ಮನುಷ್ಯನ ಅವನತಿಗೆ ಮುಖ್ಯ ಕಾರಣಗಳೇನು? ಅದರ ಪರಿಹಾರ ಯೋಗದಿಂದ ಸಾಧ್ಯವೇ?

| Updated By: ಅಕ್ಷಯ್​ ಪಲ್ಲಮಜಲು​​

Updated on: Jun 21, 2023 | 11:01 AM

ಮನುಷ್ಯ ಜೀವನದಲ್ಲಿ ತಾನು ಉತ್ತಮವಾಗಿ ಬಾಳಬೇಕೆಂದು ತುಂಬಾ ಪರಿಶ್ರಮ ಪಡುತ್ತಾನೆ. ಅದರಲ್ಲಿ ಕೆಲವರು ಮಾತ್ರ ತಮ್ಮ ಕನಸನ್ನು ನನಸಾಗಿಸುವಲ್ಲಿ ಸಫಲರಾಗುತ್ತಾರೆ. ಇನ್ನು ಕೆಲವರು ಸಂಕಲ್ಪಿಸಿದ ಕಾರ್ಯವನ್ನು ಮಧ್ಯದಲ್ಲೇ ಬಿಟ್ಟು ಭ್ರಮೆಯಲ್ಲೇ ಬದುಕುತ್ತಾರೆ.

ಮನುಷ್ಯನ ಅವನತಿಗೆ ಮುಖ್ಯ ಕಾರಣಗಳೇನು? ಅದರ ಪರಿಹಾರ ಯೋಗದಿಂದ ಸಾಧ್ಯವೇ?
ಸಾಂದರ್ಭಿಕ ಚಿತ್ರ
Follow us on

ಮನುಷ್ಯ ಜೀವನದಲ್ಲಿ ತಾನು ಉತ್ತಮವಾಗಿ ಬಾಳಬೇಕೆಂದು ತುಂಬಾ ಪರಿಶ್ರಮ ಪಡುತ್ತಾನೆ. ಅದರಲ್ಲಿ ಕೆಲವರು ಮಾತ್ರ ತಮ್ಮ ಕನಸನ್ನು ನನಸಾಗಿಸುವಲ್ಲಿ ಸಫಲರಾಗುತ್ತಾರೆ. ಇನ್ನು ಕೆಲವರು ಸಂಕಲ್ಪಿಸಿದ ಕಾರ್ಯವನ್ನು ಮಧ್ಯದಲ್ಲೇ ಬಿಟ್ಟು ಭ್ರಮೆಯಲ್ಲೇ ಬದುಕುತ್ತಾರೆ. ಇನ್ನೂ ಕೆಲವರು ತಮ್ಮ ಜೀವನದ ಅರ್ಥ ಮತ್ತು ಗುರಿಯನ್ನು ತಿಳಿಯದೇ ಮಂಕಾಗಿ ಬದುಕುತ್ತಾರೆ. ವಾಸ್ತವವಾಗಿ ನಮ್ಮ ಉತ್ತಮ ಬಾಳು ಎಂದರೇನು ತಿಳಿಯಬೇಕು. ಉತ್ತಮತ್ವ ಎನ್ನುವುದು ಕೇವಲ ಧನ ಸಂಪಾದನೆ ಎಂದು ತಿಳಿಯಬಾರದು. ನಿಜವಾದ ಉತ್ತಮ ಬಾಳು ಎಂದರೆ ನೆಮ್ಮದಿಯಿಂದ ಬದುಕುವುದು ಎಂದರ್ಥ. ಕೋಟಿ ಹಣವಿದ್ದರೂ ಕಣ್ತುಂಬ ನಿದ್ದೆಯನ್ನು ಕೊಳ್ಳಲಾಗದು ಅಲ್ಲವೇ? ಹಾಗೆಯೇ ಎಲ್ಲ ವಿಧವಾದ ಸೌಭಾಗ್ಯಗಳ ವ್ಯವಸ್ಥೆಯೂ ಹೌದು.

ನಾವುಗಳು ಉತ್ತಮ ಫಲ ಅಥವಾ ಬಾಳು ಬದುಕುವುದನ್ನು ಇಚ್ಛೆಪಡುತ್ತೇವೆ ಆದರೆ ಅದಕ್ಕೋಸ್ಕರ ಪ್ರಯತ್ನ ಮಾಡುವುದೇ ಇಲ್ಲ. ಶಾಸ್ತ್ರದ ಮಾತೊಂದು ಹೀಗೆ ಹೇಳುತ್ತದೆ – ಪುಣ್ಯದ ಫಲದ ಅಪೇಕ್ಷೆಯಿದೆ ಆದರೆ ಸತ್ಕರ್ಮಗಳನ್ನು ಮಾಡುವುದೇ ಇಲ್ಲ, ಪಾಪದ ಫಲವನ್ನು ಇಚ್ಛಿಸುವುದಿಲ್ಲ ಆದರೆ ಸದಾ ಪಾಪ ಕಾರ್ಯಗಳನ್ನೇ ಮಾಡುತ್ತೇವೆ ಎಂದು.

ಜೀವನದಲ್ಲಿ ಉತ್ತಮವಾದ ನೆಮ್ಮದಿಯ ಬಾಳು ಬದುಕಬೇಕೆಂಬ ಆಸೆ ಯಾರಿಗಿಲ್ಲ ಹೇಳಿ. ಎಲ್ಲರಿಗೂ ಇದೆ. ಆದರೆ ನಮ್ಮ ಶತ್ರುಗಳು ಯಾರೆಂಬುದನ್ನು ನಾವು ತಿಳಿಯುವಲ್ಲಿ ವಿಫಲರಾಗಿ ಸೋತು ಬಿಡುತ್ತೇವೆ. ಮೇಲೆ ಹೇಳಿದಂತೆ ನಿಜವಾದ ನಮ್ಮ ಶತ್ರುಗಳು ಯಾರು ಅಥವಾ ಯಾವುದು ಎಂದು ತಿಳಿಯೋಣ ನಮ್ಮ ಶತ್ರುಗಳು ಮುಖ್ಯವಾಗಿ ಆರು. ಕಾಮ ಕ್ರೋಧ ಲೋಭ ಮೋಹ ಮದ ಮತ್ಸರ ಎಂಬುದಾಗಿ. ಇದು ನಮ್ಮ ಚಿತ್ತವನ್ನು ವಿಕಾರಗೊಳಿಸಿ ಸಾಧನೆಯಿಂದ ವಿಮುಖರನ್ನಾಗಿಸಿ ಜೀವನದಲ್ಲಿ ನೆಮ್ಮದಿಯ ಕಾಣಲು ಅಸಾಧ್ಯವಾದ ವಾತಾವರಣವನ್ನು ನಿರ್ಮಿಸಿ ದುಃಖ ಭರಿತ ಜೀವನಕ್ಕೆ ಸೋಪಾನ ಹಾಕಿಬಿಡುತ್ತದೆ.

ಹಾಗಾದರೆ ಇದಕ್ಕೆ ಪರಿಹಾರವಿಲ್ಲವೇ ಅಂತ ಕೇಳಬಹುದು. ಎಲ್ಲಾ ಸಮಸ್ಯೆಗೂ ಒಂದು ಪರಿಹಾರವೆಂಬುದು ಇದ್ದೇ ಇದೆ. ಈ ಕಾಮಾದಿಗಳನ್ನು ಜಯಿಸಲು ಯೋಗವು ಅತ್ಯಂತ ಫಲಕಾರಿ. ಮಹರ್ಷಿ ಪತಂಜಲಿಯವರು ಯೋಗ ಸೂತ್ರದಲ್ಲಿ ಹೇಳುತ್ತಾರೆ ಯೋಗಃ ಚಿತ್ತ ವೃತ್ತಿ ನಿರೋಧಃ ಎಂದು. ಯೋಗವು ಚಿತ್ತದ ಅಂದರೆ ನಮ್ಮ ಮನೋಭೂಮಿಕೆಯ (ಬುದ್ಧಿಯ ಎಂದರೂ ತಪ್ಪಲ್ಲ) ವಿಕಾರವನ್ನು ನಿಗ್ರಹಿಸುತ್ತದೆ ಎಂಬುದಾಗಿ ಇದರ ತಾತ್ಪರ್ಯ. ಅಂದರೆ ಸಾತ್ವಿಕವಾದ ಯೋಗದ ಆಚರಣೆ ಮತ್ತು ಅನುಸಂಧಾನದಿಂದ ಮನೋವಿಕಾರವನ್ನು ನಿಗ್ರಹಿಸಬಹುದು ಎಂದಾಯಿತು.

ಇದನ್ನೂ ಓದಿ: Acharya Chanakya: ಚರ್ಚೆ ಹೇಗಿರಬೇಕು? ಯಾರೊಂದಿಗೆ ಚರ್ಚಿಸಬೇಕು? ಸಾತ್ವಿಕ ಚರ್ಚೆ ಹೇಗಿರುತ್ತದೆ? ಈ ಕುರಿತಾಗಿ ಆಚಾರ್ಯ ಚಾಣಕ್ಯರ ಅಭಿಪ್ರಾಯ ಹೇಗಿದೆ?

ನಮ್ಮಲ್ಲಿ ಯೋಗ ಎಂದಾಕ್ಷಣ ಮನಸ್ಸಿಗೆ ಬರುವುದು ಸೂರ್ಯನಮಸ್ಕಾರಾದಿ ಆಸನಗಳು. ಆದರೆ ಯೋಗವೆಂದರೆ ಕೇವಲ ಆಸನ ಮಾತ್ರವಲ್ಲ. ಯೋಗದಲ್ಲಿ ಆಸನವೂ ಒಂದಾಗಿದೆಯಷ್ಟೇ. ಯೋಗವೇ ಆಸನವಲ್ಲ ಎಂಬುದನ್ನು ಬಹಳಷ್ಟು ಜನ ತಿಳಿಯಬೇಕಿದೆ. ಯೋಗವೆಂದರೆ ಯಮ ನಿಯಮ ಆಸನ ಪ್ರಾಣಾಯಾಮ ಪ್ರತ್ಯಾಹಾರ ಧ್ಯಾನ ಧಾರಣ ಸಮಾಧಿ ಎಂಬುದಾಗಿ ಯೋಗವು ಅಷ್ಟವಿಧವಾಗಿದೆ.

ಇದನ್ನು ಸರಿಯಾಗಿ ಬಲ್ಲವರ ಬಳಿಯಲ್ಲಿ ಕ್ರಮವಾಗಿ ಅಭ್ಯಾಸ ಮಾಡುತ್ತಾ ಹೋದಲ್ಲಿ ನಮ್ಮ ಅವನತಿಗೆ ಕಾರಣಗಳಾದ ಅರಿಷಡ್ವೈರಿಗಳನ್ನು ಗೆದ್ದು ಯೋಗದಿಂದ ಯೋಗ್ಯರಾಗಿ ಬಾಳಬಹುದು. ಗೀತೆಯಲ್ಲಿ ಭಗವಂತ ಹೇಳಿದಂತೆ ಮನ ಏವ ಮನುಷ್ಯಾಣಾಂ ಕಾರಣಂ ಬಂಧ ಮೋಕ್ಷಯೋಃ ಎಲ್ಲದಕ್ಕೂ ಮೊದಲು ನಾವು ಸಾಧನೆಯ ಕಡೆಗೆ ಮನಸ್ಸು ಮಾಡಬೇಕು. ನಮ್ಮ ಮನಸ್ಸು ಸುಫಲದ ಕಡೆಗೆ ಸಫಲವಾಗಿ ಸಾಗಿದರೆ ಜೀವನ ನಿಷ್ಫಲವಾಗದು. ಅಂತೆಯೇ ಈ ಯೋಗದ ಸುದಿನದಂದು ನಮ್ಮ ಜೀವನ ಸುಭಿಕ್ಷವಾಗುವ ಸಂಕಲ್ಪ ಮಾಡಿ ಯೋಗದಿಂದ ಯೋಗ್ಯರಾಗಿ ಬದುಕುವ ಏನಂತೀರಾ?

ಡಾ.ಗೌರಿ ಕೇಶವಕಿರಣ ಬಿ

ಧಾರ್ಮಿಕಚಿಂತಕರು

ಹೆಚ್ಚಿನ ಆಧ್ಯಾತ್ಮಿಕ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ