ನಿಗಮ ಮಂಡಳಿ ನೇಮಕಾತಿ, ಯಾವ ಹುದ್ದೆಗೆ ಎಷ್ಟು ಕಮಿಷನ್? ಪಟ್ಟಿ ಬಿಡುಗಡೆ ಮಾಡಿ ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದ ಬಿಜೆಪಿ

‘ಕಲೆಕ್ಷನ್ ಕೊಡಿ, ಸೀಟು ಪಡಿ. ಕಂತೆ ಕಂತೆ ತಂದವರಿಗೆ ಮೊದಲ ಆದ್ಯತೆ’ ಎಂದೂ ಬಿಜೆಪಿ ವ್ಯಂಗ್ಯವಾಡಿದೆ. ಜತೆಗೆ ಪೋಸ್ಟರ್​​ನಲ್ಲಿ ಯಾವ ಹುದ್ದೆಗೆ ಎಷ್ಟು ಕಮಿಷನ್ ಎಂಬ ಹಣದ ವಿವರ ಒಳಗೊಂಡ ವಿವರವನ್ನೂ ಪ್ರಕಟಿಸಿದೆ.

ನಿಗಮ ಮಂಡಳಿ ನೇಮಕಾತಿ, ಯಾವ ಹುದ್ದೆಗೆ ಎಷ್ಟು ಕಮಿಷನ್? ಪಟ್ಟಿ ಬಿಡುಗಡೆ ಮಾಡಿ ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದ ಬಿಜೆಪಿ
ಸಾಂದರ್ಭಿಕ ಚಿತ್ರ

Updated on: Oct 28, 2023 | 1:21 PM

ಬೆಂಗಳೂರು, ಅಕ್ಟೋಬರ್ 28: ಕರ್ನಾಟಕ ರಾಜಕೀಯದಲ್ಲಿ ಕಮಿಷನ್ ಆರೋಪ, ಪ್ರತ್ಯಾರೋಪ ಜೋರಾಗಿದೆ. ಬಿಜೆಪಿ ವಿರುದ್ಧ 40 ಪರ್ಸೆಂಟ್ ಕಮಿಷನ್ ಆರೋಪ ಮಾಡಿದ್ದ ಕಾಂಗ್ರೆಸ್ (Congress) ಆಮೇಲೆ, ಮುಖ್ಯಮಂತ್ರಿ ಸ್ಥಾನಕ್ಕೂ ಕಮಲ ಪಡೆಯಲ್ಲಿ ಕಮಿಷನ್ ನೀಡಬೇಕು. ಸಿಎಂ ಹುದ್ದೆಗೆ 2000 ಕೋಟಿ ರೂ. ನೀಡಬೇಕು ಎಂದು ಟೀಕಿಸಿತ್ತು. ಇದೀಗ ಬಿಜೆಪಿ (BJP) ಸರದಿ. ಕಾಂಗ್ರೆಸ್ ವಿರುದ್ಧ ಕಮಿಷನ್, ಭ್ರಷ್ಟಾಚಾರ ಆರೋಪ ಮಾಡುತ್ತಲೇ ಬಂದಿರುವ ಪ್ರತಿಪಕ್ಷವೀಗ ನಿಗಮ ಮಂಡಳಿ ನೇಮಕಾತಿ (Boards and Corporations Appointment) ವಿಚಾರವಾಗಿ ವಾಗ್ದಾಳಿ ನಡೆಸಿದೆ.

ಸಾಮಾಜಿಕ ಮಾಧ್ಯಮ ಎಕ್ಸ್​ನಲ್ಲಿ ಸಂದೇಶ ಪ್ರಕಟಿಸಿರುವ ಬಿಜೆಪಿ, ಕಾಂಗ್ರೆಸ್​​ನ ಎಟಿಎಂ ಸರ್ಕಾರದ ನಿಗಮ ಮಂಡಳಿಗಳ ಹರಾಜು ಪ್ರಕ್ರಿಯೆ ಆರಂಭವಾಗಿದೆ ಎಂದು ಟೀಕಿಸಿದೆ. ಜತೆಗೆ ಯಾವ ಹುದ್ದೆಗೆ ಎಷ್ಟು ಕಮಿಷನ್ ನಿಗದಿಪಡಿಸಲಾಗಿದೆ ಎಂಬ ಪಟ್ಟಿಯನ್ನೂ ಬಿಡುಗಡೆ ಮಾಡಿದೆ.

‘#ATMSarkara ದ ನಿಗಮ ಮಂಡಳಿಗಳ ಹರಾಜು ಪ್ರಕ್ರಿಯೆ ಈಗಾಲೇ ಆರಂಭವಾಗಿದೆ. ಹಾಗಾಗಿ ತಮ್ಮವರಿಂದ ಹರಾಜು ಕೂಗಿಸಲು ಸಿಎಂ ಸಿದ್ದರಾಮಯ್ಯರವರ ಬಣ, ಡಿಸಿಎಂ ಡಿ.ಕೆ ಶಿವಕುಮಾರ್‌ ಅವರನ್ನು ದೂರವಿಟ್ಟು ರಾತ್ರೋರಾತ್ರಿ ಸಭೆ ನಡೆಸಿದೆ. ಅಂದಹಾಗೆ, ಎರಡೂ ಕಡೆ ದೊಡ್ಡ ಸೂಟ್ ಕೇಸ್‌ನೊಂದಿಗೆ ಬರುವವರಿಗೆ ಮೊದಲ ಆದ್ಯತೆ!’ ಎಂದು ಬಿಜೆಪಿ ಎಕ್ಸ್​ ಸಂದೇಶದಲ್ಲಿ ವ್ಯಂಗ್ಯವಾಡಿದೆ.

‘ಕಲೆಕ್ಷನ್ ಕೊಡಿ, ಸೀಟು ಪಡಿ. ಕಂತೆ ಕಂತೆ ತಂದವರಿಗೆ ಮೊದಲ ಆದ್ಯತೆ’ ಎಂದೂ ಬಿಜೆಪಿ ವ್ಯಂಗ್ಯವಾಡಿದೆ. ಜತೆಗೆ ಪೋಸ್ಟರ್​​ನಲ್ಲಿ ಯಾವ ಹುದ್ದೆಗೆ ಎಷ್ಟು ಕಮಿಷನ್ ಎಂಬ ಹಣದ ವಿವರ ಒಳಗೊಂಡ ವಿವರವನ್ನೂ ಪ್ರಕಟಿಸಿದೆ.


ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್​ ಶುಕ್ರವಾರ ಸುದೀರ್ಘ ಸಭೆ ನಡೆಸಿ, ಮೊದಲ ಹಂತದಲ್ಲಿ 25 ನಿಗಮ ಮಂಡಳಿ ಭರ್ತಿಗೆ ನಿರ್ಧರಿಸಿದ್ದರು. 3 ಕ್ಕಿಂತ ಹೆಚ್ಚು ಭಾರಿ ಗೆದ್ದ ಶಾಸಕರಿಗೆ ಮಣೆ ಹಾಕಲು ಸಿಎಂ ಮತ್ತು ಡಿಸಿಎಂ ತೀರ್ಮಾನಿಸಿದ್ದರು. ಇದರ ಬೆನ್ನಲ್ಲೇ ಬಿಜೆಪಿ ವಾಗ್ದಾಳಿ ನಡೆಸಿದೆ.

ಇದನ್ನೂ ಓದಿ: ಫೈನಲ್​ ಆಯ್ತು ನಿಗಮ ಮಂಡಳಿಗೆ ನೇಮಕವಾಗುವ ಹೆಸರು; 3 ಕ್ಕಿಂತ ಹೆಚ್ಚು ಭಾರಿ ಗೆದ್ದ ಶಾಸಕರಿಗೆ ಮಣೆ? ಇಲ್ಲಿದೆ ಪಟ್ಟಿ

ಇನ್ನೊಂದು ಸಂದೇಶದಲ್ಲಿ ಕಾಂಗ್ರೆಸ್ ನಾಯಕರನ್ನು ಜೈಲ್​ನಿಂದ ಬೇಲ್ ಪಡೆದು ಹೊರಬಂದಿರುವ ಬೇಲಾಸುರರು ಎಂದು ವ್ಯಂಗ್ಯವಾಡಿದೆ.


‘ಕಾಂಗ್ರೆಸ್‌ನಲ್ಲಿ ಬೇಲ್‌ ಪಡೆದು ಹೊರಗೆ ಓಡಾಡುತ್ತಿರುವ ಬೇಲಾಸುರರ ಪಟ್ಟಿ ಇಲ್ಲಿದೆ. ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ, ಮಲ್ಲಿಕಾರ್ಜುನ್‌ ಖರ್ಗೆ. ಡಿಕೆ ಶಿವಕುಮಾರ್, ವಿನಯ್‌ ಕುಲಕರ್ಣಿ, ಬಿ ನಾಗೇಂದ್ರ ಇಷ್ಟು ಜನರಲ್ಲಿ ಜೈಲು ಸೇರುವ ಮೊದಲಿಗರು ಯಾರೆಂದು ಕೆಪಿಸಿಸಿ ಅಧ್ಯಕ್ಷರು ಅವರೇ ಹೇಳಲಿ’ ಎಂದು ಬಿಜೆಪಿ ವ್ಯಂಗ್ಯವಾಡಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Ganapathi Sharma

ಕೇರಳದ ಕಾಸರಗೋಡು ಜಿಲ್ಲೆಯ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 13 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು.

Read More
Follow Us