ದೇಶದ ಮಾಜಿ ಪ್ರಧಾನಿ ಹಾಗೂ ಭಾರತದ ಖ್ಯಾತ ಅರ್ಥಶಾಸ್ತ್ರಜ್ಞ ಡಾ.ಮನಮೋಹನ್ ಸಿಂಗ್ ಇಂದು (ಡಿಸೆಂಬರ್ 26) ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ 93 ವರ್ಷದ ಡಾ ಸಿಂಗ್ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಭಾರತೀಯ ಅರ್ಥ ವ್ಯವಸ್ಥೆಯ ದಿಕ್ಕನ್ನೇ ಬದಲಿಸಿದ ಧೀಮಂತ ನಾಯಕ ಎನಿಸಿಕೊಂಡಿದ್ದಾರೆ. ಇನ್ನು ತಮ್ಮ ಆಡಳಿತವಧಿಯಲ್ಲಿ ಹಲವು ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದು, ಅವುಗಳನ್ನು ಈ ಸಮಯದಲ್ಲಿ ನೆನೆಯಲೇಕು.
ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ (NREGA): 2005ರಲ್ಲಿ ಈ ಯೋಜನೆ ಜಾರಿಗೆ ತಂದಿದ್ದು ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ. ಈ ಯೋಜನೆ ಪ್ರತಿ ಗ್ರಾಮೀಣ ಕುಟುಂಬಕ್ಕೆ 100 ದಿನಗಳ ಕೂಲಿ ಉದ್ಯೋಗವನ್ನು ನೀಡಿತು. ಜನರ ಜೀವನೋಪಾಯವನ್ನು ಸುಧಾರಿಸುವ ಮತ್ತು ಗ್ರಾಮೀಣ ಮೂಲಸೌಕರ್ಯವನ್ನು ಹೆಚ್ಚಿಸುವುದೇ ಈ ಯೋಜನೆಯ ಉದ್ದೇಶವಾಗಿದೆ
ಮಾಹಿತಿ ಹಕ್ಕು ಕಾಯಿದೆ (RTI): 2005 ರಲ್ಲಿ ಅಂಗೀಕರಿಸಲ್ಪಟ್ಟ RTI ನಾಗರಿಕರಿಗೆ ಸಾರ್ವಜನಿಕ ಅಧಿಕಾರಿಗಳಿಂದ ಮಾಹಿತಿಯನ್ನು ಪಡೆಯುವ ಹಕ್ಕನ್ನು ನೀಡುತ್ತದೆ, ಇದರಿಂದಾಗಿ ಆಡಳಿತದಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಉತ್ತೇಜಿಸಿತ್ತು.
ಆಧಾರ್ ಸೌಲಭ್ಯ: ನಿವಾಸಿಗಳಿಗೆ ವಿಶಿಷ್ಟ ಗುರುತನ್ನು ಒದಗಿಸಲು, ವಿವಿಧ ಸೇವೆಗಳಿಗೆ ಪ್ರವೇಶವನ್ನು ಒದಗಿಸಲು ಆಧಾರ್ ಯೋಜನೆಯನ್ನು ಇವರ ಅವಧಿಯಲ್ಲಿಯೇ ಆರಂಭಿಸಲಾಗಿತ್ತು. ಪ್ರಸ್ತುತ ಈಗ ಆಧಾರ್ ಕಾರ್ಡ್ ಪ್ರತಿಯೊಂದಕ್ಕೆ ಅನಿವಾರ್ಯವಾಗಿದೆ.
ನೇರ ಲಾಭ ವರ್ಗಾವಣೆ: ಡಾ. ಮನಮೋಹನ್ ಸಿಂಗ್ ಅವರ ಸರ್ಕಾರವು ನೇರ ಲಾಭ ವರ್ಗಾವಣೆ ವ್ಯವಸ್ಥೆಯನ್ನು ಜಾರಿಗೆ ತಂದಿತು, ಇದು ಕಲ್ಯಾಣ ನಿಧಿ ವಿತರಣೆಯನ್ನು ಸರಳೀಕರಿಸಿತು ಮತ್ತು ಅನೇಕ ಲೋಪದೋಷಗಳನ್ನು ತೆಗೆದುಹಾಕಿತು.
ಕೃಷಿ ಸಾಲ ಮನ್ನಾ (2008): ಕೃಷಿ ಬಿಕ್ಕಟ್ಟು ನೀಗಿಸಲು, ರೈತರನ್ನು ಸಾಲದ ಸುಳಿಯಿಂದ ಹೊರತರಲು ಡಾ ಮನಹೋಹನ್ ಸಿಂಗ್ ಅವರು ಕೃಷಿ ಸಾಲ ಮನ್ನಾ ಮಾಡಿದ್ದರು. ಸುಮಾರು 60,000 ಕೋಟಿ ರೂ.ಗಳ ಸಾಲ ಮನ್ನಾ ಮೂಲಕ ರೈತರಿಗೆ ಪರಿಹಾರ ಒದಗಿಸುವ ಕಾರ್ಯ ಮನಮೋಹನ್ ಸಿಂಗ್ ಸರ್ಕಾರ ಅಧಿಕಾರದಲ್ಲಿದ್ದಾಗಿತ್ತು,
ಇನ್ನು ಮನಮೋಹನ್ ಸಿಂಗ್ ಭಾರತಕ್ಕೆ ಜಾಗತೀಕರಣವನ್ನು ಪರಿಚಯಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ. ಅವರು ಹಣಕಾಸು ಸಚಿವರಾಗಿ ಅಧಿಕಾರ ಸ್ವೀಕರಿಸಿದಾಗ ಭಾರತದ ಆರ್ಥಿಕತೆ ಸಂಪೂರ್ಣ ಹದಗೆಟ್ಟಿತ್ತು. ಮುಕ್ತ ಮಾರುಕಟ್ಟೆಯೊಂದೇ ದೇಶದ ಮುಂದಿರುವ ಮಾರ್ಗ ಎಂದು ಬಲವಾಗಿ ನಂಬಿದ್ದ ಅವರು ಅದಕ್ಕೆ ಅನುಗುಣವಾಗಿ ಕಾರ್ಯ ಪ್ರವೃತ್ತರಾದರು. 1994-95ರ ಬಜೆಟ್ನಲ್ಲಿ ಭಾರೀ ಬದಲಾವಣೆಗೆ ಕೈ ಹಾಕಿದರು. ಭಾರತ ಇಂದು ವಿಶ್ವದ 5ನೇ ದೊಡ್ಡ ಆರ್ಥಿಕತೆ ಹೊಂದಿದ ಆಗಿದೆ ಎನ್ನುವುದಾದರೆ, ಅದಕ್ಕೆ ಸಿಂಗ್ ಹಾಕಿದ ಅಡಿಪಾಯವನ್ನು ಯಾರೂ ಮರೆಯುವಂತಿಲ್ಲ.
Published On - 11:59 pm, Thu, 26 December 24