ಟೀಂ ಇಂಡಿಯಾದ ಶ್ರೀಲಂಕಾ ಪ್ರವಾಸ ಇತ್ತೀಚೆಗಷ್ಟೇ ಮುಕ್ತಾಯವಾಗಿದೆ. ಈ ಪ್ರವಾಸದಲ್ಲಿ, ಉಭಯ ತಂಡಗಳ ನಡುವೆ 3 ಟಿ20 ಮತ್ತು 3 ಏಕದಿನ ಪಂದ್ಯಗಳ ಸರಣಿಯನ್ನು ಆಡಲಾಯಿತು. ಟಿ20 ಸರಣಿಯನ್ನು ಟೀಂ ಇಂಡಿಯಾ ಗೆದ್ದುಕೊಂಡರೆ, ಏಕದಿನ ಸರಣಿಯಲ್ಲಿ ಶ್ರೀಲಂಕಾ 27 ವರ್ಷಗಳ ನಂತರ ಭಾರತವನ್ನು ಸೋಲಿಸಿದ ಐತಿಹಾಸಿಕ ಸಾಧನೆ ಮಾಡಿತ್ತು.
ಆದರೆ ಈ ಸಂತಸದ ಕ್ಷಣದ ನಡುವೆ ಶ್ರೀಲಂಕಾ ತಂಡಕ್ಕೆ ಆಘಾತಕ್ಕಾರಿ ಸುದ್ದಿಯೊಂದು ಎದುರಾಗಿದೆ. ತಂಡದ ಆಟಗಾರನ ವಿರುದ್ಧ ಮ್ಯಾಚ್ ಫಿಕ್ಸಿಂಗ್ ಆರೋಪ ಕೇಳಿಬಂದಿದ್ದು, ಇದೀಗ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಈ ಆರೋಪಕ್ಕೆ ಸಂಬಂಧಿಸಿದಂತೆ ಆ ಆಟಗಾರನಿಗೆ ಪ್ರತಿಕ್ರಿಯಿಸಲು ಕಾಲಾವಕಾಶ ನೀಡಿದೆ.
ಶ್ರೀಲಂಕಾದ ಸ್ಪಿನ್ನರ್ ಪ್ರವೀಣ್ ಜಯವಿಕ್ರಮ ವಿರುದ್ಧ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಭ್ರಷ್ಟಾಚಾರ ನಿಗ್ರಹ ಸಂಹಿತೆ ಉಲ್ಲಂಘನೆ ಆರೋಪ ಹೊರಿಸಿದೆ. ಐಸಿಸಿ, 25 ವರ್ಷದ ಜಯವಿಕ್ರಮ ವಿರುದ್ಧ ಮೂರು ವಿಭಿನ್ನ ಕೋಡ್ಗಳನ್ನು ಉಲ್ಲಂಘಿಸಿದ ಆರೋಪ ಹೊರಿಸಿದ್ದು, ಅಂತರಾಷ್ಟ್ರೀಯ ಕ್ರಿಕೆಟ್ ಜೊತೆಗೆ, 2021 ರ ಲಂಕಾ ಪ್ರೀಮಿಯರ್ ಲೀಗ್ನಲ್ಲೂ ಅವರು ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂಬಆರೋಪವನ್ನು ಹೊರಿಸಲಾಗಿದೆ.
ಆರ್ಟಿಕಲ್ 2.4.4 ಮತ್ತು ಆರ್ಟಿಕಲ್ 2.4.7 ರ ಅಡಿಯಲ್ಲಿ ಐಸಿಸಿ, ಪ್ರವೀಣ್ ಜಯವಿಕ್ರಮ ಮೇಲೆ ಆರೋಪ ಹೊರಿಸಿದೆ. ಹೀಗಾಗಿ ತನ್ನ ವಿರುದ್ಧದ ಆರೋಪಗಳಿಗೆ ಉತ್ತರಿಸಲು ಪ್ರವೀಣ್ ಜಯವಿಕ್ರಮಗೆ ಎರಡು ವಾರಗಳ ಕಾಲಾವಕಾಶ ನೀಡಲಾಗಿದೆ. ಅಂದರೆ ಆಗಸ್ಟ್ 6 ರಿಂದ ಆಗಸ್ಟ್ 20 ರೊಳಗೆ ಜಯವಿಕ್ರಮ ಈ ಆರೋಪಗಳಿಗೆ ಉತ್ತರಿಸಬೇಕಾಗಿದೆ.
ವಾಸ್ತವವಾಗಿ, 2021 ರ ಲಂಕಾ ಪ್ರೀಮಿಯರ್ ಲೀಗ್ ವೇಳೆ ಫಿಕ್ಸಿಂಗ್ ಮಾಡಲು ಇನ್ನೊಬ್ಬ ಆಟಗಾರನನ್ನು ಸಂಪರ್ಕಿಸಲು ಭ್ರಷ್ಟ ವ್ಯಕ್ತಿಯೊಬ್ಬರು ಪ್ರವೀಣ್ ಜಯವಿಕ್ರಮ ಅವರನ್ನು ಕೇಳಿದ್ದರಂತೆ. ಆದರೆ ಈ ಬಗ್ಗೆ ಭ್ರಷ್ಟಾಚಾರ ನಿಗ್ರಹ ದಳಕ್ಕೆ ಜಯವಿಕ್ರಮ ಯಾವುದೇ ಮಾಹಿತಿ ನೀಡಿಲ್ಲ. ಇದಲ್ಲದೇ ಭ್ರಷ್ಟಾಚಾರ ನಿಗ್ರಹ ದಳದ ತನಿಖೆಗೂ ಅವರು ಅಡ್ಡಿಪಡಿಸಿದ್ದು, ಈ ಹಿನ್ನೆಲೆಯಲ್ಲಿ ಐಸಿಸಿ ಈ ಕ್ರಮ ಕೈಗೊಂಡಿದೆ.
ಪ್ರವೀಣ್ ಜಯವಿಕ್ರಮ ಶ್ರೀಲಂಕಾ ತಂಡದ ಪರ ಎಲ್ಲಾ ಮೂರು ಸ್ವರೂಪಗಳಲ್ಲಿ ಆಡಿದ್ದಾರೆ. ಇಲ್ಲಿಯವರೆಗೆ ಅವರು 5 ಟೆಸ್ಟ್, 5 ಏಕದಿನ ಮತ್ತು 5 ಟಿ20 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಟೆಸ್ಟ್ನಲ್ಲಿ 25 ವಿಕೆಟ್ಗಳನ್ನು ಪಡೆದಿರುವ ಅವರು, ಏಕದಿನದಲ್ಲಿ 5 ಮತ್ತು ಟಿ20ಯಲ್ಲಿ 2 ವಿಕೆಟ್ ಪಡೆದಿದ್ದಾರೆ. ಪ್ರವೀಣ್ ಜಯವಿಕ್ರಮ ಭಾರತದ ವಿರುದ್ಧವೂ 4 ಪಂದ್ಯಗಳನ್ನು ಆಡಿದ್ದು, ಅದರಲ್ಲಿ 10 ವಿಕೆಟ್ ಪಡೆದಿದ್ದಾರೆ.