
ಬೆಂಗಳೂರು ಸೇರಿ ರಾಜ್ಯದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ಅದರಂತೆ ಸಂಜೆಯಾಗುತ್ತಿದ್ದಂತೆ ನಗರದ ಹಲವೆಡೆ ಜೋರು ಮಳೆ ಸುರಿದಿದೆ.

ನಾಗರಬಾವಿ, ಮೈಸೂರು ರಸ್ತೆ, ಆರ್ಆರ್ ನಗರ ಸೇರಿದಂತೆ ಹಲವೆಡೆ ಜೋರು ಮಳೆ ಸುರಿದಿದೆ. ಮಳೆ ಪರಿಣಾಮ ವಾಹನ ಸವಾರರು ಮತ್ತು ಪಾದಚಾರಿಗಳು ಪರದಾಡಿದರು.

ಜೋರು ಮಳೆ ಹಿನ್ನಲೆ ರಸ್ತೆಗಳಲ್ಲಿ ನೀರು ತುಂಬಿಕೊಂಡಿದ್ದು, ನಿಧಾನಗತಿಯಸಂಚಾರವಿರುತ್ತದೆ ಎಂದು ಬೆಂಗಳೂರು ಸಂಚಾರ ಪೊಲೀಸರು ಟ್ವೀಟ್ ಮಾಡಿದ್ದಾರೆ.

ರೂಪೇನ ಅಗ್ರಹಾರ ಜಂಕ್ಷನ್ ಕಡೆಯಿಂದ ಬೊಮ್ಮನಹಳ್ಳಿ ಕಡೆಗೆ, ಸಾರಕ್ಕಿ ಸಿಗ್ನಲ್ ಕಡೆಯಿಂದ ಜರಗನಹಳ್ಳಿ ಕಡೆಗೆ, ಮೈಸೂರು ರೋಡ್ ಟೋಲ್ ಗೇಟ್ ಕಡೆಯಿಂದ ಹಳೆ ಗುಡ್ಡದಹಳ್ಳಿ ಮತ್ತು ಬೊಮ್ಮನಹಳ್ಳಿ ಜಂಕ್ಷನ್ ಕಡೆಯಿಂದ ರೂಪೇನ ಅಗ್ರಹಾರ ಜಂಕ್ಷನ್ ಕಡೆಗೆ ನಿಧಾನಗತಿಯ ಸಂಚಾರವಿರಲಿದೆ.

ಇನ್ನು ಹೆಬ್ಬಾಳ ಪೊಲೀಸ್ ಠಾಣೆ ಬಳಿ ಕೂಡ ಮಳೆ ನೀರು ನಿಂತಿರುವುದರಿಂದ ವಿಮಾನ ನಿಲ್ದಾಣ ರಸ್ತೆಯ ಕಡೆಗೆ ನಿಧಾನಗತಿಯ ಸಂಚಾರವಿರುತ್ತದೆ.

ಕಸ್ತೂರಿ ನಗರ ಮುಖ್ಯ ರಸ್ತೆ, ಟಿನ್ ಫ್ಯಾಕ್ಟರಿ ಕಡೆಯಿಂದ ರಾಮಮೂರ್ತಿನಗರ, ಹೆಬ್ಬಾಳ ರಸ್ತೆ ಮಾರ್ಗವಾಗಿ ವಾಹನಗಳ ಸಂಚಾರ ನಿಧಾನಗತಿಯಿರಲಿದೆ.