
ಹಿಂದೂ ಧರ್ಮದಲ್ಲಿ ರಥಸಪ್ತಮಿಯು ಅತ್ಯಂತ ಮಹತ್ವದ ಹಾಗೂ ಮಂಗಳಕರವಾದ ಪರ್ವ ಕಾಲಗಳಲ್ಲಿ ಒಂದಾಗಿದೆ. ಇದನ್ನು ಜಗದ ಚಕ್ಷು ಮತ್ತು ಬ್ರಹ್ಮಾಂಡದ ಶಕ್ತಿಯ ಮೂಲವಾದ ಸೂರ್ಯ ಭಗವಾನರ ಜನ್ಮದಿನವೆಂದು ಆಚರಿಸಲಾಗುತ್ತದೆ. ಈ ದಿನ ಸೂರ್ಯನ ವಿಶೇಷ ಲಹರಿಗಳು ಇಡೀ ಬ್ರಹ್ಮಾಂಡದ ಮೇಲೆ ಪ್ರಭಾವ ಬೀರುತ್ತವೆ ಎಂದು ನಂಬಲಾಗಿದೆ. ಮಾಘ ಮಾಸದ ಶುಕ್ಲಪಕ್ಷದ ಸಪ್ತಮಿ ದಿನದಂದು ರಥಸಪ್ತಮಿ ಆಚರಣೆ ನಡೆಯುತ್ತದೆ. ಉದಾಹರಣೆಗೆ, 2026ರ ಜನವರಿ 25ರ ಭಾನುವಾರದಂದು ಬೆಳಗ್ಗೆ 12:39 ರಿಂದ ರಾತ್ರಿ 11:10ರ ತನಕ ಸಪ್ತಮಿ ತಿಥಿ ಇರುತ್ತದೆ.
ರಥಸಪ್ತಮಿಯಂದು ಅನುಸರಿಸಬೇಕಾದ ಪ್ರಮುಖ ಆಚರಣೆಗಳಿಂದ ಹಲವಾರು ಪ್ರಯೋಜನಗಳಿವೆ. ಈ ದಿನ ಬೆಳಗಿನ ಜಾವ ಏಳು ಎಕ್ಕದ ಎಲೆಗಳನ್ನು (ಎಕ್ಕೆ ಗಿಡದ ಎಲೆಗಳು) ತಲೆ, ಭುಜಗಳು, ಮೊಣಕಾಲುಗಳು ಮತ್ತು ಪಾದಗಳ ಮೇಲೆ ಇಟ್ಟುಕೊಂಡು ಸೂರ್ಯ ಭಗವಾನರನ್ನು ಸ್ಮರಿಸುತ್ತಾ ಪೂರ್ವಾಭಿಮುಖವಾಗಿ ಸ್ನಾನ ಮಾಡಬೇಕು. ಈ ಕ್ರಿಯೆಯು ಆಯುರಾರೋಗ್ಯ, ಐಶ್ವರ್ಯ, ಪ್ರಜ್ಞೆ ವೃದ್ಧಿಗೆ ಸಹಕಾರಿ. ಅಲ್ಲದೆ, ಇದು ಮಾಟಮಂತ್ರ, ಕೆಟ್ಟ ಶಕ್ತಿಗಳನ್ನು ದೂರ ಮಾಡಿ ದೇಹದಲ್ಲಿ ಧನಾತ್ಮಕ ಶಕ್ತಿಯನ್ನು ತುಂಬುತ್ತದೆ. ಎಕ್ಕದ ಎಲೆಗಳು ಸೂರ್ಯ ಭಗವಾನರಿಗೆ ಅತ್ಯಂತ ಪ್ರಿಯವಾದುದರಿಂದ, ಈ ಸ್ನಾನವು ಜನ್ಮದ ಪಾಪಗಳನ್ನು ಕಳೆದು ಮನಸ್ಸನ್ನು ಶುದ್ಧಗೊಳಿಸುತ್ತದೆ ಮತ್ತು ಕೆಲಸ ಕಾರ್ಯಗಳಲ್ಲಿ ಉತ್ಸಾಹವನ್ನು ಹೆಚ್ಚಿಸುತ್ತದೆ ಎಂದು ನಂಬಲಾಗಿದೆ.
ಇದನ್ನೂ ಓದಿ: ಹವಳವನ್ನು ಯಾರು ಧರಿಸಬಹುದು? ಇದರ ಪ್ರಯೋಜನ ಮತ್ತು ಧರಿಸುವ ವಿಧಾನ ತಿಳಿಯಿರಿ
ರಥಸಪ್ತಮಿ ದಿನದಂದು ಭೂಮಿ ಮತ್ತು ಜೀವರಾಶಿಗಳಿಗೆ ಚೈತನ್ಯ ನೀಡುವ ಸೂರ್ಯನ ಶಕ್ತಿಯು ಸಪ್ತ ನದಿಗಳಲ್ಲಿ ವಿಶೇಷವಾಗಿ ಪ್ರವಹಿಸುತ್ತದೆ ಎಂದು ಹೇಳಲಾಗುತ್ತದೆ. ಆದ್ದರಿಂದ ನದಿಸ್ನಾನಕ್ಕೆ ಹೆಚ್ಚಿನ ಮಹತ್ವವಿದೆ. ಶ್ರೀರಂಗಪಟ್ಟಣ, ಹೇಮಗಿರಿ, ಶಿಕಾರಿಪುರ, ಇಡಗುಂಜಿ, ಕೊಪ್ಪಳ ಮುಂತಾದ ನದಿಗಳಿರುವ ಪವಿತ್ರ ಸ್ಥಳಗಳಲ್ಲಿ ಸ್ನಾನ ಮಾಡುವುದು ಉತ್ತಮ. ಈ ಸ್ಥಳಗಳಲ್ಲಿ ಬ್ರಹ್ಮರಥೋತ್ಸವಗಳನ್ನೂ ಸಹ ನಿರ್ವಹಿಸಲಾಗುತ್ತದೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ