
ದೇವಸ್ಥಾನಗಳನ್ನು ನಿರ್ಮಾಣ ಮಾಡಲು ಎಲ್ಲ ಕಡೆ ಭಕ್ತರಿಂದ ದೇಣಿಗೆ ಸಂಗ್ರಹ ಮಾಡಲಾಗುತ್ತೆ. ಆದ್ರೆ ಇಲ್ಲೊಂದು ಗ್ರಾಮದಲ್ಲಿ ಯಾರ ಸಹಯವನ್ನೂ ಪಡೆಯದೇ ಗ್ರಾಮಸ್ಥರೇ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಅದ್ಭುತವಾದ ದೇವಸ್ಥಾನ ನಿರ್ಮಿಸಿದ್ದಾರೆ.

ಹೊಯ್ಸಳರ ಶೈಲಿಯಲ್ಲಿ ನಿರ್ಮಾಣವಾಗಿರುವ ಭವ್ಯವಾದ ದೇವಸ್ಥಾನ ಕಂಗೊಳಿಸುತ್ತಿದೆ. ಪ್ರತಿ ಕಲ್ಲಿನ ಮೇಲೂ ವಿಶೇಷ ಕೆತ್ತನೆಗಳನ್ನ ಕೆತ್ತಲಾಗಿದೆ. ನೆರೆದವರ ಮುಖದಲ್ಲಿ ಅದೇನೋ ಸಾಧಿಸಿದ ಭಾವ ಕಾಣ್ತಿದೆ. ಗ್ರಾಮಸ್ಥರ ಹಲವು ವರ್ಷಗಳ ಕನಸು ಕೊನೆಗೂ ಈಡೇರಿದೆ.

ದಾವಣಗೆರೆ ಜಿಲ್ಲೆ, ಹೊನ್ನಾಳಿ ತಾಲೂಕಿನ ಕುಳಗಟ್ಟೆ ಗ್ರಾಮದಲ್ಲಿ ಶ್ರೀ ಆಂಜನೇಯ ಸ್ವಾಮಿ ದೇವಾಲಯ 2017 ರಲ್ಲಿ ಶಿಥಿಲಗೊಂಡಿತ್ತು. ಬೇರೆ ಮೂರ್ತಿ ಮಾಡಿಸಲು ಗ್ರಾಮಸ್ಥರು ಬೇರೆ ಬೇರೆ ಊರು ಸುತ್ತುತ್ತಿದ್ರಂತೆ.

ಆಗ ಗ್ರಾಮದ ವ್ಯಕ್ತಿಯೊಬ್ಬರ ಮೈಮೇಲೆ ದೇವರು ಬಂದು ನಿಮ್ಮ ಊರಿನಲ್ಲಿ ನನ್ನ ವಿಗ್ರಹವಿದೆ. ಅದನ್ನೇ ಪ್ರತಿಷ್ಠಾಪಿಸಿ ಎಂದಿಂತ್ತಂತೆ. ಬಳಿಕ ಗ್ರಾಮಸ್ಥರೆಲ್ಲ ದೇವಾಲಯ ಮರು ನಿರ್ಮಾಣ ಮಾಡಲು ಮುಂದಾಗಿದ್ರಂತೆ.

ಇದಕ್ಕಾಗಿ ಯಾವುದೇ ರಾಜಕಾರಣಿಗಳ ಬಳಿಗೆ ಅಥವಾ ಬೇರೆಲ್ಲೂ ಹಣಕಾಸಿಗೆ ಕೈಚಾಚಬಾರದು ಅಂತ ನಿರ್ಧರಿಸಿದ್ರಂತೆ. ಅದರಂತೆ ಗ್ರಾಮಸ್ಥರೆ ಇಂತಿಷ್ಟು ಅಂತ ಹಣ ಹೊಂದಿಸಿಕೊಂಡು ಬರೊಬ್ಬರಿ 6 ಕೋಟಿ ವೆಚ್ಚದಲ್ಲಿ ಅದ್ಭುತವಾದ ಹೊಯ್ಸಳ ಶೈಲಿಯ ಕಲ್ಲಿನ ದೇವಾಲಯ ನಿರ್ಮಿಸಿದ್ದಾರೆ.

1,500 ಮನೆಗಳಿರುವ ಕುಳಗಟ್ಟೆ ಗ್ರಾಮದಲ್ಲಿ ಪ್ರತಿ ಮನೆಯವರು 30 ಸಾವಿರದಿಂದ 5 ಲಕ್ಷದವರೆಗೂ ದಾನ ನೀಡಿದ್ದಾರೆ. ನಿರ್ಮಾಣಕ್ಕೆ 5 ವರ್ಷ ಕಾಲಾವಕಾಶ ತೆಗೆದುಕೊಂಡಿದ್ದಾರೆ.

ಈ ಆಂಜನೇಯ ಸ್ವಾಮಿ ವಿಶೇಷತೆ ಏನೆಂದ್ರೆ ವಿಗ್ರಹದ ಹಿಂದೆ 19 ದೊಡ್ಡ ಗುಂಡಿಗಳಿವೆಯಂತೆ. ಹೀಗಾಗಿ ಇದನ್ನು ಒಳಕಲ್ಲು ಹನುಮಂತಪ್ಪ ಅಂತಾನೂ ಕರೀತಾರೆ. ಇನ್ನು ಈ ದೇವಸ್ಥಾನ ಪಕ್ಕದಲ್ಲಿ ತಿಮ್ಮಪ್ಪನ ದೇವಸ್ಥಾನ, ನವಗ್ರಹ, ವಿಘ್ನೇಶ್ವರ ದೇವಾಲಯ ಸೇರಿದಂತೆ ಹಲವು ದೇವಾಲಯಗಳನ್ನು ನಿರ್ಮಾಣ ಮಾಡಲಾಗಿದೆ.

ಒಟ್ನಲ್ಲಿ ರಾಜಕಾರಣಿಗಳ ಸಹಾಯವಿಲ್ಲದೇ ಕೋಟ್ಯಂತರ ರೂ ವೆಚ್ಚದಲ್ಲಿ ಸುಂದರ ಮತ್ತು ವೈಭವದ ಕಲ್ಲಿನ ದೇವಸ್ಥಾನ ನಿರ್ಮಿಸಿರೋದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ವರದಿ: ಬಸವರಾಜ್ ದೊಡ್ಮನಿ, ಟಿವಿ9, ದಾವಣಗೆರೆ
Published On - 9:35 am, Fri, 17 February 23