ಬಿ ಬಿ ಎಮ್ ಪಿ ಕಸದ ಲಾರಿಗೆ ಮತ್ತೊಂದು ಬಲಿ, ಲಾರಿ ಹರಿದು ಸಿದ್ಧ ಆಹಾರ ಡೆಲಿವರಿ ಬಾಯ್ ಸ್ಥಳದಲ್ಲೇ ಸಾವು

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: May 14, 2022 | 11:58 PM

ಢಿಕ್ಕಿಯ ರಭಸಕ್ಕೆ ದೇವಣ್ಣ ಡಿವೈಡರ್ ಮೇಲಿಂದ ರಸ್ತೆಯ ಆ ಬದಿಗೆ ಹೋಗಿ ಬಿದಿದ್ದಾರೆ. ಹೆಲ್ಮೆಟ್ ಧರಿಸಿದ್ದರೂ ಅವರು ತಲೆ ಒಡೆದುಹೋಗಿತ್ತು ಅಂತ ಪ್ರತ್ಯಕ್ಷದರ್ಶಿ ಹೇಳಿದ್ದಾರೆ.

Bengaluru:  ಹಿಂದೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಬಸ್ ಗಳನ್ನು (ಬಿ ಎಮ್ ಟಿ ಸಿ) (BMTC) ಯಮದೂತರು ಅಂತ ಹೇಳಲಾಗುತಿತ್ತು. ಈಗ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (BBMP) ಕಸದ ಲಾರಿಗಳು ಬಿಎಮ್ ಟಿಸಿ ಬಸ್ ಗಳಿಂದ ಆ ಪಟ್ಟವನ್ನು ಕಸಿದುಕೊಂಡಿವೆ. ಈ ಲಾರಿಗಳು ಕಳೆದೆರಡು ತಿಂಗಳಲ್ಲಿ 4 ಜನರನ್ನು ಬಲಿ ಪಡೆದಿವೆ. ಶನಿವಾರ ಸಾಯಂಕಾಲ ಬಿ ಬಿ ಎಮ್ ಪಿ ಕಸದ ಲಾರಿ ಥಣಿಸಂದ್ರದ ರೇಲ್ವೇ ಮೇಲ್ಸೇತುವೆ ಬಳಿ 25 ವರ್ಷದ ಸ್ವಿಗ್ಗಿ ಡೆಲಿವರಿ ಬಾಯ್ ಒಬ್ಬನ ಮೇಲೆ ಹರಿದು ಯುವಕನನ್ನು ಕ್ಷಣಾರ್ಧದಲ್ಲಿ ಬಲಿ ಪಡೆದಿದೆ. ಯುವಕನನ್ನು ಯಾದಗಿರಿ ಜಿಲ್ಲೆ ಸುರಪುರದ ದೇವಣ್ಣ (Devanna) ಎಂದು ಗುರುತಿಸಲಾಗಿದೆ. ಲಾರಿಯ ಚಾಲಕ 40 ವರ್ಷ ವಯಸ್ಸಿನ ದಿನೇಶ್ ನಾಯ್ಕ್ ನನ್ನು ಬಂಧಿಸಿರುವ ಚಿಕ್ಕಜಾಲ ಟ್ರಾಫಿಕ್ ಪೊಲೀಸರು ಪ್ರಕರಣಕವನನ್ನು ದಾಖಲಿಸಿಕೊಂಡಿದ್ದಾರೆ.

ಟಿವಿ9 ಕನ್ನಡ ವಾಹಿನಿಯ ಬೆಂಗಳೂರು ವರದಿಗಾರನೊಂದಿಗೆ ಮಾತಾಡಿದ ಪ್ರತ್ಯಕ್ಷದರ್ಶಿಯೊಬ್ಬರು, ಲಾರಿ ಬಹಳ ವೇಗದಿಂದ ಚಲಿಸುತಿತ್ತು ಮತ್ತು ದೇವಣ್ಣ ನಾಗವಾರ ಸರ್ಕಲ್ ನಿಂದ ಹೆಗಡೆ ನಗರದ ಕಡೆ ಬೈಕಲ್ಲಿ ಹೋಗುತ್ತಿದ್ದರು. ದೇವಣ್ಣ ಮೇಲ್ಸೇತುವೆ ಹತ್ತಿರದ ರಸ್ತೆಯಿಂದ ಮುಖ್ಯರಸ್ತೆಗೆ ತಿರುಗುತ್ತಿದ್ದ ಸಮಯದಲ್ಲಿ ವೇಗವಾಗಿ ಬರುತ್ತಿದ್ದ ಕಸದ ಲಾರಿ ಗುದ್ದಿದೆ. ಢಿಕ್ಕಿಯ ರಭಸಕ್ಕೆ ದೇವಣ್ಣ ಡಿವೈಡರ್ ಮೇಲಿಂದ ರಸ್ತೆಯ ಆ ಬದಿಗೆ ಹೋಗಿ ಬಿದಿದ್ದಾರೆ. ಹೆಲ್ಮೆಟ್ ಧರಿಸಿದ್ದರೂ ಅವರು ತಲೆ ಒಡೆದುಹೋಗಿತ್ತು ಅಂತ ಪ್ರತ್ಯಕ್ಷದರ್ಶಿ ಹೇಳಿದ್ದಾರೆ.

ಬೆಂಗಳೂರಿನ ನಿವಾಸಿಗಳೆಲ್ಲ ಗಮನಿಸಿದ್ದಾರೆ. ಬಿ ಬಿ ಎಮ್ ಪಿ ಕಸದ ಲಾರಿಗಳು ಬಹಳ ವೇಗವಾಗಿ ನಗರದ ರಸ್ತೆಗಳ ಮೇಲೆ ಚಲಿಸುತ್ತಿರುತ್ತವೆ. ಪಾಲಿಕೆಗೆ ಚೀಫ್ ಕಮೀಶನರ್ ಆಗಿ ಬಂದಿರುವ ತುಷಾರ ಗಿರಿನಾಥ ಅವರು ಲಾರಿ ಮತ್ತು ಅವುಗಳ ಚಾಲಕರಿಗೆ ಕೂಡಲೇ ತಾಕೀತು ಮಾಡಬೇಕು ಎಂದು ಜನ ಆಗ್ರಹಿಸುತ್ತಿದ್ದಾರೆ.

ಇದನ್ನೂ ಓದಿ:  ಉತ್ತರ ಪ್ರದೇಶದ ಯಮುನಾ ಎಕ್ಸ್‌ಪ್ರೆಸ್‌ವೇನಲ್ಲಿ ಭೀಕರ ಅಪಘಾತ; 5 ಮಂದಿ ಸಾವು, ಮೃತಪಟ್ಟವರಲ್ಲಿ ಒಬ್ಬರು ಕರ್ನಾಟಕದವರು