ಅನುಮತಿಯಿಲ್ಲದೆ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ರವಿ ಶಾಸ್ತ್ರೀ ಭಾಗಿಯಾಗಿದ್ದರೂ ಯಾವುದೇ ಕ್ರಮ ಜರುಗಿಸುವುದಿಲ್ಲ: ಗಂಗೂಲಿ

ಭಾರತ ಮತ್ತು ಇಂಗ್ಲೆಂಡ್ ನಡುವೆ ಓವಲ್​ನಲ್ಲಿ ನಾಲ್ಕನೇ ಟೆಸ್ಟ್ ನಡೆಯುತ್ತಿದ್ದ ಸಂದರ್ಭದಲ್ಲಿ ರವಿ ಶಾಸ್ತ್ರೀ ಸೋಂಕಿಗೀಡಾದರು. ಈ ಹಿನ್ನೆಲೆಯಲ್ಲಿ ಸಪೋರ್ಟ್ ಸ್ಟಾಫ್​ನ ಬೇರೆ ಸದಸ್ಯರಾಗಿದ್ದ ಭರತ್ ಅರುಣ್, ಆರ್ ಶ್ರೀಧರ್ ಮತ್ತು ನಿತಿನ್ ಪಟೇಲ್ ಅವರನ್ನು ಐಸೋಲೇಶನ್ ನಲ್ಲಿ ಇಡಲಾಯಿತು.

ಅನುಮತಿಯಿಲ್ಲದೆ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ರವಿ ಶಾಸ್ತ್ರೀ ಭಾಗಿಯಾಗಿದ್ದರೂ ಯಾವುದೇ ಕ್ರಮ ಜರುಗಿಸುವುದಿಲ್ಲ: ಗಂಗೂಲಿ
ಸೌರವ್ ಗಂಗೂಲಿ ಮತ್ತು ರವಿ ಶಾಸ್ತ್ರೀ
Edited By: ಅರುಣ್​ ಕುಮಾರ್​ ಬೆಳ್ಳಿ

Updated on: Sep 13, 2021 | 9:59 PM

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಅನುಮತಿಯಿಲ್ಲದೆ ಓವಲ್ ಮೈದಾನದಲ್ಲಿ ನಡೆದ ನಾಲ್ಕನೇ ಟೆಸ್ಟ್ ಮುಗಿದ ನಂತರ ಲಂಡನ್​ನಲ್ಲಿ ಆಯೋಜಿಸಲಾಗಿದ್ದ ತನ್ನ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಭಾಗಿಯಾದ ಟೀಮ್ ಇಂಡಿಯಾದ ಹೆಡ್ ಕೋಚ್ ರವಿ ಶಾಸ್ತ್ರೀ ಅವರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ ಎಂದು ಮಂಡಳಿಯ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ. ‘ಅವರು (ರವಿ ಶಾಸ್ತ್ರೀ) ಪೂರ್ವಾನುಮತಿ ತೆಗೆದುಕೊಂಡಿರಲಿಲ್ಲ ನಿಜ, ಆದರೆ ಅವರ ವಿರುದ್ಧ ಕ್ರಮ ಜರುಗಿಸುವುದಿಲ್ಲ,’ ಎಂದು ಇಂಗ್ಲಿಷ್ ಪತ್ರಿಕೆಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ದಾದಾ ಹೇಳಿದ್ದಾರೆ.

‘ಎಷ್ಟು ದಿನಗಳ ಕಾಲ ತಾನೆ ನೀವು ಹೋಟೆಲ್ ರೂಮಿನಲ್ಲಿ ಬಂಧಿಯಾಗಿರುವುದಕ್ಕೆ ಸಾಧ್ಯ? ಮನೆಯಲ್ಲಿರುವಾಗಲೂ ನೀವು ಹಗಲು-ರಾತ್ರಿ ಒಳಗಡೆಯೇ ಕೂತಿರಲು ಸಾಧ್ಯವೇ? ಹೋಟೆಲ್ ನಿಂದ ಸ್ಟೇಡಿಯಂ ಮತ್ತು ಸ್ಟೇಡಿಯಂನಿಂದ ಹೋಟೆಲ್ ರೂಮು-ಈ ಜೀವನ ಶೈಲಿಗೆ ಹೊಂದಿಕೊಳ್ಳುವುದು ಯಾರಿಗೂ ಆಗುವುದಿಲ್ಲ. ನಾನಂದುಕೊಳ್ಳುವ ಹಾಗೆ ಮಾನವ ಕುಲಕ್ಕೆ ಇದು ಅಸಾಧ್ಯ’ ಎಂದು ಗಂಗೂಲಿ ಹೇಳಿದ್ದಾರೆ.

‘ಸೋಮವಾರದಂದು ‘ದಾದಾಗಿರಿ’ಯ ಎಪಿಸೋಡ್ ಒಂದರ ಶೂಟಿಂಗ್​ನಲ್ಲಿ ನಾನು ಭಾಗಿಯಾಗಿದ್ದೆ. ಅಲ್ಲಿ ಸುಮಾರು 100 ಜನ ಇದ್ದರು. ಎಲ್ಲರೂ ಲಸಿಕೆ ಹಾಕಿಸಿಕೊಂಡವರೇ. ಅದರೆ, ಸೋಂಕು ತಾಕದು ಅಂತ ಹೇಳಲಾಗದು. ಲಸಿಕೆಯ ಎರಡು ಡೋಸ್ ತೆಗೆದುಕೊಂಡವರು ಸಹ ಸೋಂಕಿಗೊಳಗಾಗುತ್ತಿದ್ದಾರೆ. ಈಗ ಬದುಕೇ ಹಾಗಾಗಿಬಿಟ್ಟಿದೆ, ಎನೂ ಮಾಡಲಾಗದು’ ಎಂದು ಮಾಜಿ ನಾಯಕ ಹೇಳಿದ್ದಾರೆ.

ಭಾರತ ಮತ್ತು ಇಂಗ್ಲೆಂಡ್ ನಡುವೆ ಓವಲ್​ನಲ್ಲಿ ನಾಲ್ಕನೇ ಟೆಸ್ಟ್ ನಡೆಯುತ್ತಿದ್ದ ಸಂದರ್ಭದಲ್ಲಿ ರವಿ ಶಾಸ್ತ್ರೀ ಸೋಂಕಿಗೀಡಾದರು. ಈ ಹಿನ್ನೆಲೆಯಲ್ಲಿ ಸಪೋರ್ಟ್ ಸ್ಟಾಫ್​ನ ಬೇರೆ ಸದಸ್ಯರಾಗಿದ್ದ ಭರತ್ ಅರುಣ್, ಆರ್ ಶ್ರೀಧರ್ ಮತ್ತು ನಿತಿನ್ ಪಟೇಲ್ ಅವರನ್ನು ಐಸೋಲೇಶನ್ ನಲ್ಲಿ ಇಡಲಾಯಿತು.

ಮ್ಯಾಂಚೆಸ್ಟರ್​​​​ನಲ್ಲಿ  5ನೇ ಮತ್ತು ಅಂತಿಮ ಟೆಸ್ಟ್ ಆರಂಭವಾಗುವ ಮೊದಲು, ಟೀಮ್ ಇಂಡಿಯಾದ ಎರಡನೇ ಫಿಸಿಯೋ ಯೋಗೇಶ್ ಪರ್ಮಾರ್ ಅವರಲ್ಲೂ ಸೋಂಕು ಕಾಣಿಸಿಕೊಂಡಿದ್ದರಿಂದ ಟೆಸ್ಟ್ ಮುನ್ನಾದಿನದ ಟ್ರೇನಿಂಗ್ ಸೆಷನ್ ಮತ್ತು ಮರುದಿನ ಶುರುವಾಗಬೇಕಿದ್ದ ಟೆಸ್ಟ್ ಪಂದ್ಯ ರದ್ದುಗೊಂಡವು.

ಪರ್ಮಾರ್ ಅವರಲ್ಲಿ ಸೋಂಕು ದೃಢಪಟ್ಟ ನಂತರ ಟೀಮ್ ಇಂಡಿಯ ಸದಸ್ಯರು ಭೀತಿಗೊಳಗಾಗಿ, ಮ್ಯಾಂಚೆಸ್ಟರ್ ಟೆಸ್ಟ್ ನಲ್ಲಿ ಅಡಲು ನಿರಾಕರಿಸಿದರು. ಹಾಗಾಗೇ, ಪಂದ್ಯ ರದ್ದುಗೊಳಿಲಾಗಿದೆ ಎಂದು ಘೋಷಿಸಲಾಯಿತು.

‘ಭಾರತದ ಆಟಗಾರರು ಅಡಲು ನಿರಾಕರಿಸಿದರು ಅದರೆ ಅವರನ್ನು ದೂಷಿಸುವಂತಿಲ್ಲ. ಯೋಗೇಶ್ ಪರ್ಮಾರ್ ಎಲ್ಲ ಆಟಗಾರರೊಂದಿಗೆ ನಿಕಟ ಸಂಪರ್ಕದಲ್ಲಿದ್ದರು. ನಿತಿನ್ ಪಟೇಲ್ ಐಸೋಲೇಶನ್ ನಲ್ಲಿ ಇದ್ದಿದ್ದುರಿಂದ ಅವರೇ ಎಲ್ಲವನ್ನು ನಿಭಾಯಿಸಬೇಕಿತ್ತು. ಅಷ್ಟ್ಯಾಕೆ, ಭಾರತೀಯ ತಂಡದ ಆಟಗಾರರ ಕೋವಿಡ್ ಟೆಸ್ಟ್ಗಳನ್ನು ಸಹ ಅವರೇ ಮಾಡಿಸಿದರು,’ ಎಂದು ಗಂಗೂಲಿ ಹೇಳಿದ್ದಾರೆ.

‘ಪರ್ಮಾರ್ ಅವರ ಟೆಸ್ಟ್ ರಿಸಲ್ಟ್ ಪಾಸಿಟಿವ್ ಬಂದಾಗ ಭಾರತದ ಆಟಗಾರರೆಲ್ಲ ಚಿಂತಾಕ್ರಾಂತರಾಗಿದ್ದರು. ತಮಗೂ ಸೋಂಕು ತಾಕಿರುತ್ತದೆ ಅಂದುಕೊಂಡಿದ್ದ ಅವರಲ್ಲಿ ಭಾವನಗಳೆಲ್ಲ ಸತ್ತಂತಾಗಿತ್ತು, ಎಂದು ಬಿಸಿಸಿಐ ಅಧ್ಯಕ್ಷ ಹೇಳಿದ್ದಾರೆ.

ಇದನ್ನೂ ಓದಿ: Virat Kohli: ಟೆಸ್ಟ್ ಪಂದ್ಯ ರದ್ದು: ವಿರಾಟ್ ಕೊಹ್ಲಿಗಾಗಿ ಮ್ಯಾಂಚೆಸ್ಟರ್​​ಗೆ ಬರಲಿದೆ ಆರ್​ಸಿಬಿಯ ವಿಶೇಷ ವಿಮಾನ

Web contact

TV9 Kannada

Read More
Follow Us