Bilva Patra: ಸಂತಾನ ಭಾಗ್ಯಕ್ಕಾಗಿ 48 ದಿನ ಬಿಲ್ವಪತ್ರೆಯ ಮರಕ್ಕೆ ಪೂಜೆ ಮಾಡಿ

| Updated By: ಅಕ್ಷಯ್​ ಪಲ್ಲಮಜಲು​​

Updated on: Mar 02, 2024 | 5:16 PM

maha shivaratri 2024: ಈಶ್ವರನು ಬಿಲ್ವಪ್ರಿಯ ಹಾಗಾಗಿ ಈಶ್ವರನಿಗೆ ಪ್ರತಿ ದಿನವೂ ಬಿಲ್ವಪತ್ರೆಯನ್ನಿಟ್ಟು ಪೂಜೆ ಮಾಡುವುದು ತುಂಬಾ ಶ್ರೇಷ್ಠ ಎನ್ನಲಾಗುತ್ತದೆ. ಪತ್ರೆಯ ಮೂರು ದಳಗಳನ್ನು ಈಶ್ವರನ ಮೂರು ಕಣ್ಣುಗಳು ಎಂಬ ನಂಬಿಕೆ ಇದೆ. ಹಾಗಾಗಿ ಮಹಾಶಿವರಾತ್ರಿಯ ದಿನ ಬಿಲ್ವಪತ್ರೆಯನ್ನು ಅರ್ಪಿಸುವುದರಿಂದ ಪುಣ್ಯ ಫಲ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ.

Bilva Patra: ಸಂತಾನ ಭಾಗ್ಯಕ್ಕಾಗಿ 48 ದಿನ ಬಿಲ್ವಪತ್ರೆಯ ಮರಕ್ಕೆ ಪೂಜೆ ಮಾಡಿ
ಸಾಂದರ್ಭಿಕ ಚಿತ್ರ
Follow us on

ಬಿಲ್ವಪತ್ರೆಯನ್ನು ಹಿಂದೂ ಸಂಸ್ಕೃತಿಯಲ್ಲಿ ಬಹಳ ಶ್ರೇಷ್ಠ ಹಾಗೂ ಪರಮ ಪವಿತ್ರ ಎನ್ನಲಾಗುತ್ತದೆ. ಧರ್ಮಗ್ರಂಥಗಳಲ್ಲಿಯೂ ಬಿಲ್ವಪತ್ರೆಯ ಬಗ್ಗೆ ಉಲ್ಲೇಖವಿದೆ. ಸಾಮಾನ್ಯವಾಗಿ ಶಿವರಾತ್ರಿ ಹಬ್ಬ ಬಂದರಂತೂ ಬಿಲ್ವಪತ್ರೆಗೆ ಬೇಡಿಕೆ ಹೆಚ್ಚುತ್ತದೆ. ಈಶ್ವರನು ಬಿಲ್ವಪ್ರಿಯ ಹಾಗಾಗಿ ಈಶ್ವರನಿಗೆ ಪ್ರತಿ ದಿನವೂ ಬಿಲ್ವಪತ್ರೆಯನ್ನಿಟ್ಟು ಪೂಜೆ ಮಾಡುವುದು ತುಂಬಾ ಶ್ರೇಷ್ಠ ಎನ್ನಲಾಗುತ್ತದೆ. ಪತ್ರೆಯ ಮೂರು ದಳಗಳನ್ನು ಈಶ್ವರನ ಮೂರು ಕಣ್ಣುಗಳು ಎಂಬ ನಂಬಿಕೆ ಇದೆ. ಅದರಲ್ಲಿಯೂ ಮಹಾಶಿವರಾತ್ರಿಯ ದಿನ ಬಿಲ್ವಪತ್ರೆಯನ್ನು ಅರ್ಪಿಸುವುದರಿಂದ ಪುಣ್ಯ ಫಲ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ. ಹಾಗಾದರೆ ಬಿಲ್ವಪತ್ರೆಯ ಮಹತ್ವವೇನು? ಇದನ್ನು ಕೀಳಲು ನಿಯಮವಿದೆಯೇ?

ಬಿಲ್ವ ಪತ್ರೆಯನ್ನು ಅರ್ಪಿಸುವಾಗ ಯಾವ ಮಂತ್ರ ಪಠಿಸಬೇಕು?

ತ್ರಿದಲಂ ತ್ರಿಗುಣಕಾರಂ ತ್ರಿನೇತ್ರಂ ಚ ತ್ರಯಾಯುಧಂ |

ತ್ರಿಜನ್ಮಪಾಪ ಸಂಹಾರಮ್ ಏಕ ಬಿಲ್ವಮ್ ಶಿವಾರ್ಪಣಂ||

ಈ ಶ್ಲೋಕದ ಅರ್ಥ, ಮೂರು ದಳ ಅಥವಾ ಎಲೆಯಿರುವ ಈ ಪತ್ರೆಯನ್ನು ತ್ರಿನೇತ್ರನಾದವನು, ತ್ರಿಗುಣಗಳಂತಿರುವ ಮೂರು ನಯನಗಳುಳ್ಳವನೂ ಆದ ಹಾಗೂ ಅತಿ ಚೂಪಾದ ಆಯುಧವಾದ ತ್ರಿಶೂಲವನ್ನು ಕೈಯಲ್ಲಿ ಹಿಡಿದಿರುತ್ತಾನೋ ಅವನು ನನ್ನ ಎಲ್ಲಾ ಜನ್ಮದ ಪಾಪಗಳನ್ನು ನಾಶ ಮಾಡು ಎಂದು ಬೇಡಿಕೊಳ್ಳುತ್ತಾ ಈ ಬಿಲ್ವಪತ್ರೆಯನ್ನು ಸಮರ್ಪಿಸಬೇಕು.

ಬಿಲ್ವಪತ್ರೆಯ ಮಹತ್ವ

ಸಂತಾನ ಭಾಗ್ಯ ಇಲ್ಲದ ಗಂಡ ಹೆಂಡತಿ ಒಂದು ಮಂಡಲ ಅಂದರೆ 48 ದಿನ ಬಿಲ್ವಪತ್ರೆಯ ಮರಕ್ಕೆ ಪೂಜೆ ಮಾಡಿದರೆ ಸಂತಾನ ಫಲ ಪ್ರಾಪ್ತಿಯಾಗುತ್ತದೆ ಎಂದು ಕೆಲವು ಗ್ರಂಥಗಳಲ್ಲಿ ತಿಳಿಸಲಾಗಿದೆ. ಹಾಗಾಗಿ ಮಕ್ಕಳ ಭಾಗ್ಯ ಬೇಡುವವರು ತಪ್ಪದೆ ಈ ಪೂಜೆ ಮಾಡಿ. ಮರಕ್ಕೆ ಪೂಜೆ ಸಲ್ಲಿಸಿ ಪತ್ರೆಯನ್ನು ಸೇವಿಸಿದರೆ ಶುಭವಾಗುತ್ತದೆ ಎನ್ನುವ ನಂಬಿಕೆಯೂ ಇದೆ. ಇನ್ನು ಮಹಾವಿಷ್ಣು ತುಳಸಿ ಪ್ರಿಯನಾದರೆ ಈಶ್ವರನು ಬಿಲ್ವಪ್ರಿಯ. ಹಾಗಾಗಿ ಬಿಲ್ವಪತ್ರೆಯನ್ನು ಈಶ್ವರನಿಗೆ ಅರ್ಪಿಸುವುದರಿಂದ ಪಾಪಗಳು ನಾಶವಾಗುತ್ತದೆ ಎಂಬುದು ನಂಬಿಕೆ. ಜೊತೆಗೆ ಬಿಲ್ವ ಪತ್ರೆಯ ತೊಟ್ಟು ದೇವರ ಕಡೆ ಮತ್ತು ಎಲೆಗಳ ತುದಿಗಳು ನಮ್ಮೆಡೆಗೂ ಮಾಡಿ ದೇವರಿಗೆ ಬಿಲ್ವಪತ್ರೆಯನ್ನು ಅರ್ಪಿಸಬೇಕೆಂಬ ಪ್ರತೀತಿ ಇದೆ. ಪತ್ರೆಯ ಮರವು ಶ್ರೀ ಮಹಾಲಕ್ಷ್ಮೀಯ ಬಲದ ಕೈಕಮಲದಿಂದ ಹುಟ್ಟಿದೆ ಎಂದು ಪುರಾಣಗಳು ತಿಳಿಸುತ್ತವೆ. ಹೋಮದ ಸಮಯದಲ್ಲಿ ಉಪಯೋಗಿಸುತ್ತಾರೆ. ಇದರಿಂದ ಜೀವನದಲ್ಲಿ ಶುಭ ಫಲ ದೊರೆಯುತ್ತದೆ ಎನ್ನುವ ನಂಬಿಕೆ ಇದೆ. ವಾಸ್ತು ಶಾಸ್ತ್ರದಲ್ಲಿಯೂ ಬಿಲ್ವಪತ್ರೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಇದನ್ನು ಮನೆಯಲ್ಲಿ ನೆಡುವುದರಿಂದ ಸಂತೋಷ, ಸಮೃದ್ಧಿ ಮತ್ತು ಲಕ್ಷ್ಮೀ ದೇವಿಯ ಆಶೀರ್ವಾದ ಸದಾ ಇರುತ್ತದೆ ಎಂದು ಹೇಳಲಾಗುತ್ತದೆ.

ಇದನ್ನೂ ಓದಿ: ಜೀವನದಲ್ಲಿ ಒಮ್ಮೆಯಾದರೂ ಶಿವನ ಈ 12 ವಾಸಸ್ಥಾನಗಳಿಗೆ ಭೇಟಿ ನೀಡಲೇಬೇಕು, ಇದರಿಂದ ಸಿಗುವ ಲಾಭವೇನು?

ಬಿಲ್ವಪತ್ರೆಯನ್ನು ಕೀಳಲು ನಿಯಮವಿದೆಯೇ?

ಹೌದು, ಇದು ಅತ್ಯಂತ ಪವಿತ್ರವಾದ ಮರವಾಗಿದ್ದು ಇದು ನೆಟ್ಟ ಜಾಗವೂ ಕೂಡ ಶುಭ್ರವಾಗಿರಬೇಕು. ಅಂದರೆ ಸ್ನಾನದ ನೀರು ಹೋಗುವ ಜಾಗ ಅಥವಾ ಪಾತ್ರೆ ತೊಳೆಯುವ ಜಾಗಗಳಲ್ಲಿ ನೆಡಬಾರದು. ಇದನ್ನು ಕೀಳುವಾಗಲು ಸಹ ಸ್ನಾನ ಮಾಡಿ, ಶುಭ್ರ ಬಟ್ಟೆಗಳನ್ನು ಧರಿಸಿ. ಕೀಳಬೇಕು. ಬಳಿಕ ಇದನ್ನು ನೀರಿನಿಂದ ತೊಳೆದು ಸ್ವಚ್ಛಗೊಳಿಸಬೇಕು. ಬಳಿಕ ಶಿವನಿಗೆ ಅರ್ಪಿಸಬೇಕು. ಅಮವಾಸ್ಯೆ, ಸಂಕ್ರಾಂತಿ, ಹುಣ್ಣಿಮೆ, ನವಮಿ ದಿನಗಳಲ್ಲಿ ಬಿಲ್ವ ಪತ್ರೆಯನ್ನು ಕೀಳಬಾರದೆಂದು ಶಾಸ್ತ್ರ ಹೇಳುತ್ತವೆ. ಜೊತೆಗೆ ಒಮ್ಮೆ ಪೂಜೆಗೆ ಬಳಸಿದ ಬಿಲ್ವಪತ್ರೆಯನ್ನು ಮತ್ತೆ ಮತ್ತೆ ಬಳಸಬಾರದು.

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ