ಪಂತ್ ಮತ್ತು ಸಹಾ ಭಾರತದ ಅತ್ಯುತ್ತಮ ವಿಕೆಟ್​ಕೀಪರ್-ಬ್ಯಾಟ್ಸ್​ಮನ್​ಗಳು: ಗಂಗೂಲಿ

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಅಧ್ಯಕ್ಷ ಸೌರವ್ ಗಂಗೂಲಿ ಅವರು ದೇಶದಲ್ಲಿ ಈಗ ಲಭ್ಯರಿರುವ ವಿಕೆಟ್​​ಕೀಪರ್-ಬ್ಯಾಟ್ಸ್​ಮನ್​ಗಳ ಪೈಕಿ ರಿಷಭ್ ಪಂತ್ ಮತ್ತು ವೃದ್ಧಿಮಾನ ಸಹಾ ಅತ್ಯುತ್ತಮರು ಎಂದು ಹೇಳುವ ಮೂಲಕ ಗೊಂದಲ ಸೃಷ್ಟಿಸಿದ್ದಾರೆ.

ಪಂತ್ ಮತ್ತು ಸಹಾ ಭಾರತದ ಅತ್ಯುತ್ತಮ ವಿಕೆಟ್​ಕೀಪರ್-ಬ್ಯಾಟ್ಸ್​ಮನ್​ಗಳು: ಗಂಗೂಲಿ
ಸೌರವ್ ಗಂಗೂಲಿ
ಅರುಣ್​ ಕುಮಾರ್​ ಬೆಳ್ಳಿ

Updated on: Nov 25, 2020 | 8:25 PM

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಅಧ್ಯಕ್ಷ ಸೌರವ್ ಗಂಗೂಲಿ ಅವರು ರಿಷಬ್ ಪಂತ್ ಮತ್ತು ವೃದ್ಧಿಮಾನ ಸಹಾ, ಪ್ರಸ್ತುತವಾಗಿ ಭಾರತದಲ್ಲಿ ಸದ್ಯಕ್ಕೆ ಲಭ್ಯರಿರುವ ಅತ್ಯುತ್ತಮ ವಿಕೆಟ್​ಕೀಪರ್ ಬ್ಯಾಟ್ಸ್​ಮನ್​ಗಳೆಂದು ಹೇಳುವ ಮೂಲಕ ಗೊಂದಲ ಸೃಷ್ಟಿಸಿದ್ದಾರೆ.

ರಿಷಭ್ ಪಂತ್

ಮಹೇಂದ್ರಸಿಂಗ್ ಧೋನಿ ಅವರ ನಿವೃತ್ತಿಯ ನಂತರ ಭಾರತ ಕೆಲವು ವಿಕೆಟ್​ಕೀಪರ್ ಬ್ಯಾಟ್ಸ್​ಮನ್​ಗಳನ್ನು ಪ್ರಯೋಗಿಸಿದೆ. ಪಂತ್ ಮತ್ತು ಸಹಾ ಅವರಲ್ಲದೆ, ಕೆಎಲ್ ರಾಹುಲ್, ಸಂಜು ಸ್ಯಾಮ್ಸನ್ ಅವರನ್ನು ಈ ಸ್ಪೆಷಲಿಸ್ಟ್ ಸ್ಥಾನಕ್ಕೆ ಬಳಸಿಕೊಂಡಿದೆ. ಸಹಾ ಟೆಸ್ಟ್​ ಕ್ರಿಕೆಟ್​ನಲ್ಲಿ ಅತ್ಯುತ್ತಮ ಪ್ರದರ್ಶನಗಳನ್ನು ನೀಡಿ ಸ್ಥಾನವನ್ನು ಭದ್ರಪಡಿಸಿಕೊಂಡರು. ಅವರು ಗಾಯಗೊಂಡಾಗ ಅವಕಾಶ ಗಿಟ್ಟಿಸಿದ ಯುವ ಆಟಗಾರ ಪಂತ್ ಕೆಲವು ಉತ್ಕೃಷ್ಟ ಬ್ಯಾಟಿಂಗ್ ಪ್ರದರ್ಶನಗಳ ಮೂಲಕ ಗಮನ ಸೆಳೆಯುವುದರ ಜೊತೆಗೆ ಸಹಾ ಮರಳಿ ಬರುವುದಕ್ಕೆ ದೊಡ್ಡ ಥ್ರೆಟ್ ಎನಿಸಿದರು. ಆದರೆ ಬ್ಯಾಟಿಂಗ್​ನಲ್ಲಿ ಅವರಿಂದ ಪ್ರದರ್ಶನಗಳು ಅಸ್ಥಿರಗೊಳ್ಳಲಾರಂಭಿಸಿದ ನಂತರ ಸಹಾಗೆ ಪುನಃ ಅವಕಾಶ ಸಿಕ್ಕಿತು.

ಈಗ ಪಂತ್ ಮತ್ತು ಸಹಾ ಇಬ್ಬರಿಗೂ ಆಸ್ಟ್ರೇಲಿಯಾ ಪ್ರವಾಸದಲ್ಲಿ ಕೇವಲ ಟೆಸ್ಟ್​ ಸ್ಕ್ಯಾಡ್​ನಲ್ಲಿ ಮಾತ್ರ ಅವಕಾಶ ಕಲ್ಪಿಸಲಾಗಿದೆ.

ಪಂತ್ ಮತ್ತು ಸಹಾ ಭಾರತದ ಅತ್ಯುತ್ತಮ ವಿಕೆಟ್​ ಕೀಪರ್​ಗಳಾದರೆ ಅವರಿಗೆ ಸೀಮಿತ ಓವರ್​ಗಳ ಕ್ರಿಕೆಟ್​ನಲ್ಲಿ ಯಾಕೆ ಅಡಿಸುತ್ತಿಲ್ಲ ಎಂಬ ಪ್ರಶ್ನೆಗೆ ಗಂಗೂಲಿ ಅವರಲ್ಲಿ ಸ್ಪಷ್ಟವಾದ ಉತ್ತರವಿಲ್ಲ. ಇಂದು ಪಿಟಿಐನೊಂದಿಗೆ ಮಾತಾಡಿದ ಭಾರತದ ಮಾಜಿ ನಾಯಕ ಗಂಗೂಲಿ, ಪಂತ್ ಅವರು ಐಪಿಎಲ್​ನಲ್ಲಿ ನೀಡಿದ ಕಳಪೆ ಪ್ರದರ್ಶನಗಳ ಬಗ್ಗೆಯೂ ಸಮಂಜಸ ಉತ್ತರ ನೀಡಲಿಲ್ಲ.

ವೃದ್ಧಿಮಾನ್ ಸಹಾ

‘‘ಅವನ ಬ್ಯಾಟಿಂಗ್ ಬಗ್ಗೆ ಯೋಚನೆ ಬೇಡ, ಅವನ ಮತ್ತೆ ಬ್ಯಾಟ್​ ಮೊದಲಿನಂತೆ ಬೀಸಲಾರಂಭಿಸುತ್ತದೆ. ಅವನಿನ್ನೂ ಯುವಕ ಮತ್ತು ಪ್ರಚಂಡ ಪ್ರತಿಭಾವಂತ. ಅವನಿಗೆ ಬೇಕಿರುವುದು ನಮ್ಮ ಮಾರ್ಗದರ್ಶನ, ಅವನ ಫಾರ್ಮ್ ಸುಧಾರಿಸಲಿದೆ,’’ ಎಂದು ಗಂಗೂಲಿ ಹೇಳಿದರು.

ಆದರೆ, ಪಂತ್​ ಅವರನ್ನು ಸೀಮಿತ ಪಂದ್ಯಗಳಿಗೆ ಡ್ರಾಪ್ ಮಾಡಿರುವುದರಿಂದ ಮತ್ತು ಸಹಾ ಅವರಿಗಿಂತ ಉತ್ತಮ ವಿಕೆಟ್​ಕೀಪರ್ ಆಗಿರುವುದರಿಂದ ಪಂತ್​ಗೆ ಟೆಸ್ಟ್​ಗಳಲ್ಲಿ ಆಡುವ ಅವಕಾಶ ಸಿಗುತ್ತದೆಯೇ ಎಂದು ಕೇಳಿದಾಗ ಗಂಗೂಲಿ ಡಿಪ್ಲೊಮ್ಯಾಟಿಕ್ ಉತ್ತರ ನೀಡಲು ಪ್ರಯತ್ನಿಸಿದರು.

‘‘ಇಬ್ಬರನ್ನೂ ಖಂಡಿತವಾಗಿಯೂ ಆಡಿಸಲಾಗದು, ಯಾರು ಉತ್ತಮ ಫಾರ್ಮ್​ನಲ್ಲಿದ್ದಾರೋ ಅವರು ಆಡುವ ಇಲೆವೆನ್​ನಲ್ಲಿ ಸ್ಥಾನ ಗಿಟ್ಟಿಸುತ್ತಾರೆ,’’ ಅಂತ ಗಂಗೂಲಿ ಹೇಳಿದರು.

Published On - 7:47 pm, Wed, 25 November 20

Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

Follow Us