
ಸೀನಿಯರ್ ಪುರುಷರ ವಿಶ್ವಕಪ್ ನಂತರ ಇದೀಗ ಅಂಡರ್ 19 ಏಕದಿನ ವಿಶ್ವಕಪ್ನಲ್ಲೂ ಆಸ್ಟ್ರೇಲಿಯಾ ತಂಡ ಭಾರತದ ಟ್ರೋಫಿ ಗೆಲ್ಲುವ ಕನಸನ್ನು ಮುರಿದಿದೆ. ಟೀಮ್ ಇಂಡಿಯಾವನ್ನು 79 ರನ್ಗಳಿಂದ ಸೋಲಿಸಿದ ಆಸ್ಟ್ರೇಲಿಯಾ ನಾಲ್ಕನೇ ಬಾರಿಗೆ U19 ವಿಶ್ವಕಪ್ ಗೆದ್ದ ಸಾಧನೆ ಮಾಡಿತು.

ಫೈನಲ್ನಲ್ಲಿ ಟೀಮ್ ಇಂಡಿಯಾ ಗೆಲುವಿಗೆ 254 ರನ್ಗಳ ಸವಾಲನ್ನು ಆಸ್ಟ್ರೇಲಿಯಾ ನೀಡಿತ್ತು. ಆದರೆ, ಆಸ್ಟ್ರೇಲಿಯದ ಬೌಲರ್ಗಳ ಮುಂದೆ ಮಂಡಿ ಊರಿದ ಭಾರತ 43.5 ಓವರ್ಗಳಲ್ಲಿ 174 ರನ್ಗಳಿಗೆ ಆಯಿತು. ಇದರೊಂದಿಗೆ ಆಸ್ಟ್ರೇಲಿಯ 2010ರ ನಂತರ ಮೊದಲ ಬಾರಿಗೆ ವಿಶ್ವಕಪ್ ಗೆದ್ದಿದೆ.

ಆದರೆ, ಪಂದ್ಯ ಮುಗಿದ ಬಳಿಕ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ ವೇಳೆ ಮಾತನಾಡಿದ ಟೀಮ್ ಇಂಡಿಯಾ ನಾಯಕ ಉದಯ್ ಸಹರಾನ್ ಅಚ್ಚುಕಟ್ಟಾಗಿ ಮಾತನಾಡಿದ್ದಾರೆ. ಸೋತರೂ ಎದೆಗುಂದದ ಉದಯ್, ನಮ್ಮ ಹುಡುಗರ ಬಗ್ಗೆ ನನಗೆ ಹೆಮ್ಮೆ ಇದೆ, ಅವರು ಚೆನ್ನಾಗಿ ಆಡಿದ್ದಾರೆ ಎಂದು ಹೇಳಿದ್ದಾರೆ.

ನಮ್ಮ ತಂಡದ ಆಟಗಾರರು ಟೂರ್ನಿಯುದ್ದಕ್ಕೂ ಉತ್ತಮ ಹೋರಾಟದ ಮನೋಭಾವ ತೋರಿದರು. ನಾವು ಇಂದು ಕೆಲವು ಅನಗತ್ಯ ಶಾಟ್ಗಳನ್ನು ಆಡಿದ್ದೇವೆ, ಓವರ್ಗಳ ಮಧ್ಯದಲ್ಲಿ ನಿಂತು ಆಡಲಿಲ್ಲ. ನಾವು ಫೈನಲ್ ಪಂದ್ಯಕ್ಕೆ ಎಲ್ಲ ಯೋಜನೆ ರೂಪಿಸಿದ್ದೆವು. ಆದರೆ ಯೋಜನೆಗಳನ್ನು ಕಾರ್ಯಗತಗೊಳಿಸಲು ಸಾಧ್ಯವಾಗಲಿಲ್ಲ ಎಂದು ಉದಯ್ ಸಹರಾನ್ ಹೇಳಿದ್ದಾರೆ.

ಅಂಡರ್-19 ವಿಶ್ವಕಪ್ ಪಂದ್ಯಾವಳಿಯಿಂದ ಸಾಕಷ್ಟು ಕಲಿತಿದ್ದೇವೆ. ಸಹಾಯಕ ಸಿಬ್ಬಂದಿಯಿಂದ ಮತ್ತು ಆಟಗಳ ಸಮಯದಲ್ಲಿಯೂ ಸಹ ಬಹಳಷ್ಟು ವಿಚಾರಗಳಲ್ಲಿ ಕಲಿತಿದ್ದೇವೆ. ನಾವು ಇಲ್ಲಿಗೆ ನಿಲ್ಲದೆ ಮುಂದೆ ಇನ್ನಷ್ಟು ಕಲಿಯುವುದನ್ನು ಮತ್ತು ಉತ್ತಮಗೊಳ್ಳಲು ಪ್ರಯತ್ನಿಸುತ್ತೇವೆ ಎಂಬುದು ಉದಯ್ ಸಹರಾನ್ ಮಾತು.

ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ 50 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 253 ಸ್ಕೋರ್ ಮಾಡಿತು. ಕಾಂಗರೂ ಪರ ಅಗ್ರ-6 ಬ್ಯಾಟ್ಸ್ಮನ್ಗಳ ಪೈಕಿ 4 ಬ್ಯಾಟ್ಸ್ಮನ್ಗಳು 40 ಕ್ಕಿಂತ ಹೆಚ್ಚು ರನ್ ಗಳಿಸಿದರು. ಭಾರತದ ಬ್ಯಾಟಿಂಗ್ ಸಂಪೂರ್ಣ ಕಳಪೆಯಾಗಿತ್ತು. ಮೂರನೇ ಓವರ್ನಲ್ಲಿ ಮೊದಲ ವಿಕೆಟ್ ಪತನಗೊಂಡ ನಂತರ ಸರಾಗವಾಗಿ ವಿಕೆಟ್ ಕಳೆದುಕೊಂಡು ಸಾಗಿ 43.5 ಓವರ್ಗಳಲ್ಲಿ 174 ರನ್ಗಳಿಗೆ ಆಲೌಟ್ ಆಯಿತು.