ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ನ್ಯೂಝಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಸೋಲನುಭವಿಸಿದೆ. ಮಳೆಬಾಧಿತ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಪ್ರಥಮ ಇನಿಂಗ್ಸ್ನಲ್ಲಿ 46 ರನ್ ಕಲೆಹಾಕಿದರೆ, ನ್ಯೂಝಿಲೆಂಡ್ 402 ರನ್ಗಳಿಸಿತು. ಇದಾದ ಬಳಿಕ 356 ರನ್ಗಳ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆಡಿದ ಟೀಮ್ ಇಂಡಿಯಾ 462 ರನ್ ಪೇರಿಸುವಲ್ಲಿ ಯಶಸ್ವಿಯಾಯಿತು.
ಆದರೆ ಅತ್ತ ಮೊದಲ ಇನಿಂಗ್ಸ್ನಲ್ಲಿನ ಮುನ್ನಡೆಯೊಂದಿಗೆ ನ್ಯೂಝಿಲೆಂಡ್ ತಂಡ ದ್ವಿತೀಯ ಇನಿಂಗ್ಸ್ನಲ್ಲಿ ಕೇವಲ 107 ರನ್ಗಳ ಗುರಿ ಪಡೆಯಿತು. ಈ ಗುರಿಯನ್ನು 27.4 ಓವರ್ಗಳಲ್ಲಿ ಚೇಸ್ ಮಾಡಿ ನ್ಯೂಝಿಲೆಂಡ್ 8 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.
ಈ ಸೋಲಿನ ಬಳಿಕ ಮಾತನಾಡಿದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ, ತಂಡದ ಒಟ್ಟಾರೆ ಪ್ರದರ್ಶನಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಸೋಲಿಗೆ ಕಾರಣವಾಗಿದ್ದು ಮೊದಲ ಇನಿಂಗ್ಸ್ನಲ್ಲಿನ ಕಳಪೆ ಬ್ಯಾಟಿಂಗ್ ಎಂದಿದ್ದಾರೆ.
ಎರಡನೇ ಇನ್ನಿಂಗ್ಸ್ನಲ್ಲಿ ನಾವು ಉತ್ತಮ ಬ್ಯಾಟಿಂಗ್ ಮಾಡಿದ್ದೆವು. ಆದರೆ ಮೊದಲ ಇನಿಂಗ್ಸ್ನಲ್ಲಿ ಅತ್ಯಲ್ಪ ಮೊತ್ತಕ್ಕೆ ಆಲೌಟ್ ಆಗಿದ್ದು ನಮ್ಮ ಪಾಲಿಗೆ ಮುಳುವಾಯಿತು. ಅಲ್ಲದೆ ನ್ಯೂಝಿಲೆಂಡ್ ತಂಡವು 350 ರನ್ಗಳಿಂದ ಹೆಚ್ಚಿನ ಮುನ್ನಡೆ ಪಡೆದಿದ್ದರಿಂದ ಪಂದ್ಯದ ಫಲಿತಾಂಶ ಏನಾಗಲಿದೆ ಎಂದು ಸಹ ತಿಳಿದಿತ್ತು. ಆದರೆ ದ್ವಿತೀಯ ಇನಿಂಗ್ಸ್ನಲ್ಲಿ ನಮ್ಮ ಬ್ಯಾಟರ್ಗಳು ಹೋರಾಟದ ಮನೋಭಾವ ತೋರಿದ್ದು ಉತ್ತಮ ಬೆಳವಣಿಗೆ ಎಂದು ರೋಹಿತ್ ಶರ್ಮಾ ಅಭಿಪ್ರಾಯಪಟ್ಟಿದ್ದಾರೆ.
ದ್ವಿತೀಯ ಇನಿಂಗ್ಸ್ನಲ್ಲಿ ಸರ್ಫರಾಝ್ ಖಾನ್ ತೋರಿದ ಪ್ರಬುದ್ಧತೆಯ ಬ್ಯಾಟಿಂಗ್, ರಿಷಭ್ ಪಂತ್ ಅವರ ಹೋರಾಟ ನಮಗೆ ಹೊಸ ಭರವಸೆಯನ್ನು ಹುಟ್ಟುಹಾಕಿತ್ತು. ಆದರೆ ಆ ಬಳಿಕ ನಾವು ಮತ್ತೆ ವೈಫಲ್ಯ ಹೊಂದಿದ್ದವು. ಇದರ ಸಂಪೂರ್ಣ ಲಾಭ ಪಡೆದ ನ್ಯೂಝಿಲೆಂಡ್ ತಂಡ ಉತ್ತಮ ದಾಳಿ ಸಂಘಟಿಸುವಲ್ಲಿ ಯಶಸ್ವಿಯಾದರು ಎಂದು ರೋಹಿತ್ ಶರ್ಮಾ ಹೇಳಿದರು.
ಇದನ್ನೂ ಓದಿ: RCB ಉಳಿಸಿಕೊಂಡ ಆರು ಆಟಗಾರರು ಯಾರೆಲ್ಲಾ ಗೊತ್ತಾ?
ಇದೀಗ ಒಂದು ಪಂದ್ಯ ಮಾತ್ರ ಮುಗಿದಿದೆ. ಇನ್ನೂ ಎರಡು ಮ್ಯಾಚ್ಗಳಿವೆ. ಮೊದಲ ಪಂದ್ಯದಲ್ಲಿನ ಸಕಾರಾತ್ಮಕ ಅಂಶಗಳನ್ನು ತೆಗೆದುಕೊಂಡು ನಾವು ಮುಂದುವರಿಯುತ್ತೇವೆ. ಈ ಹಿಂದೆ ಕೂಡ ನಾವು ಇಂತಹ ಪರಿಸ್ಥಿತಿಯನ್ನು ಎದುರಿಸಿದ್ದೆವು. ಇಂಗ್ಲೆಂಡ್ ವಿರುದ್ಧದ ಟೆಸ್ಟ್ನಲ್ಲಿ ಒಂದು ಪಂದ್ಯದಲ್ಲಿ ಸೋತು, ಉಳಿದ ನಾಲ್ಕು ಪಂದ್ಯಗಳನ್ನು ಗೆದ್ದಿದ್ದೇವೆ. ಹಾಗಾಗಿ ಸರಣಿ ಹಿನ್ನಡೆ ಎನ್ನುವುದು ನಮಗೆ ಹೊಸದೇನು ಅಲ್ಲ. ಅಲ್ಲದೆ ಮುಂದಿನ ಎರಡು ಟೆಸ್ಟ್ ಪಂದ್ಯಗಳ ಮೂಲಕ ನಾವು ಕಂಬ್ಯಾಕ್ ಮಾಡುತ್ತೇವೆ ಎಂದು ರೋಹಿತ್ ಶರ್ಮಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಭಾರತ ಮತ್ತು ನ್ಯೂಝಿಲೆಂಡ್ ನಡುವಣ 2ನೇ ಟೆಸ್ಟ್ ಪಂದ್ಯವು ಅಕ್ಟೋಬರ್ 24 ರಿಂದ ಶುರುವಾಗಲಿದೆ. ಪುಣೆಯ ಎಂಸಿಎ ಸ್ಟೇಡಿಯಂನಲ್ಲಿ ಜರುಗಲಿರುವ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆದ್ದರೆ ಸರಣಿಯನ್ನು ಸಮಬಲವಾಗಲಿದೆ. ಹಾಗೆಯೇ ಈ ಸರಣಿಯ ಮೂರನೇ ಪಂದ್ಯವು ನವೆಂಬರ್ 1 ರಿಂದ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿದೆ.