
ರಾಜ್ಯಾದ್ಯಂತ ಭರ್ಜರಿ ಮಳೆಯಾಗುತ್ತಿದ್ದು, ಜನ ಜೀವನ ಅಸ್ತವ್ಯಸ್ತಗೊಂಡಿದೆ. ಜೊತೆಗೆ ರೈತರು ಕಷ್ಟಪಟ್ಟು ಬೆಳೆದ ಬೆಳೆಗೆ ಸಂಕಷ್ಟ ಬಂದೊದಗಿದೆ.

ಹೌದು ಗದಗ ತಾಲೂಕಿನ ಲಕ್ಕುಂಡಿ ಗ್ರಾಮದಲ್ಲಿ ನೂರಾರು ಎಕರೆ ಪ್ರದೇಶದಲ್ಲಿ ಬೆಳೆದ ಹೂವುಗಳು ಮಳೆಗೆ ಹಾಳಾಗುತ್ತಿದೆ.

ನಾಗರ ಪಂಚಮಿ ಹಬ್ಬ, ಶ್ರಾವಣ ಮಾಸದಲ್ಲಿ ಭರ್ಜರಿ ಲಾಭದ ನಿರೀಕ್ಷೆಯಲ್ಲಿದ್ದ ಹೂವು ಬೆಳೆಗಾರರು ಸತತ ಮಳೆಯಿಂದ ಕಂಗಾಲಾಗಿದ್ದಾರೆ.

ನೂರಾರು ಎಕರೆಯಲ್ಲಿ ಬೆಳೆದ ಸೇವಂತಿ ಸೇರಿ ವಿವಿಧ ನಮೂನೆಯ ಹೂವುಗಳು ನಿರಂತರ ಮಳೆಗೆ ತೋಟದಲ್ಲೇ ಕೊಳೆಯುತ್ತಿರುವುದು ರೈತನಿಗೆ ಸಂಕಷ್ಟ ತಂದೊದಗಿದೆ.

ಹುಬ್ಬಳ್ಳಿ, ಧಾರವಾಡ, ಬೆಂಗಳೂರು, ಬಾಂಬೆಗೆ ಪೂರೈಕೆ ಆಗುತ್ತಿದ್ದ ಹೂವುಗಳು ಇದೀಗ ಮಳೆಯಲ್ಲಿಯೇ ಕೊಳೆತು ಹೋಗುತ್ತಿದೆ. ಇದರಿಂದ ಎಕರೆಗೆ 1 ಲಕ್ಷದಿಂದ ಒಂದೂವರೆ ಲಕ್ಷ ಖರ್ಚು ಮಾಡಿದ ರೈತರ ಗೋಳಾಟ ಹೇಳತೀರದು.

ಈ ಬಾರಿ ಉತ್ತಮವಾಗಿ ಹೂವು ಬಂದಿದ್ದು, ರೈತ ಭರ್ಜರಿ ಲಾಭದ ಕನಸು ಕಂಡಿದ್ದರು. ಆದರೆ, ರೈತರ ಕನಸನ್ನು ಮಳೆರಾಯ ನುಚ್ಚುನೂರು ಮಾಡಿದ್ದಾನೆ.

ಇನ್ನು ಕಷ್ಟಪಟ್ಟು ಬೆಳೆದ ಹೂವುಗಳು ತೋಟದಲ್ಲೇ ಕೊಳೆಯುತ್ತಿರುವುದನ್ನ ನೋಡಿದ ರೈತರು ಕಣ್ಣೀರು ಹಾಕುತ್ತಿದ್ದಾರೆ. ರೈತನಿಗೆ ಯಾವಾಗಲಾದರೂ ಒಮ್ಮೆ ಲಾಭ ಬರುತ್ತದೆ. ಅದರಂತೆ ಈ ಬಾರಿ ಉತ್ತಮ ಬೆಳೆ ಬಂದಿದ್ದು, ಲಾಭದ ಕನಸಿನಲ್ಲಿದ್ದ ರೈತನಿಗೆ ಮಳೆಯಿಂದ ಸಿಡಿಲು ಬಡಿದಂತಾಗಿದೆ.

ಸರ್ಕಾರ ಹೂವು ಬೆಳೆಗಾರರ ನೆರವಿಗೆ ಧಾವಿಸಿ, ಹೂವು ಬೆಳೆಗಾರರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು. ಇಲ್ಲವಾದರೇ ರೈತರು ಬದುಕೋದು ಕಷ್ಟವಾಗಿದೆ ಎಂದು ಮನವಿ ಮಾಡಿದ್ದಾರೆ.