Neeraj Chopra: ಬೆಂಗಳೂರು ವಿದ್ಯಾರ್ಥಿಗಳಿಗೆ ಸರ್ಪ್ರೈಸ್ ನೀಡಿದ ಚಿನ್ನದ ಹುಡುಗ; ಮಕ್ಕಳ ಪ್ರತಿಕ್ರಿಯೆ ಹೇಗಿತ್ತು ನೋಡಿ!

ನೀರಜ್ ಚೋಪ್ರಾ ಅವರು ಬೆಂಗಳೂರಿನ ಶಾಲೆಯೊಂದಕ್ಕೆ ಅನಿರೀಕ್ಷಿತ ಭೇಟಿ ನೀಡಿದರು, ಅಲ್ಲಿನ ವಿದ್ಯಾರ್ಥಿಗಳ ರಿಯಾಕ್ಷನ್ ಹೇಗಿದೆ ನೋಡಿ

Neeraj Chopra: ಬೆಂಗಳೂರು ವಿದ್ಯಾರ್ಥಿಗಳಿಗೆ ಸರ್ಪ್ರೈಸ್ ನೀಡಿದ ಚಿನ್ನದ ಹುಡುಗ; ಮಕ್ಕಳ ಪ್ರತಿಕ್ರಿಯೆ ಹೇಗಿತ್ತು ನೋಡಿ!
Athlete Neeraj Chopra surprised Bengaluru school, students reaction is priceless!

Updated on: Mar 28, 2023 | 4:07 PM

ಒಲಿಂಪಿಕ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ (Neeraj Chopra) ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ಅತ್ಯಂತ ಜನಪ್ರಿಯ ಕ್ರೀಡಾಪಟುಗಳಲ್ಲಿ ಒಬ್ಬರು. ದೇಶದಾದ್ಯಂತ ಕ್ರೀಡಾ ಉತ್ಸಾಹಿಗಳ ಮನಗೆದ್ದ ಆಟಗಾರರಾಗಿದ್ದಾರೆ. ಕ್ರೀಡೆಯ (Sports) ಜೊತೆಗೆ ಜಾಹೀರಾತುಗಳಲ್ಲಿ ನಟಿಸಿ ಜನರ ಹತ್ತಿರ ಭೇಷ್ ಎನಿಸಿಕೊಂಡಿದ್ದಾರೆ. ಅಲ್ಲದೇ ಅದೆಷ್ಟು ಮಕ್ಕಳಿಗೆ ನೀರಜ್ ಸ್ಫೂರ್ತಿಯಾಗಿದ್ದಾರೆ (Role Model). ಇದೀಗ ಈ ಜನಪ್ರಿಯ ಆಟಗಾರ ಬೆಂಗಳೂರಿನ (Bengaluru) ಶಾಲೆ ಒಂದಕ್ಕೆ ಅನಿರೀಕ್ಷಿತವಾಗಿ ಭೇಟಿ ನೀಡಿ ಮಕ್ಕಳಿಗೆ ಸರ್ಪ್ರೈಸ್ ನೀಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಆಟಗಾರನ ಈ ನಡೆಯನ್ನು ನೆಟ್ಟಿಗರು ಮೆಚ್ಚಿದ್ದಾರೆ.

ಟ್ರ್ಯಾಕ್ ಮತ್ತು ಫೀಲ್ಡ್‌ನಲ್ಲಿ ಭಾರತದ ಮೊದಲ ಒಲಿಂಪಿಕ್ ಚಾಂಪಿಯನ್ ನೀರಜ್ ಚೋಪ್ರಾ ಶನಿವಾರ (ಮಾರ್ಚ್ 25) ಬೆಂಗಳೂರಿನ ಯಲಹಂಕದಲ್ಲಿರುವ ವಿಶ್ವ ವಿದ್ಯಾಪೀಠಕ್ಕೆ ಆಗಮಿಸಿ ವಿದ್ಯಾರ್ಥಿಗಳ ಮುಖದಲ್ಲಿ ನಗು ತಂದರು. ತರಬೇತಿಯ ನಡುವೆ ಭಾರತಕ್ಕೆ ಮರಳಿದ ಚೋಪ್ರಾ ಶಾಲೆಯ ಕ್ರೀಡಾ ಕಾರ್ಯಕ್ರಮದ ಭಾಗವಾಗಿರುವ ವಿದ್ಯಾರ್ಥಿಗಳೊಂದಿಗೆ ಸಮಯ ಕಳೆದರು.

“ಮಕ್ಕಳ ಮುಖದಲ್ಲಿ ನಗುವನ್ನು ಮೂಡಿಸಲು ನನಗೆ ಸಾಧ್ಯವಾದಾಗಲೆಲ್ಲಾ ನನಗೆ ನಿಜವಾಗಿಯೂ ಸಂತೋಷವಾಗುತ್ತದೆ, ಮತ್ತು ಇದು ಇನ್ನಷ್ಟು ವಿಶೇಷವಾಗಿದೆ ಏಕೆಂದರೆ ಮಕ್ಕಳಿಗೆ ನಾನು ಬರುವ ನಿರೀಕ್ಷೆ ಇರಲಿಲ್ಲ. ಬೆಂಗಳೂರಿಗೆ ಬಂದು ಕಾರ್ಯಕ್ರಮವೊಂದಕ್ಕೆ ಹೋಗುವ ನಡುವೆ ಸ್ವಲ್ಪ ಸಮಯವಿತ್ತು ಮತ್ತು ಅದನ್ನು ಸದುಪಯೋಗ ಪಡಿಸಿಕೊಂಡ ಖುಷಿ ನನಗಿದೆ. ನನ್ನ ಭೇಟಿಯು ಯುವ ಅಥ್ಲೀಟ್‌ಗಳಾಗಿ ಅವರ ಪ್ರಯಾಣಕ್ಕೆ ಸ್ಫೂರ್ತಿ ನೀಡುತ್ತದೆ ಎಂದು ನಾನು ಭಾವಿಸುತ್ತೇನೆ, ”ಎಂದು ನೀರಜ್ ಹೇಳಿದರು.

ಬಳ್ಳಾರಿಯ ಇನ್‌ಸ್ಪೈರ್ ಇನ್‌ಸ್ಟಿಟ್ಯೂಟ್ ಆಫ್ ಸ್ಪೋರ್ಟ್‌ಗೆ ತೆರಳುವ ಮುನ್ನ ಚೋಪ್ರಾ, ಮಕ್ಕಳೊಂದಿಗೆ ಮಾತನಾಡುತ್ತಾ, ಆಟೋಗ್ರಾಫ್‌ಗಳಿಗೆ ಸಹಿ ಹಾಕುತ್ತಾ, ತಮ್ಮ ಸಾಧನೆಯನ್ನು ನೆನಪಿಸಿಕೊಳ್ಳುತ್ತಾ ಕಾಲ ಕಳೆದರು. ಆ ಮಧ್ಯಾಹ್ನದ ಅತ್ಯಂತ ವಿಶೇಷ ಕ್ಷಣವೆಂದರೆ ಸುಮಾರಿ 30 ವಿದ್ಯಾರ್ಥಿಗಳು ಟೋಕಿಯೋ ಒಲಿಂಪಿಕ್ ಅಲ್ಲಿ ನೀರಜ್ ಪದಕ ಗೆದ್ದ ಕ್ಷಣವನ್ನು ಮಕ್ಕಳ ಜೊತೆ ಹಂಚಿಕೊಂಡಿದ್ದು.

ಇದನ್ನೂ ಓದಿ: ಒಂದೇ ಪಂದ್ಯದಲ್ಲಿ 7 ವಿಶ್ವ ದಾಖಲೆಗಳು ನಿರ್ಮಾಣ..!

ಚೋಪ್ರಾ ಅವರ ಈ ದಿಢೀರ್ ಭೇಟಿಯನ್ನು ಶಾಲೆಯ ಪ್ರಾಂಶುಪಾಲರನ್ನು ಹೊರತುಪಡಿಸಿ ಎಲ್ಲರಿಗೂ ಗೌಪ್ಯವಾಗಿಡಲಾಗಿತ್ತು. ಕ್ರೀಡೆಯಲ್ಲಿ ಆಸಕ್ತರಿಗೆ ವಿಶೇಷ ತರಗತಿ ಇದೆ ಎಂದು ವಿದ್ಯಾರ್ಥಿಗಳಿಗೆ ತಿಳಿಸಲಾಗಿದ್ದು, ಹಾಗಾಗಿ ಕ್ರೀಡಾಪ್ರೇಮಿಗಳು ಮಾತ್ರ ತರಗತಿಗೆ ಹಾಜರಾಗಿದ್ದರು. ಈ ವಿದ್ಯಾರ್ಥಿಗಳಿಗೆ ತಮಗೆ ಕಾದಿರುವ ಅಚ್ಚರಿಯ ಅರಿವಿಲ್ಲ. ಚೋಪ್ರಾ ಅವರು ಆಟೋಗ್ರಾಫ್ ನೀಡಿದ್ದು ಮಾತ್ರವಲ್ಲದೆ ವಿದ್ಯಾರ್ಥಿಗಳೊಂದಿಗೆ ಅಮೂಲ್ಯವಾದ ಜೀವನ ಸಲಹೆಯನ್ನು ಹಂಚಿಕೊಂಡರು.