‘ನಿನ್ನ ಜೀವನ ನಡೆಯೋದೇ ನಮ್ಮಿಂದ!’: ಬೆಂಗಳೂರಿನ ಆಟೋ ಚಾಲಕನಿಗೆ ಹಿಂದಿಯಲ್ಲಿ ನಿಂದಿಸಿದ ಮಹಿಳೆ

Updated on: May 31, 2026 | 3:29 PM

ಬೆಂಗಳೂರಿನಲ್ಲಿ ಆಟೋ ಚಾಲಕರ ಮೇಲೆ ಪರಭಾಷಿಕರ ದರ್ಪದ ಘಟನೆಗಳು ಹೆಚ್ಚಾಗುತ್ತಿವೆ. ಇತ್ತೀಚೆಗೆ, ಅತಿಯಾದ ಲಗೇಜ್ ಪ್ರಶ್ನಿಸಿದ ಆಟೋ ಚಾಲಕನೊಬ್ಬನಿಗೆ ನಾಲ್ವರು ಪ್ರಯಾಣಿಕರು ಹಿಂದಿಯಲ್ಲಿ ನಿಂದಿಸಿದ್ದಾರೆ. "ಇದೇನು ನಿನ್ನ ಅಪ್ಪನ ರಸ್ತೆಯೇ" ಎಂದು ಹೀಯಾಳಿಸಿ, ಹಿಂದಿಯಲ್ಲಿ ಮಾತನಾಡಲು ಒತ್ತಾಯಿಸಿದ್ದಾರೆ. ಈ ವೈರಲ್ ವಿಡಿಯೋ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದ್ದು, ಭಾಷಾ ಅಹಂಕಾರದ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಬೆಂಗಳೂರು, ಮೇ,31: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸ್ಥಳೀಯರು ಹಾಗೂ ಪರಭಾಷಿಕರ ನಡುವಿನ ಭಾಷಾ ಸಂಘರ್ಷ ಮತ್ತು ದರ್ಪದ ಘಟನೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇವೆ. ಇದೀಗ ಆಟೋ ಪ್ರಯಾಣದ ವೇಳೆ ಹೆಚ್ಚಿನ ಲಗೇಜ್ ತಂದಿದ್ದನ್ನು ಪ್ರಶ್ನಿಸಿದ ಆಟೋ ಡ್ರೈವರ್ ಒಬ್ಬನ ಮೇಲೆ ಮಹಿಳೆ ಸೇರಿದಂತೆ ನಾಲ್ವರು ಹಿಂದಿ ಭಾಷೆಯಲ್ಲಿ ನಿಂದಿಸಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಮಹಿಳೆ ಸೇರಿದಂತೆ ನಾಲ್ವರು ಪ್ರಯಾಣಿಕರು ಒಟ್ಟಾಗಿ ಪ್ರಯಾಣಿಸಲು ಆಟೋ ಬುಕ್ ಮಾಡಿದ್ದರು. ಆದರೆ, ಅವರು ನಿಯಮಕ್ಕಿಂತ ಅತಿ ಹೆಚ್ಚಿನ ಲಗೇಜ್ ಹೊಂದಿದ್ದ ಹಿನ್ನೆಲೆಯಲ್ಲಿ, “ಇಷ್ಟೊಂದು ಲಗೇಜ್ ಮತ್ತು ನಾಲ್ಕು ಜನ ಪ್ರಯಾಣಿಕರು ಆಟೋದಲ್ಲಿ ಹಿಡಿಸುವುದಿಲ್ಲ” ಎಂದು ಆಟೋ ಚಾಲಕ ಅತ್ಯಂತ ವಿನಮ್ರವಾಗಿ ಹೇಳಿದ್ದಾರೆ. ಇದಕ್ಕೆ ಕೆರಳಿದ ಮಹಿಳೆ ಮತ್ತು ಆಕೆಯ ಜೊತೆಗಿದ್ದವರು ರಸ್ತೆಯಲ್ಲೇ ಮನಬಂದಂತೆ ನಿಂದಿಸಲು ಆರಂಭಿಸಿದ್ದಾರೆ. ಮಹಿಳೆ ಆಟೋ ಚಾಲಕನಿಗೆ ತೀವ್ರವಾಗಿ ನಿಂದಿಸುತ್ತಾ, “ಇದೇನು ನಿನ್ನ ಅಪ್ಪನ ರಸ್ತೆಯೇ? ನೀವೆಲ್ಲಾ ನಮ್ಮ ದುಡ್ಡಿನಿಂದಲೇ ಬದುಕುತ್ತಿರೋದು! ನಾನು ಆಟೋ ಬುಕ್ ಮಾಡಿದರೆ ಮಾತ್ರ ನಿನ್ನ ಜೀವನ ನಡೆಯುತ್ತದೆ” ಎಂದು ಅತ್ಯಂತ ಕೀಳಾಗಿ ಮಾತನಾಡಿದ್ದಾರೆ. ಅಷ್ಟಕ್ಕೇ ನಿಲ್ಲಿಸದ ಆಕೆ, ಸ್ಥಳೀಯ ಭಾಷೆಯ ಗಂಧ-ಗಾಳಿಯಿಲ್ಲದೆ “ನನ್ನ ಜೊತೆ ಹಿಂದಿಯಲ್ಲೇ ಮಾತನಾಡು” ಎಂದು ಆಟೋ ಚಾಲಕನಿಗೆ ದರ್ಪದಿಂದ ಅವಾಜ್ ಹಾಕಿದ್ದಾರೆ.

ಬಡ ಆಟೋ ಚಾಲಕ ತನಗಾದ ಅನ್ಯಾಯ ಮತ್ತು ನಿಂದನೆಯನ್ನು ಮೊಬೈಲ್‌ನಲ್ಲಿ ವೀಡಿಯೊ ರೆಕಾರ್ಡ್ ಮಾಡಿಕೊಂಡಿದ್ದು, ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ವೀಡಿಯೊ ವೀಕ್ಷಿಸಿದ ಕನ್ನಡಿಗರು ಮತ್ತು ನೆಟ್ಟಿಗರು ಪರಭಾಷಿಕರ ಈ ಉದ್ಧಟತನ ಹಾಗೂ ಭಾಷಾ ಅಹಂಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. “ಬೆಂಗಳೂರಿಗೆ ಬಂದು ಇಲ್ಲಿನ ಬಡ ದುಡಿಮೆಗಾರರ ಮೇಲೆ ಇಂತಹ ದರ್ಪ ತೋರುವುದನ್ನು ಸಹಿಸಲು ಸಾಧ್ಯವಿಲ್ಲ” ಎಂದು ಕಮೆಂಟ್ ಮಾಡುತ್ತಿದ್ದು, ಪೊಲೀಸರು ಇಂತಹವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸುತ್ತಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: May 31, 2026 03:29 PM
Follow Us
Akshay Pallamajalu

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More