ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ಸೋಲು ಅನುಭವಿಸಿದೆ. ಈಗ ಟೀಮ್ ಇಂಡಿಯಾ ಮುಂದಿನ ಪಂದ್ಯದಲ್ಲಿ ಪುನರಾಗಮನ ಮಾಡಬೇಕಿದೆ. ಹೀಗಾದಲ್ಲಿ ಮಾತ್ರ ಸರಣಿ ಗೆಲ್ಲುವ ಸಾಧ್ಯತೆ ಬಲವಾಗಿದೆ. ಸೋಲಿನ ನಂತರ ಭಾರತ ತಂಡಕ್ಕೆ ಒಂದರ ಹಿಂದೆ ಒಂದರಂತೆ ಕೆಟ್ಟ ಸುದ್ದಿಗಳು ಕೇಳಿ ಬರುತ್ತಿವೆ.
ರವೀಂದ್ರ ಜಡೇಜಾ ಹಾಗೂ ಕೆಎಲ್ ರಾಹುಲ್ ಗಾಯದ ಸಮಸ್ಯೆ ಈಗಾಗಲೇ ತಂಡಕ್ಕೆ ಆಘಾತ ನೀಡಿದ್ದು, ಇದೀಗ ವಿರಾಟ್ ಕೊಹ್ಲಿ ಪುನರಾಗಮನದ ಬಗ್ಗೆ ಅನುಮಾನ ಮೂಡಿದೆ. ಕೊಹ್ಲಿ ಟೆಸ್ಟ್ ಸರಣಿಯ ಮೊದಲ ಮತ್ತು ಎರಡನೇ ಪಂದ್ಯಗಳ ಆರಂಭದಲ್ಲಿ ತಂಡದಲ್ಲಿದ್ದರು. ಆದರೆ, ಟೆಸ್ಟ್ ಶುರುವಾಗುವುದಕ್ಕೆ 3 ದಿನಗಳ ಮೊದಲು ತಂಡ ತೊರೆದರು.
ಬಿಸಿಸಿಐ, ಕೊಹ್ಲಿ ತಂಡದಿಂದ ಹೊರಬರುತ್ತಿರುವುದಾಗಿ ಇದ್ದಕ್ಕಿದ್ದಂತೆ ಘೋಷಿಸಿತು. ವೈಯಕ್ತಿಕ ಕಾರಣಗಳಿಂದ ಕೊಹ್ಲಿ ಎರಡು ಟೆಸ್ಟ್ ಪಂದ್ಯಗಳಿಂದ ತಮ್ಮ ಹೆಸರನ್ನು ಹಿಂಪಡೆದಿದ್ದಾರೆ ಎಂದು ಮಂಡಳಿ ತಿಳಿಸಿತು. ಮೂರನೇ ಟೆಸ್ಟ್ನಿಂದ ಕೊಹ್ಲಿ ಮರಳುತ್ತಾರೆಯೇ ಎಂದು ಬಿಸಿಸಿಐ ಆ ಸಮಯದಲ್ಲಿ ಹೇಳಲಿಲ್ಲ. ಈ ಪ್ರಶ್ನೆ ಇನ್ನೂ ಉಳಿದಿದೆ.
ಈ ಸರಣಿಯ ಉಳಿದ ಮೂರು ಪಂದ್ಯಗಳಿಗೆ ಬಿಸಿಸಿಐ ತಂಡವನ್ನು ಇನ್ನೂ ಪ್ರಕಟಿಸಿಲ್ಲ. ಮೂರನೇ ಟೆಸ್ಟ್ನಿಂದ ಕೊಹ್ಲಿ ತಂಡಕ್ಕೆ ಮರಳುತ್ತಾರೆ ಎಂದು ಎಲ್ಲರೂ ನಂಬಿದ್ದಾರೆ. ಆದರೆ, ಸದ್ಯ ಈ ಬಗ್ಗೆ ಸ್ಪಷ್ಟತೆ ಇಲ್ಲ. ಟೈಮ್ಸ್ ಆಫ್ ಇಂಡಿಯಾ ವರದಿಯೊಂದರಲ್ಲಿ ಕೊಹ್ಲಿ ಆಗಮನದ ಬಗ್ಗೆ ಮಂಡಳಿಯು ಅವರಿಂದ ಇನ್ನೂ ಯಾವುದೇ ಮಾಹಿತಿಯನ್ನು ಪಡೆದಿಲ್ಲ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮೂರನೇ ಟೆಸ್ಟ್ನಲ್ಲಿ ಕೊಹ್ಲಿ ಪುನರಾಗಮನ ಮಾಡುತ್ತಾರಾ ಎಂಬುದು ಕೆಲವೇ ದಿನಗಳಲ್ಲಿ ತಿಳಿಯಲಿದೆ. ಮೂರನೇ ಟೆಸ್ಟ್ ಪಂದ್ಯ ಫೆಬ್ರವರಿ 15 ರಿಂದ ರಾಜ್ಕೋಟ್ನಲ್ಲಿ ನಡೆಯಲಿದೆ. ಇದಕ್ಕಾಗಿ 2 ವಾರಗಳಿಗಿಂತ ಹೆಚ್ಚು ಸಮಯ ಉಳಿದಿದೆ. ಹೀಗಾಗಿ ಇನ್ನುಳಿದ ಮೂರು ಟೆಸ್ಟ್ ಪಂದ್ಯಗಳಿಗೆ ಯಾವಾಗ ತಂಡ ಪ್ರಕಟವಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಪುನರಾಗಮನ ಮಾಡಲು ಕೊಹ್ಲಿಗೆ ಸಾಕಷ್ಟು ಸಮಯವಿದೆ. ಸದ್ಯಕ್ಕೆ ಟೀಂ ಇಂಡಿಯಾ ವಿಶಾಖಪಟ್ಟಣದತ್ತ ಮಾತ್ರ ಗಮನ ಹರಿಸುತ್ತಿದೆ. ಫೆ.2ರಿಂದ ಇಲ್ಲಿ ಎರಡನೇ ಟೆಸ್ಟ್ ಪಂದ್ಯ ಆರಂಭವಾಗಲಿದೆ. ಆ ಮೂಲಕ ಟೀಮ್ ಇಂಡಿಯಾ ಗೆಲುವಿನ ಹಳಿಗೆ ಮರಳಬೇಕಿದೆ. ಸರಣಿಯಲ್ಲಿ ಪುಟಿದೇಳಬೇಕಾದ ಒತ್ತಡದಲ್ಲಿದೆ.