮಾತನಾಡಿದ ನಾಯಕ ರೋಹಿತ್ ಶರ್ಮಾ ಕೆಲ ಮಾಹಿತಿ ಹಂಚಿಕೊಂಡಿದ್ದಾರೆ. ಏನು ಹೇಳಿದ್ದಾರೆ ನೋಡಿ.
ನಾವು ಸೆಮಿ ಫೈನಲ್ಗೆ ಅಧಿಕೃತವಾಗಿ ಅರ್ಹತೆ ಪಡೆದಿದ್ದೇವೆ ಎಂದು ತಿಳಿದು ತುಂಬಾ ಸಂತೋಷವಾಗಿದೆ. ನಾವು ಚೆನ್ನೈನಲ್ಲಿ ಪಂದ್ಯವನ್ನು ಆರಂಭಿಸಿದಾಗಿನಿಂದ ಉತ್ತಮ ಪ್ರಯತ್ನ ಪಟ್ಟು ಇಲ್ಲಿಗೆ ಬಂದಿದ್ದೇವೆ. ಮೊದಲು ಸೆಮೀಸ್ಗೆ ಅರ್ಹತೆ ಪಡೆದು ನಂತರ ಫೈನಲ್ಗೇರುವುದು ನಮ್ಮ ಗುರಿಯಾಗಿದೆ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.
ನಾವು ಎಲ್ಲ 7 ಪಂದ್ಯಗಳಲ್ಲಿ ಗೆದ್ದಿದ್ದೇವೆ. ಇದಕ್ಕೆ ತಂಡದಲ್ಲಿರುವ ಎಲ್ಲರೂ ಪ್ರಯತ್ನ ಪಟ್ಟಿದ್ದಾರೆ. ಯಾವುದೇ ಪಿಚ್ನಲ್ಲಿ 350 ಉತ್ತಮ ಸ್ಕೋರ್ ಆಗಿದೆ. ನಮ್ಮ ಬ್ಯಾಟರ್ಗಳು ಆ ಸ್ಕೋರ್ ಗಳಿಸಿದ್ದಾರೆ. ಬ್ಯಾಟಿಂಗ್ ಘಟಕಕ್ಕೆ ಬಹಳಷ್ಟು ಕ್ರೆಡಿಟ್ ನೀಡಬೇಕು. ಮತ್ತು ಬೌಲರ್ಗಳು ತಮ್ಮ ಕೆಲಸವನ್ನು ನಿಸ್ಸಂಶಯವಾಗಿ ಮಾಡಿದ್ದಾರೆ- ರೋಹಿತ್ ಶರ್ಮಾ.
ಶ್ರೇಯಸ್ ಅಯ್ಯರ್ ಕುಗ್ಗುವಂತಹ ಆಟಗಾರ ಅಲ್ಲ. ಅವರ ಇಂದಿನ ಆಟ ಅದ್ಭುತವಾಗಿತ್ತು. ಆರೀತಿಯ ಆಟವನ್ನು ನಾವು ನಿರೀಕ್ಷಿಸುತ್ತೇವೆ. ಸಿರಾಜ್ ನಮಗೆ ಸಿಕ್ಕ ಗುಣಮಟ್ಟದ ಬೌಲರ್. ಅವರು ಹೊಸ ಚೆಂಡಿನಲ್ಲಿ ಬೌಲಿಂಗ್ ಮಾಡುವಾಗ ವಿಭಿನ್ನವಾಗಿ ಕಾಣುತ್ತಾರೆ. ಹೊಸ ಚೆಂಡಿನಲ್ಲಿ ಸಿರಾಜ್ ಸಾಕಷ್ಟು ಕೌಶಲ್ಯಗಳನ್ನು ಪಡೆದಿದ್ದಾರೆ ಎಂಬುದು ರೋಹಿತ್ ಶರ್ಮಾ ಮಾತು.
ಡಿಆರ್ಎಸ್ ತೆಗೆದುಕೊಳ್ಳುವ ನಿರ್ಧಾರವನ್ನು ನಾನು ಬೌಲರ್ ಮತ್ತು ಕೀಪರ್ಗೆ ಬಿಟ್ಟಿದ್ದೇನೆ. ಇದರಿಂದ ಸರಿ ಮತ್ತು ತಪ್ಪು ಎರಡೂ ಆಗಿದೆ. ದಕ್ಷಿಣ ಆಫ್ರಿಕಾ ಉತ್ತಮ ಕ್ರಿಕೆಟ್ ಆಡುತ್ತಿದೆ. ನಮ್ಮ ಮತ್ತು ಅವರ ಕಾಳಗ ಕೋಲ್ಕತ್ತಾ ಜನರಿಗೆ ಖುಷಿ ತರುವ ನಿರೀಕ್ಷೆ ಇದೆ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.
ಗುರುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ಗಿಲ್ ಅವರ 92, ಕೊಹ್ಲಿ 88 ಹಾಗೂ ಅಯ್ಯರ್ ಅವರ 82 ರನ್ಗಳ ನೆರವಿನಿಂದ 50 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 357 ರನ್ ಗಳಿಸಿತು. ಟಾರ್ಗೆಟ್ ಬೆನ್ನಟ್ಟಿದ ಶ್ರೀಲಂಕಾ ಮೊಹಮ್ಮದ್ ಶಮಿ (5 ವಿಕೆಟ್) ಹಾಗೂ ಮೊಹಮ್ಮದ್ ಸಿರಾಜ್ (3 ವಿಕೆಟ್) ಬೌಲಿಂಗ್ ದಾಳಿಗೆ ತತ್ತರಿಸಿ 55 ರನ್ಗಳಿಗೆ ಆಲೌಟ್ ಆಯಿತು.