ಡಾ. ರಾಜ್ಕುಮಾರ್, ಅಣ್ಣಾವ್ರು ಎಂದೇ ಖ್ಯಾತರಾದ ಕನ್ನಡ ಚಲನಚಿತ್ರರಂಗ ಮತ್ತು ರಂಗಭೂಮಿಯ ಮೇರುನಟ. ಕರ್ನಾಟಕದ ಅತ್ಯಂತ ಜನಪ್ರಿಯ ವ್ಯಕ್ತಿಗಳಲ್ಲಿ ಪ್ರಮುಖರು. ನಟನೆ, ಗಾಯನ ಮತ್ತು ಚಿತ್ರ ನಿರ್ಮಾಣದ ಮೂಲಕ ವರನಟ, ನಟಸಾರ್ವಭೌಮ ಮೊದಲಾದ ಬಿರುದುಗಳು ಪಡೆದಿದ್ದಾರೆ.
ಮೈಸೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಹಾಗೂ ಹಂಪಿ ವಿಶ್ವವಿದ್ಯಾಲಯದಿಂದ ನಾಡೋಜ ಪದವಿಯನ್ನು ಪಡೆದ ಮೊದಲ ನಟ ಇವರಾಗಿದ್ದು, ಕನ್ನಡ ನಾಡಿನಲ್ಲಿ ತಮ್ಮದೇ ಆದ ಚಾಫು ಮೂಡಿಸಿ, ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಇವರು 2006 ರಲ್ಲಿ ಅಸ್ತಂಗತರಾದರು.
ಇದೀಗ ಮದುವೆ ಆಮಂತ್ರಣ ಪತ್ರಿಕೆಯೊಂದರಲ್ಲಿ ಡಾ.ರಾಜ್ ಕುಟುಂಬ ರಾರಾಜಿಸಿದೆ. ಹೌದು, ರಾಜ್ ಅಭಿಮಾನಿಯೊಬ್ಬರ ಮಗಳ ಮದುವೆಗೆ ವಿಶೇಷ ಆಮಂತ್ರಣ ಪತ್ರಿಕೆಯನ್ನ ತಯಾರಿಸಿದ್ದು, ಸಾಮಾಜಿಕ ಜಾಲತಾಣದಲ್ಲೂ ವೈರಲ್ ಆಗಿದೆ.
ಮೈಸೂರಿನ ನಂಜುಮಳಿಗೆ ನಿವಾಸಿಯಾಗಿರುವ ಮಹದೇವಸ್ವಾಮಿ ಎಂಬುವವರು ಇದೇ ಜೂನ್ 23 ರಂದು ನಡೆಯಲಿರುವ ತಮ್ಮ ಮಗಳಾದ ಕಾವ್ಯ ಅವರ ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಇಡೀ ಅಣ್ಣಾವ್ರ ಕುಟುಂಬದ ಫೋಟೋವನ್ನು ಸೇರಿಸಲಾಗಿದೆ.
ಮೈಸೂರಿನ ಸಿದ್ದಾರ್ಥನಗರದಲ್ಲಿರುವ ಕನಕ ಸಮುದಾಯ ಭವನದಲ್ಲಿ ನಂಜನಗೂಡಿನ ಸುಪ್ರೀತ್.ಹೆಚ್.ಸುರೇಶ್ರನ್ನು ಕಾವ್ಯ ವರಿಸಲಿದ್ದಾರೆ.
ಡಾ.ರಾಜ್ ಭಾವಚಿತ್ರದೊಂದಿಗೆ ಇಡೀ ಕುಟುಂಬದ ಆಶೀರ್ವಾದವನ್ನ ಮಹದೇವಸ್ವಾಮಿ ಅವರು ಕೋರಿದ್ದಾರೆ. ಡಾ.ರಾಜ್ ದಂಪತಿ ಡಾ.ಶಿವರಾಜ್ ಕುಮಾರ್ ದಂಪತಿ, ರಾಘವೇಂದ್ರ ರಾಜ್ ಕುಮಾರ್ ದಂಪತಿ, ಪುನೀತ್ ರಾಜ್ ಕುಮಾರ್ ದಂಪತಿಯ ಭಾವಚಿತ್ರಗಳನ್ನ ಮದುವೆ ಕರೆಯೋಲೆಯಲ್ಲಿ ಮುದ್ರಿಸಲಾಗಿದೆ. ಡಾ.ರಾಜ್ ಕುಮಾರ್ ಸಂಘದ ರಾಜ್ಯಾಧ್ಯಕ್ಷರಾದ ಸಾ.ರಾ.ಗೋವಿಂದ್ ಭಾವಚಿತ್ರ ಸಹ ಇಲ್ಲಿ ಮುದ್ರಣ ಮಾಡಲಾಗಿದೆ.